Saturday, June 28, 2008

ಶೋಧನೆ



ಸಿದ್ದಾರ್ಥ ಮತ್ತೊಮ್ಮೆ ಕಣ್ಣುಜ್ಜಿ ನೋಡಿದ. ಹೌದು. ಅನುಮಾನವೇ ಇಲ್ಲ. ಇದು ತನ್ನದೇ ಹೆಸರು. ಓದುತ್ತಿದ್ದ ಪತ್ರಿಕೆಯನ್ನು ಮತ್ತೊಮ್ಮೆ ಕಣ್ಣಿನ ಬಳಿ ಎಳೆದುಕೊಂಡು ಖಾತರಿ ಮಾಡಿಕೊಂಡ. ತನ್ನ ಪ್ರಿಯ ಪತ್ರಿಕೆಯಾದ ಸಿಂಚನಕ್ಕೆ ಅವನು ಆಗಾಗ ಕಥೆಗಳನ್ನು ಕಳುಹಿಸುತ್ತಿದ್ದುದುಂಟು. ಆದರೆ ಈಗ್ಗೆ ಸುಮಾರು ಆರು ತಿಂಗಳುಗಳಿಂದ ತಾನು ಏನನ್ನೂ ಬರೆದದ್ದೇ ಇಲ್ಲ. ಡಾಕ್ಟರೇಟಿಗಾಗಿ ಥೀಸೀಸ್ ತಯಾರಿಸುವಲ್ಲಿ ನಿರತನಾಗಿರುವವನಿಗೆ ಕಥೆಗಳ ಬಗ್ಗೆ ಆಲೋಚಿಸಲೂ ಸಮಯವಿರಲಿಲ್ಲ. ಅದೂ ಅಲ್ಲದೇ ತನ್ನ ಪೂರ್ವ ಸ್ವೀಕೃತ ಕಥೆಗಳೆಲ್ಲಾ ಈಗಾಗಲೇ ಪ್ರಕಟವಾಗಿ ಸಂಪಾದಕರಲ್ಲಿ ಏನೂ ಉಳಿದಿಲ್ಲ. ಆದರೆ ಇದೇನು? ತನ್ನ ಹೆಸರಿನಲ್ಲಿ ಬಂದಿರುವ ಕಥೆ? ಅವನಿಗೆ ಆಸಕ್ತಿ ಕೆರಳಿತು. ಓದತೊಡಗಿದ. ’ಆತ್ಮಕಥೆ’ ಎಂಬ ಶೀರ್ಷಿಕೆ ಹೊತ್ತ ಆ ಕಥೆ ಅವನಿಗೆ ಬಲು ಪರಿಚಿತವೆನ್ನಿಸಿತು. ಆದರೂ ತನಗೆ ಚೆನ್ನಾಗಿ ನೆನಪಿದೆ. ಈ ಕಥೆಯನ್ನು ತಾನೆಂದೂ ಬರೆದದ್ದಿಲ್ಲ. ಬಹುಶಃ ತನ್ನ ಹೆಸರಿನ ಬೇರೆ ಯಾರೋ ಲೇಖಕನಿರಬಹುದೆಂದುಕೊಂಡು ಸುಮ್ಮನಾದ. ಇದರಬಗ್ಗೆ ಹೆಚ್ಚು ತಲೆಬಿಸಿಮಾಡಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡ ಸಿದ್ದಾರ್ಥನಿಗೆ ಅದು ಸಾಧ್ಯವಾದದ್ದು ಒಂದು ತಿಂಗಳ ಕಾಲ ಮಾತ್ರ.

ಸಿಂಚನದ ಮುಂದಿನ ತಿಂಗಳ ಪ್ರತಿ ಮನೆಯಲ್ಲಿ ಬಿದ್ದಾಗ ಪತ್ರಿಕೆ ತಿರುವುತ್ತಿದ್ದವನಿಗೆ ಇದ್ದಕ್ಕಿದ್ದಂತೆ "ಆತ್ಮಕಥೆ"ಯ ನೆನಪು ಬಂತು. ಅದರ ಬಗ್ಗೆ ಓದುಗರ ಓಲೆಗಳೇನಾದರೂ ಇರಬಹುದೋ ಎಂದು ಆಸಕ್ತಿಯಿಂದ ಆ ಅಂಕಣದತ್ತ ಕಣ್ಣು ಹಾಯಿಸಿದ.

"ಆತ್ಮಕಥೆ"ಯ ಬಗ್ಗೆ ಒಂದೇ ಒಂದು ಪತ್ರ ಬಂದಿತ್ತು. ಆತ್ಮಕಥೆ ೧೯೫೦ರಷ್ಟು ಹಿಂದೆಯೇ ಯಾವುದೋ ಪತ್ರಿಕೆಯಲ್ಲಿ ’ಗೌತಮ’ ಎಂಬ ಲೇಖಕರ ಹೆಸರಿನಡಿಯಲ್ಲಿ ಪ್ರಕಟವಾಗಿರುವುದಾಗಿಯೂ, ತಮ್ಮ ಅಭಿಮಾನದ ಖ್ಯಾತ ಲೇಖಕ ಸಿದ್ದಾರ್ಥ ಕೃತಿಚೌರ್ಯ ಮಾಡಿರುವುದು ನೋವನ್ನುಂಟುಮಾಡುವ ವಿಷಯವೆಂದು ಓದುಗ ಮಹಾಶಯನೊಬ್ಬ ಕಳಕಳಿಯಿಂದ ಬರೆದಿದ್ದ. ಕೆಳಗೆ ಸಂಪಾದಕರ ಟಿಪ್ಪಣಿ ಇರಬಹುದೇ ಎಂದು ನೋಡಿದ. ಅಂಥದ್ದೇನೂ ಕಂಡುಬರಲಿಲ್ಲ.

