Tuesday, December 29, 2009

ಕಪಾಟಿನೊಳಗಿನ ನೆನಪುಗಳು


ಭಾಸ್ಕರರಾಯರು ತಮ್ಮ ಹಳೇ ಕಪಾಟನ್ನು ಕೆದರುತ್ತಾ ಕುಳಿತಿದ್ದರು. ಅವರು ನಿವೃತ್ತಿ ಪಡೆದಾಗಿನಿಂದಲೂ ಹಾಗೇ. ಯಾವುದೋ ಲೋಕದಲ್ಲಿದ್ದಂತಿರುವುದು, ಏನನ್ನೋ ನೆನಪುಮಾಡಿಕೊಳ್ಳುವುದು. ಇದ್ದಕ್ಕಿದ್ದಂತೆ ನಗುವುದು. ಗುನುಗುವುದು. ಅಂತೂ ಈ ನಿವೃತ್ತಿ ಎಂಬುದು ಏಕಾದರೂ ಬರುತ್ತದೋ ಎನ್ನುವ ಹಾಗೆ ವರ್ತಿಸಿಬಿಡುತ್ತಿದ್ದರು.

ಹೀಗೊಂದು ದಿನ ತಮ್ಮ ಕಪಾಟಿನೊಳಗಿನ ಹಳೇ ನೆನಪುಗಳನ್ನು ಕೆದರುತ್ತಾ ಕುಳಿತಿದ್ದಾಗ ಸಿಕ್ಕದ್ದು ಒಂದು ಫೋಟೋ. ಅವರ ಹೈಸ್ಕೂಲಿನ ಮಿತ್ರ ಹ್ಯಾರಿ ಜ್ಯೋತಿಕುಮಾರನದ್ದು. ಆಗಿನ ಮೆಥಾಡಿಸ್ಟ್ ಮಿಷನ್ ಶಾಲೆಯಲ್ಲಿದ್ದ ತಮ್ಮ ಸಹಪಾಠಿಗಳ ನೆನಪು ಸ್ವಲ್ಪಸ್ವಲ್ಪವಾಗಿ ಭಾಸ್ಕರರಾಯರನ್ನು ಆವರಿಸತೊಡಗಿತು. ನೆನಪುಗಳು ಅವರಿಗೆ ಬರುತ್ತಿದ್ದದ್ದೇ ಹಾಗೆ - ಬಂದರೆ ಮಹಾಪೂರ... ಇಲ್ಲದಿದ್ದರೆ ತಲೆಕೆರೆದು ಜುಟ್ಟು ಕಿತ್ತುಹಾಕಿದರೂ ನೆನಪೇ ಬರುವುದಿಲ್ಲ.

ಭಾಸ್ಕರರಾಯರು ಓದಿದ್ದು ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಶಾಲೆಯಲ್ಲಿ. ಆ ಶಾಲೆಯಲ್ಲಿ ಆಗ ಹೆಚ್ಚಿನ ಹೆಸರುಗಳು ಈ ರೀತಿಯಾದಂಥವೇ.. ಅಡಾಲ್ಫ್ ಜಯತಿಲಕ್, ಆಲ್ಬರ್ಟ್ ವೇದರತ್ನ, ಮೆಷಕ್ ಕ್ರಿಸ್ತರಾಜು, ಜಾನ್ ದೇವರಾಜ್, ಪಾಲ್ ಸುದರ್ಶನ್... ಹೀಗೆ. ಆಗೆಲ್ಲಾ ಆ ಹೆಸರುಗಳು ಅವರಿಗೆ ಆಶ್ಚರ್ಯ ಹುಟ್ಟಿಸುತ್ತಿದ್ದುವು. ತಮ್ಮನ್ನು ಕ್ರೈಸ್ತ ಸಂಸ್ಕೃತಿಗೆ ಸಂಪೂರ್ಣ ಒಗ್ಗಿಸಿಕೊಳ್ಳದೇ, ಹಳೇ ಹಿಂದೂ ಸಂಸ್ಕೃತಿಯನ್ನೂ ಬಿಡಲಾಗದೇ, ಯುಗಾದಿಯನ್ನೂ ಕ್ರಿಸ್ಮಸ್ಸನ್ನೂ ಅಷ್ಟೇ ಭಕ್ತಿಯಿಂದ ಆಚರಿಸುತ್ತಿದ್ದ ಈ ಜನರ ವಿಷಯದಲ್ಲಿ ಭಾಸ್ಕರರಾಯರಿಗೆ ಏಕೋ ಒಂದು ಫ್ಯಾಸಿನೇಷನ್ ಇತ್ತು. ಈ ಜನ ಪಶ್ಚಿಮದ ಸಂಸ್ಕೃತಿಗೆ ನಿಜವಾದ ಕೊಂಡಿ ಎಂದು ಅವರುಗಳ ಬಗ್ಗೆ ಈಗ ಆಲೋಚಿಸುತ್ತಿರುವಾಗ ಅನ್ನಿಸುತ್ತದೆ.

ಮೆಥಾಡಿಸ್ಟ್ ಶಾಲೆ ಬಿಟ್ಟನಂತರ ರಾಯರಿಗೆ ಈ ರೀತಿಯ ಜೋಡಿ ಹೆಸರಿನ ಒಬ್ಬ ಮಿತ್ರನೂ ಸಿಗದಿದ್ದದ್ದು ಸೋಜಿಗದ ವಿಷಯವಾಗಿತ್ತು. ಆ ನಂತರ ರಾಯರು ಇಂಥಹ ಹೆಸರನ್ನು ಕೇಳಿದ್ದೂ ವಿರಳ.


ಹ್ಯಾರಿ ಜ್ಯೋತಿಕುಮಾರ್... ತಮ್ಮ ಹೈಸ್ಕೂಲಿನ ಅತ್ಯಂತ ಆಪ್ತ ಮಿತ್ರರಲ್ಲೊಬ್ಬ. ಮನೆಯಲ್ಲೊಮ್ಮೆ ತಿಥಿ ಊಟ ಹಾಕಿದಾಗ ತಮ್ಮ ಎಲೆಯ ಪಕ್ಕದಲ್ಲಿ ಎರಡಾಣೆ ದಕ್ಷಿಣೆ ಇಟ್ಟಿದ್ದದ್ದು, ಪಕ್ಕದಲ್ಲಿ ಕುಳಿತು ಉಂಡವರು ತಮ್ಮ ದಕ್ಷಿಣೆಯನ್ನು ಮರೆತು ಎದ್ದಾಗ ಭಾಸ್ಕರರಾಯರು ತಮ್ಮ ದೊಗಲೆ ಚೆಡ್ಡಿಯ ಆಳವಾದ ಜೇಬಿಗೆ ಆ ಎರಡಾಣೆಯನ್ನೂ ಇಳಿಬಿಟ್ಟಿದ್ದದ್ದು. ನಂತರ ಹ್ಯಾರಿ ಜ್ಯೋತಿಕುಮಾರನನ್ನೂ ಕರೆದುಕೊಂಡು ಕೃಷ್ಣಾ ಥಿಯೇಟರಿನಲ್ಲಿ ಕಂದಲೀಲಾ ಎಂಬ ಸಿನೇಮಾ ನೋಡಲು ಮನೆಯಲ್ಲೂ ಹೇಳದೇ ಹೋಗಿದ್ದದ್ದು - ಎಲ್ಲವೂ ನೆನಪಾಯಿತು. ಭಾಸ್ಕರರಾಯರು ಲೆಕ್ಕ ಹಾಕಿದರು. ಈಗ ತಮಗಾಗಿರುವ ವಯಸ್ಸು ಎಪ್ಪತ್ತು. ಆಗ ಅವರುಗಳು ಹದಿಮೂರು ಹದಿನಾಲ್ಕರ ಪಡ್ಡೆ ಹುಡುಗರು. ಕಂದಲೀಲಾ ಸಿನೇಮಾದ ನೋಡುವಾಗ ಅದರಲ್ಲಿ ನೃತ್ಯಮಾಡುತ್ತಿದ್ದವಳತ್ತ ಖಳನಾಯಕ ಕಣ್ಣು ಹೊಡೆದಾಗ ಅಯ್ಯಯ್ಯೋ ಎಂದು ಕೆನ್ನೆ ತಟ್ಟಿಕೊಂಡು ಶಾಂತಂ ಪಾಪಂ ಎಂದು ಜೋರಾಗಿ ಹೇಳಿದ್ದರೂ ಒಳಗೇ ರೋಮಾಂಚನವಾಗಿತ್ತು. ಐವತ್ತು ವರ್ಷಗಳಿಗೂ ಮಿಂಚಿದ ಈ ಕಾಲಮಾನದಲ್ಲಿ ಈಗ ಏನೆಲ್ಲಾ ಬದಲಾವಣೆಗಳಾಗಿವೆ. ಈಗೀಗಿನ ಹುಡುಗರಂತೂ ಸಿನೇಮಾ ನೋಡುವುದಿರಲಿ, ತಾವೇ ಖುದ್ದಾಗಿ ಕಣ್ಣು ಹೊಡೆದು ರೋಮಾಂಚಿತಗೊಳ್ಳುವ ಹಂತ ತಲುಪಿದ್ದಾರೆ!

ಮೆಟ್ರಿಕ್ ಪಾಸಾದ ನಂತರ ಹ್ಯಾರಿ ಮಂಗಳೂರಿಗೆ ಹೊರಟುಹೋಗಿದ್ದ. ತಾವು ಮಹಾರಾಜಾ ಕಾಲೇಜು ಸೇರಿ ನಂತರ ನೌಕರಿಗೆಂದು ಬೆಂಗಳೂರಿಗೆ ಹೋಗಿದ್ದರು. ಹ್ಯಾರಿ ಹೊರಟ ಹೊಸತರಲ್ಲಿ ಅವನಿಗೆ ಒಂದೆರಡು ಪತ್ರ ಬರೆಯಲು ಭಾಸ್ಕರರಾಯರು ಯತ್ನಿಸಿದ್ದರು. ಅವನು ಅಲ್ಲೇ ಖಾಯಂ ಆಗಿ ಸೆಟಲ್ ಆದನೆಂದು ಅವರಿಗೆ ನಂತರ ತಿಳಿದುಬಂತು. ಈಗ, ಕಡೆಗೆ ಈ ವಾಸ್ತವದಲ್ಲಿ ತಮ್ಮ ಮಗನೊಂದಿಗಿರಲು ಅವರು ಅದೇ ಹಳೆಯ ಮೈಸೂರಿಗೆ ಬಂದಿದ್ದರು. ಈಗ ಹ್ಯಾರಿ ಹೇಗಿರಬಹುದು? ಬದುಕಿದ್ದಾನೋ ಇಲ್ಲವೋ... ಈಗೀಗಂತೂ ಹೆಚ್ಚು ಕಡಿಮೆ, ಪ್ರತಿದಿನವೂ ತಮ್ಮ ಪರಿಚಯಸ್ಥರ ಸಾವಿನ ಸುದ್ದಿ ಬರುತ್ತಲೇ ಇರುತ್ತದೆ - ಹಾಗೆ ನೋಡಿದರೆ ದಿನವೂ ಪತ್ರಿಕೆಯಲ್ಲಿ ತಾವು ಮೊದಲಿಗೆ ನೋಡುವುದೇ ಆಬಿಟ್ಚುಯರಿ ಕಾಲಂ ಅಲ್ಲವೇ! ತಮಗೂ ವಯಸ್ಸಾಗುತ್ತಾ ಬಂದಿದೆ.. ಭಾಸ್ಕರರಾಯರು ಇನ್ನೊಮ್ಮೆ ಆ ಚಿತ್ರದತ್ತ ನೋಡಿದರು. ತಮಗಂತೂ ನಂತರದ ಕಾಲೇಜಿನ, ಉದ್ಯೋಗಕಾಲದ ಸ್ನೇಹಿತರೇ ನೆನಪಾಗದಿರುವಾಗ ಈ ಹ್ಯಾರಿ ಮಾತ್ರ ನೆನಪಾಗುತ್ತರುವುದು ಏಕೆಂದು ಭಾಸ್ಕರರಾಯರಿಗೆ ತಿಳಿಯಲಿಲ್ಲ. ಮೈಸೂರಿನ ರಾಯಲ್ ಸ್ಟುಡಿಯೋದಲ್ಲಿ ಹ್ಯಾರಿಯ ಎಡಭುಜದ ಮೇಲೆ ಕೆನ್ನಯೂರಿ ಬಲಗೈನಿಂದ ಹ್ಯಾರಿಯ ದೇಹವನ್ನು ಬಳಸಿ ತೆಗೆಸಿಕೊಂಡಿದ್ದ ಪಾಸ್ ಪೋರ್ಟ ಸೈಜಿನ ಚಿತ್ರವದು. ಆ ಚಿತ್ರದ ಪ್ರತಿ ತಮ್ಮ ಬಳಿ ಮಾತ್ರವೇ ಇದೆ. ಅದರ ಮತ್ತೊಂದು ಪ್ರತಿಗಾಗಿ ಒಂದಾಣೆ ಕೊಟ್ಟು ಕೊಂಡುಕೊಳ್ಳಲು ಹ್ಯಾರಿಯ ಬಳಿ ಹಣವಿದ್ದಿರಲಿಲ್ಲ! ಚಿತ್ರ ಈಗಾಗಲೇ ಸಾಕಷ್ಟು ಹಳದಿಯಾಗಿತ್ತು.

ಭಾಸ್ಕರರಾಯರು ಚಿತ್ರವನ್ನು ಮತ್ತೊಮ್ಮೆ ಕೈಗೆತ್ತಕೊಂಡು, ಮೇಜಿನ ಮಧ್ಯಭಾಗದಲ್ಲಿರಿಸಿ ನೀಟಾಗಿ ಸವರಿದರು. ಅವರ ಕಣ್ಣುಗಳು ಮಂಜಾದಂತೆನ್ನಿಸಿತು.

"ಏನು ಮಾವಾ ಮಲಗ್ಲಿಲ್ವೇ? ರಾತ್ರಿ ಆ ರಷ್ಯನ್ ಸಿನೇಮಾ ನೋಡಬೇಕೂಂತ ಹೇಳ್ತಿದ್ರಿ..." ಸೊಸೆ ನೀರಜಾ ಕೋಣೆಯೊಳಕ್ಕೆ ಪ್ರವೇಶಿಸಿ ಕೇಳಿದಳು.

"ಈ ಫೋಟೋ ನೋಡಿದ್ಯೇನಮ್ಮಾ... ಇವನು ನನ್ನ ಸ್ನೇಹಿತ.. ಹ್ಯಾರಿ ಜ್ಯೋತಿಕುಮಾರ ಅಂತ... ಹೈಸ್ಕೂಲಲ್ಲಿ ಇಬ್ಬರೂ ಗಳಸ್ಯ ಕಂಠಸ್ಯ ಆಗಿದ್ವು.. ಆಮೇಲವನು ಮಂಗಳೂರಿಗೆ ಹೋದ ನೋಡಿದ್ಯಾ ಅವನ ಅಡ್ರೆಸ್ಸೂ ಬರ್ಕೊಂಡಿದ್ದೀನಿ.."

ನೀರಜಾ ಮಾತನಾಡದೇ ಫೋಟೋದತ್ತ ನೋಡಿದಳು. ಆಕೆಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕು "ಏನ್ಮಾವಾ ನೀವು ಹೀಗಿದ್ರಾ... ಒಳ್ಳೇ ಬಫೂನ್ ಇದ್ದಹಾಗಿದ್ದೀರಾ! ಈ ಟೋಪಿ.. ಹಣೆಯ ಮೇಲಿನ ಈ ಸಾದು... ಈ ಹ್ಯಾರಿ ಅನ್ನೋವ್ರೂ ಸಾದು ಇಟ್ಕೊಂಡಿದ್ದಾರೆ!" ಎಂದಳು.

"ಅಯ್ಯೋ... ಆಗೆಲ್ಲಾ ಸ್ಕೂಲಿಗೆ ಟೋಪಿ ಹಾಕ್ಕೊಳ್ದೇ ಹೋದ್ರೆ ನಮ್ಮ ಮೇಷ್ಟ್ರುಗಳು ಬಯ್ಯುತ್ತಾ ಇದ್ದರಮ್ಮಾ... ಕ್ರಿಶ್ಚನ್ ಶಾಲೆಯಾದರೂ ಹೆಚ್ಚಿನಂಶ ಬ್ರಾಹ್ಮಣರೇ ಪಾಠ ಮಾಡ್ತಾ ಇದ್ದಿದ್ದು... ಏನೋ ಒಳ್ಳೇ ಜಾತಿಗೆಟ್ಟವನ ಹಾಗೆ ಬರೀ ಹಣೇಲಿ ಬಂದಿದ್ದೀಯಾ? ನಾಚಿಗೆ ಆಗೊಲ್ವಾ... ಅಂತೆಲ್ಲಾ ಹೇಳ್ತಿದ್ರು.... ಒಂದೊಂದ್ಸರ್ತಿ ಹೋಗು ಟೋಪಿ ಹಾಕ್ಕೊಂಡು ಬಾ ಅಂತ ಮನೇಗೂ ಅಟ್ತಿದ್ರು."

"ಮಾವಾ, ನೀವು ಈಗ ಮಲಗೋದು ವಾಸೀಂತ ಅನ್ಸುತ್ತೆ. ಮಲಗಿ, ಆಮೇಲೆ ರಾತ್ರಿ ಎದ್ದರಬೇಕಲ್ಲಾ."

ನೀರಜಾ ನಿಧಾನವಾಗಿ ಅಲ್ಲಿಂದ ಹೊರಟಳು. ಭಾಸ್ಕರರಾಯರಿಗೆ ಅದೇಕೋ ಹ್ಯಾರಿ ಎಲ್ಲಿದ್ದಾನೆಂದು ತಿಳಿಯಬೇಕೆನ್ನಿಸಿತು ಹ್ಯಾರಿಯನ್ನ ಹುಡುಕಬೇಕು. ಹೇಗೆ? ಐವತ್ತು ವರ್ಷಗಳ ಹಿಂದಿನ ಅವನ ವಿಳಾಸವಿದೆ - ಈಗ ಆ ವಿಳಾಸದಲ್ಲಿ ಹ್ಯಾರಿ ಇರಬಹುದೇ? ಹ್ಯಾರಿ ಅಲ್ಲಿ ಇರುವುದಿರಲಿ ಆ ವಿಳಾಸ ಇನ್ನೂ ಇದ್ದಾತೇ?! ಮಂಗಳೂರಿನಲ್ಲಿ ಕಂಕನಾಡಿಯ ಪಂಪ್ ವೆಲ್ ಹತ್ತಿರ ಹ್ಯಾರಿಯ ಮನೆ... ಈಗ ಆ ಕಂಕನಾಡಿಯಲ್ಲಿ ಎಷ್ಟು ಪಂಪ್ ವೆಲ್ ಗಳಿದ್ದಾವೋ ಏನೋ!

ರಾಯರಿಗೆ ಹ್ಯಾರಿಯೊಂದಿಗಿನ ಒಡನಾಟ ನೆನಪಾಯಿತು. ಆಗ ಸರಕಾರೀ ಶಾಲೆಯಲ್ಲಿ ವಶೀಲಿ ನಡೆಸಿಯೂ ಸೀಟ್ ಸಿಗಲಿಲ್ಲವೆಂದು ಈ ಮಿಷನ್ ಶಾಲೆಯಲ್ಲಿ ಭಾಸ್ಕರರಾಯರನ್ನು ಹಾಕಿದ್ದರು. ಮಿಷನ್ ಎಂದರೆ ರಾಯರ ಮನಸ್ಸಿಗೆ ಬರುತ್ತಿದ್ದುದು ಹೊಲಿಗೆ ಯಂತ್ರ ಮಾತ್ರ. ಮಿಷನ್ ಶಾಲೆಗೆ ಸೇರಿದರೆ ತಾನೆಲ್ಲಿ ದರ್ಜಿಯಾಗಬೇಕಾದೀತೋ ಎಂಬ ಭಯವೂ ಭಾಸ್ಕರರಾಯರಿಗೆ ಆಗ ಕಾಡಿತ್ತು. ಹೈಸ್ಕೂಲಿನ ಆ ಮೂರುವರ್ಷಗಳಲ್ಲಿ ಹ್ಯಾರಿಯೇ ಅವರಿಗೆ ಖಾಯಂ ಆಗಿ ಸ್ನೇಹಿತ. ಫೋರ್ಥ ಫಾರಂನಲ್ಲಿ ಫುಟ್ ಬಾಲ್ ಆಡುವಾಗ ಅವನ ಸ್ನೇಹವಾಯಿತು. ಮೆಟ್ರಿಕ್ ಪಾಸಾಗುವವರೆಗೂ ಇಬ್ಬರೂ ಒಟ್ಟಿಗೆ ಸುತ್ತಿದ್ದೇ ಸುತ್ತಿದ್ದು! ನಂತರ ರಾಯರು ಮಹಾರಾಜಾ ಕಾಲೇಜು ಸೇರಿದರು. ಮಂಗಳೂರಿಗೆ ಹೋದ ಹ್ಯಾರಿ ಓದು ಮುಂದುವರೆಸಲು ಸಾಧ್ಯವಾಗದೇ, ಅಲ್ಲೇ ಎಲ್ಲೋ ಕೆಲಸಕ್ಕೆ ಸೇರಿದ.

ಹ್ಯಾರಿ ಊರಿಗೆ ಹೊರಟದಿನ ರಾಯರು ಅವನನ್ನು ಸೈಕಲ್ ಮೇಲೆ ಡಬ್ಬಲ್ ರೈಡ್ ಕರೆದುತಂದು ಮನೆಯಲ್ಲಿ ಗಲಾಟೆಮಾಡಿ ಮಾಡಿಸಿದ್ದ ಒಬ್ಬಟ್ಟಿನೂಟ ಬಡಿಸಿ ಕಳಿಸಿದ್ದರು. ಹ್ಯಾರಿಯ ತಾಯಿ ಮಂಗಳೂರಿನ ಶಾಲೆಯೊಂದರಲ್ಲಿ ಮೇಡಂ ಆಗಿದ್ದರೆಂದು ಹ್ಯಾರಿ ಹೇಳಿದ್ದ. ಹ್ಯಾರಿಯ ತಂದೆ ತೀರಿಕೊಂಡಿದ್ದರಂತೆ. ಅವನಿಗೊಬ್ಬ ತಮ್ಮ ಒಬ್ಬಳು ತಂಗಿ ಇರುವುದಾಗಿಯೂ ಹೇಳಿದ್ದದ್ದು ಭಾಸ್ಕರರಾಯರಿಗೆ ಮಸಕು ಮಸಕು ನೆನಪು. ಅಂದು ಅವನಿಗೆ ಊಟ ಹಾಕಿಸಿ, ಬಸ್ಸೇರಿಸಿ ಕೈವಸ್ತ್ರ ಹಿಡಿದು ಭಾಸ್ಕರರಾಯರು ಟಾಟಾ ಮಾಡಿದ್ದರು.

ಅವನು ತಮ್ಮನ್ನಿನ್ನೂ ನೆನಪಿನಲ್ಲಿಟ್ಟುಕೊಂಡಿರಬಹುದೇ? ಭಾಸ್ಕರರಾಯರು ನಂತರ ಓದಿದ, ಐದಾರು ವರ್ಷ ತಮ್ಮ ಒಡನಾಟದಲ್ಲಿದ್ದ ಅನೇಕ ಸ್ನೇಹಿತರನ್ನೇ ಮರೆತಿದ್ದಾರೆ. ಜೊತೆಗೆ ಈಗೀಗಂತೂ ತಮಗೆ ಹೆಸರುಗಳೇ ಮರೆತುಹೋಗುತ್ತಿವೆ. ಒಮ್ಮೊಮ್ಮೆ ರಸ್ತೆಯಲ್ಲಿ ಯಾರಾದರೂ ಹಳೆಯ ಸ್ನೇಹಿತರು ಸಿಕ್ಕು "ಏನಯ್ಯಾ ಭಾಸ್ಕರಾ ರಿಟೈರಾದಮೇಲಾದರೂ ಮೈಸೂರಿಗೆ ಬಂದುಬಿಟ್ಟೆ. ಹೊತ್ತು ಕಳೆಯೋದಕ್ಕೆ ಏನು ಮಾಡ್ತಾ ಇದ್ದೀಯಪ್ಪಾ... ಎಷ್ಟು ಜನ ಮಕ್ಳು ನಿನ್ನ ಮಗಂಗೆ?" ಎಂದೆಲ್ಲಾ ಮಾತನಾಡಿಸಿದಾಗ ತಮ್ಮ ಎಂದಿನ ಪುರಾಣ ಬಿಚ್ಚಿ "ಹೀಗೇ ಇರೋ ಒಬ್ಬ ಮೊಮ್ಮಗನ ಜೊತೆ ಆಟ ಆಡ್ತಾ, ವಾಕಿಂಗ ಹೋಗ್ತಾ, ನಡೀತಿದೆ ಜೀವನ. ಆ ದೇವರು ನಮ್ಮನ್ನು ಇಟ್ಟಷ್ಟು ಕಾಲ ಹೇಗೋ ಬದುಕೋದು. ಅವನು ಕರೆಸಿಕೊಂಡಾಗ ನಗ್ತಾ ಹೋಗೋದು. ಒಟ್ನಲ್ಲಿ ವಿನಾದೈನ್ಯೇನ ಜೀವನಂ ಅನಾಯಾಸೇನ ಮರಣಂ - ಇಷ್ಟೇ ಆ ಭಗವಂತನಲ್ಲಿ ನಾನು ಕೇಳಿಕೊಳ್ಳೋದು." ಎಂದು ಉತ್ತರಿಸಿ ಮನೆಗೆ ಬಂದರೂ ಮಾತನಾಡಿಸಿದ್ದು ಯಾರೆಂದು ನೆನಪೇ ಆಗುವುದಿಲ್ಲ. ಮುಂದೆ ಒಂದು ಒಂದೂವರೆ ದಿನವಾದ ಮೇಲೋ, ಎರಡು ದಿನಗಳ ನಂತರವೋ..."ಅರೇ ಮೊನ್ನೆ ಸಿಕ್ಕದ್ದು ನಮ್ಮ ಶಿವಾಜೋಯಿಸರ ಮಗ ಶಂಕರನಾರಾಯಣ ಅಲ್ಲವೇ" ಎಂದು ಇದ್ದಕ್ಕಿದ್ದಂತೆ ನೆನಪು ಮಾಡಿಕೊಂಡು ನಗುವುದು.. ಗುನುಗುವುದು.. ಹೀಗೆ. ಹಾಗಿದ್ದಲ್ಲಿ, ಹ್ಯಾರಿಗೆ ತಮ್ಮ ನೆನಪಿರಬಹುದೇ?

ಹ್ಯಾರಿ ಮೊದಲ ದಿನ ಮನೆಗೆ ಬಂದಾಗ ರಾಯರ ತಾಯಿ ಸ್ವಲ್ಪ ಅನುಮಾನದಿಂದಲೇ ನೋಡಿದ್ದರು. ಮೊದಲೇ ಕ್ರೈಸ್ತರ ಶಾಲೆ. ಭಾಸ್ಕರರಾಯರು ಮನೆಗೆ ಬಂದ ತಕ್ಷಣ ಶಾಲೆಯ ಬಟ್ಟೆ ಬಿಚ್ಚಿ ಒಂದು ಮೂಲೆಗೆ ಒಗೆದು, ಮೊಣಕಾಲು ಮೊಣಕೈಗಳವರೆಗೂ ನೀರೆರಚಿಕೊಂಡು, ಮುಖ ತೊಳೆದು ನಂತರ ಒಳಕೋಣೆ ಪ್ರವೇಶಿಸಬೇಕು. ಅಂಥದ್ದರಲ್ಲಿ ಈ ಕ್ರೈಸ್ತರ ಹುಡುಗ ಮನೆಯೊಳಗೆ ಬರುವುದೆಂದರೆ! ಆಕೆಯಂತೂ ಹ್ಯಾರಿಯನ್ನು ಹೊರಬಾಗಿಲಲ್ಲೇ ನಿಲ್ಲಿಸಿ -

"ನಿಂದು ಯಾವ ಜಾತಿಯಪ್ಪಾ?" ಎಂದು ಕೇಳಿದ್ದರು.

"ನಾವು ಬಡಗಿಗಳು ತಾಯಿ" ಹ್ಯಾರಿ ಹೇಳಿದ್ದ.

"ನಿನ್ನ ಹೆಸರೇನು ಮರಿ?"

"ಶಿವಾಚಾರಿ"

"ನಿಮ್ಮಮ್ಮನ ಹೆಸರು?"