ಸಿದ್ದಾರ್ಥ ಮತ್ತೊಮ್ಮೆ ಯೋಚನೆಗೀಡಾದ. ತನ್ನ ಹೆಸರು ಸ್ವಲ್ಪ ವಿರಳವಾದದ್ದೇ. ಅದೂ ಅಲ್ಲದೇ ಅಭಿಮಾನದ ಖ್ಯಾತ ಲೇಖಕ ಎಂದಿದ್ದಾರೆ. ತನಗೆ ತಿಳಿದಿರುವಂತೆ, ಅಭಿಮಾನ, ಖ್ಯಾತಿಯ ಮಜಲಿನಲ್ಲಿರುವ ’ಸಿದ್ದಾರ್ಥ’ ತಾನೊಬ್ಬನೇ. ತನ್ನ ಹೆಸರು ಸತ್ಯನಾರಾಯಣನಂತೆ ಸಾಮಾನ್ಯದ್ದಲ್ಲ. ಇದು ತನ್ನ ಕುರಿತು ಬರೆದಿರುವ ಪತ್ರವೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕೆಳಗೆ ಸಂಪಾದಕರೇಕೆ ಒಂದು ಟಿಪ್ಪಣಿ ಹಾಕಲಿಲ್ಲ? ತಾನಂತೂ ಈ ಕಥೆಯನ್ನು ಅವರಿಗೆ ಕಳುಹಿಸಿರಲಿಲ್ಲ. ಆದರೂ ಖಾತರಿ ಮಾಡಿಕೊಳ್ಳಲು ತನ್ನ ಡೈರಿಯನ್ನೂ, ಫೈಲನ್ನೂ ಒಮ್ಮೆ ತಿರುವಿಹಾಕಿದ. ಇಲ್ಲ. ಈ ಕಥೆ ತಾನು ಕಳುಹಿಸಿದ ದಾಖಲೆ ಇಲ್ಲವೇ‌ಇಲ್ಲ. ಮತ್ತೆ?.... ಸಂಪಾದಕರಿಗೊಂದು ವಿವರಣಾ ಪತ್ರ ಬರೆದು ಸುಮ್ಮನಾಗುವುದು ಅಂದುಕೊಂಡ. ಹಾಗೆಂದೇ ಪತ್ರ ಬರೆದು ಅಂಚೆಗೆ ಹಾಕಿದ. ಪತ್ರ ಹೀಗಿತ್ತು:

"ಜೂನ್ ತಿಂಗಳ ಸಿಂಚನದಲ್ಲಿ ’ಸಿದ್ದಾರ್ಥ’ ಹೆಸರಿನಡಿಯಲ್ಲಿ ಬಂದ ’ಆತ್ಮಕಥೆ’ ಓದಿ ನನಗೆ ಸಾಕಷ್ಟು ಗೊಂದಲವಾಯಿತು. ಜುಲೈ ಸಂಚಿಕೆಯಲ್ಲಿ ಬಂದ ಶ್ರೀಕೃಷ್ಣಕ್ಯಾತನಹಳ್ಳಿ ಅವರ ಪತ್ರ ನೋಡಿ ಆಶ್ಚರ್ಯವೂ ಆಯಿತು. ಈ ಕಥೆಯ ಲೇಖಕರೆನ್ನಲಾದ ಸಿದ್ಧಾರ್ಥರಿಗೂ ನನಗೂ ಏನೂ ಸಂಬಂಧವಿಲ್ಲ. ಇತ್ತೀಚೆಗೆ, ಸುಮಾರು ಆರು ತಿಂಗಳುಗಳಿಂದ ನನ್ನ ಸಂಶೋಧನಾ ಥೀಸೀಸ್‍ನ ತಯಾರಿಯಲ್ಲಿ ನಾನು ನಿರತನಾಗಿರುವುದರಿಂದ ನನಗೆ ಬರೆಯಲು ಸಮಯವೇ ಆಗಿಲ್ಲ. ಈ ಕಥೆಯನ್ನು ನಾನು ಕಳುಹಿಸಿರಬಹುದೆಂದು ಶ್ರೀಕೃಷ್ಣರೊಡಗೂಡಿ ಅನೇಕರು ಭಾವಿಸಿರಬಹುದಾದ್ದರಿಂದ ಈ ಸ್ಪಷ್ಟೀಕರಣ ನೀಡಬಯಸುತ್ತೇನೆ."

ಸಿದ್ದಾರ್ಥನ ತಲೆಯಮೇಲೆ ಒಂದು ಅನಿರೀಕ್ಷಿತ ಸಿಡಿಲೆರಗಿತ್ತು. ಆ ಸಮಸ್ಯೆ ಬಗೆಹರಿಯಿತೆಂಬ ಸಮಾಧಾನ ಪಡೆವ ಆಲೋಚನೆಯಲ್ಲೇ ಆ ಪತ್ರವನ್ನು ಅಂಚೆಗೆ ಹಾಕಿದ್ದದ್ದು. ಆದರೂ ಸಿದ್ದಾರ್ಥನಿಗೆ ಯೋಚನೆಗಳು ಕಾಡುತ್ತಲೇ ಇದ್ದುವು. ಇದೇನಿದು? ಯಾರು ಹೀಗೆ ಬರೆದದ್ದು? ತನ್ನ ಹೆಸರಿಗೆ ಕಳಂಕ ತರಬೇಕೆಂದು ದುರುದ್ದೇಶಪೂರಿತವಾಗಿಯೇ ಹೀಗೆ ಮಾಡಿದ್ದಾರೆಯೇ? ಏನು ವಿಷಯ? ಹೀಗೆ ಇದೇ ಗುಂಗಿನಲ್ಲಿದ್ದ ಸಿದ್ದಾರ್ಥನಿಗೆ ಎರಡು ದಿನಗಳ ನಂತರ ’ಸಿಂಚನ’ದ ಸಂಪಾದಕರಿಂದ ಫೋನ್ ಕರೆ ಅನಿರೀಕ್ಷಿತವಾಗಿ ಬಂತು.

’ಸಿದ್ದಾರ್ಥ, ನಿಮ್ಮ ಪತ್ರ ಬಂದಿದೆ. ಕಥೆಯನ್ನು ನೀವು ಕಳಿಸಲಿಲ್ಲವಾ?’

’ಛೇ ಇಲ್ಲವಲ್ಲ. ನಾನು ಬಹಳ ಬಿಜಿಯಾಗಿದ್ದೇನೆ. ಕಥೆ ಬರೆಯೋಕ್ಕೆ ಟೈಮೇ ಇಲ್ಲ.’

’ಆದರೆ ಕಥೆಯ ಜೊತೆ ಬಂದಿರೋ ವಿಳಾಸ ಮಾತ್ರ ನಿಮ್ಮದೇ ಇದೆಯಲ್ಲಾ? ಒಮ್ಮೆ ಆಫೀಸಿನ ಕಡೆ ಬರುತ್ತೀರಾ?’

’ಏನು? ನನ್ನ ವಿಳಾಸವಾ? ಅದು ಹೇಗೆ? ಸರಿ, ತಕ್ಷಣ ಹೊರಟು ಬಂದುಬಿಡುತ್ತೇನೆ. ಇನ್ನು ಅರ್ಧ ಘಂಟೇಲಿ ಅಲ್ಲಿರುತ್ತೇನೆ.’

ಸಿದ್ದಾರ್ಥನಿಗೆ ಈಗ ಯೋಚನೆಗೀಡಾಯಿತು. ತನ್ನ ವಿಳಾಸ ಅಲ್ಲಿರಲು ಸಾಧ್ಯವೇ ಇದ್ದಿಲ್ಲ. ಇದೊಳ್ಳೇ ಫಜೀತಿಯಾಯಿತು. ಏನೂ ಮಾಡದೆಯೇ ಇರುವ ತನಗೆ ಏಕೆ ಈ ಆರೋಪದ ಕೂಪ? ಯೋಚಿಸುತ್ತಲೇ ತನ್ನ ಚೇತಕ್‍ನ ಕಿಕ್ ಒದ್ದ. ಎಷ್ಟು ಪ್ರಯತ್ನಿಸಿದರೂ ಸ್ಕೂಟರ್ ಚಾಲೂ ಆಗಲೇ ಇಲ್ಲ. ’ಥುತ್ತೇರಿ’ ಎಂದು ಗೊಣಗಿಕೊಳ್ಳುತ್ತಾ ಸಿಂಚನದ ಕಛೇರಿಗೆ ಆಟೋ ಹತ್ತಿ ಹೋದ.

ಕಛೇರಿಯ ರಿಸೆಪ್ಷನ್‍ನಲ್ಲಿ ನಿಂತಿದ್ದ ಬಾಲೆ ಒಳಕ್ಕೆ ಬಿಡಲಿಲ್ಲ. ಸಂಪಾದಕರೇ ಫೋನ್ ಮಾಡಿದ್ದಾರೆ, ಅರ್ಜೆಂಟ್ ವಿಷಯ ಎಂದು ಹೇಳಿದರೂ ಕೇಳದೇ ಅವರಿಗೆ ಫೋನ್ ಹಚ್ಚಿ ಅವರ ಪರವಾನಗಿ ಪಡೆದೇ ಕಳುಹಿಸಿಕೊಟ್ಟಳು. ’ಹೊಸಾ ಬಿಲ್ಡಿಂಗ್, ಎರಡನೇ ಮಹಡಿ’ ಎಂದು ದಾರಿ ತೋರಿಸಲು ಪ್ರಯತ್ನಿಸಿದವಳನ್ನು ಸಿದ್ದಾರ್ಥ ದುರುಗುಟ್ಟಿನೋಡಿ ’ಗೊತ್ತಮ್ಮಣ್ಣೀ, ಈ ಕಾರ್ಯಾಲಯಕ್ಕೆ ನಾನೇನೂ ಹೊಸಬನಲ್ಲ’ ಎಂದು ಕೊಂಕು ನುಡಿದೇ ಸಂಪಾದಕರ ಕೋಣೆಯತ್ತ ಧಾವಿಸಿದ.

ಸಿದ್ದಾರ್ಥ ಕಣ್ಣಗಲಿಸಿ ನೋಡಿದ. ತಾನು ಉಪಯೋಗಿಸುವ ನಸುನೀಲಿ ಬಣ್ಣದ ಮ್ಯಾನಿಫೋಲ್ಡ್ ಕಾಗದ. ಮೇಲೆ ಅಂದವಾಗಿ ರಾಯಲ್‍ಬ್ಲೂನಲ್ಲಿ ಮುದ್ರಿಸಿದ್ದ ತನ್ನ ಹೆಸರು. ಹೌದು ಇದು ತಾನು ಬಳಸುವ ಕಾಗದವೇ ಎನ್ನುವುದರಲ್ಲಿ ಸಂಶಯವಿರಲಿಲ್ಲ. ಈ ಕಾಗದವನ್ನು ತಾನು ಕಥೆಬರೆಯಲು ಮಾತ್ರ ಉಪಯೋಗಿಸುತ್ತಿದ್ದ. ಆದರೆ ಇಲ್ಲಿ ಕಥೆಯನ್ನು ಚಿತ್ತಿಲ್ಲದೇ ಟೈಪ್ ಮಾಡಲಾಗಿತ್ತು. ತಾನು ಅಂದವಾಗಿ ಕೈಯಲ್ಲಿ ಕಥೆ ಬರೆಯುವವ. ಕಥೆಯ ಅಂತ್ಯದಲ್ಲಿ ತನ್ನದೇ ವಿಳಾಸ.