"ಅಮ್ಮ ಪುಟ್ಟಮ್ಮ ಅಂತ. ಅಪ್ಪನ ಹೆಸರು ರಾಮಾಚಾರಿ... ಅವರು ಈಗ ಇಲ್ಲ" ಹ್ಯಾರಿ ಚಿಟ್ಟೆಂದು ಉತ್ತರಿಸಿದ್ದ. ರಾಯರಿಗೆ ಆಶ್ಚರ್ಯವಾಗಿತ್ತು.

"ನೀವು ಮೊಟ್ಟೆ ಮಾಂಸ ತಿಂತೀರಾ?"

"ಛೆ! ಛೇ!... ಇಲ್ಲ ತಾಯಿ."

ಅಷ್ಟಕ್ಕೇ ಹ್ಯಾರಿಗೆ ಮನೆಯೊಳಗೆ ಪ್ರವೇಶ ಸಿಕ್ಕಿತ್ತು. ಅವನನ್ನು ಹೊರಕೋಣೆಯಲ್ಲೇ ಕೂಡಿಸಿ ಮಾತನಾಡಿಸಿ ಕಳುಹಿಸಬೇಕೆಂದು ಅಮ್ಮನ ಅಪ್ಪಣೆಯೂ ಆಯಿತು. "ಏನೋ ನಮ್ಮ ಹಿಂದೂಗಳೇ, ಮೇಲಾಗಿ ಹೋಲೇರ ಹುಡುಗನಂತೂ ಅಲ್ಲ" ಎಂದು ಆಕೆ ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದರು.

ಭಾಸ್ಕರರಾಯರಿಗೆ ಇದೆಲ್ಲಾ ಸೋಜಿಗವೆನ್ನಿಸಿ ಹ್ಯಾರಿಯನ್ನ ಕೇಳಿದ್ದರು. ಆಗವನು ತಾವುಗಳು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ ಕ್ರೈಸ್ತ ಮಿಷನರಿಗಳು ಸಹಾಯಮಾಡಿದ್ದು. ಆಗ ತಾನೇ ತನ್ನ ತಂದೆ ತೀರಿಕೊಂಡಿದ್ದರಿಂದ ಆಗಿದ್ದ ದುಃಖದಲ್ಲಿ ಅವರಿಗೆ - ಮುಖ್ಯವಾಗಿ ಹ್ಯಾರಿಯ ತಾಯಿಗೆ - ಬೈಬಲ್ ಪಾಠಣ ನೀಡಿದ್ದ ಸಮಾಧಾನ, ಜೊತೆಗೆ ಮಾನವೀಯತೆಯನ್ನೇ ಜೀವನವಾಗಿಸಿಕೊಂಡಿದ್ದ ಆ ಮಿಷನರಿಗಳ ಒಡನಾಟ. ಈ ಎಲ್ಲ ಪ್ರಭಾವಗಳಿಂದ ತಾವುಗಳು ಕ್ರೈಸ್ತ ಮತಕ್ಕೆ ಸಹಜವಾಗಿ ಪರಿವರ್ತೆನೆಗೊಂಡದ್ದು - ಅದರೊಂದಿಗೆ ತನ್ನ ತಾಯಿ ಪುಟ್ಟಮ್ಮ ಮೇರಿಯಾದದ್ದು, ತಾನು ಶಿವಾಚಾರಿ ಹ್ಯಾರಿಯಾದದ್ದು ಎಲ್ಲವನ್ನೂ ಭಾಸ್ಕರರಾಯರಲ್ಲಿ ಹೇಳಿಕೊಂಡಿದ್ದ. ಆಗ್ಗೆ ಹ್ಯಾರಿಯ ಊಟ, ವಿದ್ಯಾಭ್ಯಾಸದ ಖರ್ಚು ಎಲ್ಲವನ್ನೂ ಚರ್ಚ್ ಆಫ್ ಸೌತ್ ಇಂಡಿಯಾದವರೇ ಭರಿಸುತ್ತಿದ್ದರು. ದಿನವೂ ಬೋರ್ಡಿಂಗ್ ಹೋಂನಿಂದ ಸಾಲಾಗಿ ಹ್ಯಾರಿ ಮತ್ತಿತರ ಬೋರ್ಡರುಗಳು ಶಾಲೆಯ ಆವರಣದೊಳಗೆ ಪ್ರವೇಶಿಸುತ್ತಿದ್ದುದೂ ಭಾಸ್ಕರರಾಯರಿಗೆ ನೆನಪಿದೆ. ಆದರೆ ಈ ಎಲ್ಲ ವಿಷಯಗಳ ಸಂಕೀರ್ಣತೆಯನ್ನು ಗ್ರಹಿಸಲು ಭಾಸ್ಕರರಾಯರಿಗೆ ಆಗ ಸಾಧ್ಯವಾಗಿರಲಿಲ್ಲ.

ಆಮೇಲಾಮೇಲೆ ಹ್ಯಾರಿ ಭಾಸ್ಕರರಾಯರಿಗೊಂದು ಅನಿವಾರ್ಯ ಅಂಗವಾಗಿ ಹೋಗಿದ್ದ. ಮನೆಯಲ್ಲಿ ಏನಾದರೂ ಹಬ್ಬ ಹರಿದಿನಗಳಾದರೆ ಹ್ಯಾರಿಗೊಂದು ಆಹ್ವಾನ ಇದ್ದೇ ಇರುತ್ತಿತ್ತು. ಅವನ ಪ್ರವರ್ತನೆ, ಶುಚಿತ್ವವನ್ನು ನೋಡಿದ್ದ ಭಾಸ್ಕರರಾಯರ ತಾಯಿ ಅವನನ್ನು ಒಳಗಿನ ಹಜಾರದವರೆಗೂ ಕರೆತರಲು ಭಾಸ್ಕರರಾಯರಿಗೆ ಅನುಮತಿ ನೀಡಿದ್ದರು. ಬ್ರಾಹ್ಮಣರ ಪಂಕ್ತಿ ಮುಗಿದ ಮೇಲೆ ಹ್ಯಾರಿ ಮತ್ತು ಭಾಸ್ಕರರಾಯರಿಗೆ ಪ್ರತ್ಯೇಕ ಬಡಿಸುವ ಏರ್ಪಾಟನ್ನೂ ಆಕೆ ಮಾಡಿದ್ದರು.

ಹ್ಯಾರಿ ಮಂಗಳೂರಿಗೆ ಹೋದನಂತರ ಒಂದು ಪತ್ರ ಗೀಚಿ ಹಾಕಿದ್ದ. ಅದರಲ್ಲಿ ತನ್ನ ವಿಳಾಸ, ಭಾಸ್ಕರರಾಯರ, ಅವರ ಮನೆಯವರ ಸ್ನೇಹಕ್ಕೆ, ಪ್ರೀತಿಗೆ, ಅಭಿಮಾನಗಳಿಗೆ ಕೃತಜ್ಞತೆ, ಜನ್ಮಜನ್ಮದ ಋಣಾನುಬಂಧದ ಮಾತು ಬಿಟ್ಟರೆ ಬೇರೇನೂ ಇರಲಿಲ್ಲ. ಆ ಪತ್ರವನ್ನೂ ಫೋಟೋದೊಂದಿಗೆ ಇಟ್ಟಂತೆ ಭಾಸ್ಕರರಾಯರಿಗೆ ನೆನಪು. ರಾಯರು ಮತ್ತೆ ಕಪಾಟನ್ನು ಕೆದರತೊಡಗಿದರು.

ಫೋಟೋ ತೆಗೆಸಿಕೊಂಡ ಒಂದು ತಿಂಗಳ ನಂತರ ರಾಯಲ್ ಸ್ಟುಡಿಯೋ ಬಳಿ ಹೋಗಿದ್ದಾಗ ಅವನ ಷೋಕೇಸಿನಲ್ಲಿ ತಮ್ಮಬ್ಬರ ಫೋಟೋವನ್ನು ವಿಸ್ತೃತಗೊಳಿಸಿ ಇಟ್ಟಿದ್ದದ್ದು ಭಾಸ್ಕರರಾಯರಿಗೆ ನೆನಪಾಯಿತು. ಆ ಫೋಟೋ ನೋಡಿದಾಗೆಲ್ಲಾ ಅದನ್ನು ತೆಗೆದೊಯ್ಯಬೇಕೆಂದು ರಾಯರಿಗೆ ಆಸೆಯಾಗುತ್ತಿತ್ತು. ಆದರೆ ಅವರಲ್ಲಿ ಆಗ ಹಣವಿದ್ದಿಲ್ಲ. ಈಗಲೂ ಆ ಫೋಟೋ ಅಲ್ಲೇ ಇರಬಹುದೇ? ಈ ಆಲೋಚನೆ ರಾಯರ ಮೆದುಳನ್ನು ಹೊಗುತ್ತಿದ್ದಂತೆಯೇ ಹೆಗಲ ಮೇಲೆ ವಲ್ಲಿ ಹಾಕಿ ಮೆಟ್ಟಿನೊಳಗೆ ಕಾಲು ತೂರಿಸಿಯೇ ಬಿಟ್ಟರು.

"ಅಮ್ಮಾ ನೀರಜಾ... ನಾನು ಇಲ್ಲೇ ರಾಯಲ್ ಸ್ಟುಡಿಯೋಗೆ ಒಂದು ರೌಂಡ್ ಹೋಗ್ಬರ್ತೀನಮ್ಮಾ."

"ಯಾವ ರಾಯಲ್ ಸ್ಟುಡಿಯೋ ಮಾವಾ?"

"ಇಲ್ಲೇ ಚಿಕ್ಕಮಾರ್ಕೆಟ್ ಹತ್ರ ಸಂದೀಲಿ ಇದ್ಯಲ್ಲಮ್ಮಾ... ನಾವು ಹುಡುಗರಾಗಿದ್ದಾಗ ಆತ ಪ್ಯಾಲೆಸ್ ಫೋಟೋಗ್ರಾಫರ್ ಆಗಿದ್ದನಂತೆ.. ಮಹಾರಾಜರ ಫೋಟೋ ಎಲ್ಲಾ ತೆಗೆದಿದ್ದಾನಮ್ಮಾ. ಅದಕ್ಕೇ ರಾಯಲ್ ಸ್ಟುಡಿಯೋಂತ ಹೆಸರು. ಬೈ ಅಪಾಯಿಂಟ್ ಮೆಂಟ್ ಟು ಹಿಸ್ ಮೆಜೆಸ್ಟಿ... ಫೋಟೋಗ್ರಾಫರ್ ಆಗಿದ್ದ ಅವನು."

"ಅಯ್ಯೋ ಆ ಮುರುಕಲು ರಾಯಲ್ ಸ್ಟುಡಿಯೋನೇ? ಪ್ಯಾಲೆಸ್ ವೈಭವ ಇದ್ದಹಾಗೇ ಇದೆ ಅವನದ್ದೂ.. ನೊಣ ಹೊಡೀತಾ ಕೂತಿದ್ದಾನೆ. ಈಗೆಲ್ಲಾ ಕಲರ್ ಲ್ಯಾಬ್ ಗಳು ಬಂದಮೇಲೆ ಆ ಬ್ಲಾಕ್ ಅಂಡ್ ವೈಟನ್ನ ಯಾರು ಕೇಳ್ತಾರೆ ಮಾವಾ? ಅವನ ಹತ್ತಿರ ಈಗ ಏನಿದೆ ಮಣ್ಣು?"

"ಹಾಗಲ್ಲಮ್ಮಾ.... ಅವನು ಈ ಫೋಟೋದ ಎನ್-ಲಾರ್ಜ್-ಮೆಂಟ್ ಷೋಕೇಸಿನಲ್ಲಿ ಹಾಕಿದ್ದ. ಅದು ಇನ್ನೂ ಇದೆಯೋ ಇಲ್ಲವೋ ಒಂದು ಸರ್ತಿ ನೋಡಿ ಬರೋಣಾಂತ. ಕ್ಯೂರಿಯಾಸಿಟಿ ಅಷ್ಟೇ. ಇದ್ರೆ ತೆಗೊಂಡು ಬರೋದು. ಮೌಂಟ್ ಹಾಕಿದ್ದ ಆ ಫೋಟೋನ ಕೊಟ್ಟೇ ಕೊಡ್ತಾನೆ. ಐವತ್ತು ವರ್ಷದ ಹಿಂದಿನ ಫೋಟೋ ವ್ಯಪಾರ ಆದರೆ ಅವನಿಗೇ ಖುಷಿ ಅಲ್ಲವೇ?"

"ಅಲ್ಲ ಮಾವಾ... ಐವತ್ತೈದು ವರ್ಷದ ಫೋಟೋ.. ನೆಗೆಟಿವ್ ಹೀಗೆ ಅವನು ತೆಗೆದಿದ್ದೆಲ್ಲಾ ಭದ್ರವಾಗಿ ಇಟ್ಟಿದ್ದರೆ ಈಗವನ ಅಂಗಡಿ ಪೂರ್ತಿ ನೆಗೆಟಿವ್ ಆಗಿರುತ್ತೆ ಅಷ್ಟೇ. ಸುಮ್ಮನೆ ನಿಮಗೆಲ್ಲೋ ಭ್ರಾಂತು ಅಷ್ಟೇ.. ಮಲಗಿ, ಮಲಗಿ.. ರಾತ್ರಿ ದೂರದರ್ಶನದಲ್ಲಿ ಬರೋ ರಷ್ಯನ್ ಸಿನೇಮಾ ನೋಡೋವ್ರಂತೆ"

ಭಾಸ್ಕರರಾಯರು ಆಲೋಚಿಸಿದರು. ನೀರಜಾ ಹೇಳುವುದೂ ನಿಜವೇ. ಇದೆಲ್ಲಾ ಸುಮ್ಮನೆ ತಮ್ಮ ನಾಸ್ಟಾಲ್ಜಿಯಾ ಅಷ್ಟೇ. ಈಗ ಈ ಫೋಟೋ ದೊಡ್ಡದು ಮಾಡಿ ಮಾಡುವುದಾದರೂ ಏನು? ಹೋದ ಬಾರಿಯಂತೂ ಶನಿವಾರ ರಾತ್ರಿ ಠಾಕೂರರ ನಾಟಕ ನೋಡೋಕ್ಕೇ ಆಗಲಿಲ್ಲ. ಈ ಸಾರೀನಾದರೂ ಎದ್ದಿರಬೇಕು ಎಂದುಕೊಳ್ಳುತ್ತಾ ಭಾಸ್ಕರರಾಯರು ಮಲಗಿದರು. ಶಾಂತವಾಗಿ ನಿದ್ದೆಯನ್ನೂ ಮಾಡಿದರು.

ಸಂಜೆಗೆ ಅವರ ಮಗ ಮಹೇಶಚಂದ್ರ ಆಫೀಸು ಮುಗಿಸಿಕೊಂಡು ಬರುವವೇಳೆಗೆ ಭಾಸ್ಕರರಾಯರು ನಿದ್ರಿಸುತ್ತಿದ್ದರು. ಸಾಮಾನ್ಯವಾಗಿ ಸಂಜೆ ನಾಲ್ಕಕ್ಕೆ ಸರಿಯಾಗಿ ಏಳುತ್ತಿದ್ದವರು ಅಂದೇಕೋ ಆರು ಘಂಟೆಯಾದರೂ ಎದ್ದಿರಲಿಲ್ಲ.

ಮಹೇಶಚಂದ್ರ ಬಟ್ಟೆ ಬದಲಿಸಿ ಕಾಫಿ ಕುಡಿದವನೇ ನೀರಜಾಳೊಂದಿಗೆ ಹೇಳಿದ -

"ನಾಡಿದ್ದು ಮಂಗಳ ಕೆಮಿಕಲ್ಸ್ ನಲ್ಲಿ ಒಂದು ಸೆಮಿನಾರಿದೆ. 'ಫರ್ಟಿಲೈಸರ್ ಸೀನ್ ಇನ್ ಇಂಡಿಯಾ - ಪ್ರಸಂಟ್ ಗ್ಲಟ್ ಆಂಡ್ ಫ್ಯೂಚರ್ ಪ್ರಾಸ್ಪೆಕ್ಟ್ನ್' ಅಂತ ವಿಷಯ.. ಹೇಗಿದೆ?

"ಸೆಮಾನಾರು ಎಲ್ಲಿ?"

"ಮಂಗಳೂರಿನಲ್ಲಿ... ನಾಳೆ ಸಾಯಂಕಾಲ ಹೊರಡಬೇಕು. ರಾತ್ರಿಗೆ ಸ್ವಲ್ಪ ಟೀ ಮಾಡಿಡು.. ಈವತ್ತೇ ಪೇಪರ್ ತಯಾರು ಮಾಡಬೇಕು. ನಾಳೆ ಆಫೀಸಿನಲ್ಲಿ ಟೈಪ್ ಮಾಡಿಸಿಕೋತೀನಿ.... ಅಪ್ಪ ಯಾಕೆ ಇನ್ನೂ ಎದ್ದಿಲ್ಲ?"

"ಅವರು ಮಧ್ಯಾಹ್ನ ಮಲಗಿದ್ದೇ ಲೇಟಾಗಿತ್ತು. ಈವತ್ತು ಮತ್ತೆ ಕಪಾಟು ತೆರೆದು ಕೂತಿದ್ರು. ಅದ್ಯಾರೋ ಹೈಸ್ಕೂಲಿನ ಸ್ನೇಹಿತನ ಫೋಟೋ ಸಿಕ್ಕಿತೂಂತ ಅದೇ ಜಪ ಮಾಡುತ್ತಾ ಇದ್ದರು."

"ಯಾರದ್ದು? ಶಿವಾಜೋಯಿಸರ ಮಗ ಶಂಕರನಾರಾಯಣ ಅಂತಾ ಇರುತ್ತಾರಲ್ಲಾ.. ಅವರದ್ದಾ?"

"ಅಲ್ಲ.. ಅದೇನೋ ವಿಚಿತ್ರ ಕ್ರಿಶ್ಚಿಯನ್ ಹೆಸರು ಹೇಳುತ್ತಿದ್ದರು... ತಡೀರೀ ಒಂದು ನಿಮಿಷ.. ಆ ಫೋಟೋನೇ ತರುತ್ತೀನಿ. ನೀವೇ ನೋಡೋವ್ರಂತೆ."

ನೀರಜಾ ರಾಯರ ಮೇಜಿನ ಮೇಲಿದ್ದ ಆ ಚಿತ್ರವನ್ನು ಮಹೇಶಚಂದ್ರನಿಗೆ ಒಯ್ದು ಕೊಟ್ಟಳು. ಮಹೇಶಚಂದ್ರ ಫೋಟೋ ನೋಡಿ ಕಿರುನಗೆ ಬೀರಿದ....

"ಓಹ್.. ಅಪ್ಪನ ಸ್ಕೂಲಿನ ಕಾಲದ ಫೋಟೋ.. ಅಪ್ಪ ಇಲ್ಲೇ ಹಾರ್ಡ್ವಿಕ್ ಹೈಸ್ಕೂಲಿನ ವಿದ್ಯಾರ್ಥಿ ಆಗಿದ್ದರು ಕಣೇ.. ಅದಕ್ಕೆ ಆಗ ಮೆಥಾಡಿಸ್ಟ್ ಸ್ಕೂಲೂಂತ ಹೆಸರಿತ್ತು."

"ಹೌದಾ.. ನಮ್ಮ ಲಕ್ಷ್ಮೀಪುರದಲ್ಲಿರೋ ಹಾರ್ಡ್ವಿಕ್ಕೇ?! ನನಗೆ ಗೊತ್ತೇ ಇರಲಿಲ್ಲ,"

ಅಷ್ಟರಲ್ಲಿ ಮಹೇಶಚಂದ್ರ ಫೋಟೋದ ಹಿಂಭಾಗದಲ್ಲಿದ್ದ ವಿಳಾಸವನ್ನು ನೋಡಿದ್ದ.

"ಇದೇನೇ, ಮಂಗಳೂರಿನ ವಿಳಾಸವಿದೆ?"

"ಅದೇ ಹ್ಯಾರಿ ಅಲ್ಲವಾ.. ಆತ ಊರಿಗೆ ಹೋದಮೇಲೆ ಆ ಅಡ್ರಸ್ ಬರೆದಿದ್ದರಂತೆ."

"ಇದೂ ಒಂಥರಾ ಮಜಾ ಕೊಡುತ್ತೆ. ಈ ಫೋಟೋನ ನನ್ನ ಸೂಟ್ಕೇಸಿನಲ್ಲಿ ಹಾಕಿಡು. ಈ ವಿಳಾಸ ಸಿಗುತ್ತದೆಯೇನೋ ನೋಡೋಣ. ಊರೇ ಬದಲಾಗಿ ಹೋಗಿರುತ್ತೆ.. ಆದರೂ ಐವತ್ತು ವರ್ಷದ ಹಿಂದಿನ ವಿಳಾಸ ಇನ್ನೂ ಬದಲಾಗದೇ ಇದೆಯಾ ಅನ್ನೋದನ್ನ ನೋಡಬಹುದು. ಜೊತೆಗೆ ಆತ ಸಿಕ್ಕರಂತೂ ಅದಕ್ಕಿಂತ ದೊಡ್ಡ ಆಕಸ್ಮಿಕ ಬೇರೇನೂ ಇರೋದಿಲ್ಲ. ನಾನು ಮಂಗಳೂರಿನಲ್ಲಿ ಹುಡುಕಿ ಬರುತ್ತೇನೆ. ಈ ಐವತ್ತು ವರ್ಷದ ಕಾಲಮಾನವನ್ನ ಹುಡುಕೋದೂ ಒಂದು ಪ್ರತ್ಯೇಕ ಥ್ರಿಲ್ ನೋಡು."

"ನಿಮಗೆಲ್ಲೋ ತಲೆ ಕೆಟ್ಟಿದೆ ಬಿಡಿ."

"ಹಾಗಾದರೆ ಅವರು ಖಂಡಿತ ಸಿಗುತ್ತಾರೆ ಬಿಡು. ಬಿಹೈಂಡ್ ಎವ್ರಿ ಸಕ್ಸಸ್ ಫುಲ್ ಮ್ಯಾನ್ ದೇರ್ ಈಸ್ ಎ ಸರ್ಪ್ರೈಸ್ಡ್ ಉಮನ್ ಅಂತಾರಲ್ಲಾ ಹಾಗೆ!"

ಇಬ್ಬರೂ ನಕ್ಕರು.

ಮಹೇಶಚಂದ್ರ ತನ್ನ ಮಾರನೆಯ ದಿನದ ಪ್ರಯಾಣಕ್ಕಾಗಿ ತಯಾರಿ ನಡೆಸಿದ. ಸ್ವಲ್ಪ ಹೊತ್ತಿನ ಬಳಿಕ ಭಾಸ್ಕರರಾಯರು ಎದ್ದರು. ಇಬ್ಬರೂ ಸ್ವಲ್ಪ ಹೊತ್ತು ಲೋಕಾಭಿರಾಮ ಹರಟಿದರು. ನಂತರ ಭಾಸ್ಕರರಾಯರು ಆಗತಾನೇ ಆಟ ಮುಗಿಸಿಬಂದ ಮೊಮ್ಮಗನೊಟ್ಟಿಗೆ ಚಾಕಲೇಟ್ ವ್ಯಾಪಾರಕ್ಕೆಂದು ಹೊರಟುಬಿಟ್ಟರು.

ಆ ದಿನ ರಾತ್ರಿ ಮಹೇಶಚಂದ್ರ ತನ್ನ ಸೆಮಿನಾರು ಪೇಪರಿನ ತಯಾರಿ ನಡೆಸಿದ. ತಮ್ಮ ಫ್ಯಾಕ್ಟರಿಗೆ ಮಂಗಳವಾರ ರಜೆಯಿರೋದು ಅದೃಷ್ಟ... ಇಲ್ಲದಿದ್ರೆ ನಾಳೆ ಭಾನುವಾರ, ಪೇಪರ್ ಎಲ್ಲಿ ಟೈಪ್ ಮಾಡಿಸೋದು?! ಎಂದುಕೊಂಡು ತನ್ನಲ್ಲೇ ನಕ್ಕ.

ಭಾಸ್ಕರರಾಯರು ರಾತ್ರಿಯ ರಷ್ಯನ್ ಸಿನೇಮಾ ನೋಡಿದರು.

ಮಹೇಶಚಂದ್ರ ಮಂಗಳೂರಿಗೆ ಹೋದ. ಉಡ್ ಸೈಡಿನಲ್ಲಿ ಅವನಿಗಾಗಿ ಒಂದು ಕೋಣೆ ಕಾಯ್ದಿರಿಸಿದ್ದರು. ಅಂದಿನ ಸೆಮಿನಾರು ಮುಗಿದ ನಂತರ ಸಂಜೆಗೆ ಎಂದಿನಂತೆ ಬಿಡುವಿತ್ತು. ಸಾಧಾರಣ ಕಡಲತೀರಕ್ಕೋ ಅಥವಾ ಯಾವುದಾದರೂ ಸಿನೇಮಾಕ್ಕೋ ಹೋಗುತ್ತಿದ್ದವನು ಈ ಬಾರಿ ಬ್ರೀಫ್ ಕೇಸ್ ತೆಗೆದು ಅದರಲ್ಲಿದ್ದ ಫೋಟೋ ತೆಗೆದ. ಅವನಲ್ಲಿ ಒಂದು ರೀತಿಯ ಅನ್ವೇಷಕ ಭಾವನೆ ತುಂಬಿಕೊಂಡಿತ್ತು. ಹ್ಯಾರಿ ಜ್ಯೋತಿಕುಮಾರ್ ಈ ಐವತ್ತೈದು ವರ್ಷಗಳ ಹಿಂದಿನ ವಿಳಾಸದಲ್ಲಿರುವ ಸಂಭಾವ್ಯತೆ ಕಡಿಮೆ. ಸಂಭಾವ್ಯತೆಯೇನು? ಸಾಧ್ಯವೇ ಇಲ್ಲ. ಆದರೂ ಒಮ್ಮೆ ನೋಡಿಯೇ ಬಿಡುವ ಎಂದು ಅಡ್ವೆಂಚರ್ ನಡೆಸುವೋಪಾದಿಯಲ್ಲಿ ಕಂಕನಾಡಿಗೆ ರಿಕ್ಷಾ ಹತ್ತಿದ. ಕಂಕನಾಡಿಯ ದೊಡ್ಡ ವೃತ್ತದ ಬಳಿ ಇಳಿದು ಯಾರನ್ನೋ ಪಂಪ್ ವೆಲ್ ಎಲ್ಲಿದೆ ಎಂದು ಕೇಳಿದ. ಕೆಕ್ಕರುನೋಟ ಬೀರಿ 'ಮನೆಮನೆಯಲ್ಲೂ ಇದೆ' ಎಂದು ಹೇಳಬಹುದೆಂದು ನಿರೀಕ್ಷಿಸಿದ್ದವನಿಗೆ ಆಶ್ಚರ್ಯ ಕಾದಿತ್ತು - 'ಅಲ್ಲಿ ಎಲ್ಲಿ ಹೋಗಬೇಕು?' ಎಂದು ವ್ಯಕ್ತಿ ಕೇಳಿದ. ಮಹೇಶಚಂದ್ರ ಆಶ್ಚರ್ಯದಿಂದ ಉತ್ತರಿಸಿದ.. 'ಸೋಮಪ್ಪ ಪಂಡಿತರ ಕಾಂಪೌಂಡು.' ವ್ಯಕ್ತಿ ಕಾಂಪೌಂಡಿಗೆ ದಾರಿಯನ್ನೂ ಹೇಳಿಯೇ ಬಿಟ್ಟ - 'ಓ ಅಲ್ಲಿ ನೇರ ಹೋದರೆ ಒಂದು ಹಳೇ ಹೋಟೆಲ್ ಸಿಗ್ತದೆ.. ಸನ್ಮಾನ್ ಹೊಟೇಲ್ ಅಂತ.. ಅದರ ಹಿಂದಿನ ಕಾಂಪೌಂಡೇ ಸೋಮಪ್ಪ ಪಂಡಿತರದ್ದು.'