ಸಂಪಾದಕರೊಂದಿಗೆ ಸಿದ್ದಾರ್ಥ ಆ ಕಥೆಯ ಬಗ್ಗೆ ಮಾತನಾಡಿದ. ಇವನು ಸಾಮಾನ್ಯವಾಗಿ ಬರೆಯುತ್ತಿದ್ದ ಕವರಿಂಗ್ ಲೆಟರ್ ಇರಲಿಲ್ಲ. ಅದು ತನ್ನದೇ ಕಥೆಯೆಂದು ಧೃಡೀಕರಿಸಲು ಯಾವ ಭಾಗದಲ್ಲೂ ಅವನ ಸಹಿ ಇರಲಿಲ್ಲ. ಗಡಿಬಿಡಿಯಲ್ಲಿ ಯಾರಿಗಾದರೂ ಹೇಳಿ ಅಂಚೆಗೆ ಹಾಕಿಸಿರಬಹುದೆಂದು ಭಾವಿಸಿ ಸಂಪಾದಕರು ಅದನ್ನು ಮುದ್ರಿಸಿದ್ದರಂತೆ. ಸಿದ್ದಾರ್ಥನಿಗೆ ಸ್ವೀಕೃತಿ ಪತ್ರ ಕಳುಹಿಸಿದ ದಾಖಲೆ ಅವರಲ್ಲಿತ್ತು. ಆದರೆ ಅದು ಸಿದ್ದಾರ್ಥನಿಗೆ ತಲುಪಿಯೇ ಇರಲಿಲ್ಲ.

ಸಿದ್ದಾರ್ಥನಿಗೆ ಏನು ಮಾಡಬೇಕೋ ತೋರಲಿಲ್ಲ. ಸಂಪಾದಕ ತರಿಸಿದ ಟೀ ಹೀರಿ ಸಿಗರೇಟು ಹಚ್ಚಿದ. ಅವನಿಗೆ ಇದು ಯಾವುದೋ ಸಂಚಿನಂತೆ ಅನ್ನಿಸಿತು. ಅವನ ಹೆಸರು ಸ್ಥಿರವಾಗಿ ಎಲ್ಲ ಕಥೆಗಳೂ ಹೆಚ್ಚೂಕಮ್ಮಿ ಸ್ವೀಕೃತವಾಗುವ ಹಂತ ತಲುಪಿದ್ದರಿಂದ ಅವನು ಈಚೆಗೆ ಸ್ವ-ವಿಳಾಸದ ಲಕೋಟೆಗಳನ್ನು ಕಳುಹಿಸುವುದನ್ನ ನಿಲ್ಲಿಸಿದ್ದ. ಈ ಕಥೆಯೊಂದಿಗೂ ಅಂಥ ಲಕೋಟೆಯಿರಲಿಲ್ಲ. ಕಥೆ ಇಟ್ಟು ಕಳುಹಿಸಿದ್ದ ಲಕೋಟೆ ಸಂಪಾದಕರ ಬಳಿ ಇರಲಿಲ್ಲ. ಅದನ್ನು ಬಂದ ತಕ್ಷಣವೇ ಅವರು ಕಸದ ಬುಟ್ಟಿಗೆ ಹಾಕಿದ್ದಿರಬಹುದು. ಅದನ್ನಿಟ್ಟುಕೊಂಡು ಮಾಡುವುದಾದರೂ ಏನಿತ್ತು? ಎಲ್ಲಾ ಎಷ್ಟೊಂದು ಗೊಂದಲಮಯ! ಸಿದ್ದಾರ್ಥ ಸಂಪಾದಕರ ಸಂಶಯಾತ್ಮಕವಾದ ಕಾಕದೃಷ್ಟಿಯಿಂದ ತಪ್ಪಿಸಿಕೊಂಡು ಮನೆಗೆ ಬಂದ. ಮಂಚದ ಮೇಲೆ ಒರಗಿ ಮತ್ತೊಂದು ಸಿಗರೇಟನ್ನು ಬೆಳಗಿಸಿದ. ಸುರಳಿಸುರಳಿಯಾಗಿ ಧೂಮ ಬಿಡುತ್ತಿದ್ದ ಸಿದ್ದಾರ್ಥನಿಗೆ ಮತ್ತೊಂದು ಆಲೋಚನೆ ಹೊಳೆಯಿತು. ತಾನು ಮಾಡಿಸಿದ್ದ ಮ್ಯಾನಿಫೋಲ್ಡ್ ಲೆಟರ್ ಪ್ಯಾಡುಗಳತ್ತ ಗಮನ ಹಾಯಿಸಿದ. ಅವನ ಲೆಕ್ಕದಂತೆ ಇರಬೇಕಾದಷ್ಟು ಸಂಖ್ಯೆಯ ಪ್ಯಾಡುಗಳು ಇದ್ದುವು.