ಅರೇ ಅಂದುಕೊಂಡ ಮಹೇಶಚಂದ್ರ. ಮೈಸೂರಿನಲ್ಲಿ ಒಂದು ತಿಂಗಳು ಬಿಟ್ಟು ಜಯಲಕ್ಷ್ಮೀಪುರದ ಕಡೆ ಹೋದರೆ ಆ ಪ್ರಾಂತವೇ ಗುರುತು ಹತ್ತುವುದಿಲ್ಲ. ಇಲ್ಲಿ ನೋಡಿದರೆ ಕಳೆದ ಐವತ್ತು ವರ್ಷಗಳಿಂದ ಎಲ್ಲವೂ ಸ್ಥಗಿತವಾದ ಹಾಗೆ ಕಾಣಿಸುತ್ತದೆ ಕಾಂಪೌಂಡಿಗೆ ಬಂದು ವಿಚಾರಿಸಿದಾಗ, ವಿದ್ಯುತ್ ಸರಬರಾಜಿಲ್ಲದ ಒಂದು ಮನೆಗೆ ಮಹೇಶಚಂದ್ರನನ್ನು ಕಳಿಸಿದರು. ಮಹೇಶಚಂದ್ರ ಬಾಗಿಲ ಬಳಿ ನಿಂತು, ತೆರೆದಿದ್ದ ಬಾಗಿಲನ್ನು ಎರಡು ಬಾರಿ ತಟ್ಟಿದ. ಒಂದು ಕೋಳಿ, ಒಂದೈದಾರು ಪಿಳ್ಳೆಗಳು ಆ ತೆರೆದ ಬಾಗಿಲಿನಿಂದ ಹೊರಗೋಡಿ ನೆಲದಮೇಲಿಲ್ಲದ ಕಾಳುಗಳನ್ನು ಹೆಕ್ಕ ತೊಡಗಿದುವು.

"ಬಾಗಿಲು ತೆರೆದೇ ಉಂಟಲ್ಲಾ.. ಯಾರನ ಅದು?" ಎನ್ನುತ್ತಾ ಸುಮಾರು ಮಹೇಶಚಂದ್ರನ ವಯಸ್ಸಿನವನೇ ಆದ ಗಂಡಸು ಬಾಗಿಲ ಬಳಿ ಬಂದು ನಿಂತ.

"ಇಲ್ಲಿ ಹ್ಯಾರಿ ಜ್ಯೋತಿಕುಮಾರ್ ಇದ್ದಾರಾ?"

"ಅವರು ಇಲ್ಲ.. ಎಂತ ಆಗಬೇಕು?"

"ಅಂದರೆ?.. ಎಲ್ಲಿದ್ದಾರೆ?"

"ಈಗವರು ಮೈಸೂರಿನಲ್ಲಿದ್ದಾರಲ್ಲಾ ಮಾರಾಯ್ರೇ? ನಿಮಗೆ ಅವರ ಪರಿಚಯ ಉಂಟಾ?"

ಮಹೇಶಚಂದ್ರ ತಾನು ಬಂದಿದ್ದರ ಕಾರಣ, ಸಂದರ್ಭ ವಿವರಿಸಿದ. ಆಲ್ಬರ್ಟ್ ಅವನನ್ನು ಒಳಕರೆದು ಕೂಡಿಸಿದ. ಮಗಳ ಕೈಯಲ್ಲಿ ಪಕ್ಕದಂಗಡಿಯಿಂದ ಬಾಜಲ್ ತರಿಸಿದ. ಆ ನಂತರ ಅವನಿಗೇ ಅಲ್ಲಿನ ಬೆಳಕಿಲ್ಲದ ಅಂಧಕಾರದ ಬಗ್ಗೆ ಬೇಸರವಾಯಿತೇನೋ."ಇಲ್ಲಿ ಬೇಡ. ಹೊರಗೆ ಹೋಗುವಾ ಅಲ್ಲಾ?" ಎಂದು ಕೇಳಿದ. ಮಹೇಶಚಂದ್ರ ಅವನನ್ನು
ಉಡ್ ಸೈಡ್ ನ ತನ್ನ ಕೋಣೆಗೆ ಕರೆದೊಯ್ದ. ಕೋಣೆಯಲ್ಲಿ ಅವರು ಮತ್ತೆ ಮಾತು ಪ್ರಾರಂಭಿಸಿದರು.

ಆಲ್ಬರ್ಟ್ ಗೆ ತನ್ನಪ್ಪನನ್ನು ಮಹೇಶಚಂದ್ರ ಹುಡುಕಿಬಂದದ್ದು ಆಶ್ಚರ್ಯತರಿಸಿತ್ತು. ಅವನಿಗೆ ತಿಳಿದಂತೆ ಹ್ಯಾರಿಯನ್ನು ಹುಡುಕಿ ಈವರೆಗೆ ಯಾರೂ ತಮ್ಮ ಮನೆಯ ಬಳಿ ಬಂದದ್ದಿಲ್ಲ.
ಮಹೇಶಚಂದ್ರ ಹ್ಯಾರಿಯ ವಿಷಯ ತೆಗೆದ. ಅದಕ್ಕುತ್ತರವಾಗಿ ಆಲ್ಬರ್ಟ್ ತನ್ನ ಸಂಸಾರ ತಾಪತ್ರಯಗಳ ಸರಮಾಲೆಯನ್ನೇ ಬಿಡಿಸಿದ. "ಹ್ಯಾರಿಯವರಿಗೆ ವಯಸ್ಸಾಗಿತ್ತು ಮಾರಾಯ್ರೇ"... ಎಂದು ಪ್ರಾರಂಭಿಸಿದವ ತಮ್ಮ ಸಾಂಸಾರಿಕ ತೊಂದರೆ, ಆರ್ಥಿಕ ಮುಗ್ಗಟ್ಟು, ಎಲ್ಲವನ್ನೂ ಹೇಳಿದ. ಹ್ಯಾರಿ ಶಾಖಾಹಾರಿ ಆಗಿದ್ದನಂತೆ. ಆಲ್ಬರ್ಟ್ ತಾಯಿಗೆ ಭಾನುವಾರ ಮುಂಜಾನೆ ಕೋಳಿ ತಿನ್ನದಿದ್ದರೆ ದಿನವೇ ಸಾಗುತ್ತಿರಲಿಲ್ಲವಂತೆ. ಮೊದಲಿಗೆ ಪಕ್ಕದ ಮನೆಯಲ್ಲೆಲ್ಲಾದರೂ ಸಾರು ಮಾಡಿಸಿ ತರುತ್ತಿದ್ದರು. ಮಕ್ಕಳು ಹುಟ್ಟಿದ ಮೇಲೆ ಮನೆಯಲ್ಲೂ ಮಾಂಸಾಹಾರ ತಯಾರಿ ಪ್ರಾರಂಭವಾಯಿತು. ಆಕೆ ತೀರಿಕೊಳ್ಳುವ ತನಕ ಹ್ಯಾರಿ ಇದನ್ನೆಲ್ಲಾ ಹೇಗೋ ತಡೆದುಕೊಂಡಿದ್ದ. ನಂತರ ಮಾಂಸ ಮಾಡಿದ ದಿನ ವಿಪರೀತ ಸಿಡಿಸಿಡಿ ಮಾಡುವುದು, ಮೀನು ಮಾಡಿದರಂತೂ ಮನೆಯಿಂದಲೇ ಹೊರಟುಬಿಡುವುದೂ... ಹೀಗೆ ನೀರಿನಾಚೆಯ ಮೀನಿನಂತೆ ವಿಲಿವಿಲ ಒದ್ದಾಡಿ ಹೋಗುತ್ತಿದ್ದರಂತೆ. ಹ್ಯಾರಿ ಮೈಸೂರಿನಲ್ಲಿ ಓದಿದ ವಿಷಯ ಆಲ್ಬರ್ಟ್ ಗೆ ತಿಳಿದಿದ್ದಂತಿರಲಿಲ್ಲ. "ನನಗೆ ನನಪು ಇರುವಂತೆ" ಎಂದು ಪ್ರಾರಂಭಿಸಿದವ, ಹ್ಯಾರಿ ಮೇಕ್ಯಾನಿಕ್ ಆಗಿ ಎಲ್ಲೋ ಸೇರಿದವ ಕಡೆಗೆ ಮೆಷಿನ್ ಆಪರೇಟರ್ ಆಗಿ ದುಡಿದು, ಕಡೆಗೊಂದು ದಿನ ಕೆಲಸ ಕೈಲಾಗದೇ ಬಿಟ್ಟು ಬಂದ ವಿಷಯ ಹೇಳಿದ. ಆಲ್ಬರ್ಟ್ ಸಹ ಮಂಗಳೂರು ಕೆಮಿಕಲ್ಸ್ ನಲ್ಲಿ ಅಂಥದೇ ಒಂದು ಕೆಲಸ ಮಾಡುತ್ತಿದ್ದ. (ತಾನು ಅಲ್ಲಿಯ ಸೆಮಿನಾರಿಗೇ ಬಂದಿರುವುದೆಂದು ಮಹೇಶಚಂದ್ರ ಆಲ್ಬರ್ಟ್ ಗೆ ಹೇಳಲಿಲ್ಲ). ಆಲ್ಬರ್ಟ್ ನ ಮಗ ಈಗ ಮಂಗಳೂರಿನ ಹೆಬಿಕ್ ಟೆಕ್ನಿಕಲ್ ಸ್ಕೂಲಿನಲ್ಲಿ, ತಲೆತಲಾಂತರದಿಂದ ಬಳುವಳಿ ಬಂದ ಉದ್ಯೋಗಕ್ಕಾಗಿ ತರಬೇತಿ ಪಡೆಯುತ್ತಿದ್ದಾನಂತೆ.

ಹ್ಯಾರಿ ಮೈಸೂರಿನಲ್ಲಿರುವುದೇಕೆಂದು ಮಹೇಶಚಂದ್ರನಿಗಿನ್ನೂ ಅರ್ಥವಾಗಲಿಲ್ಲ. ಆಲ್ಬರ್ಟ್ ನನ್ನು ಆ ವಿಷಯವಾಗಿಯೂ ಪ್ರಶ್ನಿಸಿದ. "ಅದೇ ಹೇಳಿದೆನಲ್ಲಾ ಮಾರಾಯ್ರೇ" ಎಂದು ಆಲ್ಬರ್ಟ್ ಮತ್ತೆ ಮಾಂಸಾಹಾರ ಸಸ್ಯಾಹಾರದ ವಿಚಾರ ಬಿಚ್ಚಿದ. ಅದರ ಜೊತೆಗೆ ಹ್ಯಾರಿಯ ಕ್ಷೀಣಿಸುತ್ತಿದ್ದ ಆರೋಗ್ಯ, ಊಟ ಔಷಧಿಗಳಿಗೂ ಹಣ ಹೊಂದಿಸಲಾಗದ ತಮ್ಮ ಸ್ಥಿತಿ, ಬದಲಾದ ಜೀವನ ಪದ್ಧತಿಗೆ ಒಗ್ಗಿಕೊಳ್ಳಲಾಗದ ಪರಿಸ್ಥಿತಿ ಎಲ್ಲವನ್ನೂ ಹೇಳಿ ಕಡೆಗೆ "ಆದ್ದರಿಂದ ಚೆನ್ನಾಗಿ ಯೋಚನೆ ಮಾಡಿ, ವೃದ್ಧಾಶ್ರಮಕ್ಕೆ ಸೇರಿಸುವ ತೀರ್ಮಾನ ಮಾಡಿದ್ದು. ನಂತರ ಎಂತ ಉಂಟು ಮಾರಾಯ್ರೆ? ನಾವು ಯಾರಾದರೂ ಒಂದು ತಿಂಗಳಿಗೊಮ್ಮೆ ಹೋಗಿ ನೋಡಿ ಬರ್ತೇವೆ. ಒಮ್ಮೆ ನೋಡಿ ಬರಲಿಕ್ಕೂ ಹಣ ಸಮ ಹೊಂದುವುದಿಲ್ಲ ಮಾರಾಯ್ರೆ. ಮೈಸೂರಂದ್ರೆ ಎರಡುನೂರು ಖರ್ಚಾಗಲಿಕ್ಕೆ ಸಾಕು. ಎಂತ ಮಾಡುವುದೋ ಎಂತದೋ.." ಆಲ್ಬರ್ಟ್ ಮಾತು ಮುಗಿಸಿದ. ಮಹೇಶಚಂದ್ರ ವೃದ್ಧಾಶ್ರಮದ ವಿಳಾಸ ತೆಗೆದುಕೊಂಡು ನಂತರ ಆಲ್ಬರ್ಟ್ ಗೆ ಗುಡ್-ಬೈ ಹೇಳಿದ.

ಮಾರನೆಯ ದಿನವೂ ಸೆಮಿನಾರು ಮಾಮೂಲಿಯಾಗಿಯೇ ನಡೆಯಿತು. ರಾಸಾಯನಿಕ ಗೊಬ್ಬರಗಳ ಮಾರುಕಟ್ಟೆಯ ಪರಿಸ್ಥಿತಿ, ಬರದಿಂದ ಮಾರಾಟಕ್ಕೆ ಬಿದ್ದಿರುವ ಹೊಡೆತ, ಬರಪರಿಹಾರದಿಂದ ಮಾರಾಟ ಹೆಚ್ಚಾಗುವ ಸಂಭವ. ಗೊಬ್ಬರಗಳ ವಿಪರೀತ ಆಮದು.. ಹೀಗೆ ಏನೇನೋ ಚರ್ಚಿಸಿ ಮೈಸೂರಿಗೆ ಮರಳಿದ್ದಾಯಿತು. ಮನೆಗೆ ಬಂದಾಗ ಮುಂಜಾನೆ ಎಂಟೂವರೆ. ಸ್ನಾನ ಇತ್ಯಾದಿಗಳನ್ನು ಮುಗಿಸಿ ಮಹೇಶಚಂದ್ರ ಆಫೀಸಿಗೆ ಹೊರಟುಬಿಟ್ಟ.

ಎರಡುದಿನಗಳ ನಂತರ ಅಗಸರವನು ಮನೆಗೆ ಬಂದಾಗ ಪ್ರಯಾಣದ ಬಟ್ಟೆಗಳನ್ನು ಒಗೆಯಲೆಂದು ನೀರಜಾ ಹಾಕಿದಳು. ಅಭ್ಯಾಸಬಲದಂತೆ ಅಗಸರವ ಎಲ್ಲ ಜೇಬುಗಳನ್ನು ತಡಕಿ ಮಹೇಶಚಂದ್ರನ ಅಂಗಿಯಿಂದ ಒಂದು ಚೀಟಿ ತೆಗೆದುಕೊಟ್ಟ. ನೀರಜಾ ಅದನ್ನು ಅವನಿಂದ ಪಡೆದು ಮಹೇಶಚಂದ್ರನ ಮುಂದೆ ಹಿಡಿದಳು.

"ಓಹ್ ಗಡಿಬಿಡಿಯಲ್ಲಿ ಹೇಳೋದೇ ಮರೆತೆ ನೋಡು. ಮಂಗಳೂರಿನಲ್ಲಿ ಹ್ಯಾರಿ ಜ್ಯೋತಿಕುಮಾರ ಮನೆಗೆ ಹೋಗಿದ್ದೆ. ಆತ ಇಲ್ಲೇ ಹೋಮ್ ಫರ್ ದ ಏಜ್ಡ್ ನಲ್ಲಿದ್ದಾರಂತೆ. ಅವರ ಮಗ ವಿಳಾಸ ಕೊಟ್ಟಿದ್ದಾರೆ. ನಿಜ ಹೇಳಬೇಕೂಂದ್ರೆ ಅವರನ್ನ ಒಂದು ದಿನ ಮನೇಗೆ ಕರಕೊಂಡು ಬರಬೇಕೂಂತ ಇದ್ದೆ. ಅಪ್ಪನಿಗೆ ಒಂದು ಸರ್ಪ್ರೈಸ್ ಕೊಟ್ಟಹಾಗಾಗುತ್ತೆ."

"ಹೋಗ್ಲಿ ಅಂತೂ ನಿಮ್ಮ ಗೊಬ್ಬರಕ್ಕೆ ಮಾರ್ಕೆಟ್ ಪತ್ತೆಹಚ್ಚೋಕ್ಕೆ ಆಗದಿದ್ರೂನೂವೆ, ಅಪ್ಪನ ಹಳೇ ಸ್ನೇಹಿತರನ್ನಂತೂ ಹೇಗೆ ಪತ್ತೆ ಹಚ್ಚಿಬಿಟ್ಟಿರಿ. ಆದರೆ ಹ್ಯಾರಿಗೆ ನಿಮ್ಮಪ್ಪನ ನೆನಪು ಇರಬಹುದೇ?"

"ಅದೇನೋ ನಿಜ... ಆ ಫೋಟೋ ತೆಗೊಂಡು ಹೋಗಿರ್ತೀನಿ. ನೋಡೋಣ. ಜ್ಞಾಪಕ ಬರದೇ ಇದ್ದರೆ ಏನೂ ಮಾಡೊಕ್ಕಾಗಲ್ಲ. ಅಪ್ಪನಿಗೆ ಹ್ಯಾರೀನ ಭೇಟಿಯಾದರೆ ಆಗಬಹುದಾದ ಥ್ರಿಲ್ ಯೋಚಿಸಿ ನೋಡು. ಐವತ್ತೈದು ವರ್ಷಗಳ ನಂತರದ ಮರುಭೇಟಿ. ಅದೇ ಒಂದು ಪ್ರತ್ಯೇಕ ಖುಷಿ ಕೊಡುತ್ತೆ!"

"ನಿಜ. ಹೈಸ್ಕೂಲಿನ ಸ್ನೇಹಿತೆ ಸಿಕ್ಕಿದರೇನೇ ನನಗೆ ವಿಪರೀತ ಖುಷಿಯಾಗುತ್ತೆ, ಅಂಥದ್ದರಲ್ಲಿ ಮೊನ್ನೆ ಎಲ್ಲಾ ಜಪ ಮಾಡುತ್ತಿದ್ದ ಈ ಮಿತ್ರ ಸಿಕ್ಕಿದರೆ! ಕರಕೊಂಡುಬನ್ನಿ. ಮಾವನಿಗೂ ನಾವುಗಳು ಅವರಿಗಾಗಿ ಕೇರ್ ಮಾಡುತ್ತೇವೆ ತೊಂದರೆ ತೆಗೊಳ್ಳತ್ತೇವೆ ಅನ್ನಿಸಿದರೆ ಒಂದು ಬಗೆಯ ಭದ್ರತೆಯ ಭಾವ ಬರುತ್ತದೆ. ಖುಷಿಯೂ ಆಗುತ್ತದೆ."

ಮಹೇಶಚಂದ್ರ ಸಂಜೆ ವೃದ್ಧಾಶ್ರಮಕ್ಕೆ ಹೋದ. ಅಲ್ಲಿ ಹ್ಯಾರಿಯನ್ನು ಭೇಟಿಯಾಗುವುದು ಕಷ್ಟವೇನೂ ಆಗಲಿಲ್ಲ. ಹ್ಯಾರಿಗೆ ಹಳೇ ಚಿತ್ರ ತೋರಿಸಿ ವಿಷಯ ಹೇಳಿದ.

"ಓ ಭಾಸ್ಕರರಾವ್ ಮಗನಾ ಸರ್ ನೀವು?"

"ಹೌದು. ಅಪ್ಪ ಹೋದವಾರ ಪೂರ್ತಿ ನಿಮ್ಮನ್ನೇ ನೆನಪುಮಾಡಿಕೊಳ್ಳತ್ತಾ ಇದ್ದರು. ನೀವು ಈವತ್ತು ನನ್ನ ಜೊತೆ ಬನ್ನಿ. ನಮ್ಮ ಮನೆಯಲ್ಲಿ ಅಪ್ಪನನ್ನ ನೋಡಿದ ಹಾಗಾಗುತ್ತೆ. ಆಮೇಲೆ ನಾನು ನಿಮ್ಮನ್ನ ಇಲ್ಲಿ ವಾಪಸ್ ಬಿಡುತ್ತೇನೆ."

"ನಾನು ನಿಮ್ಮ ಮನೆಗೆ ಬರುವುದೆಂತ ಸರ್... ಶಾಲೆಯಲ್ಲಿ ಬುದ್ಧಿ ಬಲಿಯದಿದ್ದಾಗ ದೋಸ್ತಿ ಮಾಡಿದ್ದು. ನೀವು ಶ್ರೀಮಂತರು.. ನಾನು... ಬೇಡ ಸರ್."

ಮಹೇಶಚಂದ್ರ ಆತ್ಮೀಯವಾಗಿ ಕರೆದ. "ಅಲ್ಲ ಹ್ಯಾರಿ ಅಂಕಲ್ ಬನ್ನಿ ಪರವಾಗಿಲ್ಲ."

"ಏ ಬೇಡ ಸರ್."

"ನನ್ನನ್ಯಾಕೆ ಸರ್ ಅಂತ ಕರೀತೀರಾ? ನಾನು ನಿಮ್ಮ ಆಲ್ಬರ್ಟ್ ವಯಸ್ಸನವನಲ್ಲವೇ.. ಚೆಂದ ಕಾಣೋದಿಲ್ಲ,"

"ನಾನು ಮೆಥಾಡಿಸ್ಟ್ ಶಾಲೆ ಬಿಟ್ಟದ್ದೇ ಏಕವಚನ ಪ್ರಯೋಗ ಸಹ ಬಿಟ್ಟೆ ಸರ್.. ಇದು ಅಭ್ಯಾಸಬಲ ಸರ್."

ಕಡೆಗೂ ಹ್ಯಾರಿ ಜ್ಯೋತಿಕುಮಾರನ್ನು ಒಪ್ಪಿಸಿ ಕಾರಿನಲ್ಲಿ ಕೂಡಿಸುವುದು ಒಂದು ದೊಡ್ಡ ಸಾಹಸವೇ ಆಯಿತು. ಕಾರಿನಲ್ಲಿ ಹೋಗುತ್ತಿದ್ದಾಗ ಹ್ಯಾರಿ ತಮ್ಮ ನೆನಪಿನ ಸುರಳಿ ಬಿಚ್ಚಿದರು.

"ಆಗ ಇಲ್ಲೇ ಗಾಂಧಿ ಸ್ಕ್ನೇರ್ ಉಂಟು ನೋಡಿ, ಅದರ ಬಳಿ ಕೃಷ್ಣಾ ಥಿಯೇಟರ್ ಇತ್ತು. ಈಗ ಒಂದು ಛತ್ರವೋ ಎಂಥದೋ ಆಗಿದೆ. ಅಲ್ಲಿ ಕಂದಲೀಲಾ ಎನ್ನುವ ಸಿನೇಮಾ ಹಾಕಿದ್ರು. ಭಾಸ್ಕರರಾಯರ ಬಳಿ ಆ ದಿನ ಕೇವಲ ನಾಲ್ಕಾಣೆ ಇತ್ತು. ನನ್ನ ಕಿಸೆ ಯಾವಾಗಿನಂತೆ ಖಾಲಿ. ಟಿಕೇಟು ಮೂರಾಣೆ. ಇಬ್ಬರೂ ಹೋಗಿ ಒಂದೇ ಟಿಕೇಟು ಕೊಂಡು ಒಂದಾಣೆ ಬಾಗಿಲಿನವನಿಗೆ ಕೊಟ್ಟದ್ದು. ನಂತರ ಸಿನೇಮ ನೋಡಿದ್ದಾಯಿತು. ಆ ಸಮಯವೇ ಬೇರಿತ್ತು ಸರ್."

ಹ್ಯಾರಿಯನ್ನು ಮನೆಯೊಳಗೊಯ್ದು ಹಾಲ್ ನ ಸೋಫಾದಲ್ಲಿ ಕೂಡಿಸಿದ ಮಹೇಶಚಂದ್ರ, ಭಾಸ್ಕರರಾಯರನ್ನು ಹೊರಕರೆತಂದ.

"ಅಪ್ಪಾ, ಯಾರು ಬಂದಿದ್ದಾರೆ ನೋಡು.. ನಿಂಗೆ ಗೊತ್ತಾಯ್ತಾ?"

ಹ್ಯಾರಿಯ ಕಣ್ಣಂಚಿನಲ್ಲಿ ನೀರಿತ್ತು. ಭಾಸ್ಕರರಾಯರು ಹ್ಯಾರಿಯನ್ನು ನೋಡಿದರು. ಹೆಸರನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದರು. ಯಾರಿವನು? ತಮ್ಮ ವೃತ್ತಿಯಲ್ಲಿ ತಮ್ಮ ಕೈಕೆಳಗೆ ದುಡಿದ ಅನೇಕ ಮುಖಗಳು ಅವರ ಸ್ಮೃತಿಯಲ್ಲಿ ಹಾಯ್ದು ಹೋದುವು. ಬೆಂಗಳೂರಿನಲ್ಲಿ ಆಚಾರಿ ಎಂಬ ಚಪ್ರಾಸಿ ಇದ್ದ... ಅಲ್ಲ ಅವನ ಮುಖವಲ್ಲ... ಮತ್ಯಾರು? ಗುಮಾಸ್ತೆ ಗುಣಶೇಖರ.. ಅಲ್ಲ - ಅವನಿನ್ನೂ ಬೆಳ್ಳಗಿದ್ದ. ಎಷ್ಟೋ ಜನ ತಮ್ಮ ಕೈ ಕೆಳಗಿದ್ದವರು ಆಗಾಗ ಬಂದು ನಮಸ್ಕಾರ ಹೇಳಿಹೋಗುವುದಿತ್ತು.. ಆದರೆ ಈತ... ಛೇ! ತಮ್ಮ ಮರೆವೆಯ ರೋಗವೇ! ನೆನಪೇ ಆಗುತ್ತಿಲ್ಲವಲ್ಲಾ!

"ಅಪ್ಪಾ ಇವರು ಹ್ಯಾರಿ ಜ್ಯೋತಿಕುಮಾರ್."

ಭಾಸ್ಕರರಾಯರು ಒಂದು ಕ್ಷಣ ಸ್ಥಂಬೀಭೂತರಾದರು. ಐವತ್ತು ವರ್ಷಗಳ ಕಾಲಾಂತರದ ಕಂದರ ಅವರೆದುರು ಬೃಹದಾಕಾರವಾಗಿ ಬಾಯ್ದೆರೆದು ನಿಂತಿತ್ತು. ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಕುರ್ಚಿಯಲ್ಲಿ ಕುಸಿದರು.

"ನನ್ನ ಹೆಸರು ಭಾಸ್ಕರರಾವ್ ಅಂತ." ನಿಧಾನವಾಗಿ ಹೇಳಿದರು.

ಹ್ಯಾರಿ ಗೋಣು ಹಾಕಿ "ನಮಸ್ಕಾರ" ಎಂದಷ್ಟೇ ಹೇಳಿದ.

ಭಾಸ್ಕರರಾಯರಿಗೆ ಹ್ಯಾರಿ ಎಂದರೆ ಕಂದಲೀಲಾ ಮಾತ್ರ ನೆನಪಗೆ ಬರುತ್ತಿತ್ತು. ಮಿಕ್ಕಂತೆ ಈ ಮನುಷ್ಯ ಎಷ್ಟು ಅಪರಿಚಿತ ಎನ್ನಿಸತೊಡಗಿತು. ಏನಾದರೂ ಮಾತನಾಡಬೇಕು... ಏನು?

"ಈಗ ಎಲ್ಲಿದ್ದೀರಿ?" ಕಷ್ಟದಿಂದ ಕೇಳಿದರು.

"ಇಲ್ಲೇ ಮೈಸೂರಿನ ವೃದ್ಧಾಶ್ರಮದಲ್ಲಿ... ಈ ವಯಸ್ಸಿಗೆ ಕೆಲಸ ಎಂತದು?"

ಅಷ್ಟರಲ್ಲಿ ನೀರಜಾ ಎಲ್ಲರಿಗೂ ಶರಬತ್ ತಂದುಕೊಟ್ಟಳು. ಎಲ್ಲರೂ ಶರಬತ್ ಕುಡಿಯುವವರೆಗೆ ಅಲ್ಲಿ ಗಾಢ ಮೌನ ಆವರಿಸಿತ್ತು. ಮಹೇಶಚಂದ್ರನಿಗೆ ಏನು ಹೇಳಬೇಕೋ ತೋರಲಿಲ್ಲ.... ಇಬ್ಬರೂ ಅಪರಿಚಿತರ ಹಾಗೆ ಏಕಿದ್ದಾರೆ? ಅಪ್ಪನಿಗೆ ಹ್ಯಾರಿಯ ನೆನಪೇ ಆಗಲಿಲ್ಲವೇ?

ಭಾಸ್ಕರರಾಯರು ಎದ್ದು ನಿಂತರು... ಹೇಳುವುದೋ ಬೇಡವೋ ಎಂಬಂತೆ ಕ್ಷೀಣದನಿಯಲ್ಲಿ ಅವರು ಮಾತನಾಡಿದರು.

"ನೋಡಿ ರಿಟೈರಾದ ಮೇಲೆ ನನಗೇನೂ ತೋಚ್ತಾನೆ ಇಲ್ಲ. ಮರೆವೆ ಬೇರೆ. ಬೆಳಿಗ್ಗೆ ಬಿ.ಪಿ.ಮಾತ್ರೆ ತೆಗೆದುಕೊಳ್ಳೋದೇ ಮರೆತುಬಿಟ್ಟೆ ನೋಡಿ.... ನನಗೆ ತಲೆ ಯಾಕೋ ಸ್ವಲ್ಪ ಸುತ್ತುತ್ತಾ ಇದೆ. ನೀವು ಕ್ಷಮಿಸಿದರೆ ನಾನು ಒಳಗೆ ಹೋಗುತ್ತೇನೆ. ನಿಮಗೆ ಬೇಜಾರಾದಾಗ ಬರ್ತಾ ಇರಿ. ನಂಗೂ ಹೊತ್ತು ಹೋಗೊಲ್ಲ. ಆಗ ಮಾತಾಡೋಣ."