*****

ಮಧ್ಯಾಹ್ನದ ಪೋಸ್ಟಿಗೆ ಬಂದ ’ಕೋಗಿಲೆ’ ಪತ್ರಿಕೆ ನೋಡಿದಾಗ ಅವನಿಗೆ ಮತ್ತೊಮ್ಮೆ ಭಯವಾಯಿತು. ’ಕೋಗಿಲೆ’ಗೂ ಅವನು ಕಥೆ ಕಳಿಸಿರಲಿಲ್ಲ. ಮತ್ತೆ? ಅಂಚೆಯಲ್ಲಿ ಆ ಪತ್ರಿಕೆ ಯಾಕೆ ಬಂತು? ಅವಸರದಿಂದ ಕಣ್ಣು ಹಾಯಿಸಿದ. ಆ ಪತ್ರಿಕೆಯಲ್ಲೂ ಸಿದ್ದಾರ್ಥನ ಹೆಸರಿನಲ್ಲಿ ಒಂದು ಕಥೆ ಬಂದಿತ್ತು. ಕಥೆಯ ಹೆಸರು ’ಆತ್ಮಶೋಧನೆ’. ಅವನಿಗೆ ನಿಜಕ್ಕೂ ಇದೊಂದು ಸಂಚು ಎನ್ನಿಸತೊಡಗಿತ್ತು.

ಎರಡು ತಿಂಗಳು ಕಳೆವಷ್ಟರಲ್ಲಿ ಇನ್ನೂ ಮೂರು ಪತ್ರಿಕೆಗಳಲ್ಲಿ ಇದೇ ರೀತಿ ಕಥೆಗಳು ಸಿದ್ದಾರ್ಥನ ಹೆಸರಿನಲ್ಲಿ ಬಂದಿದ್ದುವು. ’ಆತ್ಮೀಯ’ ’ಆತ್ಮಪರಿಶೀಲನೆ’ ಮತ್ತು ’ಆತ್ಮಾರ್ಪಣ’. ತಮಾಷೆಯೆಂದರೆ ಎಲ್ಲವೂ ೧೯೫೦ರಲ್ಲಿ ’ಮಂಜರಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ’ಗೌತಮ’ರ ಕಥೆಗಳೇ ಆಗಿದ್ದುವು.

ಓದುಗರ ಬಾಂಬಿನಂತಹ ಓಲೆಗಳು ಪತ್ರಿಕೆಗಳ ಪುಟಗಳನ್ನಾಕ್ರಮಿಸಿದುವು. ಇದೊಂದು ದೊಡ್ಡ ಸ್ಕೂಪಿನಂತೆ ಕಂಡು ಇದರ ಬಗ್ಗೆ ದೀರ್ಘ ಚರ್ಚೆಗಳು ನಡೆದುವು. ಸಿದ್ದಾರ್ಥ ಎಲ್ಲ ಪತ್ರಿಕೆಗಳ ಕಛೇರಿಗಳಿಗೂ ಹೋಗಿ ಬಂದ. ಎಲ್ಲೆಡೆಯೂ ’ಸಿಂಚನ’ದಲ್ಲಾದ ಪ್ರಸಂಗದ ಪುನರಾವರ್ತನೆಯೇ ಆಗಿತ್ತು. ಅದೇ ನೀಲಿ ಮ್ಯಾನಿಫೋಲ್ಡಿನ ಅಂದವಾಗಿ ಟೈಪಾದ ಕಥೆಗಳು, ಅದೇ ವಿಳಾಸ, ಮತ್ತು ಹೆಚ್ಚು ಕಡಿಮೆ, ಒಂದೇ ಸಮಯದಲ್ಲಿ ಕಳುಹಿಸಲ್ಪಟ್ಟವು. ಆದ್ದರಿಂದಲೇ ಒಂದೆರಡು ತಿಂಗಳುಗಳ ಅಂತರದಲ್ಲಿ ಎಲ್ಲವೂ ಪ್ರಕಟವಾಗಿಬಿಟ್ಟಿದ್ದುವು.

ಶ್ರೀಕೃಷ್ಣಕ್ಯಾತನಹಳ್ಳಿ ಈ ರಹಸ್ಯವನ್ನು ಸ್ಫೋಟಿಸಿದ ಹೀರೋ ಆಗಿಬಿಟ್ಟಿದ್ದ. ಸಿದ್ದಾರ್ಥನಿಂದ ಎಲ್ಲರೂ ಒಂದು ವಿವರಣೆಯನ್ನು ನಿರೀಕ್ಷಿಸಿದ್ದರು. ಈ ಗೊಂದಲಗಳ ನಡುವೆ ತನ್ನ ಥೀಸೀಸ್ ಕೆಲಸ ನಿಲ್ಲಿಸಬೇಕಾಗಿ ಬಂದ ಸಿದ್ದಾರ್ಥನಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಕೆಲ ಪತ್ರಿಕಾ ಸಂದರ್ಶಕರು ಬಂದರೂ ಈ ವಿಷಯ ಅವರೊಂದಿಗೆ ಮಾತನಾಡಲು ನಿರಾಕರಿಸಿದ ಸಿದ್ದಾರ್ಥ ಇದರ ಮೂಲವನ್ನು ಶೋಧಿಸಲು ಯತ್ನಿಸಬೇಕೆಂದು ನಿರ್ಧರಿಸಿದ.