"ಸರಿ ಸರ್ ನೀವು ರೆಸ್ಟ್ ತೆಗೂಳ್ಳಿ - ತ್ರಾಸ ಮಾಡಿಕೊಳ್ಳಬೇಡಿ."

ರಾಯರು ಹಿಂದೆ ನೋಡದೇ ಸೀದಾ ಕೋಣೆಯೊಳಕ್ಕೆ ಹೊರಟುಬಿಟ್ಟರು. ಮಹೇಶಚಂದ್ರನಿಗೆ ಇದೇನೋ ಅಸಹಜವೆನ್ನಿಸಿತು. ಹ್ಯಾರಿಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ -

"ಒಂದೊಂದ್ಸರ್ತಿ ಅಪ್ಪಂಗೆ ಸಂಪೂರ್ಣ ಮರೆವೆ ಆಕ್ರಮಿಸಿಬಿಡುತ್ತೆ ಅಂಕಲ್... ಟೋಟಲ್ ಬ್ಲಾಕ್ ಔಟ್.. ನೀವು ದಯವಿಟ್ಟು ಬೇಜಾರು ಮಾಡಿಕೋಬೇಡಿ."

ನೀರಜಾ ತನ್ನದೇ ಆದ ಅರ್ಥಗ್ರಹಿಕೆಯನ್ನು ಹ್ಯಾರಿಯ ಸಮಾಧಾನಕ್ಕೋಸ್ಕರ ಅವನ ಮುಂದಿಟ್ಟಳು -

"ನಿಮ್ಮನ್ನು ಇಷ್ಟು ಕಾಲದ ನಂತರ ನೋಡಿದ ಸಂತೋಷದಿಂದಾಗಿ ಮಾತುಗಳು ಹೊರಡದೇ ಇದ್ದಿರಬಹುದು. ಈ ಸಂತೋಷದಿಂದ ಚೇತರಿಸಿಕೊಂಡಾಗ ಅವರು ಸಾಮಾನ್ಯರಂತೆ ಪ್ರತಿಕ್ರಿಯಿಸಬಹುದು. ಆಗ ನಿಮ್ಮನ್ನು ಮತ್ತೆ ಭೇಟಿ ಮಾಡಿಸುವ ಪ್ರಯತ್ನ ಮಾಡಬಹುದಲ್ಲವೇ?"

"ಹಾಗೆ ನೀವುಗಳು ಬೇಜಾರು ಮಾಡಿಕೊಳ್ಳುವುದು ಬೇಡ ಆಯಿತಾ.. ಅವರಿಗೆ ಏನೂ ನೆನಪಿಲ್ಲದಿರಬಹುದು. ಈಗ ನನ್ನ ಮಕ್ಕಳೇ ಮೂರು ತಿಂಗಳಿನಿಂದ ನನ್ನನ್ನು ಕಾಣುವುದು ಮರೆತಿದ್ದಾರೆ. ಇದೇನೂ ಹೆಚ್ಚಿನ ಸಂಗತಿಯಲ್ಲ ಬಿಡಿ."

ಮಹೇಶಚಂದ್ರನಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಹ್ಯಾರಿ ವಾಪಸ್ ಹೋಗುವ ಇಚ್ಛೆ ತೋರಿದರು. ಅವರನ್ನು ಮಹೇಶಚಂದ್ರ ಕಾರಿನಲ್ಲಿ ಕೂಡಿಸಿಕೊಂಡು ವೃದ್ಧಾಶ್ರಮದತ್ತ ಕರೆದೊಯ್ದ. ದಾರಿಯಲ್ಲಿ ದೇವರಾಜಾ ಮಾರ್ಕೆಟ್ಟಿನ ಬಳಿ ಕಾರು ನಿಲ್ಲಿಸಿ ಎರಡು ಕಿಲೋ ತೂಗುವ ಬೇರೆ ಬೇರೆ ಹಣ್ಣುಗಳನ್ನು ಕೊಂಡು ಹ್ಯಾರಿಗೆ ಉಡುಗೋರೆಯಾಗಿ ಕೊಟ್ಟ. ಹೊರಡುವುದಕ್ಕೆ ಮೊದಲು ಕಷ್ಟಪಟ್ಟು ಎರಡು ಮಾತುಗಳನ್ನು ಆಡಿದ.

"ನಾನು ನಿಮ್ಮನ್ನು ಆಗಾಗ ಬಂದು ಕಾಣುತ್ತೇನೆ ಅಂಕಲ್.. ಅಪ್ಪಂಗೆ ಮತ್ತೆ ನೆನಪಾದಾಗ ಮನೇಗೆ ಹೋಗೋಣವಂತೆ."

"ಇರಲಿ. ಸಮಯವಾದರೆ ಬನ್ನಿ. ಸುಮ್ಮನೆ ತೊಂದರೆ ತೆಗೆದುಕೊಳ್ಳಬೇಡಿ ಆಯ್ತಾ?"

ಹ್ಯಾರಿ ಜ್ಯೋತಿಕುಮಾರ್ ಓಡುತ್ತಿದ್ದ ಕಾರಿನತ್ತ ಕೈ ಬೀಸಿದರು. ಮಹೇಶಚಂದ್ರ ಮನೆಗೆ ಬಂದ. ಕಾರಿನ ಬಾಗಿಲು ತೆಗೆಯುತ್ತಿದ್ದಾಗ ಹ್ಯಾರಿ ಜ್ಯೋತಿಕುಮಾರ್ ಗೋಸ್ಕರ ಕೊಂಡಿದ್ದ ಹಣ್ಣುಗಳ ಪ್ಯಾಕೆಟ್ ಅಲ್ಲೇ ಇದ್ದದ್ದು ಕಂಡುಬಂತು. "ಪಾಪ ಮರೆತಿದ್ದಾರೆ" ಎಂದುಕೊಂಡ. ಅದನ್ನು ಒಯ್ದು ಭಾಸ್ಕರರಾಯರಿಗೆ ಕೊಟ್ಟ. "ನಾಳೆ ಯಾವಾಗಲಾದರೂ ಹಣ್ಣು ಕೊಂಡೊಯ್ದು ಹ್ಯಾರಿಯವರಿಗೆ ಕೊಡಬೇಕು" ಎಂದು ನಿರ್ಧರಿಸಿದ.

ಮರುದಿನ ಮೀಟಿಂಗ್ ಇತ್ತು. ನಂತರ ಹುಬ್ಬಳ್ಳಿಯ ಪ್ರವಾಸವಿತ್ತು. ಹಿಂದಿರುಗಿದಾಗ ನೂರಾರು ಕೆಲಸಗಳಿದ್ದುವು. ಹಣ್ಣು ಕೊಳ್ಳಬೇಕೆಂದು ಅವನಿಗೆ ನೆನಪಾದಾಗಲೆಲ್ಲಾ ಅದನ್ನು ಮುಂದೂಡಿ, ಮುಂದೂಡಿ ಕಡೆಗೆ ಮರೆತ. ಮರೆಯುವುದು ಸಹಜ ಧರ್ಮ.

ಭಾಸ್ಕರರಾಯರು ತಮ್ಮ ಮೇಜನ್ನೊಮ್ಮೆ ನೋಡಿದರು. ಮಹೇಶಚಂದ್ರ ಆ ಚಿತ್ರವನ್ನು ಮೇಜಿನಮೇಲೆ ವಾಪಸ್ ಇಟ್ಟಿದ್ದ. ಹ್ಯಾರಿಯ ಭುಜದ ಮೇಲೆ ಕೆನ್ನೆಯೂರಿ ತಗೆಸಿಕೊಂಡಿದ್ದ ತಮ್ಮ ಚಿತ್ರವನ್ನು ಮತ್ತೊಮ್ಮೆ ದಿಟ್ಟಿಸಿದರು. ಅವರ ಕಣ್ಣು ಮಂಜಾಯಿತು. ಫೋಟೋವನ್ನು ಕಪಾಟಿನೊಳಗೆ ಸೇರಿಸಿ ಕಪಾಟಿನ ಬಾಗಿಲನ್ನು ಭದ್ರವಾಗಿ ಮುಚ್ಚಿದರು.

ಏಪ್ರಿಲ್ 1988







Sunday, December 27, 2009

ತ್ರಿವಿಕ್ರಮ


Something deep down bothers me.
We seem to be convinced that
it is immoral to be strong
and virtuous to be weak

Gen. K Sunderji


ಏರ್ಪೋರ್ಟಿನ ರಸ್ತಯಲ್ಲಿ ಹಗಲುಗನಸು ಕಾಣುತ್ತಾ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿಹಾಕಿದ ದೃಶ್ಯ ಕಾಣಿಸಿ, ಬಹುಶಃ ಸೈಕಲ್ಲಿನವನು ಖುಷಿಯಲ್ಲಿ ಸೀಟಿ ಹಾಕಿಕೊಂಡು ಬರುತ್ತಿದ್ದು, ಆಟೋವನ್ನು ಗಮನಿಸದೇ ಹೋಗಿರಬಹುದು, ಅಥವಾ ಸ್ಟೈಲಾಗಿ, ಕೈ ಬಿಟ್ಟು, ಸೈಕಲ್ ತಿರುಗಿಸಲು ಯತ್ನಿಸಿರಬಹುದು ಎನಿಸಿತು. ಜನರೇ ಇಲ್ಲದ ಆ ರಸ್ತಯಲ್ಲೇ ನಡೆದರೆ ಸಿಗುವ ಸ್ಮಶಾನದಷ್ಟೇ ಪ್ರಶಾಂತವಾಗಿತ್ತು ಆ ಜಾಗ.

ಸಮೀಪ ಹೋಗಿ ನೋಡಿದಾಗ, ಬಿದ್ದ ಆಟೋರಿಕ್ಷಾದಡಿ ಸೈಕಲ್ ಚಾಲಕನ ಕಾಲು ಸಿಕ್ಕಿಹಾಕಿಕೊಂಡು, ಅವನು ಮೇಲೇಳಲು ಪ್ರಯತ್ನಿಸುತ್ತಿದ್ದ. ಅವನ ಬಳಿಗೆ ನಡೆದು ನಿಂತ ಆಟೋ ಚಾಲಕನ ಮುಖವನ್ನು ನೋಡಿದ ಕೂಡಲೇ ಅದು ಬದಲಾದಂತೆನಿಸಿದ್ದು ಕೇವಲ ಭ್ರಮೆಯಿರಲಾರದು. ಆಟೋದ ಹಿಂಬದಿಯ ಸೀಟಿನಿಂದ ಇಳಿದ ಮಹಿಳೆ ತನ್ನ ಬರಿಗಾಲುಗಳನ್ನು ನೋಡಿಕೊಂಡು ಸುತ್ತಮುತ್ತಲೂ ಚಪ್ಪಲಿಗಳಿಗಾಗಿ ಶೋಧಿಸ ತೊಡಗಿದಳು. ಅಲ್ಲೆಲ್ಲೂ ಯಾರೂ ಕಂಡುಬರಲಿಲ್ಲ. ಕೆಲ ಕಾರುಗಳು ಮಾತ್ರ ವೇಗವಾಗಿ ಬಂದು, ಆ ಸ್ಥಳದಲ್ಲಿ ಸಂಪೂರ್ಣ ನಿಲ್ಲಿಸುವಷ್ಟು ವೇಗ ತಗ್ಗಿಸಿ, ನಡೆದದ್ದು ಅಪಘಾತವೆಂದು ಖಾತ್ರಿಯಾಗುತ್ತಿದ್ದ ಹಾಗೆಯೇ, ಮುಂದೆ ಹೊರಟುಬಿಡುತ್ತಿದ್ದವು. ಭಯಾನಕ ದೃಶ್ಯವೊಂದನ್ನು ನೋಡಿ ಓಡುವ ಜನರಂತೆ, ಇನ್ನೂ ವೇಗವಾಗಿ! ಹೀಗೆ ಅಂತರ್ಧಾನವಾದ ಕಾರುಗಳಲ್ಲಿ ಒಂದಾದರೂ ನಿಂತು, ಸಹಾಯಮಾಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಯಾರೂ ನಿಲ್ಲಿಸಲಿಲ್ಲ.

ಆಟೋದ ಚಾಲಕ ಏನೂ ತೋರದೆ ಪ್ರತಿಮೆಯಾಗಿ ನಿಂತಿದ್ದ. ಹಿಂದಿನ ಸೀಟಿನಿಂದ ಎದ್ದು ಬಂದ ಹೆಣ್ಣಲ್ಲದೇ ಅಲ್ಲೊಬ್ಬ ಗಂಡೂ ಕುಳಿತಿದ್ದಾನೆಂದು ತಿಳಿದದ್ದು ಅವನು ಹೊರಬಹುವ ಪ್ರಯತ್ನ ಮಾಡಿದಾಗಲೇ. ಮೊದಲಿಗೆ ಸ್ವಲ್ಪ ಉದ್ದಕ್ಕೆ ಬಿಟ್ಟಿದ್ದ ಅರೆನೆರೆತ ಕೂದಲು, ಆಮೇಲೆ ಕೂದಲು ನೆಟ್ಟಿದ್ದ ತಲೆ, ಬೋಳು ಹಣೆ, ಚೀನೀ ಕಂಗಳಂತಹ ಸಣ್ಣ ಕಂಗಳು, ಚಪ್ಪಟೆ ಮೂಗು, ಬೆಳೆಯದ ಅಥವಾ ಬೆಳೆದೂ ಬೋಳಿಸಿದ್ದ ನುಣ್ಣನೆಯ ಮೀಸೆಯ ಭಾಗ, ಹೀಗೆ ಅಂಗುಲಂಗುಲವಾಗಿ ಆ ವ್ಯಕ್ತಿ ಹೊರಬರುವ ಪ್ರಯತ್ನ ಮಾಡುತ್ತಿದ್ದ. ಅವನು ತೊಟ್ಟದ್ದ ಅಂಗಿಯ ಬಿಳಿಯ ಕಾಲರ್-ನಿಂದ ಕೆಳಗೆ, ರೋಜಾಬಣ್ಣದ ಮುಖ್ಯ ಭಾಗ, ನಿಧಾನವಾಗಿ ಮೇಲೆದ್ದು, ಹಂಗಸಿನ, ಅದೇ ಬಣ್ಣದ ಸೀರೆಯ ನೆರಿಗೆಗಳೊಳಗೆ ಲೀನವಾಯಿತು. ತನ್ನ ಸೀರೆಯನ್ನು ಪಾದದಿಂದ ಸ್ವಲ್ಪ ಮೇಲಕ್ಕೆ ಎತ್ತಿಹಿಡಿದ ಹೆಣ್ಣು, ತನ್ನ ಚಪ್ಪಲಿಗಳ ಶೋಧ ಮುಂದುವರೆಸಿದಳು. ಕಷ್ಟದಿಂದ ಮೇಲೇಳಲು ಪ್ರಯತ್ನಿಸುತ್ತಿದ್ದ ಆ ಗಂಡಸಿಗಾಧಾರವಾಗಿ ಆಟೋ ಚಾಲಕ ಮುಂದುವರೆದ. ಅವನ ತೋಳಕೆಳಗೆ ಕೈ ತೂರಿಸಿ, ಅವನಿಗೆ ನಿಲ್ಲಲು ಸಹಾಯ ಮಾಡಿದ. ಅವನು ತನ್ನ ದೇಹದ ಭಾರವನ್ನು ಕಾಲಮೇಲೆ ಹೇರುವಷ್ಟರಲ್ಲಿ, ಆಟೋದ ಆಟೋದ ಭಾರವನ್ನೇ ಕಾಲಮೇಲೆ ಹೊತ್ತ ಸೈಕಲ್ಲಿನವ ಬೊಬ್ಬೆ ಹೊಡೆಯಲಾರಂಭಿಸಿದ.

ಎಲ್ಲರೂ ಅಪಘಾತವನ್ನು ಕಂಡಾಕ್ಷಣ ಕೋರ್ಟು ಕಛೇರಿಯ ಭಯದಿಂದ ಓಡಿಹೋಗುವವರೇ ಆದರೆ, ಈ ಜಗತ್ತಿನಲ್ಲಿ ಮಾನವೀಯತೆಗೆ ಎಡೆಯೆಲ್ಲಿ ಎಂದೆನಿಸಿದಾಗ, ಇಲ್ಲೇನಾದರೂ ಸಹಾಯ ಮಾಡಲೇಬೇಕೆನ್ನಿಸಿತು. ಪ್ರತೀ ವೈಯಕ್ತಿಕ ಸಮಸ್ಯೆಯನ್ನು ಜಗತ್ತಿನ ಸಮಸ್ಯೆಯಾಗಿ ವಿಸ್ತರಿಸಿದಾಗ ಮಾತ್ರ ಇಂಥ ಸಹಾಯ ಮಾಡಲು ಸಾಧ್ಯ. ಇದು ದೊಡ್ಡ ಸಮಸ್ಯೆಯೊಡ್ಡುವ ಅಪಘಾತವಲ್ಲವಾದ್ದರಿಂದ ಇಲ್ಲಾದರೂ ಸಹಾಯ ಮಾಡಲೇಬೇಕೆಂದೆನಿಸಿ ಮುಂದುವರೆಯುತ್ತಿದ್ದಂತೆ, ಆಟೋದ ಚಾಲಕ ತಲೆಯೆತ್ತಿನೋಡಿ ಮಾತನಾಡಲಾರಂಭಿಸಿದ:

"ಸರ್ ದಯಮಾಡಿ ಈ ವಿಷಯವನ್ನ ಪೋಲೀಸರಿಗೆ ತಿಳಿಸಿದರೆ ಉಪಕಾರವಾಗುತ್ತದೆ, ಜೊತೆಗೆ ಇವರನ್ನು ಆಸ್ಪತ್ರೆಗೆ ಸೇರಿಸಲೂ ಅನುಕೂಲವಾಗುತ್ತದೆ. "

ಆಟೋದವನ ಮಾತಿಗೆ ತಲೆಯಾಡಿಸಿ, ಜೇಬು ತಡಕಿ, ಎರಡು ಐವತ್ತು ಪೈಸೆಯ ನಾಣ್ಯಗಳನ್ನು ಹಿಡಿದು, ಟೆಲಿಫೋನ್ ಹುಡುಕಿ ಹೊರಟಾಗ, ಮಧ್ಯಾಹ್ನದ ಸೂರ್ಯ ಮೈಯೊಳಗಿನ ನೀರನ್ನೆಲ್ಲಾ ಬೆವರಿನ ರೂಪದಲ್ಲಿ ಹೀರುತ್ತಿದ್ದ.

*****

ಹೀಗೆ ವೈಯಕ್ತಿಕ ಸಮಸ್ಯೆಗೆ ಜಾಗತಿಕ ಆಯಾಮ ನೀಡಿ ಮುಂದಡಿಯಿಟ್ಟಾಗ, ಸ್ವಲ್ಪ ದೂರದಲ್ಲಿ ಒಂದು ಬೇಕರಿ ಕಾಣಿಸಿತು. ಅವನಲ್ಲಿ ಫೋನಿತ್ತಾದರೂ, ಅವನು ಫೋನ್ ಮಾಡಲು ಅನುಮತಿ ನೀಡಲಿಲ್ಲ. ಮತ್ತಷ್ಟು ದೂರದಲ್ಲಿ ಅವನು ಬೆಟ್ಟು ಮಾಡಿ ತೋರಿಸಿದೆಡೆ ಒಂದ ಔಷಧಿಯಂಗಡಿಯಾಚೆ ಫೋನಿತ್ತು. ಹೊಸದಾಗಿ ಅಲ್ಲೊಂದು ಫೋನ್ ಹಚ್ಚದ್ದಾರೆಂದು ಬೇಕರಿಯವ ಹೇಳಿದ. ಅಲ್ಲಿಗೆ ಹೋದಾಗ, ಹೋದದ್ದು ವ್ಯರ್ಥವನ್ನಿಸಿತು. ಕಾರಣ - ಪೋನಿಗೆ ಬೇಕಾಗಿದ್ದದ್ದು ಎರಡು ಎಂಟಾಣೆಗಳಲ್ಲ, ಒಂದು ರೂಪಾಯಿಯ ನಾಣ್ಯ. ಜೇಬಿನಲ್ಲಿ ತಡಕಿದರೆ, ಅಲ್ಲಿರಲಿಲ್ಲ. ಔಷಧಿಯಂಗಡಿಯಲ್ಲೂ ಬೇಕರಿಯಲ್ಲೂ, ಬೇಕರಿಯ ಪಕ್ಕದ ಪಾನ್ ಅಂಗಡಿಯಲ್ಲೂ ರೂಪಾಯಿ ನಾಣ್ಯ ಸಿಗಲಿಲ್ಲ. ಆಟೋದ ಚಾಲಕನ ಬಳಿ ನಾಣ್ಯವಿರಬಹುದೆಂದು ಮತ್ತೆ ವಾಪಸ್ ನಡೆದು ಬಂದಾಗ ಕಂಡದ್ದೇನು? ನಂಬಲು ಸಾಧ್ಯವಾಗಲಿಲ್ಲ. ಕನಸೇ? ನನಸೇ? ಯಾವುದು? ಈಗ ನಡೆಯುತ್ತಿರುವುದೇ? ಹಿಂದೆ ನೋಡಿದ್ದೇ? ಏನು?

ಆಶ್ಚರ್ಯ - ಭೀತಿ ತುಂಬಿದ ಆಶ್ಚರ್ಯ. ಹಿಂದಿರುಗುವ ವೇಳೆಗೆ ಕಂಡದ್ದು ಸಂಪೂರ್ಣ ಭಿನ್ನ ದೃಶ್ಯ. ಆಟೋದ ಸುತ್ತೂ ಜನರು ನಿಂತಿದ್ದಾರೆ. ಆಟೋದ ಗಾಜುಗಳು ಒಡೆದು ಎಲ್ಲಲ್ಲೂ ಚೂರುಚೂರು, ಚೆಲ್ಲಾಪಿಲ್ಲಿ. ಒಂದು ಗಾಜಿನ ತುಂಡು ವಿಚಿತ್ರರೀತಿಯಲ್ಲಿ ಸೈಕಲ್ಲಿನವನ ಕರುಳಿನಲ್ಲಿ ಸಿಕ್ಕಿಕೊಂಡು, ಸುತ್ತಲೂ ರಕ್ತವೋ ರಕ್ತ. ಒಂದು, ಎರಡು, ನಾಲ್ಕು, ಎಂಟು, ಹದಿನಾರೆಂದು ಜನರು ಸೇರಿ, ಜನರ ಗುಂಪು ಬೆಳೆಯುತ್ತಾ ದೊಡ್ಡದಾಗುತ್ತಿದ್ದಂತೆ ಅದೇ ಸಂಖ್ಯೆಯಲ್ಲಿ ಶವದ ಮೇಲೆ ನೊಣಗಳೂ ಧಾಳಿ ಮಾಡಿದುವು. ಗುಂಪು ಬೆಳೆದು ಬೆಳೆದು ಆ ದೃಶ್ಯದ ಮೇಲೆ ಧಾಳಿಮಾಡಿ, ರಸ್ತೆಯ ಸಂಚಾರಕ್ಕೆ ತಡೆಯೊಡ್ಡಿದಾಗ, ಕುತೂಹಲ ತಾಳಲಾಗದ ಜನರೂ ತಮ್ಮ ವಾಹನಗಳಿಂದ ಇಳಿದುಬರತೊಡಗಿದರು. ಮೈಯೊಳಗಾವರಿಸಿದ ಒಂದು ವಿಚಿತ್ರ ಭಾವನೆಗೆ ಪೋಷಕವಾಗಿ, ಏನೂ ತಿಳಿಯದ ಜನರ ಮಾತುಗಳು ಗೊಬ್ಬರವಾಗತೊಡಗಿದವು. ಏನೂ ನೋಡದ ಜನರು ದೃಶ್ಯವನ್ನು ಕಣ್ಣಾರೆ ಕಂಡಂತೆ ವರ್ಣಿಸಿ ಅಪಘಾತವನ್ನು ಪುನರ್ಸೃಷ್ಟಿಸುತ್ತಿದ್ದ ರೀತಿ ನೋಡಿದಾಗ ಹಿಂದೆ ಕಂಡದ್ದು ಕನಸಿರಬಹುದೇ ಎಂಬ ಅನುಮಾನವೂ ಬಂದದ್ದುಂಟು. ಅಲ್ಲಿ ಚಕ್ರವ್ಯೂಹ ರಚಿಸಿದ್ದ ಜನರ ಗುಂಪಿನೊಳಕ್ಕೆ ಜಾಗ ಮಾಡಿಕೊಂಡು, ನಿಧಾನವಾಗಿ ಆ ಜನಸಮೂಹವನ್ನು ಭೇದಿಸುತ್ತಾ ಶವದ ಬಳಿ ಹೋಗುತ್ತಿದ್ದಾಗ, ಹೊಸ ಜನರಿಂದ ಹೊಸ ಸುದ್ದಿ, ಸುದ್ದಿಯಿಂದ ವಿವರ, ವಿವರಗಳಿಂದ ಹೊಸ ಆಯಾಮಗಳನ್ನು ಪಡೆದ ಈ ಅಪಘಾತ, ಯಾರೊಬ್ಬರ ವೈಯಕ್ತಿಕ ಸಮಸ್ಯೆಯಾಗೂ ಉಳಿದಿರಲಿಲ್ಲ! ಆನಂತರ ಸಂದರ್ಭದ ಅನಿವಾರ್ಯತೆಯಿಂದ ಬಂದ ಪೋಲೀಸರು, ಆಟೋದ ಚಾಲಕನನ್ನು ಬಂಧಿಸಿದರು. ಅವರು ಮಹಜರ್ ನಡೆಸಿ, ಅಲ್ಲಿ ದಾರಿ ಖಾಲಿಯಾಗಲು ನಿಂತಿದ್ದ ಎಲ್ಲ ವಾಹನಗಳಿಗೆ ಬೇರೆ ಮಾರ್ಗ ತೋರಿಸಿಕೊಡುವ ವೇಳೆಗೆ ಪ್ರತ್ಯಕ್ಷ ಸಾಕ್ಷಿಗಳ ಒಂದು ದೊಡ್ಡ ಗುಂಪೇ ಸನ್ನದ್ಧವಾಗಿ ನಿಂತಿತ್ತು. ಗುಂಪಿನ ಜನರಿಗೂ ಶವಕ್ಕೂ ದೂರವನ್ನಳೆಯುವಂತೆ, ಹುರಿಹಗ್ಗದೋಪಾದಿಯಲ್ಲಿ ಅವನ ಕರುಳ ಬಳ್ಳಿ ರಸ್ತೆಯ ಮೇಲೆ ಅಂಕುಡೊಂಕಾಗಿ ಹಬ್ಬಿಕೊಂಡಿತ್ತು. ಕಂಡದ್ದನ್ನು ಕಂಡಂತೆ ಹೇಳಲೆತ್ನಿಸಿದ ಬಾಯನ್ನು ಕಟ್ಟಿದ್ದೇನು? ಬೀಟ್ ರೂಟ್ ಕೋಸಂಬರಿಯಂತೆ ಹೊರಗೆ ಬಂದಿದ್ದ ಸೈಕಲ್ಲಿನವನ ಮಾಂಸದ ಮೇಲೆ, ಮುಸುರಿದ್ದ ನೊಣಗಳೋ, ಅಥವಾ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಈ ಸುದ್ದಿಯ ಭಯಾನಕತೆಯೋ? ಮುಂದೆ, ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಇದೇ ರೀತಿ ಸತ್ತುಬಿದ್ದ ಬೀದಿನಾಯಿಗಳನ್ನು ಕಂಡಾಗಲೂ, ಆ ದೃಶ್ಯವೂ ಇದೇ ಆಯಾಮದ ಭೀಕರತೆ ಪಡೆಯಲಿತ್ತು. ಪೂರ್ವನಿರ್ಧಾರಿತ ನಾಟಕವೆಂಬಂತೆ, ನಡೆಯುತ್ತಿದ್ದ ಈ ಆಟದ ಸೂತ್ರವೆಲ್ಲಿ? ಸೂತ್ರಧಾರಿಯೆಲ್ಲಿ? "ನಾಟಕದಲ್ಲಿ ನಿರ್ದೇಶಕನೇ ದೇವರು, ಆದರೆ ದುರಂತವೆಂದರೆ ಪಾತ್ರಧಾರಿಗಳೆಲ್ಲಾ ನಾಸ್ತಿಕ"ರೆಂದು ಜಾರ್ಕೋ ಪೆಟಾನ್ ಹೇಳಿದ್ದ ಸೂತ್ರ ಇಲ್ಲಿ ವರ್ತಿಸದಿರುವುದಕ್ಕೆ ನಿರ್ದೇಶಕ ಆಗೋಚರವಾಗಿರುವುದೇ ಕಾರಣವಿರಬಹುದೇ? ಪ್ರಶ್ನೆಗಳು ಪ್ರಶ್ನೆಗಳು ಪ್ರಶ್ನೆಗಳು... ಉತ್ತರವೆಲ್ಲಿ? ಉತ್ತರವಿಲ್ಲ. ಆಟೋದಲ್ಲಿದ್ದ ಆ ಹೆಂಗಸೂ ಇಲ್ಲ. ನಿಧಾನವಾಗಿ ಉದ್ಭವವಾದ ಆ ಗಂಡಸೂ ಇಲ್ಲ. ಚಪ್ಪಲಿಗಳೂ ಇಲ್ಲ.