ಮೊಟ್ಟಮೊದಲನೆಯದಾಗಿ ಶ್ರೀಕೃಷ್ಣಕ್ಯಾತನಹಳ್ಳಿಯನ್ನು ಭೇಟಿ ಮಾಡಲೆಂದು ಸಿದ್ದಾರ್ಥ ಹೊರಟ. ಶ್ರೀಕೃಷ್ಣನ ವಿಳಾಸವನ್ನು ’ಸಿಂಚನ’ದ ಸಂಪಾದಕರಿಂದ ಪಡೆದು ಹಲವಾರು ಗಲ್ಲಿ ಸುತ್ತಿ ಅವನ ಮನೆಗೆ ಹೋದಾಗ ಶ್ರೀಕೃಷ್ಣ ಇರಲಿಲ್ಲ. ಒಂದೇ ವಾರದಲ್ಲಿ ನಾಲ್ಕುಬಾರಿ ಹೋದರೂ ಶ್ರೀಕೃಷ್ಣ ಸಿಗಲಿಲ್ಲ. ಅವನು ಶ್ರೀಕೃಷ್ಣನ ಬಗ್ಗೆ ರೋಸಿಹೋಗಿದ್ದ. ಆದರೂ ಕಡೆಯ ಪ್ರಯತ್ನವೆಂಬಂತೆ ಅವನಿಗೊಂದು ಪತ್ರ ಹಾಕಿದ. ತಾನು ಇಂಥ ದಿನ ಬರುವುದಾಗಿಯೂ, ಅಂದು ಆ ಸಮಯಕ್ಕೆ ಮನೆಯಲ್ಲಿದ್ದರೆ ಉಪಕಾರವಾಗುವುದೆಂದೂ ಸಿದ್ದಾರ್ಥ ಪತ್ರದಲ್ಲಿ ಬರೆದಿದ್ದ. ಆದರೆ ಮತ್ತೆ ಐದನೆಯ ಬಾರಿಯೂ ಸಿದ್ದಾರ್ಥನಿಗೆ ನಿರಾಶೆಯೇ ಕಾದಿತ್ತು. ಅಂದೂ ಶ್ರೀಕೃಷ್ಣ ಮನೆಯಲ್ಲಿರಲಿಲ್ಲ. ಆದರೆ ಸಿದ್ದಾರ್ಥನ ಪತ್ರ ತಲುಪಿತ್ತಾದ್ದರಿಂದ ಹಳೇ ಮಂಜರಿಯ ಪ್ರತಿಗಳನ್ನು ಬೈಂಡ್ ಮಾಡಿಸಿಟ್ಟಿದ್ದ ಒಂದು ದಪ್ಪ ಪುಸ್ತಕವನ್ನು ಅವನಿಗಾಗಿ ತೆಗೆದಿರಿಸಿದ್ದ. ಸಿದ್ದಾರ್ಥ ಅವುಗಳನ್ನೊಮ್ಮೆ ತಿರುವಿಹಾಕಿದ. ೧೯೫೦ನೆಯ ಇಸವಿ ಫೆಬ್ರವರಿ ತಿಂಗಳಿನಿಂದ ಜೂನ್‍ವರೆಗೂ ಕ್ರಮವಾಗಿ ಪ್ರತೀ ತಿಂಗಳೂ ’ಗೌತಮ’ರ ಕಥೆಗಳು ’ಆತ್ಮೀಯ’ ’ಆತ್ಮಕಥೆ’ ’ಆತ್ಮಶೋಧನೆ’ ’ಆತ್ಮಪರಿಶೀಲನೆ’ ’ಆತ್ಮಾರ್ಪಣೆ’ ಈ ಕ್ರಮದಲ್ಲಿ ಪ್ರಕಟವಾಗಿದ್ದುವು. ಸೋಜಿಗದ ವಿಷಯವೆಂದರೆ ಶ್ರೀಕೃಷ್ಣಕ್ಯಾತನಹಳ್ಳಿ ಐದೂ ಕಥೆಗಳಿಗೂ ತನ್ನ ಪ್ರತಿಕ್ರಿಯೆಯನ್ನು ಸಂಪಾದಕರಿಗೆ ಪತ್ರ ಕಳಿಸುವ ಮೂಲಕ ಸೂಚಿಸಿದ್ದ. ಅಷ್ಟಲ್ಲದೇ ತನಗೆ ಅನಿವಾರ್ಯ ಕೆಲಸವಿರುವುದರಿಂದ ಹೋಗಬೇಕಾಗಿದೆಯೆಂದೂ, ಈ ವಿಷಯ ಚರ್ಚಿಸಲು ತಾನೇ ಭಾನುವಾರ ಸಿದ್ದಾರ್ಥನ ಮನೆಗೆ ಬರುವುದಾಗಿಯೂ, ಶ್ರೀಕೃಷ್ಣ ಮನೆಯಲ್ಲಿ ಹೇಳಿ ಹೋಗಿದ್ದ.

ಸಿದ್ದಾರ್ಥನ ಗೊಂದಲ ಕಡಿಮೆಯಾಗಲೇ ಇಲ್ಲ. ಇತ್ತೀಚೆಗಂತೂ ಮನಶ್ಶಾಂತಿಯೇ ಇಲ್ಲವಾಗಿದೆ. ತಾನೇನೂ ಮಾಡದೆಯೇ ಹೀಗೆ ಅನಿರೀಕ್ಷಿತವಾಗಿ ಇಂಥ ಕೂಪದಲ್ಲಿ ಸಿಲುಕಿಕೊಳ್ಳುವುದು ಯಾರಿಗಾದರೂ ಸೋಜಿಗದ ಸಂಗತಿಯೇ ಸರಿ. ಸಿದ್ದಾರ್ಥ ಭಾನುವಾರಕ್ಕಾಗಿ ಕಾಯತೊಡಗಿದ. ತನ್ನ ಅನೇಕ ಕಥೆಗಳಲ್ಲಿ ಕಾಯುವುದನ್ನು ವಿಭಿನ್ನ ಸಂಕೇತಗಳ ಮೂಲಕ ಸಿದ್ದಾರ್ಥ ಚಿತ್ರಿಸಿದ್ದುಂಟು. ಆದರೆ ಕಾಯುವ ಅನುಭವ ನಿಜಕ್ಕೂ ಇಷ್ಟು ಭೀಕರವಾಗಿರಬಹುದೆಂದು ಅವನಿಗೆ ತಿಳಿದೇ ಇರಲಿಲ್ಲ.