****

ಹೊಟ್ಟೆಯಲ್ಲಿ ತಳಮಳವಾಗಿ, ಉಚ್ಚೆ ಹುಯ್ಯಬೇಕೆಂದೆನ್ನಿಸಿ, ಸುತ್ತ ಕಣ್ಣಾಡಿಸಿದರೆ ಎಲ್ಲೂ ಏಕಾಂತದ ಜಾಗವಿಲ್ಲ. ಇದನ್ನೆಲ್ಲಾ ಯಾರೊಂದಿಗಾದರೂ ತೋಡಿಕೊಳ್ಳಬೇಕೆಂದೆನ್ನಿಸಿದರೂ, ಆ ಜನಜಂಗುಳಿಯ ನಡುವೆ ಒಂದಾದರೂ ಪರಿಚಿತ ಆತ್ಮೀಯ ಮುಖಭಾವ ಕಾಣಿಸದೇ, ಒಂಟಿತನದ ಬೊಂಬಾಯಿ ಭಾವ ಉಂಟಾಯಿತು. ಪೋಲೀಸರಿಗೆ ಹೇಳಬಹುದು, ಆದರೆ ಇಷ್ಟು ಜನ ಪ್ರತ್ಯಕ್ಷ ಸಾಕ್ಷಿಗಳು ತಯಾರಾಗಿ ನಿಂತಿರುವಾಗ, ಅಲ್ಪ ಸಂಖ್ಯಾತನಾಗುವುದು ಸಹಜವೆನ್ನಿಸಿ, ಯಾರೂ ನಂಬಲಾರರೆಂಬ ನಂಬಿಕೆ ಬಲವಾಗಿ ಮನದಲ್ಲಿ ಬೇರೂರಿತು. ಸುತ್ತ ನೋಡಿದರೆ ಎಲ್ಲ ಮುಖಗಳೂ ಏನಾದರೊಂದು ಹೇಳಲು ಕಾತರವಾಗಿ ಕಾಯುತ್ತಿದ್ದಂತೆ ಅನಿಸುತ್ತಿತ್ತೇ ಹೊರತು, ಕೇಳುವ ತಾಳ್ಮೆಯಿದ್ದಂತಹ ಒಂದೂ ಮುಖ ಕಾಣಲಿಲ್ಲ. ಪೋಲೀಸರ ಖಾಕಿ ನೋಡಿದಾಗೆಲ್ಲಾ ನಡೆದಾಡುವ ಕಂಬಗಳ ನೆನಪಾಗುತ್ತಿತ್ತು. ಕೇಳುವ ಕಿವಿಗಳಂತಿರಲಿ, ಹೇಳಿದವರ ಮೇಲೆಯೇ ಈ ಕಂಬಗಳು ಯಾವ ಕ್ಷಣದಲ್ಲಾದರೂ ವಾಲಿಬಿಡಬಹುದಿತ್ತು. ಯಾಕೆ ಎಲ್ಲರೂ ಜಡ್ಡುಗಟ್ಟಿದ್ದಾರೆನ್ನಿಸುತ್ತದೆ. ಮೊನ್ನೆ ವಾರ್ತಾ ಪತ್ರಿಕೆಯಲ್ಲಿ ಹೊಸ ಡಿ.ಐ.ಜಿಯೊಬ್ಬರ ಬಗ್ಗೆ ಬಂದ ಸುದ್ದಿ ನೆನಪಾಯಿತು. ಮಹಾಜನತೆಯ ಅಹವಾಲುಗಳನ್ನು ಅವರು ಶಾಂತಿಯಿಂದ ಕೇಳುತ್ತಿದ್ದಾರೆಂಬ ವಿಷಯ ದೊಡ್ಡ ಸುದ್ದಿಯಾದಾಗ, ಮಿಕ್ಕವರೇನು ಮಾಡುತ್ತಿದ್ದಾರೆಂಬುದು ಯಾರಿಗೂ ಊಹಿಸಲು ಸುಲಭ. ಸುದ್ದಿ ಸುಮ್ಮನೆ ಹಬ್ಬುವುದಿಲ್ಲ. ಕಥೆಗಳಲ್ಲಿಯೇ ಅನೇಕ ವಾಸ್ತವದ ಅಂಶಗಳಿರುವಾಗ, ಸುದ್ದಿ - ಅದು ಗಾಳಿಗುದ್ದಿ ಬಂದ ಸುದ್ದಿಯೇ ಆಗಿರಲಿ, ಅಲ್ಲಿ ವಾಸ್ತವಾಂಶ ಇರುವುದಿಲ್ಲವೇ? ಸೀದಾ ಪೊಲೀಸ್ ಮುಖ್ಯಾಲಯಕ್ಕೆ ಹೋಗಿ ಡಿ.ಐ.ಜಿಯವರನ್ನು ನೋಡಿ ಕಂಡದ್ದನ್ನು ಕಂಡಂತೆ ಹೇಳಬೇಕೆನ್ನಿಸಿದಾಗ, ಆಟೋ ಹತ್ತಲು ಮನಸ್ಸಾಗಲಿಲ್ಲ. ಭೌತಿಕವಾಗಿ ಕಣ್ಣನ್ನು ಆವರಿಸುವ, ಮಾನಸಿಕವಾಗಿ ಆಲೋಚನೆಗಳನ್ನೇ ನುಂಗಿಬಿಡುವಂತಹ, ಆಟೋದ ಕಾರಣವಾಗಿ ಘಟಿಸಿದ ಈ ಭೀಕರ ದೃಶ್ಯ ಎದುರಿಗಿರುವಾಗ ಆಟೋ ಹತ್ತುವುದು ಹೇಗೆ? ಮನಸ್ಸಿಗೆ ಧೈರ್ಯವಾಗಲಿಲ್ಲ. ನಿಧಾನವಾಗಿ ಹೆಜ್ಜೆ ಎಳೆದಾಗ, ಒಂದು ಆಟೋವನ್ನೇ ಎಳೆದೊಯ್ಯುತ್ತಿರುವಷ್ಟು ಪ್ರಯಾಸದ ಭಾವನೆಯಿಂದ ಮುಂದೆ ಸಾಗಿದಾಗ, ಮರೀಚಿಕೆಯಂತೆ ಕಂಡ ದೂರದ ಬಸ್ ಸ್ಟಾಪ್ ಸ್ವಲ್ಪ ಆಸೆ ಹುಟ್ಟಿಸಿತು. ಆಟೋದಲ್ಲಾದರೆ ಒಂಟಿತನವೂ ಇರುತ್ತದೆ. ಇಲ್ಲಾದರೆ ಹಲವು ಜನರಿರಬಹುದೆಂದು ಯೋಚಿಸುತ್ತಿದ್ದಂತೆ ಬಸ್ ನಿಧಾನವಾಗಿ ಬಂದಿತು. ಅಲ್ಲೂ ಯಾವುದೇ ಪರಿಚಿತ ಮುಖ ಕಾಣಲಿಲ್ಲ.

ಹೆಡ್-ಕ್ವಾರ್ಟರ್ಸ್ ನಲ್ಲಿ ಡಿ.ಐ.ಜಿ ಆರನೆಯ ಮಹಡಿಯಲ್ಲಿ ಕುಳಿತುಕೊಳ್ಳುತ್ತಾರೆಂದು ತಿಳಿಯಿತು. ಲಿಫ್ಟ್ ಕೆಳಬರುವುದು ತಡವಾದಾಗ ಆ ಚಡಪಡಿಕೆಯಲ್ಲಿ ಆರೂ ಮಹಡಿಗಳನ್ನು ಮೆಟ್ಟಲ ಮೂಲಕವೇ ಹತ್ತುವ ಆಲೋಚನೆ ಬಂದಿತಾದರೂ, ಬಳಲಿದ ದೇಹ, ಇನ್ನೂ ಹೆಚ್ಚಾಗಿ ಬಳಲಿದ ಮನಸ್ಸು ಒಪ್ಪಲಿಲ್ಲ. ನಿಧಾನವಾಗಿ ತಾಳ್ಮೆ ತಂದುಕೊಳ್ಳುತ್ತಿದ್ದಂತೆ, ಅಷ್ಟೇ ನಿಧಾನವಾಗಿ ಲಿಫ್ಟಿನ ಬಾಗಿಲೂ ತೆರೆಯಿತು.

ಒಳಹೊಕ್ಕು ನಿಂತಾಗ ಕಂಡದ್ದೆಲ್ಲಾ ಪೋಲೀಸ್ ಮುಖಗಳೇ. ನೀಟಾಗಿ ಕತ್ತರಿಸಿದ ಕೂದಲಿನ, ದೈತ್ಯ ದೇಹದ ಸಮವಸ್ತ್ರಧಾರಿಗಳೂ, ಮಫ್ತಿಗಳೂ ಸುತ್ತಲೂ ಆವರಿಸಿ ನಿಂತದ್ದು ನೋಡಿದರೆ ಕುಬ್ಜತೆಯ ಭಾವನೆ, ಆ ಜೋಡಿಕಂಗಳ ತೀಕ್ಷ್ಣ ಪರೀಕ್ಷಾತ್ಮಕ ದೃಷ್ಟಿಯಲ್ಲಿ ತಾನೇ ಅಪರಾಧಿಯೆಂಬ ಭಾವನೆ ಯಾರಿಗಾದರೂ ಉಂಟಾದರೆ, ಅದು ತೀರಾ ಸಹಜವಿತ್ತು. ಲಿಫ್ಟು ಆರನೆಯ ಮಹಡಿಗೇರುತ್ತಿದೆಯೋ, ಅಂತರಿಕ್ಷಕ್ಕೋ ಎಂಬ ಅನುಮಾನ ಬರುವಷ್ಟು ನಿಧಾನವಾಗಿ ಚಲಿಸುತ್ತಿತ್ತು. ಆ ಸಮಯದಲ್ಲೊಮ್ಮೆ ಎವರೆಸ್ಟ್ ಶಿಖರವನ್ನೇ ಹತ್ತಿ ಇಳಿಯಬಹುದಿತ್ತೇನೋ. ಕಡೆಗೊಮ್ಮೆ ಲಿಫ್ಟಿನ ಬಾಗಿಲು ತೆರೆದಾಗ, ಉಸಿರುಗಟ್ಟಿದ್ದ ವಾತಾವರಣಕ್ಕೆ ಆಮ್ಲಜನಕದ ಮಹಾಪೂರ ಬಂದಂತಾಗಿ, ದೀರ್ಘ ಉಸಿರೆಳೆದುಕೊಂಡರೂ, ತತ್ತರಿಸುವಂತಾಯಿತು. ಚೇತರಿಸಿಕೊಂಡು ಹೊರಗಡಿಯಿಡುವಷ್ಟರಲ್ಲಿ ಲಿಫ್ಟ್ ತಾನೇತಾನಾಗಿ ಮುಚ್ಚಿಕೊಳ್ಳಲು ಪ್ರಾರಂಭವಾಗಿ, ಇದ್ದಕ್ಕಿದ್ದಂತೆ ಆಲೋಚನೆಗಳಿಂದ ಎಚ್ಚರಗೊಂಡಾಗ, ಒಂದು ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿಕೊಂಡ ಹಾಗಾಯಿತು.

ಡಿ.ಐ.ಜಿಯವರ ಕೋಣೆಯ ಹೊರಗೆ ಕಪ್ಪು ಹಿನ್ನೆಲೆಯಲ್ಲಿ, ಬಂಗಾರದಕ್ಷರಗಳಲ್ಲಿ ಬರೆದಿದ್ದ ಹೆಸರೇ ಆಪ್ಯಾಯಮಾನವಾಗಿದೆಯೆನಿಸಿ, ಕಾರ್ಯದರ್ಶಿಯ ಬಳಿ ಚೇಟಿಕೊಟ್ಟು, ಒಳಹೋಗಲು ಪರವಾನಗಿ ದೊರೆತು, ಬಾಗಿಲು ತೆರೆದು ಒಳಗಡಿಯಿಟ್ಟಾಗ, ಹವಾನಿಯಂತ್ರಣ ಯಂತ್ರದ ಲಘು ಶಬ್ದವೂ ಸಂಗೀತದ ಸ್ವರಗಳಂತೆ ಕೇಳಿಸಿದ್ದು ನಿಜ. ಮೆತ್ತನೆಯ ಪ್ರತಿಭಟನೆಯ ಸ್ವರ ಅದರಿಂದ ಹೊಮ್ಮಿದರೂ, ವಿಶೇಷ ಲಘುತ್ವದ ಭಾವನೆ ಮುದ ನೀಡಿತು. ನೆತ್ತಿಯ ಮೇಲಿದ್ದ ಎಷ್ಟೋ ಆತಂಕದ ಭಾವನೆಯನ್ನು ಮೆತ್ತೆಯ ಮೇಲೆ ಇಳಿಸಿದಂತಾಯಿತು.

ಡಿ.ಐ.ಜಿ, ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಡುವಯಸ್ಕನ ಅಹವಾಲನ್ನು ತಾಳ್ಮೆಯಿಂದ ಕೇಳುತ್ತಿದ್ದರು. ಇಬ್ಬರಲ್ಲಿ ಪರಿಚಿತರು ಯಾರು, ಆತ್ಮೀಯರು ಯಾರು ಎಂಬ ಪ್ರಶ್ನೆ ಉದ್ಭವಿಸಿದಾಗ ಕಂಡದ್ದು ಹ್ಯಾಂಗರಿಗೆ ನೇತುಹಾಕಿದ್ದ ಡಿ.ಐ.ಜಿಯವರ ಸಮವಸ್ತ್ರ. ಪೋಲೀಸರು ಸಮವಸ್ತ್ರ ಕಳಚಿದಾಗ ಆತ್ಮೀಯರಂತೆ ಕಾಣುತ್ತಾರೆಂದು ತಿಳಿದಾಗ, ಪರಿಚಿತ ಭಾವನೆಯೇನೂ ಉಂಟಾಗಲಿಲ್ಲ. ಆದರೆ ಪಕ್ಕದ ನಡುವಯಸ್ಕ ಪರಿಚಿತನಂತೆ ಕಂಡ. ಆತ್ಮೀಯನಂತೆ ಅಲ್ಲ. ನಡುವಯಸ್ಕ ತನ್ನ ಅಹವಾಲನ್ನು ಮುಂದುವರೆಸುತ್ತಿದ್ದಂತೆ, ದೃಷ್ಟಿಯೂ ಮುಂದುವರೆದು ಕೋಣೆಯ ಸುತ್ತ ಅಡ್ಡಾಡಿತು. ಆದರೆ ದೃಷ್ಟಿ ಮತ್ತೆ ನಡುವಯಸ್ಕನತ್ತ ಕೇಂದ್ರೀಕೃತವಾಗುತ್ತಿದ್ದ ಹಾಗೆ ಅವನಾಡುತ್ತದ್ದ ಮಾತುಗಳ ಬಗೆಗೂ ಗಮನ ಹರಿಯಿತು. ನೆರೆತ ಚಿಗುರುಗೂದಲ ತಲೆ, ಅಲ್ಲಂದ ಕಾಲರಿಲ್ಲದ ಕುರ್ತಾ, ನಡುಗುವ ಕೈಗಳು, ಅಲ್ಲಿ ನಡುಗುವ ಕೈಬರಹದಲ್ಲಿ ಬರೆದ ಅರ್ಜಿ, ಹೀಗೆ ದೃಷ್ಟಿ ಕೆಳಕೆಳಗೆ ಹೋಗುತ್ತಿದ್ದಂತೆ, ಕಂಡದ್ದು, ಪಕೃತಿದತ್ತ ಕಾಲಿನಂತೆಯೇ ಕಾಣುತ್ತಿದ್ದ ಮರದ ಪಾದ. ದೃಷ್ಟಿ ಪಾದದ ಮೇಲಿದ್ದಾಗ ಕೇಳಿಸಿದ ಅವನ ಮಾತುಗಳು ಹೊಸ ಅರ್ಥ ಸ್ಫುರಿಸಿದಂದಾಯಿತು - "ಹಣ ಖರ್ಚಾದರೂ ಪರವಾಗಿಲ್ಲ ಸ್ವಾಮಿ, ಜೀವ ಉಳಿದರೆ ಸಾಕಾಗಿದೆ" ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ, ತುಂಬಿ ಬಂದ ಕಣ್ಗಳು ಯಾರವು? ಈಗವನ ವೈಯಕ್ತಿಕ ಸಮಸ್ಯೆಯೂ ಒಂದ ಜಾಗತಿಕ ರೂಪ ತಾಳಲಿದ್ದು, ಈ ಪ್ರಪಂಚದಲ್ಲಿ ಎಲ್ಲೆಲ್ಲೂ ಅನ್ಯಾಯ, ಅರಾಜಕತೆ ತುಂಬಿದೆಯೆನ್ನಿಸಿ, ಜಗತ್ತಿನ ಭವಿಷ್ಯದ ಬಗ್ಗೆ ತೀವ್ರ ಭೀತಿಯುಂಟಾಗಿ ಬೆವರು ಹರಿದಾಗ, ಅದನ್ನು ಹೀರುವ ಉತ್ಸಾಹಿ ಸೂರ್ಯನನ್ನೂ, ಹವಾನಿಯಂತ್ರಣ ಹೊರಗೇ ಬಂಧಿಸಿಟ್ಟಿದ್ದರಿಂದ, ಜೇಬಿನೊಳಗಿನ ರುಮಾಲನ್ನು ತೆಗೆದು ಒರೆಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು.

******

ನಡುವಯಸ್ಕನ ಅಹವಾಲು ಕೇಳಿದ ಡಿ.ಐ.ಜಿ, ಏನಾದರೂ ಬಂದೋಬಸ್ತು ಮಾಡುವ ಆಶ್ವಾಸನೆ ನೀಡಿದರು. ಕುಂಟುತ್ತಾ ಆತ ಹೊರನಡೆಯುತ್ತಿದ್ದಂತೆ, ಕಾಫಿ ಕುಡಿದು ಹೋಗಲು ಡಿ.ಐ.ಜಿ ಅವನನ್ನು ತಡೆದರು. ನಂತರ ಇತ್ತ ಹಾಯ್ದ ಡಿ.ಐ.ಜಿಯ ತವಕದ ನೋಟಕ್ಕೆ ಉತ್ತರವೆಂಬಂತೆ, ಅಂದಿನ ಘಟನೆಯ ಸಂಪೂರ್ಣ ವರದಿ ಬಾಯಿಂದ ಹೊರಬಿತ್ತು. ಎಲ್ಲ ಹೇಳಿದ ನಂತರವೂ ಡಿ.ಐ.ಜಿಯವರ ಕಿರುನಗೆ, ಬದಲಾಗದ ಮುಖಚಹರೆ, 'ಇಂಥ ಕಥೆಗಳನ್ನು ಗಂಟೆಗೆರಡು ಕೇಳುತ್ತೇನೆ.' ಎಂಬಂತಹ ನೋಟ ಮಾಸದೇ, ಅದೇ ನೋಟ ಮುಂದುವರೆದು ಭೇದಿಸಿನೋಡುವಂತಹ ಸೀಳುನೋಟವಾಗಿ ಪರಿವರ್ತನೆಗೊಂಡಾಗ, ಅದನ್ನೆದುರಿಸಲಾಗದೇ ಸೂರು ದಿಟ್ಟಿಸಬೇಕಾಯಿತು. ಸೂರಿನಿಂದಲೂ ಗೋಡೆಗಳಿಂದಲೂ, ಡಿ.ಐ.ಜಿಯ ಮುಖದಿಂದಲೂ ಒಂದೇ ರೀತಿಯ ಭಾವನೆಗಳು: ಮುಂದೇನು? ಇಷ್ಟನ್ನು ತಾನೇ ಹೇಳಿದ್ದು ಯಾಕೆ? ನೋಡಿದ್ದಾಯಿತು. ಸುಮ್ಮನೆ ಮನೆಗೆ ಹೋಗಿದ್ದರಾಗುತ್ತಿತ್ತು. ಜಗತ್ತಿನ ಅನ್ಯಾಯಗಳಿಗೆ ಆತ್ಮಸಾಕ್ಷಿಯಾಗಿ ನಿಲ್ಲುವ ಅಧಿಕಾರವನ್ನು ಕೊಟ್ಟವರು ಯಾರು? ಯಾಕೆ ಈ ಪ್ರಯತ್ನ? ಅವರ ಭಾವನೆಗಳಿಗೆ ಉತ್ತರ ದೊರೆಯದೇ ತಡಕಾಡಿ, ಜೇಬಿನಿಂದ ಮತ್ತೊಮ್ಮೆ ರುಮಾಲು ತೆಗೆದು, ಮುಖ ಒರೆಸಿಕೊಳ್ಳುವಷ್ಟರಲ್ಲಿ, ಕಾಫಿ ಮುಗಿದಿತ್ತೆಂಬುದು ಗಮನಕ್ಕೇ ಬಂದಿರಲಿಲ್ಲ. ಗಮನ ಸೆಳೆವ ಕೆಲಸವನ್ನೂ ಡಿ.ಐ.ಜಿಯೇ ಮಾಡಬೇಕಾಯಿತು.

ಡಿಐಜಿಯವರ ಕೋಣೆಯಿಂದ ಹೊರಬಂದಾಗ ಒಂದು ಥರದ ನಿರಾಳ ಭಾವ ಇದ್ದದ್ದು ಕಾಫಿ ಕುಡಿದದ್ದರಿಂದಲೋ, ಡಿಐಜಿಗೆ ಎಲ್ಲವನ್ನೂ ತಿಳಿಸಿದ್ದರಿಂದಲೋ ತಿಳಿಯದೇ, ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಹೋಗುವ ಯೋಚನೆ ಮಾಡವಷ್ಟು ಧೈರ್ಯವೂ ಬಂದುಬಿಟ್ಟಿತ್ತು. ಇಷ್ಟೆಲ್ಲಾ ಘಟಿಸುವ ವೇಳೆಗೆ ಸೂರ್ಯ ತನ್ನ ತಾಪಕ್ಕೆ ತಾನೇ ರೋಸಿ ಅರಬ್ಬೀ ಸಮುದ್ರದಲ್ಲಿ ಮುಳುಗುಹಾಕಿದ್ದ. ಹೆಜ್ಜೆ ಮುಂದಿರಿಸುತ್ತ ನಡೆದಾಗ ಹಿಂದಿನಿಂದ ಏನೋ ಶಬ್ದವಾದಂತಾಗಿ ಸ್ವಲ್ಪ ಭಯವಾಯಿತು. ಯಾರಾದರೂ ಹಿಂಬಾಲಿಸುತ್ತಿದ್ದಾರೆಯೇ? ತಿರುತಿರುಗಿ ನೋಡಿಕೊಂಡು, ಕತ್ತುನೋವು ತರಿಸಿಕೊಂಡರೂ ಮುಂದೆ ಸಾಗಿದಾಗ ಒಂದು ಸಿಗರೇಟ್ ಸೇದಬೇಕೆನ್ನಿಸಿತು. ಹಾಗೆಂದೇ ಒಂದು ಅಂಗಡಿಯ ಮುಂದೆ ನಿಂತಾಗ, ಬಂದ ಹೆಜ್ಜೆಯ ಸಪ್ಪಳ, ಹಿಂದಿಯ ಭೀತಿಗೆ ಕಾರಣವಿಲ್ಲದಿಲ್ಲ ಎಂಬುದನ್ನು ನಿರೂಪಿಸಿಬಿಟ್ಟಿತು. ಲಟಕ್, ಲಟಕ್ ಎಂದು ಶಬ್ದಮಾಡುತ್ತಾ ನಡೆದು ಬಂದವನು ಕುಂಟ ನಡುವಯಸ್ಕ:

"ಈವತ್ತಿನ ಆಕ್ಸಿಡೆಂಟು ಭಯಾನಕವಾಗಿತ್ತಲ್ಲ? ಅದು ನಡೆದಾಗ ನಾನೂ ಅಲ್ಲೇ ಇದ್ದೆ, ನಿಮ್ಮನ್ನ ನೋಡಿದೆ"

ಅನಿರೀಕ್ಷಿತವಾಗಿ ಮಾತನಾಡಿದ ಅವನನ್ನು ಕಂಡು ಭಯವಾದರೂ, ಜೀವಕ್ಕೆ ಹೆದರಿ ಡಿಐಜಿಗೆ ಅಹವಾಲು ಕೊಡುತ್ತಿದ್ದುದು, ಆ ಮುಖದ ದೈನ್ಯತೆ, ಆತ್ಮೀಯವಲ್ಲದಿದ್ದರೂ, ಪರಿಚಿತವೆನ್ನಿಸಿದ ಈ ಮೂರ್ತಿಯನ್ನು ನೋಡಿದಾಗ ಎಲ್ಲವನ್ನೂ ಅವನಲ್ಲಿ ತೋಡಿಕೊಳ್ಳಬೇಕೆಂದೆನ್ನಿಸಿ, ಪ್ರಾರಂಭಿಸಿದ್ದಕ್ಕೆ:

"ನಿಮಗೆ ಯಾಕೆ ಇಲ್ಲದ ಉಸಾಬರಿ? ಸುಮ್ಮನೆ ನಿಮ್ಮಷ್ಟಕ್ಕೆ ನೀವು ಹೋಗಬಹುದಿತ್ತಪ್ಪ. ಜೀವ ಹೋಗುವಂಥದ್ದೇನೂ ಆಗಲಿಲ್ಲವಲ್ಲಾ ಅಲ್ಲಿ?" ಎಂದು ಹೆದರಿಸುವ ಧ್ವನಿಯಲ್ಲ ಹೇಳಿದ.