ಭಾನುವಾರ ಬೆಳಿಗ್ಗೆ ಹೇಳಿದ ಸಮಯಕ್ಕೆ ಸರಿಯಾಗಿ ಶ್ರೀಕೃಷ್ಣಕ್ಯಾತೇಹಳ್ಳಿ ಬಂದ. ಅಥವಾ ಆತ ಬಂದರು ಅನ್ನಬಹುದು. ಅರವತ್ತು ವಸಂತಗಲನ್ನು ಕಂಡ ಕಂಗಳಿಗೆ ಇತ್ತೀಚೆಗಷ್ಟೇ ಪೊರೆ ಬಂದು, ಶಸ್ತ್ರಚಿಕಿತ್ಸೆಯಾಗಿ, ಅವರ ಅರವತ್ತೊಂದನೆಯ ವಸಂತವನ್ನು ದಪ್ಪ ಗಾಜಿನ ಚೂರುಗಳ ಮೂಲಕ ಅವರು ನೋಡುತ್ತಿದ್ದರು. ಅಷ್ಟೇ ವಸಂತಗಳನ್ನು ಕಂಡ ಅವರ ಕಾಲಿಗೆ ಏನೂ ದಣಿವಾದಂತೆ ಕಾಣಲಿಲ್ಲ. ಯುವಕನಂತೆ ಠಾಕೊಠೀಕಾಗೆ ನಡೆದು ಬಂದ ಶ್ರೀಕೃಷ್ಣರನ್ನು ಸಿದ್ದಾರ್ಥ ಪರಿಚಯಮಾಡಿಕೊಂಡ. ಕಾಫಿಹೀರುತ್ತಾ ಅವರಿಬ್ಬರೂ ಮಾತಿಗಿಳಿದರು.

ಶ್ರೀಕೃಷ್ಣ ಹೇಳಿದ್ದಿಷ್ಟು. ಸಣ್ಣವರಿದ್ದಾಗ ಆತ ಗೌತಮರ ಕಥೆಗಳನ್ನು ಓದಿ ವಿಪರೀತ ಪ್ರಭಾವಿತರಾಗಿದ್ದರು. ಆದರೆ ಅವರು ಓದಿದ್ದದ್ದು ಗೌತಮರ ಈ ಐದು ಕಥೆಗಳನ್ನು ಮಾತ್ರ. ಸಿದ್ದಾರ್ಥನ ಕಥೆಗಳನ್ನು ಓದಿದಾಗ ಅವರಿಗೇಕೋ ಗೌತಮರೇ ಈ ಕಥೆಗಳನ್ನು ಬರೆದಂತನ್ನಿಸಿತ್ತು. ಅದೇ ಶೈಲಿ, ಅದೇ ರೀತಿಯ ಪದಪ್ರಯೋಗ, ಅದೇ ಸಂಕೇತಗಳು, ಅಂತೂ ಸಿದ್ದಾರ್ಥ ಗೌತಮರ ಪಡಿಯಚ್ಚೆನ್ನಿಸಿದ್ದ. ಆದರೆ ’ಸಿಂಚನ’ದಲ್ಲಿ ’ಆತ್ಮಕಥೆ’ ನೋಡಿದಾಗ ಅವರಿಗೆ ಸಿಡಿಲೆರಗಿದಂತಾಗಿತ್ತು. ತಕ್ಷಣವೇ ಬೈಂಡ್ ಮಾಡಿಸಿದ್ದ ಹಳೇ ’ಮಂಜರಿ’ಯ ಪ್ರತಿಯನ್ನು ತೆಗೆದು ನೋಡಿದ್ದರು. ಸಂಪೂರ್ಣ ಅದೇ. ಅದೇ ಪದಗಳು, ಅದೇ ಶೀರ್ಷಿಕೆ, ಅದೇ ಸ್ಥಳದಲ್ಲಿ ಕಾಮ, ಪೂರ್ಣವಿರಾಮಗಳು! ಅದಕ್ಕೇ ಸಿಂಚನಕ್ಕೆ ಆತ ಪತ್ರ ಬರೆಯಬೇಕೆಂದು ನಿರ್ಧರಿಸಿ ಬರೆದದ್ದು.

ಅದೇಕೋ ಸಿದ್ದಾರ್ಥನಿಗೆ ಶ್ರೀಕೃಷ್ಣನೊಂದಿಗಿನ ಭೇಟಿ ಅಷ್ಟು ಉಪಯುಕ್ತವೆನ್ನಿಸಲಿಲ್ಲ. ತಾನು ಈ ಕಥೆಗಳನ್ನು ಪತ್ರಿಕೆಗೆ ಕಳುಹಿಸಿದ ವ್ಯಕ್ತಿಯ ಹುಡುಕಾಟದಲ್ಲಿದ್ದರೆ, ಈ ಪತ್ತೆ ಕಾರ್ಯ ಎತ್ತೆತ್ತಲೋ ಹೋಗುತ್ತಿತ್ತು. ಆ ನಿರಾಶೆಯಲ್ಲಿಯೇ ಮನೆಯಲ್ಲಿ ಮಲಗಿದ್ದ ಸಿದ್ದಾರ್ಥನಿಗೆ ಆ ಕಥೆಗಳನ್ನು ಮತ್ತೊಮ್ಮೆ ಓದಬೇಕೆನ್ನಿಸಿತು. ತನಗೆ ಬಂದಿದ್ದ ಪತ್ರಿಕೆಯ ಪ್ರತಿಗಳನ್ನು ತೆಗೆದು ಎಲ್ಲವನ್ನೂ ಮತ್ತೊಮ್ಮೆ ಓದಿದ. ಅವೆಲ್ಲಾ ತನ್ನದೇ ಕಥೆಗಳು ಎನಿಸುವಷ್ಟರ ಮಟ್ಟಿಗೆ ತನ್ನನ್ನು ಅದರೊಂದಿಗೆ ಗುರುತಿಸಿಕೊಳ್ಳಬಲ್ಲವನಾಗಿದ್ದ. ಹೌದು. ಇವು ತಾನೇ ಬರೆದಿರಬೇಕಿದ್ದ ಕಥೆಗಳು. ಸಿದ್ದಾರ್ಥನಿಗೆ ಏನು ಮಾಡಲೂ ತೋರಲಿಲ್ಲ. ಒಮ್ಮೆ ಮಂಜರಿ ಪತ್ರಿಕೆಯ ಕಾರ್ಯಾಲಯಕ್ಕೆ ಹೋಗೆ ಬಂದರೆ ಹೇಗೆಂಬ ಆಲೋಚನೆ ಬಂದ ಕೂಡಲೇ ಅಲ್ಲಿಗೆ ಹೊರಡಲು ಅನುವಾದ. ಸದ್ಯದ ಪರಿಸ್ಥಿತಿಯಲ್ಲಿ ಅದೊಂದೇ ಅವನಿಗೆ ಕಂಡ ದಾರಿಯಾಗಿತ್ತು. ಹಾಗೆಂದೇ ಹೊರಟುಬಿಟ್ಟ.