ನಿಜ. ಯಾಕೆ ಇಲ್ಲದ ಉಸಾಬರಿ? ಲೋಕಕ್ಕೆ ಆತ್ಮಸಾಕ್ಷಿಯೇ ಬೇಡವೆಂಬ ಪರಿಸ್ಥಿತಿ ಉದ್ಭವವಾಗಿರುವಾಗ ಆ ಭೂಮಿಕೆಯನ್ನು ಮೈಮೇಲೆ ಕೊಡವಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಮುಂದೆ ನಡೆಯುತ್ತಿದ್ದಂತೆ, ಆ ನಡುವಯಸ್ಕನೂ ಜೊತೆಜೊತೆಗೆ ಕುಂಟಿದ. ಅವನಿಂದ ತಪ್ಪಿಸಿಕೊಳ್ಳಬೇಕೆನಿಸಿ, ಯೋಚಿಸುತ್ತಾ ಅವನತ್ತ ನೋಡಿದಾಗ, ಅವನ ಮುಖ ಪರಿಚಿತ ಎನ್ನಿಸಿದ್ದ ಏಕೆಂಬುದರೆ ಎಳೆ ಸಿಕ್ಕಂತಾಯಿತು: ಉದ್ದನೆಯ ಅರೆನೆರೆತ ಕೂದಲು ಸಣ್ಣದಾಗಿ ಕತ್ತರಿಸಿದ್ದರೂ, ಆ ಕೂದಲು ನೆಟ್ಟ ತಲೆ, ಬೋಳು ಹಣೆ, ಚೀನಿ ಕಂಗಳಂತಹ ಸಣ್ಣ ಕಂಗಳು, ಚಪ್ಪಟೆ ಮೂಗು, ಬೆಳೆಯದ, ಅಥವಾ ಬೆಳೆದೂ ಬೋಳಿಸಿದ ನುಣ್ಣನೆಯ ಮೀಸೆಯ ಭಾಗ, ಹೀಗ ಅಂಗುಲಂಗುಲವಾಗಿ ಗಮನಿಸುತ್ತಿದ್ದಂತೆ, ಅವನ್ಯಾರೆಂಬ ಅನುಮಾನ ಉಳಿಯಲಿಲ್ಲ. ಆದರೆ ಅವನೂ ಅಲ್ಲ ಉಳಿಯಲಿಲ್ಲ. ತಪ್ಪಿಸಿಕೊಳ್ಳುವ ಅವಶ್ಯಕತೆ, ಅವನಿಗೇ ಇನ್ನೂ ಹೆಚ್ಚಾಗಿತ್ತು ಎನ್ನಿಸಿತು. ಆದರೂ ಅವನು ಡಿಐಜಿಯ ಬಳಿ ಬಂದದ್ದು ಏಕೆ? ಅವನಿಗೂ ಜೀವಾಪಾಯವೇ ಎಂಬ ಪ್ರಶ್ನೆಗಳೆಲ್ಲಾ ಪ್ರಶ್ನೆಗಳಾಗಿಯೇ ಉಳಿದುವು. ಮಾಯಾನಗರಿಯ ಜನಜಂಗುಳಿಯಲ್ಲಿ ಯಾರಿಗೂ ತಿಳಿಯದಂತೆ ಕರಗಿಹೋಗುವ ಕಲೆಯನ್ನು ಕರಗತಮಾಡಿಕೊಂಡಿದ್ದವನನ್ನು ಹೆಕ್ಕಿ ತೆಗೆಯುವುದು ಕಷ್ಟವಾಗಿತ್ತು. ವಿಷಯ ಮೂರನೆಯ ಆಯಾಮವನ್ನೂ ಪಡೆಯುತ್ತಿರುವಾಗ, ಅಪಘಾತದ ಸ್ಥಳಕ್ಕೆ ಮತ್ತೊಮ್ಮೆ ಕತ್ತಲಲ್ಲಿ ಹೋಗುವುದು ಅಪಾಯದಿಂದ ಕೂಡಿದ ಕೆಲಸವೆಂದಂನ್ನಿಸಿ, ಮನೆಯತ್ತ ಹೆಜ್ಜೆ ಹಾಕಿದರೂ, ರಸ್ತೆಯ ಒಂಟಿತನ ಮನೆಯಲ್ಲೇನೂ ಪರಿಹಾರವಾಗುವುದಿಲ್ಲ, ಎಂದೂ ತಿಳಿದಿತ್ತಾದ್ದರಿಂದ, ಅಷ್ಟೇನೂ ಉತ್ಸಾಹ ತೋರದೇ ಮನೆಗೆ ನಡೆದು ಹೋದದ್ದಾಯಿತು. ನಂಬಿಕೆಗಳನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ, ನಂಬುವುದು ಯಾರನ್ನು? ಆತ್ಮೀಯವಾಗಿ ಕಂಡುಬಂದ ಮುಖಚಹರೆಯೂ ಅದರಡಿಯಲ್ಲಿರಿಸಿಕೊಂಡಿರುವ ಗುಟ್ಟುಗಳನ್ನು ಬಿಟ್ಟುಕೊಡದೇ ಕಾಡುವ ಈ ಕಾಲದಲ್ಲಿ, ಡಿಐಜಿತಾನೇ ನಂಬಲರ್ಹ ವ್ಯಕ್ತಿಯೇ? ಇವನ್ಯಾವ ಗಿಡದ ತೊಪ್ಪಲು?

*****

ರಸ್ತೆಯಲ್ಲಿರುವ ಮುಖಗಳೆಲ್ಲಾ ತಲೆಯೊಡೆಯಲು ಸಿದ್ಧವಾಗಿವೆ ಎಂಬ ಅಪನಂಬಿಕೆ ಹೊತ್ತು ಮನೆಗೆ ಬಂದಾಗ ಭೀತಿ ಇಳಿದಿರಲಿಲ್ಲ. ಡಿಐಜಿಯವರನ್ನು ನೋಡಿದ ನಂತರ, ಅವರ ಕೋಣೆ ಹೊಕ್ಕು ಬಂದ ವ್ಯಕ್ತಿಯಿಂದಾಗಿಯೇ ಘಟಿಸಿದ ಈ ಘಟನೆಯನ್ನು ನೆನಪಿಸಿಕೊಳ್ಳಲೂ ಭಯವಾಗುತ್ತಿತ್ತು. ಯಾವುದು ವಾಸ್ತವ? ಪತ್ರಿಕೆಯ ವರದಿಯೇ? ಅಥವಾ ಈಗ ಕಂಡದ್ದೇ? ಅಥವಾ ಎರಡೂ ಸುಳ್ಳೇ? ಏನು ಮಾಡಬೇಕು? ಎಲ್ಲೋ ಅಗೋಚರ ಸುಳಿಯೊಂದರಲ್ಲಿ ಸಿಕ್ಕಿ, ಕೈಗೇನೂ ಸಿಕ್ಕದಿದ್ದಾಗ ಖಾಕಿ ಬಣ್ಣದ ಹುಲ್ಲುಕಡ್ಡಿಯನ್ನೇ ಹಿಡಿದು ಭಾರ ಹೇರಬೇಕಾಯಿತು. ಮಿಕ್ಕಂತೆ ಸಂತಾಪದ ಮಾತು ಕೇಳುವುದನ್ನು ಬಿಟ್ಟರೆ ಬೇರೇನೂ ಆಗಲಾರದು. ಹಾಗಾದರೆ ಈಗ ನಡೆದದ್ದನ್ನು ಡಿಐಜಿಗೆ ವರದಿಯೊಪ್ಪಿಸುವುದೇ? ತನಗೇ ರಕ್ಷಣೆ ಬೇಕೆಂದು ದೈನ್ಯದಿಂದ ಬೇಡಿಕೊಂಡ ವ್ಯಕ್ತಿಯಿಂದ ಪ್ರಾಣಾಪಾಯವಿದೆ ಎಂಬುದು ಒಂದು ಕಡೆ. ಸಂಜೆಯ ಅಪಘಾತದಲ್ಲಿ ಅನಂತ ಪ್ರತ್ಯಕ್ಷ ಸಾಕ್ಷಿಗಳು ಕೊಟ್ಟಿರುವ ಸಾಕ್ಷ್ಯ ಒಂದು ಕಡೆ. ಈ ನಡುವಿನ ಸತ್ಯದ ಮುಳ್ಳು ವಾಲುವುದೆತ್ತ? ಚುಚ್ಚುವುದ್ಯಾರನ್ನು? ಅದನ್ನು ಉದ್ಧರಿಸುವವರು ಯಾರು? ಡಿಐಜಿಯವರ ಪ್ರತಿಕ್ರಿಯೆ ಈ ಹಿನ್ನೆಲೆಯಲ್ಲಿ ಹೇಗಿದ್ದೀತು?:

"ಅಲ್ರೀ, ನಾನು ತಾನೇ ಯಾರನ್ನ ನಂಬೋದು? ಆ ಮನುಷ್ಯ ತನ್ನ ಜೀವಕ್ಕೇ ಅಪಾಯ ಅನ್ನುತ್ತಾನೆ. ಇಲ್ಲಿ ನೋಡಿದರೆ ಅವನಿಂದಲೇ ಅಪಾಯಾಂತ ದೂರು. ಹೀಗೆ ಹೆದರಿ ಬಂದ ಪ್ರತಿ ವ್ಯಕ್ತಿಗೂ ಪೋಲೀಸ್ ರಕ್ಷಣೆ ಬೇರೆ ಬೇಕು. ನಾವು ಎಲ್ಲರಿಗೂ ರಕ್ಷಣೆ ಕೊಡುತ್ತಾ ಹೋದರೆ ಅರ್ಧ ಜನಸಂಖ್ಯೆ ಪೋಲೀಸರಾಗಿ, ಮಕ್ಕರ್ಧ ಜನರಿಗೆ ಭದ್ರತೆ ಕೊಡಬೇಕಾಗುತ್ತದೆ. ಮೇಲಾಗಿ ಪೋಲೀಸರೂ ಮನುಷ್ಯರಲ್ಲವೇ? ಅವರಿಗೂ ಭದ್ರತೆ ಬೇಕಾಗುತ್ತದೆ... ಇದಕ್ಕೆ ಕೊನೆಯೆಲ್ಲಿ? ಸ್ವಲ್ಪ ಧೈರ್ಯ ತಂದುಕೊಂಡು ನಮಗೆ ತನಿಖೆ ನಡೆಸೊಕ್ಕೆ ಅವಕಾಶ ಕೊಡಬಹುದಲ್ಲಾ."

ಅದೂ ನಿಜವೇ. ಸತ್ತವನ ದೇಹದ ಪೋಸ್ಟ್ ಮಾರ್ಟೆಂ ವರದಿ ಇನ್ನೂ ಬರಬೇಕು. ಫೊರೆನ್ಸಿಕ ಲ್ಯಾಬ್ ಗೆ ಕಳಿಸಿದ ಗಾಜಿನ ಚೂರುಗಳ ವರದಿಯೂ ಬರುವ ತನಕ, ಹೇಳಿದ್ದನ್ನು ನಂಬುವುದಕ್ಕೆ ಆಧಾರವೇ ಇಲ್ಲವಾಗುತ್ತದೆ. ಬಂಧಿಸಿದ ಆಟೋದವನಿಗೆ ಥರ್ಡ್ ಡಿಗ್ರಿ ಕೊಟ್ಟು ಬಾಯಿಬಿಡಿಸಬಹುದು, ಇಲ್ಲವೇ ಯಾರಾದರೂ ಅವನನ್ನು ಜಾಮೀನಿನ ಮೇಲೆ, ಅಥವಾ ವಕೀಲರ ಸಹಾಯದಿಂದ ಬಿಡಿಸಿಕೊಂಡು ಹೋದರೆ?! ಇನ್ಶಾ ಅಲ್ಲಾ ಹಾಗಾಗದಿರಲಿ!!

ಅಂದು ಸಂಜೆ ದೂರದರ್ಶನ ವಾರ್ತೆಯಲ್ಲೂ ಈ ಅಪಘಾತ ಪ್ರಮುಖ ಸ್ಥಾನ ಪಡೆದಿತ್ತು. ಜೊತೆಗೆ ಇನ್ನೆಲ್ಲೋ ನಡೆದ ಒಂದು ಕೊಲೆಯ ವಿಷಯವೂ. ಅಲ್ಲೂ ಯಾರೋ ಆಟೋ ನಿಲ್ಲಿಸಿ, ಒಳಗಿದ್ದ ಸಂಚಾರಿಯನ್ನು ಹೊರಗೆಳೆದು ಮಚ್ಚಿನಿಂದ ಕೊಚ್ಚಿಹಾಕಿದ್ದರಂತೆ. ಕೇಳುತ್ತಿದ್ದಂತೆ ಮೈ ಉರಿದು ಬೆವರಿತು. ಬೆವರುತ್ತಲೇ ನಡುಕವೂ ಹತ್ತಿಕೊಂಡಿತು. ಅಂಥಹ ಶೆಕೆ, ಅದರಲ್ಲಿ ನಡುಕ. ಹಿಂದೆಂದೂ ಹೀಗಾಗಿರಲಿಲ್ಲ. ಹಾಗೇ ಕುಳಿತಿದ್ದಾಗ, ದಿನವೂ ಪತ್ರಿಕೆಗಳಲ್ಲಿ ಈ ವಾರ್ತೆಗಳನ್ನು ಒಂದೇ ಏಕತಾನತೆಯಿಂದ ಓದುವುದೂ, ದೂರದರ್ಶನದಲ್ಲಿ ನೋಡುವುದೂ ನೆನಪಾಗಿ, ಆ ಎಲ್ಲ ವಾರ್ತೆಗಳಿಗೂ ಈಗ ಹೊಸ ಅರ್ಥವ್ಯಾಪ್ತಿಯೊಂದು ಹಬ್ಬಿ, ಜಾಗತಿಕ ಸಮಸ್ಯೆಯೊಂದು ತೀರ ಹತ್ತಿರ ಬಂದು, ಆತ್ಮೀಯವಾಗಿ ಮಾತನಾಡಿಸಿದ ವೈಯಕ್ತಿಕ ಸಮಸ್ಯೆ ಆಗಿಹೋಯಿತು.

ಆ ರಾತ್ರೆ ಅದ್ಭುತವಾದ ನಿದ್ದೆಯೂ ಬಂದಾಗ, ಭಗವಂತನಿಗೆ ಈ ವರದಾನಕ್ಕಾಗಿ ಕೃತಜ್ಞತೆ ಹೇಳಬೇಕೆನ್ನಿಸಿತು. ಬಳಲಿದ ಮನಕ್ಕೆ ತಂಪಾದ ನಿದ್ರೆಗಿಂತ ಬೇಕಾದ್ದು ಬೇರೇನು? ಅಂದಿನ ಸೂರ್ಯೋದಯ ಎಂದಿನಂತಿರಲಿಲ್ಲ. ಹೊಸ ಉತ್ಸಾಹ ಹೊಸ ಹುರುಪು ಮೈಗೂಡಿತ್ತು. ಪುಕ್ಕಲರಾಗಿ ಜೀವನ ಕಳೆಯುವುದೆಷ್ಟುದಿನ? ಎಲ್ಲೋ ಒಂದೆಡೆ ಭಂಡ ಧೈರ್ಯ ತಂದುಕೊಳ್ಳದಿದ್ದರೆ ತರಕಾರಿಯ ಹಾಗೆ ಸಿಕ್ಕಸಿಕ್ಕ ಚಾಕುಗಳಿಂದ ಕೊಚ್ಚಿಸಿಕೊಂಡು ಉಸಿರುಬಿಡಬೇಕಾಗುತ್ತದೆ. ಎಲ್ಲೋ ಒಂದೆಡೆ ಎಲ್ಲ ಹಂಗನ್ನೂ ತೊರೆಯಬೇಕೆಂದು ನಿರ್ಧರಿಸಿದಾಗಲೇ ಡಿಐಜಿಯವರ ಫೋನು ಬಂದಿತು.

"ನಿನ್ನೆ ಸಿಕ್ಕ ನಿಮ್ಮ ಟಿಪ್ ಆಫ್ ನಿಂದ ಅನುಕೂಲವಾಯಿತು. ಫೊರೆನ್ಸಿಕ್ ವರದಿ ಬಂದಿದೆ. ಆಟೋ ಚಾಲಕನ ಕೈಬೆರಳುಗಳು ಸ್ಪಷ್ಟವಾಗಿವೆ. ಪೋಸ್ಟ್ ಮಾರ್ಟೆಂ ಕೂಡಾ. ಇದು ಕೊಲೆ ಎಂಬುದಕ್ಕೆ ಆಧಾರ ಒದಗಿಸೋ ಹಾಗೆಯೇ ಇದೆ. ನಿನ್ನೆ ರಾತ್ರಿ ಆ ಕುಂಟನನ್ನೂ ಬಂಧಿಸಿದ್ದೇವೆ. ಆಟೋ ಚಾಲಕ ಅವನನ್ನೂ ಐಡೆಂಟಿಫೈ ಮಾಡಿದ್ದಾನೆ. ಥ್ಯಾಂಕ್ಸ್"

ಜಗತ್ತನ್ನೇ ಉದ್ಧರಿಸಿದ ಭಾವನೆ ಉಂಟಾಗುವುದು ಸಹಜವಿತ್ತು. ಆದರೆ ಖುಶಿಗಳು ನಿರಂತರವಾಗಿ ಇರುವುದಾದರೆ, ಜೀವನ ಬರಡು, ಎಂಬುದನ್ನು ನಿರೂಪಿಸಲೆಂಬಂತೆ, ಮತ್ತೊಂದು ಫೋನ್ ಕರೆ ಬಂತು. ಈ ಬಾರಿ ಬಂದದ್ದು ನಮ್ರತೆಯ ವಿಧೇಯತೆಯ ಧ್ವನಿ. "ನೀವು ನಿನ್ನೆ ಡಿಐಜಿಯವರ ಜೊತೆ ಮಾತಾಡಿದ್ದು ನಮಗೆ ಗೊತ್ತಾಗಿದೆ. ನಮ್ಮ ಖಾಸಗೀ ವಿಷಯಕ್ಕೆ ತಲೆ ಹಾಕುವುದು ನಿಮಗೇ ಒಳ್ಳೆಯದಲ್ಲ".

ಉತ್ತರವಾಗಿ ಒಂದು ವಾದವನ್ನು ಮಂಡಿಸಿದ್ದಕ್ಕೆ, ಮತ್ತೆ ತಾಳ್ಮೆಯಿಂದ, ಸಣ್ಣ ಮಕ್ಕಳಿಗೆ ವಿವರಿಸುವಂತೆ ನಿಧಾನ ದನಿಯಿಂದ ಅವನು ಮನಸ್ಸಿಗೆ ನಾಟುವಂತೆ ಹೇಳಿದ. ಸಿನೇಮಾದಲ್ಲಿ ತೋರುವ ಖಳನಿಗೂ, ರಮಿಸುವ ದನಿಯ ಇವನಿಗೂ ತುಂಬಾ ವ್ಯತ್ಯಾಸವಿದೆಯೆನಿಸಿತು. ಪ್ರೀತಿಯಿಂದ ಲಲ್ಲೆಗರೆದು, ಮಕ್ಕಳಿಗೆ ಅನ್ನ ತಿನ್ನಿಸುವ ತಾಯಿಯ ಧ್ವನಿಯಲ್ಲಿ ಹೇಳಿದಾಗ, ಅವನ ಬಗ್ಗೆ ಒಂದು ಪ್ರೀತಿಯೂ, ಗೌರವವೂ, ಹುಟ್ಟಿಕೊಂಡಿತು. ಅದೇ ಕ್ಷಣಕ್ಕೆ ಅಲ್ಲಿನ ಗಾಂಭೀರ್ಯ ಭೀತಿಯನ್ನೂ ಹುಟ್ಟಿಸಿತು. ಈಗ ಮಾಡಿರೋ ತಪ್ಪಿಗೆ ಶಿಕ್ಷೆಯನ್ನಂತೂ ಅನುಭವಿಸುವುದು ಕಾವ್ಯನ್ಯಾಯವಾದರೂ, ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಹೀಗೆ ರಮಿಸುತ್ತಿರುವುದಾಗಿ ಆತ ಹೇಳಿದ. ಹೀಗೆ ಬಂದ ಕರೆಗೆ ಪ್ರತಿಕ್ರಿಯೆ ಏನು? ಹೇಗಿದ್ದರೂ ಕೈ ಮುರಿದೋ, ಕಾಲು ಮುರಿದೋ, ತಲೆಯೊಡೆದೋ ಸೇಡು ತೀರಿಸಿಕೊಳ್ಳಲು ತಯಾರಿರುವ ಈ ಜನರಿಗೆ ಹೆದರಿ ಸುಮ್ಮನಾದರೂ ಅಪಾಯ. ಏನಾದರೂ ಮಾಡಿದರೂ ಅಪಾಯ. ಪ್ರಿಯ ಸ್ನೇಹಿತರಾದ ಡಿಐಜಿಗೆ ಹೇಳಿ ರಕ್ಷಣೆ ಪಡೆಯಬಾರದೇಕೆ? ಅಥವಾ ಮುಂದಾಗಬಹುದಾದ ಅನಾಹುತಕ್ಕೆ ಮೊದಲೇ ವೈಯಕ್ತಿಕ ನೆಲೆಯಲ್ಲಿ ಒಂದೆರಡು ತಯಾರಿಗಳನ್ನು ಮಾಡಿಟ್ಟಿದ್ದರೆ?

*******

ಮತ್ತೆ ಡಿಐಜಿಯವರ ಕಾರ್ಯಾಲಯದತ್ತ ಹೆಜ್ಜೆ ಹಾಕುತ್ತಿದ್ದಂತೆ, ಒಂಟಿತನದ ತೀವ್ರ ಭಾವನೆ ಕಾಡಿತು. ಈಗ ಈ ದುಗುಡಗಳನ್ನು, ದ್ವಂದ್ವಗಳನ್ನು ಆತ್ಮೀಯವಾಗಿ ತೋಡಿಕೊಳ್ಳಲು ಯಾರೂ ಇಲ್ಲವಲ್ಲಾ ಎನ್ನಿಸಿತು. ಡಿಐಜಿಯವರ ಬಳಿ ತೋಡಿಕೊಳ್ಳುವುದೂ ಅಪಾಯ, ಅವರು ತಾನೇ ಎಷ್ಟರ ಮಟ್ಟಿಗಿನ ಅಂತಃಕರಣದಿಂದ ನೋಡಿಯಾರು? ಹೀಗೆ ಈಚೆಗೆ ಗೆಳೆಯನೊಬ್ಬ "ಶಾದಿ ಕರ್ಲೋ, ಜಿಂದಗೀಮೇ ಸಹಾರಾ ಚಾಹಿಯೇ" ಎಂದು ಹೇಳಿದ್ದಕ್ಕೆ "ಸಹಾರಾ, ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿ, ಗೊತ್ತುಂಟೋ" ಎಂದು ಮಾತು ಹಾರಿಸಿದ್ದುಂಟು. ಆ ಮಿತ್ರ "ಗೊತ್ತಿಲ್ಲ" ಎಂದು ಉತ್ತರಿಸಿದ್ದೂ ಉಂಟು.

ಈಗ ಈ ದ್ವಂದ್ವಗಳ ಬೆನ್ನೇರಿ ಹೋಗುವಾಗ ಬಾಳ ಸಂಗಾತಿಯೊಬ್ಬಳಿದ್ದಿದ್ದರೆ ..... ಒಮ್ಮೆ ಯಾರನ್ನಾದರೂ, ಇಂಥ ಸಂದರ್ಭದ ಸ್ವಾರ್ಥಕ್ಕಾಗಿ ಲವ್ ಮಾಡಿದ್ದರೆ.... ಎಂಬೆಲ್ಲಾ ಆಲೋಚನೆಗಳು ಅಡ್ಡಾದಿಡ್ಡಿಯಾಗಿ ಹರಿದಾಡಿ, ಹಾಗೇನಾದರೂ ಆಗಿದ್ದರೆ, ಅವಳೂ ಈ ಅಪಾಯದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿರಲಿಲ್ಲವೇ ಎಂದೂ ಅನ್ನಿಸಿದಾಗ, ಎದುರಿಗೆ ನಿಂತದ್ದು ಹಿಂದಿನ ಬೃಹದಾಕಾರದ ಪ್ರಶ್ನೆಯೇ - "ಸಹಾರಾ ಯಾವುದು? ಜೊತೆಯೋ, ಮರುಭೂಮಿಯೋ?"

ತಲೆಯಲ್ಲಿ ಯುದ್ಧ ನಡೆಸಿ ಹುಚ್ಚನಾದಾಗ ಅದಕ್ಕೆ ಕಾರಣ ಕೇವಲ ಭೀತಿ ಎಂಬುದು ಆಗ ತಿಳಿದಿರಲಿಲ್ಲ. ಡಿಐಜಿಯ ಕಾರ್ಯಾಲಯದತ್ತ ಹೆಜ್ಜೆ ಹಾಕುವಾಗ, ಸುತ್ತಲಿನ ಜಗತ್ತು ಪೂರ್ತ ಅನುಮಾನದಿಂದ ಕೋಪದಿಂದ ದಿಟ್ಟಿಸುತ್ತರುವಂತನ್ನಿಸಿತು. ಜೊತೆಗೆ ಮತ್ತೊಂದು ಅನುಮಾನವೂ - ಅನುಮಾನ ಯಾರಿಗೆ ಜಗತ್ತಿಗೋ... ಅಥವಾ ದ್ವಂದ್ವಗಳನ್ನು ಹೊತ್ತು ನಡೆಯುತ್ತಿರುವವನಿಗೋ. ಬಸ್ ಹತ್ತುವಾಗ ಕಂಡಕ್ಟರ್ ಕೂಡಾ ಕೊಲ್ಲುವಂತೆ ನೋಡಿದ. ಬದಿಗೆ ನಿಂತಿದ್ದ ವ್ಯಕ್ತಿ ಕೇಳಿದ ಪ್ರಶ್ನೆಗಳೂ ಹಾಗೇ ಇದ್ದುವು. "ಎಲ್ಲಿಗೆ?" "ಯಾಕೆ?" ಇತ್ಯಾದಿ. ಇವನೂ ಆ ಗುಂಪಿಗೇ ಸೇರಿದವನೇ? ಕಾರಣ "ನಿಮಗ್ಯಾಕೆ ಇಲ್ಲದ ಉಸಾಬರಿ" ಎಂಬ ಉಪದೇಶದ ಮಾತುಗಳನ್ನೂ ಹೇಳಿದ.

ಡಿಐಜಿಯ ಕಾರ್ಯಾಲಯದಲ್ಲಿ ಕಾರ್ಯದರ್ಶಿಯೆದುರು ಚೀಟಿ ಬರೆಯುತ್ತಾ ಕುಳಿತಾಗ ಅವನೂ "ಯಾಕೆ ಸರ್, ನಿಮಗೆ ಬೇರೇನೂ ಸಮಸ್ಯೆಗಳಿಲ್ಲಾಂತ ಈ ಲೋಕೋದ್ಧಾರದ ಕೆಲಸ ಮಾಡುತ್ತಿದ್ದೀರೇನು? ಮುಂದೆ ಬರುವ ಕೋರ್ಟಿನ ಸಮನ್ ಗಳನ್ನು ನಿಭಾಯಿಸುವುದು ಕಷ್ಟ. ದುಷ್ಟರಿಂದ ದೂರವಿರುವುದೇ ಒಳಿತಲ್ಲವೇ?" ಎಂದು ಕೇಳಿದಾಗ ಇವನೂ...... ಈ ಧಂಧೆಯಲ್ಲಿ ಸಾಚಾ ಯಾರು, ಖೋಟಾ ಯಾರು? ಯಾರು ಯಾವ ಧಂಧೆಗೆ ಸಾಚಾ?

ಮತ್ತೆ ಡಿಐಜಿಯವರ ಸಂದರ್ಶನ ಮುಗಿಸಿ ಹೊರಬಂದಾಗ ಧೈರ್ಯದ ಭಾವನೆಯೇನೂ ಉಂಟಾಗಲಿಲ್ಲ. "ಈ ಘಟನೆಯ ಒಂದು ಕೊಂಡಿ ಮಾತ್ರ ನಮಗೆ ಸಿಕ್ಕಿದೆ. ಅದರ ಸರಪಳಿ ಎಲ್ಲಿಗೆ ಹೋಗುತ್ತದೋ ಅದೂ ಗೊತ್ತು, ಆದರೆ ಸರಪಳಿ ಎಳೆದು ಇದನ್ನು ನಿಲ್ಲಿಸುವ ದಾರಿ ಗೊತ್ತಿಲ್ಲ. ಏಕೆಂದರೆ ಸರಪಳಿಯ ಅಂತ್ಯಕ್ಕಿಂತ, ಕೊಂಡಿಗಳು ಮುಖ್ಯವಾಗುವ ನಮಗೆ ಅರ್ಧದಾರಿ ಹೋಗುವಷ್ಟರಲ್ಲಿಯೇ ಸರಪಳಿ ಕಡಿದಿರುವುದು ತಿಳಿಯುತ್ತದೆ. ಮತ್ತೆ ಹೊಸಕೊಂಡಿ, ಹೊಸ ಸರಪಳಿ ಹುಡುಕಿ ಹೋಗಬೇಕು. ಇದು ಅನುಭವದ ಮಾತು. ವೈಯಕ್ತಿಕವಾಗಿ ನನ್ನನ್ನ ಕೇಳುವುದಾದರೆ, ನೀವು ಇದರಿಂದ ದೂರ ಇರೋದೇ ಒಳ್ಳೆಯದು." ಎಂದು ಆತ ಹೇಳಿದಾಗ, ಹೇಡಿತನದ ಒಳ್ಳೆಯ ಗುಣಗಳು ಎಲ್ಲರಲ್ಲೂ ಎಷ್ಟು ವಿಪುಲವಾಗಿವೆ ಎಂದು ಮನವರಿಕೆಯಾಯಿತು. ಹೊರಬರುತ್ತಿದ್ದಂತೆ, ನಿಜಕ್ಕೂ ಇದನ್ನೆಲ್ಲ ಹಂಚಿಕೊಳ್ಳಲು ಒಂದು ಗಟ್ಟಿ ಹೃದಯದ ಸಹಾರಾ ಬೇಕೇಬೇಕೆನಿಸಿದ್ದೂ ಉಂಟು.

ಎಂದಿನಂತೆ ಸಮಯಕ್ಕೆ ಸರಿಯಾಗಿ ಹೋಗಲಾಗದೇ, ತಡವಾದುದಕ್ಕೆ ಆತಂಕ ಪಡುತ್ತಾ ಹೊರಬಂದು ಆಫೀಸಿನತ್ತ ಹಜ್ಜೆ ಹಾಕುತ್ತಿದ್ದಾಗ ಯಾರೋ ಹಿಂಬಾಲಿಸಿದ ಭಾವನೆ. ಅಥವಾ ಭ್ರಮೆ. ಭ್ರಮೆಯ ಬಗ್ಗೆ ನಂಬಿಕೆ ಗಟ್ಟಿಯಾಗುತ್ತಾ ಹೋದಾಗ ಅದು ವಾಸ್ತವವಾಗಿ ಪರಿವರ್ತನೆಗೊಳ್ಳುವುದೂ ಉಂಟು. ರಸ್ತೆ ಸ್ವಲ್ಪ ನಿರ್ಜನವಾಗುತ್ತಿದೆ ಎನ್ನಿಸಿದಂತೆ ಭಯವೂ ಜಾಸ್ತಿಯಾಯಿತು. ಯಾರೋ ಬಂದು ಕಾಲರ್ ಪಟ್ಟಿ ಹಿಡಿದು, ಕೆನ್ನೆಯ ಮೇಲೆ ಬಾರಿಸಿ, ಕಬ್ಬಿಣದ ಸಲಾಕೆಯಿಂದ ಕಾಲಿಗೆ ಬಲವಾಗಿ ಪೆಟ್ಟುಕೊಟ್ಟದ್ದು ಅನುಭವಕ್ಕೆ ಬಂತು. ಹಿಂದಿರುಗಿ ನೋಡಿದಾಗ ಆ ವ್ಯಕ್ತಿ ನಸುನಕ್ಕ:

"ಇದು ಮೊದಲ ಪಾಠಮಾತ್ರ. ಕಲಿತರೆ ಒಳ್ಳೆಯದು." ಎಂದು ಕರಗಿಹೋದ. ಅವನಷ್ಟೇ ಅಲ್ಲ ತಲೆ ತಿರುಗಿಸಿದಾಗ ಒಂದಿಷ್ಟು ಸಮಯ ಜಗತ್ತೇ ಕರಗಿಹೋಗುತ್ತದೆ. ಕಡೆಗೊಮ್ಮೆ, ಭಂಡತನಕ್ಕೂ, ಈಗಿವನು ಕೊಟ್ಟಿದ್ದ ಜೀವನದ ಪಾಠಕ್ಕೂ, ಧೈರ್ಯಕ್ಕೂ, ಭಯಕ್ಕೂ ಕೊಂಡಿಗಳನ್ನರಸುತ್ತಾ ಎದ್ದು ನಿಲ್ಲಲು ಯತ್ನಿಸಿದಾಗ ಒಂದು ಸುಂದರ ಹೆಣ್ಣು: "ಸಹಾಯ ಮಾಡಲೇ?" ಎಂದು ಕಾತರದಿಂದ ಬಳಿಗೆ ಬರುತ್ತಿದ್ದಂತೆ, ಮಾನವೀಯತೆಯ ಬಗ್ಗೆ ಕಳೆದುಕೊಳ್ಳುತ್ತಿದ್ದ ಎಲ್ಲ ನಂಬುಗೆಗಳೂ ಮರುಕಳಿಸಿದಂತಾಗಿ, ಅವಳ ಸೌಂದರ್ಯ ಜಗತ್ತನ್ನು ಇನ್ನೂ ಸುಂದರವಾಗಿಸುತ್ತಿದೆ ಎನ್ನಿಸಿ, ಅವಳು ಬಳಿ ಬರದಿದ್ದರೆ ಅದೇ ದೊಡ್ಡ ಉಪಕಾರ ಎಂದು, ಸದ್ಯಕ್ಕವಳು ಏನೂ ನೋಡಿಲ್ಲವೆಂದೂ ಮನವರಿಕೆ ಮಾಡಿಕೊಡುವ ಯತ್ನ ಸಫಲವಾಗುತ್ತಿದ್ದಂತೆ, ಸಂಭಾಷಣೆಗೆ ಮತ್ತೊಂದು ಬಾಲಂಗೋಚಿ ಸೇರಿಕೊಂಡಿತ್ತು. ಮುಂದೆಂದಾದರೂ, ಸಂದರ್ಭ ಒದಗಿ ಬಂದರೆ ಜೀವನದಲ್ಲೊಂದು ಸಹಾರಾ ಆಗಬಹುದೆಂದು ಸೂಚಿಸಿದಾಗ, ವಿಚಿತ್ರ ಬಡಬಡಿಕೆಗಳನ್ನು ಕೇಳಿ, ಏನೂ ಅವಳಿಗರ್ಥವಾಗದೇ ಚಕಿತಳಾಗಿ ಕರುಣೆಯ ದೃಷ್ಟಿ ಬೀರುತ್ತಲೇ ಎರಡು ಹೆಜ್ಜೆ ಹಿಂದೆ ಹೋದಳು.

ಕಷ್ಟಪಟ್ಟು ಮತ್ತೆ ಪೋಲೀಸ್ ಹೆಡ್ ಕ್ವಾರ್ಟರ್ಸ್ ಗೆಂದು ಆಟೋರಿಕ್ಷಾವನ್ನೇ ಹಿಡಿಯಲು ಧೈರ್ಯಮಾಡಿ ಎರಡು ಹೆಜ್ಜೆ ಕುಂಟಿದಾಗ ಅವಳ ದನಿ ಕೇಳಿಸಿತು: "ನಿಮ್ಮ ಹೆಸರೇನು ತಿಳಿದುಕೊಳ್ಳಬಹುದೇ?"

ಪ್ರಶ್ನೆಗೆ ಮುಖದಲ್ಲಿ ತುಂಟನಗೆಯೊಂದು ಅರ್ಥಗರ್ಭಿತವಾಗಿ ಹೊಮ್ಮುತ್ತಿದ್ದಂತೆ ಉತ್ತರವೂ ಅ ಪ್ರಯತ್ನವಾಗಿ ಹೊರಹೊಮ್ಮಿತ್ತು.

ಮೇ 1989



Saturday, November 28, 2009

ಭಾಸ್ಕರರಾಯರು ಬರೆದದ್ದೇನು?

ನೇಪಥ್ಯ

ಭಾಸ್ಕರರಾಯರು ಹೊಸಪುಸ್ತಕದ ಹೊಸಫ್ಟವೊಂದನ್ನು ತೆರೆದರು. ಏನಾದರೂ ಬರೆಯಬೇಕು. ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನ್ನಿಸುತ್ತದೆ. ಹೊಸದಾಗಿ ಬರೆವುದೆಂದರೇನು? ತಮ್ಮ ಹಳೇ ಕಥೆಯನ್ನೇ? ಆತ್ಮ ಚರಿತ್ರೆಯನ್ನೇ? ಜೀವನದ ರಸಕ್ಷಣಗಳ ಸುಂದರ ನೆನಪಿನ ಮಾಲೆಯನ್ನೆ? ಕೇವಲ ಹಿಂದಿನ ದಿನದ ದಿನಚರಿಯನ್ನೆ? ಒಂದು ಪತ್ರವನ್ನೆ? ಬೇರೊಬ್ಬರ ಹಣೆಬರಹವನ್ನೆ? ಈ ಇಂಥ ಪ್ರಶ್ನೆಗಳೆಲ್ಲಾ ಭಾಸ್ಕರರಾಯರನು ಕಾಡಿದ್ದಿರಬಹುದು. ಈ ಎಪ್ಪತ್ತರ ಇಳಿವಯಸ್ಸಿನಲ್ಲಿ, ನಡುಗುವ ಕೈಗಳಲ್ಲಿ ಬರೆವುದಾದರೂ ಏನನ್ನು? ಬರೆದರೂ ಅದರ ಪರಿಣಾಮ ಎಷ್ಟರಮಟ್ಟಿಗೆ? ಬರೆದದ್ದರಿಂದ ಚರಿತ್ರೆಯನ್ನು ಅಳಿಸಲು ಸಾಧ್ಯವೇ? ಇಲ್ಲವೆನ್ನಿಸುತ್ತದೆ. ಹೋಗಲಿ ಮುಂದೆ ಭವಿಷ್ಯದ ದಿಕ್ಕನ್ನದರೂ ಬದಲಾಯಿಸಬಹುದೇ? ಗೊತ್ತಿಲ್ಲ. ಈ ಲೋಕದ ಬಗ್ಗೆ ಬರೆದು ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಅನ್ನಬಹುದೇ? ಆ ಕಾಲದಲ್ಲಿ ಭಾಸ್ಕರರಾಯರು ಏನನ್ನಾದರೂ ಬರೆದಿದ್ದರೆ ಬಹುಶಃ ಈಗ ಅದರ ಪರಿಣಾಮ ತಿಳಿಯಬಹುದಿತ್ತೇನೋ..... ಆದರೆ ಈಗ ಬರೆಯಲಿರುವುದರ ಪರಿಣಾಮ ಜೀವನದುದಕ್ಕೂ ತಿಳಿದೀತೋ.. ತಿಳಿಯದೇ ಉಳಿದೀತೋ. ಮೈಸೂರಿನ ಮೂಲೆಯೊಂದರಲಿ ಕುಳಿತು ಬರೆವ ತಮ್ಮ ಬರವಣಿಗೆಯನ್ನು ಓದುವವರಾದರೂ ಯಾರು? ಬಹುಶಃ ತಾವೊಬ್ಬರೇ. ಜೊತೆಗೆ...? ಹಾಗಾದರೆ ಈಗ ಬರೆಯಲೇ ಬೇಕೆ? ಈ ಪ್ರಶ್ನೆ ಎದುರಾದಾಗ, ತಮ್ಮ ಬರವಣಿಗೆಯನ್ನು ಓದುವ ಒಂದೇ ವ್ಯಕ್ತಿಯ ಮುಖ, ರಾಯರ ಮನಸ್ಸಿನಲ್ಲಿ ಹಾಯ್ದು ಹೋಯಿತು. ಹಿಂದೆ, ರಾಯರು ಹೆಚ್ಚು ಬರೆದವರಲ್ಲ, ಹಿಂದೇನಾದರೂ ರಾಯರು ಬರೆದಿದ್ದರೆ, ಅದೆಷ್ಟು ಜನರ ವಿಧಿಬರಹವಾಗಿ ಪರಿಣಮಿಸುತ್ತಿತ್ತೋ ತಿಳಿಯದು... ಈಗವರು ಬರೆಯಬೇಕಾದ್ದೇನು ಅದರ ಪರಿಣಾಮ ಏನಿರಬಹುದು ಎಂದು ಆಲೋಚಿಸದೆಯೇ ಲೇಖನಿಯನ್ನು ಕೈಗೆತ್ತಿಕೊಂಡಾಗ, ಅವರ ಕೈ ಮೀರಿದ ಶಕ್ತಿಯೊಂದು
ಸಹಜವಾಗಿ ಅವರಿಂದ ಏನನ್ನೋ ಬರೆಸುತ್ತಾ ಹೋಯಿತು.


ಎಂಟನೆಯ ಮುಖ್ಯ ರಸ್ತೆ.

ಎಂಟನೆಯ ಮುಖ್ಯರಸ್ತೆಯ ಹದಿನಾರನೇ ನಂಬರ್ ಮನೆಯ ಬಳಿ ಗೇಟಿನ ಮುಂದೆ ಬೇಸರದಿಂದ ಕಾದು ನಿಂತಿರುವ ಕುಮುದಾಳಿಗೆ ಅನತಿದೂರದಿಂದ ತಮ್ಮ ಮನೆಯೆಡೆಗೆ ಹೆಜ್ಜೆ ಹಾಕುತ್ತಿರುವ ಆಕೃತಿಯ ಬಗ್ಗೆ ಅನುಮಾನವೇ ಇರಲಿಲ್ಲ. ಕುಮುದಾ ಈ ನಿರೀಕ್ಷೆಯಲ್ಲಿಯೇ ಇದ್ದಾಳೆ. ಬೆಳಿಗ್ಗೆ ಒಂಬತ್ತು ಗಂಟೆಗೇ ಬರುತ್ತೇನೆಂದ ಗೆಳತಿ ಲಲಿತ ಬಂದಿರಲಿಲ್ಲವಾದ್ದರಿಂದಲೇ ಕುಮುದಾ ಕಾತರದಿಂದ ಗೇಟಿನ ಬಳಿ ನಿಂತದ್ದು. ಲಲ್ಲೂ ಮನೆ ಸಂಈಪಿಸುತ್ತಿದ್ದಂತೆಯೇ ಅಂತೂ ಕಡೆಗೂ ಬಂದಳಲ್ಲ ಎಂದು ನಿಟ್ಟುಸಿರಿಡುತ್ತಲೇ ಕುಮುದಾ ಒಳ ಹಜಾರ ಪ್ರವೇಶಿಸಿ ಬೆತ್ತದ ಕುರ್ಚಿಗೆ ಬೆನ್ನೂರಗಿಸುತ್ತಾಳೆ. ಸರಸರನೆ ಒಳಬಂದ ಲಲ್ಲೂ ಮಾತಿಗೆ ತೊಡಗುತ್ತಾಳೆ.

"ಸಾರೀಮ್ಮಾ, ಲೇಟಾಯ್ತು.."

"ಬಾರೇ, ಬಾ.. ನಿಂಗೋಸ್ಕರಾನೇ ಕಾದೂ ಕಾದೂ ಸುಸ್ತಾಯ್ತು. ಅಲ್ಲ... ಯಾಕೇ ಇಷ್ಟು ತಡ ಮಾಡಿದೆ?"

ಲಲ್ಲೂಳ ಮುಖ ಕೆಂಪೇರುತ್ತದೆ.

"ಅನಿರುಧ್ ಬಂದಿದ್ರು ಕಣೇ.. ಅದಕ್ಕೇ..."

"ಅರ್ಥವಾಯ್ತು ಬಿಡು."

ಕುಮುದಾ ವ್ಯಂಗ್ಯದ ದನಿಯಲ್ಲಿ ಹೇಳುತ್ತಿದ್ದಂತೆ ಲಲ್ಲೂ ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ. ನಂತರ ಅವಳು ಯಾಂತ್ರಿಕವಾಗಿ ವ್ಯಾನಿಟಿ ಬ್ಯಾಗಿನಿಂದ ಒಂದಿಷ್ಟು ಕಾರ್ಡುಗಳನ್ನು ಹೊರಗೆಳೆಯುತ್ತಾಳೆ.

"ಏ ಕುಮು, ನಿಮ್ಮ ತಂದೆಯ ಹೆಸರೇನೇ?"

"ಹಾಗಾದರೆ ನಿನ್ನ ಮದುವೆಗೆ ನನಗೇ ಇನ್ವಿಟೇಷನ್ ಇಲ್ಲಾನ್ನು.. ಇರಲಿ... ನನಗೂ ಒಂದಿನ ಮದುವೆ ಆಗದೇ ಇರುತ್ತಾ? ... ಸೇಡು ತೀರಿಸಿಕೊಳ್ಳುತ್ತೀನಿ.."

"ಛೇ... ಹಾಗಲ್ಲ ಕಣೇಮ್ಮಾ" ಲಲ್ಲೂ ಮಾತನಾಡುತ್ತಲೇ ಕುಮುದಾಳ ತಂದೆಯ ಹೆಸರಿಗೆ ಹಿರಿಯರ ಕರೆಯೋಲೆ ಬರೆದು "ನಿಮ್ಮ ತಂದೆಗೆ ಕೊಟ್ಬಿಡೇ" ಎನ್ನುತ್ತಲೇ ತನ್ನ, ಅನಿರುದ್ಧನ ಜಂಟಿ ಹೆಸರಿಸುವ ಕರೆಯೋಲೆಯ ಮೇಲೆ ಕುಮುದಾಳ ಹೆಸರು ಬರೆದು ಕೊಡುತ್ತಾಳೆ. ಇಬ್ಬರೂ ಕೆಲಹೊತ್ತು ಲೋಕಾಭಿರಾಮ ಹರಟುತ್ತಾರೆ. ನಂತರ ಲಲ್ಲೂ ಕುಮುದಾಳ ಮದುವೆಯ ಪ್ರಸ್ತಾಪ ಮಾಡುತ್ತಾಳೆ.

ಕುಮುದಾ ಹೆದರಿದಂತೆ ಲಲ್ಲೂಳ ಬಾಯಿ ಮುಚ್ಚಿ..
"ಈ ವಿಷಯ ಮಹಡಿ ಮೇಲೆ ಕೂತು ಮಾತಾಡೋಣ... ಯಾಕೇಂದ್ರೆ ನನಿನ್ನೂ ಮನೇಲಿ ಸಿದ್ದಾರ್ಥನ ವಿಷಯ ಕೇಳೇ ಇಲ್ಲ... ನೀನೆಲ್ಲಾದರೂ ರಾದ್ಧಾಂತ ಮಾಡಿಬಿಟ್ಟೀಯ ಮತ್ತೆ....."

ಇಬ್ಬರೂ ತೆರೆದ ಮಹಡಿಯ ಮೇಲೆ ಹೋಗಿ ಬಿಸಿಲು ಕಾಯಿಸಿಕೊಳ್ಳುತ್ತಾ ಮೈ ಚಾಚುತ್ತಾರೆ. ಕುಮುದಾ ತನ್ನ ಬಗ್ಗೆ ಹೇಳತೊಡಗುತ್ತಾಳೆ.

ಕುಮುದಾಳ ಕಥನ

ನಾನು ಸಿದ್ಧಾರ್ಥನನ್ನು ಭೇಟಿಯಾದ ರೀತಿ ನೆನಪು ಮಾಡಿಕೊಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆ ದಿನ ಅವನ ಪಿಎಚ್‍ಡಿ ಥೀಸಿಸ್‍ನ ಪಬ್ಲಿಕ್ ಡಿಫೆನ್ಸ್ ಇತ್ತು. ಅಲ್ಲಿ ತರಲೆ ಮಾಡಿ ಪ್ರಶ್ನೆಗಳನ್ನು ಕೇಳೋಣವೆಂದೇ ನಾನು ಸೆನೆಟ್ ಹಾಲಿಗೆ ಹೋದೆ. ಆದರೆ ಅವನು ಪ್ರಬಂಧ ಮಂಡಿಸಿದ ರೀತಿಗೆ ಬೆರಗಾಗಿ, ಯಾವ ಪ್ರಶ್ನೆ ಕೇಳಬೇಕೆಂದೇ ನನಗೆ ತಿಳಿಯಲಿಲ್ಲ. ಆದಿನವೇ ಅವನ ಪರಿಚಯ ಔಪಚಾರಿಕವಾಗಿ ಆಗಿ, ಮೊದಲ ಬಾರಿಗೆ ಪರಸ್ಪರ ಮಾತಾಡಿದೆವು. ಆ ನಂತರ ನನ್ನ ಸಂಶೋಧನೆಯಲ್ಲಿ ಉದ್ಭವಿಸಿದ ಅನೇಕ ತೊಡಕುಗಳನ್ನು ಅವನು ಸಹಜವೆಂಬಂತೆ ಪರಿಹರಿಸಿಬಿಟ್ಟ. ನಾನು ಅವನನ್ನು ಪೀಡಿಸಿ ಗಲಾಟೆ ಮಾಡಿದ್ದಕ್ಕೆ, ನನ್ನ ಪಿರಿಪಿರಿ ತಾಳಲಾರದೇ ಸಿಗರೇಟ್ ಸೇದುವುದನ್ನು ಬಿಟ್ಟ. ಆ ದಿನವೇ ನಮ್ಮ ಪ್ರೇಮಾಂಕುರವಾಗಿರಬಹುದೆಂದು ನನ್ನ ಊಹೆ. [ಆದರೂ ಕ್ರಮೇಣ ಘಟಿಸುವ ಪ್ರೇಮದಂತಹ ಅನುಭವಕ್ಕೆ ಒಂದು ಕಾಲಮಾನದಲ್ಲಿ ನಿಖರವಾಗಿ ಆರಂಭವನ್ನು ಹುಡುಕುವುದು ತಪ್ಪಾದೀತು] ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ನಾವುಗಳು ಇಷ್ಟೆಲ್ಲಾ ಒಡನಾಟ ಹೊಂದಿರುವಾಗ್ಯೂ ನಾವಿಬ್ಬರೂ, ಒಬ್ಬರನ್ನೂಬ್ಬರು ಪ್ರೀತಿಸುತ್ತೇವೆಂದು ಈವರೆಗೂ ಹೇಳಿಕೊಂಡಿಲ್ಲ. ಇನ್ನು ಮದುವೆಯ ಪ್ರಸ್ತಾಪ ದೂರ. ಬಹುಶಃ ಪ್ರೀತಿ ಮಾತಿಗೆ ನಿಲುಕದ ಅನುಭವವಾದ್ದರಿಂದ ಹೀಗಿರಬಹುದು. ಮನಸ್ಸೇ ಅವನದಾಗಿರುವಾಗ ಮಾತಿನಂತಹ ಕೃತಕ ಸಾಧನಗಳು ಬೇಕೇ? ಆದರೂ, ಈ ಮನಸ್ಸು ಹೃದಯಗಳೆಂಬ ಅಮೂರ್ತ ವಿಷಯಗಳೂ ಕಡೆಗೆ ಮದುವೆಯೆಂಬ ಸಾಮಾಜಿಕ ಕ್ರಿಯೆಯಲ್ಲಿ ಪರ್ಯಾವಸನವಾಗಲೇಬೇಕಾದ್ದರಿಂದ, ಎಂದಾದರೂ ಮಾತಾಡಲೇ ಬೇಕು. ಅದಕ್ಕೆ ಸಂದರ್ಭ ಒದಗೆ ಬಂದಿಲ್ಲವೇನೋ. ಬಹುಷಃ ಸಿದ್ದಾರ್ಥನ ಮನೆಯಲ್ಲೋ ನನ್ನ ಮನೆಯಲ್ಲೋ ಮದುವೆಯ ಪ್ರಸ್ತಪ ಬಂದ ದಿನ ನಾವಿಬ್ಬರೂ ಈ ಬಗ್ಗೆ ಮಾತಾಡಿಕೊಳ್ಳಬಹುದು.

ನಾನು ಇಷ್ಟಲ್ಲಾ ಹೇಳಿದರೂ ನನಗೆ ಈ ವಿಷಯದ ಬಗ್ಗೆ ಇನ್ನೂ ಖಾತ್ರಿಯಿಲ್ಲ. ಸಿದ್ದಾರ್ಥ ನನ್ನೆಡೆಗೆ ತೋರಿಸುವ ಸಂಯಮವೇ ನನ್ನ ಅನುಮಾನಕ್ಕೆ ಕಾರಣವಿರಬೇಕು. ಅವನೂ ನಾನು ಭಾವಿಸಿದ ಹಾಗೆಯೇ ಭಾವಿಸಿದ್ದಾನೆಯೇ? ಅಥವಾ ಅವನಿಗಿದು ಕಾಮದಿಂದೀಚೆಗಿನ ಶುದ್ಧ - ಪರಿಶುದ್ಧ ಸ್ನೇಹ ಮಾತ್ರವೋ? ನನಗೆ ಆಗಾಗ ಅನ್ನಿಸುವುದುಂಟು - ಈ ಜಗತ್ತಿನಲ್ಲಿ ಕಾಮದ ಸುತ್ತ ಹೆಣೆಯದ ಸಂಬಂಧಗಳು ಬರೇ ದೈಹಿಕವಾಗಿ ಮಾತ್ರ ಇರುತ್ತದೇನೋ. ಮಾನಸಿಕವಾಗಿ ಎಷ್ಟೆಲ್ಲಾ ಜನರನ್ನು ನಮ್ಮ ತೋಳ್ತಕ್ಕೆಯಲ್ಲಿ ಕಲ್ಪಿಸಿಕೊಂಡುಬಿಟ್ಟಿರುತ್ತೇವೆ! ಇದರಲ್ಲಿ ಸಿದ್ದಾರ್ಥ ಎಷ್ಟನೆಯವನು? ಕಡೆಯವನೇ?? ಇರಲಿ. ಆದರೆ ಒಂದು ಮಾತ್ರ ನನಗೆ ಸ್ಪಷ್ಟ, ನಾನು ಮದುವೆಯಾಗುವುದಕ್ಕೆ ಮೊದಲು - ಅದು ಯಾರೊಂದಿಗೇ ಇರಲಿ - ನನಗೆ ಸಿದ್ಧಾರ್ಥನೊಂದಿಗಿನ ಸಂಬಂಧ ಸ್ಪಷ್ಟವಾಗುವುದು ಅಗತ್ಯ. ಮೊನ್ನೆ ನನಗೆ ಅಪೆಂಡಿಸೈಟಿಸ್ ಆಪರೇಷನ್ ಆದಾಗ ಅವನು ಬಂದು ನನ್ನನ್ನು ನೋಡಿದ್ದೇ ಕೊನೆ. ಅಂದೇ ಅವನು ಮಂಗಳೂರಿಗೆ ಹೊರಟ. ನಂತರ ಅವನ ಪತ್ರ ಬರಬಹುದೆಂದು ಈ ವರೆಗೂ ಕಾದದ್ದಾಯಿತು. ಇನೂ ಕಾಯುತ್ತೇನೆ. ಮಾತಿಗೆ ನಿಲುಕದ ವಿಷಯವಲ್ಲವೇ? ಅದಕ್ಕೆ ಅಕ್ಷರರೂಪ ಕೊಡಲು ತಡವಾದೀತು. ಬರೆಯುತ್ತಾನೆ ಎಂಬ ನಂಬಿಕೆಯೇ ನನಗೆ ಧೈರ್ಯ. ಅವನ ಪತ್ರ ಬಂದರೆ ಎಲ್ಲವೂ ಸ್ಪಷ್ಟವಾಗಬಹುದು. ಪತ್ರ ಈ ದಿನ ಬರಬಹುದೇ? ಜೀವನದುದ್ದಕ್ಕೂ ಯಾವುದೋ ಸ್ಪಷ್ಟೀಕರಣಕ್ಕೆ ಕಾಯುತ್ತಿದ್ದೇವೆ ಎಂದೆನ್ನಿಸುವುದಿಲ್ಲವೇ? ಆ ಸ್ಪಷ್ಟೀಕರಣ ದೊರೆಯುವುದೆಂದೋ... ದೊರೆತರೂ, ನಾವು ಸ್ಪಷ್ಟೀಕರಣ ಎಂದುಕೊಂಡದ್ದು ನಿಜಕ್ಕೂ ಸ್ಪಷ್ಟವಾಗಿಯೇ ಇರುತ್ತದಾ?

ಅಂಚೆಯವನ ಪ್ರವೇಶ, ನಿರ್ಗಮನ

ಅಂಚೆಯವನು ರಸ್ತೆಯಗುಂಟ ನಡೆದು ಬಂದು, ಗೇಟ್ ತೆರೆದು, ಮನೆಯೊಳಕ್ಕೆ ಪ್ರವೇಶಿಸಿ, ಒಂದು ಪತ್ರವನ್ನು ತೂರಿ, "ಪೋಸ್ಟ್" ಎಂದು ಅರಚಿ, ಗೇಟ್ ತೆರೆದು, ಮುಂದಿನ ಮನೆಯತ್ತ ಹೊರಟುಬಿಟ್ಟ.

ವಿಶ್ವಾಸನ ತಾಯಿಯ ಸ್ವಗತ

ನಾನು ಬರೆದು ಹಾಕಿದ ಪತ್ರ ಈ ವೇಳೆಗೆ ಅವರಿಗೆ ತಲುಪಿರಬಹುದೇ? ನನಗೆ ಕರುಳ ಬೇನೆ ಅಂತ ವಿಶ್ವಾಸ ನಾಲ್ಕಿ ದಿನಗಳ ಹಿಂದೆ ಪತ್ರ ಹಾಕಿದ್ದನಂತೆ. ಪಾಪ ಅವರು ಇನ್ನೆಲ್ಲಿ ಹೆದರಿಬಿಟ್ಟಾರೋ ಅಂತ ನನಗೆ ಭಯವಾಗುತ್ತಾ ಇದೆ. ಹೆಚ್ಚಿನ ನೋವೇನೂ ಇಲ್ಲ, ಚಿಂತೆಗೆ ಕಾರಣವಿಲ್ಲ ಎಂದು ನಾನು ಬರೆಯಲುಪಕ್ರಮಿಸಿದ ಪತ್ರ ಕಡೆಗೆ ಎಲ್ಲಿ ಅಂತ್ಯವಾಯಿತು? ನಲವತ್ತೈದು ಐವತ್ತು ವರ್ಷಗಳ ಹಿಂದೆ ಅವರು ತಮ್ಮ್ ಯೌವನದ ಹುಚ್ಚಿನಲ್ಲಿ ಬರೆದಿದ್ದ ಪತ್ರಕ್ಕೆ ಇಷ್ಟು ಸುದೀರ್ಘಕಾಲದ ನಂತರ ಉತ್ತರಿಸುವ ಅವಶ್ಯಕತೆಯಾದರೂ ಏನಿತ್ತು? ಸುಮ್ಮನೆ ಕರುಳಬೇನೆಯ ಬಗ್ಗೆ ಬರೆದಿದ್ದರಾಗುತ್ತಿರಲಿಲ್ಲವೇ? ನನಗೆಲ್ಲೋ ವೃದ್ಧಾಪ್ಯದ ಭ್ರಾಂತು ಎಂದು ಕೇಳಿದವರೆಂದಾರು. ಅಗ ನಾನು ಇದೇ ವಿಶ್ವಾಸನನ್ನು ಹೊಟ್ಟೆಯಲ್ಲಿ ಹೊತ್ತು ತವರಿಗೆ ಬಂದಿದ್ದೆ. ತಾಯಿಯ ಮನೆಯಲ್ಲಿದ್ದ ಸಂಭ್ರಮದ ವಾತಾವರಣದಲ್ಲಿ ಅವರಿಗನುಭವವಾಗಿದ್ದ ಏಕಾಕಿತನದ ಅನುಭವದರಿವು ನನಗಿರಲಿಲ್ಲ. ಮತ್ತೆ ಆಗ, ಆ ಕಾಲದಲ್ಲಿ ಗಂಡನ ಪತ್ರಕೆ ಉತ್ತರಿಸುವುದೇ? ಆ ಉದ್ಧಟತನದ ಧೈರ್ಯವೂ ನನಗಿರಲಿಲ್ಲ. ಗಂಡನನ್ನು ತಲೆಯೆತ್ತಿ ನೋಡಿ ಮಾತನಾಡಿಸಲೂ ಹೆದರುತ್ತಿದ್ದ ಕಾಲವದು. ಆಗ ನಾನೇನಾದರೂ ಪತ್ರ ಬರೆದಿದ್ದರೆ ಮನೆಯಲ್ಲೆಲ್ಲರೂ ಗೇಲಿ ಮಾಡುವವರೇ. ಅಪ್ಪ ಒಂದಿಷ್ಟು ಬುದ್ಧಿಮಾತನ್ನೂ ಹೇಳುತ್ತಿದ್ದರೇನೋ. ಬಹುಶಃ ಆ ದಿನ ಅವರಿಗಾದ ಏಕಾಕಿತನದ ಅನುಭವ, ಪರಕೀಯತೆಯ ಭಾವನೆ ಇಂದು ನನ್ನದಾಗಿರಬಹುದು.

ನಿನ್ನೆ ಅಂಚೆಗೆ ಹಾಕಿದ ಪತ್ರದ ಬಗ್ಗೆ ಯೋಚಿಸುವುದು ಬಿಟ್ಟು ಕಾಲಮಾನದಲ್ಲಿ ಐವತ್ತು ವರ್ಷ ಹಿಂದಕ್ಕೆ ಹೋದಾಗ ನನಗೆ ಮೈಯಲ್ಲಿ ವಿಚಿತ್ರ ಭಾವನೆಗಳು. ಜಿರಲೆಯೊಂದು ಮೈಯೊಳಗೆ ಸಂಚರಿಸಿದ ಹಾಗೆ ವಿಲಿವಿಲಿ. ಬಹುಶಃ ಮುಖವೂ ಕೆಂಪೇರಿರಬಹುದು. ಸದ್ಯ ಎದುರಿಗೆ ಕನ್ನಡಿಯಿಲ್ಲ. ಆಗ ನಾನು ಪತ್ರ ಬರೆದಿದ್ದರೆ ಅವರನ್ನು ಏನೆಂದ ಸಂಬೊಧಿಸುತ್ತಿದ್ದೆ? ಪ್ರಿಯಾ? ನನ್ನ ದೈವ? ಈ ಜಗತ್ತಿನಲ್ಲಿ ಅತ್ಯಂತ ಪ್ರೀತಿಪಾತ್ರರಾದ ಪತಿದೇವರಿಗೆ..? ಅಥವಾ ಔಪಚಾರಿಕವಾಗಿ ಅವರಿಗೆ ಬರುತ್ತಿದ್ದ ಪತ್ರಗಳಂತೆ, ಅದರ ಒಕ್ಕಣೆಯಂತೆ ಭಾಸ್ಕರರಾಯರೇ ಎಂದೇ? ನಿನ್ನೆ ನಾನು ಪತ್ರ ಬರೆದಾಗ ಆ ಸಮಸ್ಯೆ ಉದ್ಭವವಾಗಲಿಲ್ಲ ಏಕೆ? ಐವತ್ತು ವರ್ಷಗಳಲ್ಲಿ ನಾವು ಅಷ್ಟೊಂದು ಗೆಳೆಯರಾಗಿಬಿಟ್ಟೆವಾ? ಮುಟ್ಟು ನಿಂತ ಮೇಲೆ ಎಂಧ ನಾಚಿಕೆ? ನಿನ್ನೆಯಂತೂ ನೇರವಾಗಿ ಏಕವಚನಕ್ಕಿಳಿದು ಪ್ರಿಯ ಭಾಸ್ಕರ ಎಂದ ಬರೆದದ್ದು ನೋಡಿ ಅವರಿಗೆ ಕೋಪ ಬಂದಿರಬಹುದೇ? ಅಥವಾ ಮುದುಕಿಯಾಗುತ್ತಿದ್ದ ಹಾಗೆ ನಿನ್ನ ತುಂಟಾಟ ಹೆಚ್ಚಾಯಿತು ನೋಡು ಅಂತ ಗೇಲಿ ಮಾಡಬಹುದೇ? ಇಷ್ಟು ದಿನ ಅವರನ್ನು ನೇರವಾಗಿ ಕಣ್ಣೆತ್ತಿಯೂ ನೋಡದ ನಾನು ಈ ಹೊಸ ಸಖ್ಯ ತೋರುವುದರಲ್ಲಿ ಅರ್ಥವೇನು? ಬಹುಶಃ ಎಂದಿಗಿಂತ ಹೆಚ್ಚಾಗಿ ಇಂದು ನಾವಿಬ್ಬರೂ ಒಬ್ಬರಿಗೊಬ್ಬರು ಅವಶ್ಯವಾಗಿದ್ದೇವೆ ಎಂದು ನನಗನ್ನಿಸಿರಬಹುದು. ಅವರಿಗೊ ಹಾಗೇ ಅನ್ನಿಸಿರಬಹುದೇ? ಅಂದಹಾಗೆ ಕಡೆಗೂ ನಿನ್ನೆಯ ಪತ್ರದಲ್ಲಿ ಕರುಳಬೇನೆಯ ಪ್ರಸ್ತಾಪ ಮಾಡಲೇ ಇಲ್ಲವಲ್ಲಾ........

ಪತ್ರದ ಪೂರ್ಣಪಾಠ

ಈ ದಿನ ಲೇಖನಿ ಹಿಡಿದು ಮೇಜಿನ ಮುಂದೆ ಕುಳಿತಾಗ ನನ್ನೆದುರು ನಿಂತದ್ದು ನಿನ್ನದೇ ಚಿತ್ರ. ಅದನ್ನು ನೋಡುತ್ತಿದ್ದ ಹಾಗೇ ನನಗೆ ನನ್ನ ಒಂಟಿತನದ ತೀವ್ರ ಅನುಭವವಾಯಿತು. ನಾನು ಇಲ್ಲಿ... ನೀನು ಅಲ್ಲಿ. ಎಷ್ಟು ದಿನ ಈ ದೂರ? ನನಗಂತೂ ಈ ಒಂಟಿತನ ಬೇಸರ ತಂದುಬಿಟ್ಟಿದೆ. ನಾವಿಬ್ಬರೂ ಒಟ್ಟಿಗೆ ಇರುವ ದಿನಗಳು ದೂರವಿಲ್ಲವೆಂದು ನನಗನ್ನಿಸುತ್ತಿದೆ. ಶುಭಸೂಚಕವೇ?

ಏನೇ ಆಗಲೀ, ಕೆಲದಿನಗಳ ಮಟ್ಟಿಗಾದರೂ ನೀನು ಇಲ್ಲಿಗೆ ಬರಬಹುದಲ್ಲವೇ? ಈಗ ನೀನು ಇಲ್ಲಿಗೆ ಬಂದರೆ ಮುಂದೆ ನಡಯಬೇಕದ್ದನ್ನು ನಾವು ಕೂಡಿಯೇ ಆಲೋಚಿಸಬಹುದು. ಆಗ ನನಗೂ ಸ್ವಲ್ಪ ನೆಮ್ಮದಿ. ಒಂಟಿತನ ಎಂತೆಂಥ ಸಂದರ್ಭದಲ್ಲಿ ಕಾಡುತ್ತದೆಂದು ನನಗೆ ಈಗೀಗ ಅನುಭವವಾಗುತ್ತಿದೆ. ನೀನು ನನ್ನ ಬಳಿ ಇದ್ದಾಗ, ನಾವು ನಿಜಕ್ಕೂ ಮನ ಬಿಚ್ಚಿ ಮಾತನಾಡಿಯೇ ಇರಲಿಲ್ಲ ಅಲ್ಲವೇ? ಬಹುಶಃ ದೂರವಾದಾಗ ಒಬ್ಬರಿಗೊಬ್ಬರ ಅವಶ್ಯಕತೆಯ ಅರಿವಾಗಬಹುದು. ಎಂದಿಗಿಂತ ಹೆಚ್ಚಾಗಿ, ಈಗ ನನಗೆ ನಿನ್ನ ಸಾಮೀಪ್ಯದ ಅವಶ್ಯಕತೆಯಿದೆ.

ಅಂದಹಾಗೆ ನಾನು ಕರೆದೆನೆಂದು ಬರುವ ಆತುರದಲ್ಲಿ ನಿನ್ನ ಆರೋಗ್ಯವನ್ನು ಕಡೆಗಣಿಸಬೇಡ. ಏಕೆಂದರೆ ಈ ಸ್ಥಿತಿಯಲ್ಲಿ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಕಡೆಗೆ ನೀನೊಂದು ಪತ್ರ ಹಾಕಿದರೆ ನಾನೇ ಬಂದರೂ ಬಂದೇನು. ನಿನ್ನಿಂದಬರುವ ಪತ್ರವೇ ನನಗೆ ಸಾಕಷ್ಟು ಸಾಂತ್ವನ ನೀಡುತ್ತದೆ. ನಾನು ನಿನ್ನ ನೆನಪಿನಲ್ಲೇ ಇದ್ದೇನೆ.

ಕುಮುದಾಳ ಪ್ರತಿಕ್ರಿಯೆ...

ಅಂಚೆಯವನು ಹಾಕಿ ಹೋದ ಪತ್ರದ ಒಕ್ಕಣಿಕೆ ನೋಡಿಯೇ ಕುಮುದಾಳಿಗೆ ಒಂದು ರೀತಿಯ ಭೀತಿ ಉಂಟಾಯಿತು. ಲಕೋಟೆಯ ಮೇಲೆ ’ಕುಮುದಾ ಬಾಯಿ’ ಎಂದು ತನ್ನನ್ನು ಗೇಲಿ ಮಾಡಲಿಕ್ಕೆ ಸಿದ್ದಾರ್ಥ ಬರೆದಿರಬಹುದೇ? ತಾನು ಬಹಳ ’ಬಾಯಿ’ ಮಾಡುತ್ತೇನೆಂದು ಅವನು ಆಗಾಗ ಹೇಳುತ್ತಿದ್ದುದುಂಟು. ಅಥವಾ ತನ್ನ ಮನೆಯವರಿಗೆ ತಿಳಿಯದಿರಲೆಂದು ಹೀಗ ಆಟ ಆಡಿರಬಹುದು. ಸಾಲದ್ದಕ್ಕೆ ಕೈ ಬರಹವನ್ನೂ ಬೇಕೆಂದೆ ಬದಲಿಸಿ ಬರೆದಂತಿದೆ. ಕುಮುದಾ ತನ್ನಲ್ಲೇ ’ಛೀ ತುಂಟ’ ಎಂದು ನಗುತ್ತಲೇ ಬೈದು ಪತ್ರವನ್ನು ಎದೆಗವಚಿಕೊಂಡಳು. ಲಲ್ಲೊ ಅಲ್ಲಿ ಉಳಿಯಲು ಇದು ಸರಿಯಾದ ಸಮಯವಲ್ಲವೆಂದು ಭಾವಿಸಿ ಹೊರಟುಬಿಟ್ಟಳು.

ಕುಮುದಾ ನಂತರ ಏಕಾಂತದಲ್ಲಿ ಪತ್ರವನ್ನೊಡೆದಳು. ಮುಖ ಕೆಂಪೇರಿತು. ಪತ್ರದಲ್ಲಿ ಬರೆದಿರುವುದು ಯಾವುದೂ ಸ್ಪಷ್ಟವಾಗಿಲ್ಲವಾದರೂ ಎಲ್ಲವೂ ಸುಸ್ಪಷ್ಟ. ಹಾಗಾದರೆ ಈಗೆ ಸಿದ್ಧಾರ್ಥನ ಬಳಿ ಹೋಗಬೇಕೇ? ಹೇಗೆ ಹೋಗುವುದು? ಮನೆಯಲ್ಲಿ ಏನು ಹೇಳಲಿ? ಅಥವಾ ಸಿದ್ಧಾರ್ಥನಿಗೇ ಒಂದು ಪತ್ರ ಬರೆದು ಸುಮ್ಮನಾದರೆ? ಇಲ್ಲವೇ ನೇರ ಅಪ್ಪನ ಬಳಿಗೆ ಹೋಗಿ ಇದು ಹೀಗೆ, ಹೀಗೆಲ್ಲಾ ಆಗಿದೆ, ಈಗ ಸಿದ್ದಾರ್ಥ ಕರೆದಿದ್ದಾನೆ. ಹೋಗಬೇಕು. ಎಂದು ಸ್ಪಷ್ಟವಾಗಿ ಹೇಳಿಬಿಟ್ಟರೆ?

ಅಥವಾ ಏನಾದರೂ ಸುಳ್ಳು ನೆಪ ಒಡ್ಡಿ ಸಿದ್ದಾರ್ಥನಲ್ಲಿಗೆ ಹೋಗುವದೇ? ಮಂಗಳೂರೆಂದರೆ ಸಾಮಾನ್ಯವೇನು? ಒಂದು ರಾತ್ರಿಯ ಪ್ರಯಾಣ. ಇಲ್ಲೇ ಮೈಸೂರಾಗಿದ್ದರೆ ಮುಂಜಾನೆ ಹೋಗಿ ಸಂಜೆಗೆ ಹಿಂದಿರುಗಬಹುದಿತ್ತು.

ಪ್ರೀತಿಸುವುದರಲ್ಲಿನ ಅನೇಕ ರೋಮಾಂಚನಗಳಲ್ಲಿ ಇಂಥದೂ ಒಂದು ಇರಬಹುದೆಂದು ಅವಳಿಗೆ ತಿಳಿದಿರಲಿಲ್ಲ. ಈಗ ಅಪ್ಪನೆದುರು ಸತ್ಯ ಹೇಳಿದರೆ ಅದರ ಪರಿಣಾಮ ಅರಿತವರ್ಯಾರು? ಅಪ್ಪ ಬೇಡವೆಂದು ಹಠ ಮಾಡಿದರೆ ಆದಿಯಲ್ಲಿಯೇ ಕೊಡಲಿಯೇಟು. ಜೊತೆಗೆ ಅಲಿ ಹೋಗಿ ಎಲ್ಲವನ್ನೂ ಸುಸ್ಪಷ್ಟ ಮಾತನಾಡಿ ಸಾಧ್ಯವಾದರೆ ಸಿದ್ಧಾರ್ಥನನೂ ಕರೆತಂದರೆ ನಂತರ ಅಪ್ಪನೂ ಒಪ್ಪಬಹುದು. ಈಗ ’ನಾನು ಪ್ರೀತಿಸಿದ ಹುಡುಗನೊಂದಿಗೆ ಮದುವ ಇತ್ಯರ್ಥ ಮಾಡಿಕೊಂಡು ಬರಲು ಎರಡು ದಿನ ಮಂಗಳೂರಿಗೆ ಹೋಗುತ್ತೇನೆ’ ಎಂದರೆ ಯಾವ ಮರ್ಯಾದಸ್ಥ ಅಪ್ಪ ತಾನೇ ಒಪ್ಪುತ್ತಾನೆ? ಏನಾದರೊಂದು ಕಾರಣ ಹೇಳಿ ಕದ್ದು ಹೊರಡುವುದೇ ಒಳ್ಳೆಯದು. ಹೇಗೂ ಥೀಸಿಸ್‍ಗಾಗಿ ಮಾಹಿತಿ ಸಂಗ್ರಹಣೆಗೆ ಹೊರಡಬೇಕಿತ್ತು. ಮೊದಲು ಮಂಗಳೂರಿಗೇ ಹೊರಟರಾಯಿತು.

ಕುಮುದಾ ಹೀಗೆ ಆಲೋಚಿಸುತ್ತಿದ್ದಂತೆ, ತನ್ನ ಮಾರನೆಯ ದಿನದ ಪ್ರಯಾಣಕ್ಕಾಗಿ ಮಾನಸಿಕ ತ್ಯಾರಿಯನ್ನೂ ನಡೆಸತೊಡಗಿದ್ದಳು.

ಭಾಸ್ಕರರಾಯರ ಪ್ರತಿಕ್ರಿಯೆ

ಅಂಚೆಯವನು ಹಾಕಿಹೋದ ಪತ್ರದ ಒಕ್ಕಣಿಗೆ ನೋಡಿಯೇ ಭಾಸರರಾಯರಿಗೆ ಒಂದು ರೀತಿಯ ಆನಂದ ಉಂಟಾಯಿತು. ಇಷ್ಟು ಕಾಲಕ್ಕೆ ತಮ್ಮ ಹೆಂಡತಿಯಿಂದ ಅವರಿಗೊಂದು ಪತ್ರ ಬಂದಿತ್ತು. ಭಾಸ್ಕರರಾಯರಿಗೆ ತಕ್ಷಣ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಪತ್ರ ಬಂದ ಖುಷಿಯಿಂದ ಚೇತರಿಸಿಕೊಳ್ಳಲು ಅವರಿಗೆ ಕೆಲ ಕ್ಷಣಗಳೇ ಹಿಡಿದುವು. ಆಸ್ತಿಯನ್ನಲ್ಲದೇ ತಂದೆತಾಯಿಗಳನ್ನೂ ಹಂಚಿಕೊಂಡ ತಮ್ಮ ಮಕ್ಕಳಿಗೇನನ್ನಬೇಕು? ಒಂದು ದೃಷ್ಟಿಯಿಂದ ಅವರು ಮಾಡುತ್ತಿರುವುದೂ ಸರಿಯಿರಬಹುದು. ಈ ದುಬಾರಿ ಯುಗದಲ್ಲಿ, ಅದರಲ್ಲೂ, ಇಬ್ಬರೂ ಔಷಧಿ ತಿಂದೇ ಜೀವಿಸುವ ವಯಸ್ಸು ಮುಟ್ಟಿದಾಗ, ಇಬ್ಬರನ್ನೂ ಒಬ್ಬನೇ ನೋಡಿಕೊಳ್ಳುವುದೆಂದರೆ ಕಷ್ಟದ ವಿಷಯವೇ. ಆದರೂ ಈ ಬಾರಿ ಅವಕಾಶವಾದಾಗ ಮಹೇಶಚಂದ್ರನಿಗೆ ಹೇಳಿಯೇ ಬಿಡಬೇಕು -- ಇಬ್ಬರೂ ಒಂದೇ ಮನೆಯಲ್ಲೇ ಇರುತ್ತೇವೆಂದು. ಜೀವನ ಪೂರ್ತಿ ಜತೆಜತೆಯಾಗಿದ್ದವರಿಗೆ ಈ ಅಕಾಲ ವಿರಹ ಸಹನೀಯವಾಗುವುದಾದರೂ ಹೇಗೆ? ಭಾಸ್ಕರರಾಯರು ಪತ್ರವನ್ನೊಡೆದು ನೋಡಿದರು. ಪರವಾಗಿಲ್ಲವೇ ಇವಳೂ ಇಷ್ಟು ಧೈರ್ಯ ತಂದುಕೊಂಡು ಪತ್ರ ಬರೆದಿದ್ದಾಳೆ. ಅವಳ ಆರೋಗ್ಯದ ಬಗ್ಗೆ ಬರೆಯುವುದಿರಲಿ, ನನ್ನ ಆರೋಗ್ಯದ ಕಾಳಜಿ ವಹಿಸಿದ್ದಾಳೆ! ಬಾಳಿನ ಈ ಘಟ್ಟದಲ್ಲಿ ಫಾರ್ಮಲ್ ಆಗಿರಬೇಕಾದ ಅವಶ್ಯಕತೆಯೂ ಇಲ್ಲ. ಭಾಸ್ಕರರಾಯರಿಗೆ ಈಗ ನಿಜವಾಗಿಯೂ, ಇವಳು ತಮ್ಮ ಸಮಾನ ಮನೋಧರ್ಮದ ಪತ್ನಿ-ಗೆಳತಿ ಎನ್ನಿಸಿತು. ಹೊಸು ಹುಡುಗಿಯನ್ನು ಪ್ರೀತಿಸುವ ಹುರುಪು ಅವರನ್ನು ತುಂಬಿಕೊಂಡಿತು. ಅವರಿಗೆ ಕೂಡಲೇ ತಮ್ಮ ಹೆಂಡತಿಯನ್ನು ಕಂಡು ಬಿಗಿಯಾಗಿ ಅಪ್ಪಿಕೊಳ್ಳಬೇಕೆಂಬ ಬಯಕೆ ಉಂಟಾಯಿತು. ಎಪ್ಪತ್ತರ ವಯಸ್ಸಿನಲ್ಲಿ ತಮ್ಮ ಅಪ್ಪುಗೆಗೆ ಸಿಕ್ಕುವುದು ಅವಳೊಬ್ಬಳೇ ಅಲ್ಲವೇ? ಮಗನನ್ನು ಹೇಗಾದರೂ ಒಪ್ಪಿಸಿ ಬೆಂಗಳೂರಿಗೆ ಹೊರಟುಬಿಡಬೇಕೆಂದು ರಾಯರು ನಿಶ್ಚಯಿಸಿದರು.

ರಾಯರು ಹೀಗೆ ಆಲೋಚಿಸುತ್ತಿದ್ದಂತೆ, ತಮ್ಮ್ ಮಾರನೆಯ ದಿನದ ಪ್ರಯಾಣಕ್ಕಾಗಿ ಮಾನಸಿಕ ತಯಾರಿಯನ್ನೂ ನಡೆಸತೊಡಗಿದ್ದರು.

ಪತ್ರಿಕಾ ವರದಿ

ಹಾಸನ, ಏಪ್ರಿಲ್ ೦೧
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತ್ತಿದ್ದ ರಾಜ್ಯ ಸಾರಿಗೆ ಬಸ್ಸೊಂದು ಈ ದಿನ ಅಪಘಾತಕ್ಕೀಡಾಯಿತು. ಹಾಸನದಿಂದ ೨೫ ಕಿಲೋಮೀಟರ್ ದೂರದಲ್ಲಿ ಸಂಚರಿಸುತ್ತಿದ್ದಾಗ ಬಸ್ಸು ಕಣಿವೆಯೊಂದರೊಳಕ್ಕೆ ಧುಮುಕಿದ್ದರಿಂದ ಈ ಅಪಘಾತ ಸಂಭವಿಸಿದೆಯೆಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಹಲವರಿಗೆ ತೀವ್ರ ಗಾಯಕಳುಂಟಾಗಿವೆ. ಒಬ್ಬ ಮಹಿಳೆ ಮೃತಳಾಗಿದ್ದಾಳೆಂದು ವರ್ದಿಯಾಗಿದೆ. ಬಸ್ಸಿನ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. ತನಿಖೆ ನಡೆದಿದೆ.

ಹದಿನೆಂಟನೆಯ ಮುಖ್ಯರಸ್ತೆ

ಹದಿನೆಂಟನೆಯ ಮುಖ್ಯರಸ್ತೆಯ ಹದಿನಾರನೆಯ ನಂಬರ್ ಮನೆಯೊಳಕ್ಕೆ ಭಾಸ್ಕರರಾಯರು ಹೊಸ ಹುರುಪಿನಿಂದ ಪ್ರವೇಶಿಸಿದರು. ಅಲ್ಲಿ ವಾಸವಾಗಿದ್ದ ತಮ್ಮ ಹೆಂಡತಿ ಕುಮುದಾಬಾಯಿಯನ್ನು ಕೂಡಿಕೊಂಡರು. ಈಗ ಅವರಿಬ್ಬರೂ ಒಂದೇ ಮನೆಯಲ್ಲಿರುವುದೆಂದು ನಿರ್ಧರಿಸಿದ್ದಾರೆ. ಬಹುಶಃ ಆರಾರು ತಿಂತಳು ಒಬ್ಬೊಬ್ಬ ಮನಗಮನೆಯನ್ನಿ ಕಳೆಯುವುದೆಂದು ಒಪ್ಪಂದ ಮಾಡಿಕೊಂಡಿರಬಹುದು. ತಮ್ಮ ಪೆನ್ಷನ್ ನಲ್ಲಿ ಪ್ರತ್ಯೇಕ ಮನೆಯನ್ನೂ ಮಾಡಿ ಬದುಕುವ ಲೆಕ್ಕಚಾರವನ್ನೂ ಹಾಕಿರುವ ಭಾಸ್ಕರರಾಯರು, ಆ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲವೆನ್ನಿಸುತ್ತದೆ, ಜನರ ನಡುವೆ ಏಕಾಂಗಿಗಳಾಗಿ ಬದುಕುವುದಕ್ಕಿಂತ, ಏಕಾಂತದಲ್ಲಿ ಹೀಗೆ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವದೇ ವಾಸಿ ಎಂದೂ ಅವರಿಬ್ಬರೂ ಭಾವಿಸಿರಬಹುದು.

ಒಂದಿಷ್ಟು ಟಿಪ್ಪಣಿಗಳು

ಒಂದಿಷ್ಟು ಚೂರುಚೂರು ಚಿತ್ರಗಳನ್ನು ಕೊಟ್ಟು, ನನ್ನ ಬರಹವನ್ನು ಮುಗಿಸುತ್ತಿದ್ದೇನೆ. ಇದು ನಿಜಕ್ಕೂ ಇಲ್ಲಿಗೇ ಅಂತ್ಯಗೊಳ್ಳುತ್ತದೆಯೇ? ಮುಂದೆ ಬದುಕಿದ್ದವರೆಲ್ಲಾ ಸುಖವಾಗಿ ಬಾಳೀದರೇ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಬೇಕಾಗಿದೆ. ಈ ರೀತಿಯ ನಿರೂಪಣೆಯನ್ನು ಮುಗಿಸುವುದು ಸ್ವಲ್ಪ ಕಷ್ಟದ ವಿಷಯವೇ ಸರಿ. ನಿರಂತರ ನಡೆವ ಮಾನವ ವ್ಯಾಪಾರಗಳನ್ನು ಅದರ ಪರಿಪೂರ್ಣತೆಯಲ್ಲಿ ಅರ್ಥಮಾಡಿಕೊಳ್ಳಲು ಯಾರಿಗಾದರೂ ಸಾಧ್ಯವಿದೆಯೇ? ಹೀಗಿರುವಾಗ ತೀರ್ಮಾನಗಳನ್ನು ಕೊಡುವುದೂ ಒಂದು ನಿರ್ದಿಷ್ಟ ಸ್ಪಷ್ಟ ಅಂತ್ಯ ಸೂಚಿಸುವುದೂ ಕಷ್ಟದ ಕೆಲಸ. ಬದಲಿಗೆ ಗ್ರಹಿಕೆಗಳನ್ನು ಅದರ ಎಲ್ಲ ಪ್ರಶ್ನೆಗಳೊಂದಿಗೆ ನೇರವಾಗಿ ಬರೆದರೆ, ಆ ಪ್ರಶ್ನೆಗಳನ್ನು ಪುನರುಚ್ಚರಿಸಿದರೆ, ಜೀವನವನ್ನು ಅರ್ಥೈಸುವತ್ತ ಕೆಲ ದಿಕ್ಸೂಚಿಗಳು ಕಾಣಬಹುದು. ಈ ಎಲ್ಲ ಪ್ರಶ್ನೆಗಳ, ದ್ವಂದ್ವಗಳ ನಡುವೆ ಉತ್ತರ ಸಿಕ್ಕದ, ಬೃಹದಾಕಾರವಾಗಿ ನಿಂತಿರುವ ಪ್ರಶ್ನೆಯೆಂದರೆ ನಿಜಕ್ಕೂ ಆದಿನ

ಭಾಸ್ಕರರಾಯರು ಬರೆದದ್ದೇನು?