’ಮಂಜರಿ’ಯ ಕಾರ್ಯಾಲಯಕ್ಕೆ ಹೋದರೂ ಅಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಅವನಿಗೆ ನಿರ್ದಿಷ್ಟ ಅಜೆಂಡಾ ಇರಲಿಲ್ಲ. ಅವನು ಮೂಲತಃ ಆ ನಿಗೂಢ ವ್ಯಕ್ತಿಯ ಶೋಧನೆಯಲ್ಲಿದ್ದ. ಸಂಪಾದಕರು ಬಿಡುವಾಗಿದ್ದಾರೆಂದು ಅಲ್ಲಿದ್ದವರು ಹೇಳಿದ್ದರಿಂದ ಅವರೊಂದಿಗೇ ನೇರವಾಗಿ ಮಾತನಾಡುವುದೆಂದು ಅವರ ಕೋಣೆಗೆ ಹೊಕ್ಕು ಅವರನ್ನು ಮಾತಿಗೆ ಎಳೆದ. ಸಂಪಾದಕರಿಗೆ ಈ ವಿಷಯಗಳ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಮುವ್ವತ್ತಾರು ವರುಷಗಳ ಹಿಂದಿನ ಕಡತಗಳು ಎಲ್ಲಾದರೂ ಇದ್ದಾವೆಯೇ? ಆದರೂ ಛಲಬಿಡದ ಸಿದ್ದಾರ್ಥನ ಪಟ್ಟು ನೋಡಿ ರೋಸಿ ಹೋದರೋ, ಅಥವಾ ಕನಿಕರದಿಂದಲೋ, ಸಿದ್ದಾರ್ಥನಿಗಾಗಿ ಅಲ್ಲಿ ಇಲ್ಲಿ ಎನೇನೋ ತೆಗೆದು ನೋಡಿದರು ಆತ. ಒಂದು ಲೇಖಕನ ಐದು ಕಥೆಗಳನ್ನು ಕ್ರಮವಾಗಿ ತಿಂಗಳಿಗೊಂದರಂತೆ ಪ್ರಕಟಿಸಿದ್ದು ’ಮಂಜರಿ’ಯ ಇತಿಹಾಸದಲ್ಲಿ ಒಮ್ಮೆ ಮಾತ್ರವಾಗಿತ್ತು. ಗೌತಮರ ಐದು ಕಥೆಗಳ ಮೊದಲಾಗಲೀ ನಂತರವಾಗಲೀ ಅವರು ಈ ಪತ್ರಿಕೆಗೆ ಏನೂ ಬರೆದದ್ದೇ ಇಲ್ಲ. ಹಾಗೆ ನೋಡಿದರೆ ಗೌತಮರ ಹೆಸರು ಸಹ ಯಾರಿಗೂ ನೆನಪಿಲ್ಲ. ಇತ್ತೀಚೆಗೆ ನಡೆದ ಗೊಂದಲಗಳಿಂದಾಗಿ ಅವರೂ ಎಚ್ಚೆತ್ತುಕೊಂಡಿದ್ದರು. ಸಂಪಾದಕರಿಗೆ ಈ ಗೊಂದಲಗಳ ಬಗ್ಗೆ ತಿಳಿದಿತ್ತಾದರೂ, ಅವರ ಆಸಕ್ತಿಮಾತ್ರ ಹಳೆಯ ಮಂಜರಿಗಳನ್ನು ತೆಗೆದು ಇದು ನಿಜವೆಂದು ಓದಿ ಖಾತ್ರಿ ಪಡಿಸುಕೊಳ್ಳುವಲ್ಲಿಗೆ ಮಾತ್ರ ಸೀಮಿತವಾಗಿತ್ತು.

ಸಿದ್ದಾರ್ಥನ ಒತ್ತಾಯದ ಮೇರೆಗೆ ಗೌತಮರ ವಿಳಾಸ ಹುಡುಕುವ ಕಾರ್ಯವೂ ಪ್ರಾರಂಭವಾಯಿತು. ಅದೃಷ್ಟವಶಾತ್ ಹಿಂದಿನ ಸಂಪಾದಕರು ಪ್ರತೀತಿಂಗಳೂ ಪ್ರಕಟಿಸುವ ಲೇಖನಗಳನ್ನೂ, ಕರ್ತೃಗಳ ಹೆಸರು-ವಿಳಾಸಗಳನ್ನು ಒಂದು ದಪ್ಪ ಪುಸ್ತಕದಲ್ಲಿ ಡೈರೆಕ್ಟರಿಯಂತೆ ತಯಾರಿಸಿಟ್ಟಿದ್ದರು. ’ಮಂಜರಿ’ಯ ಪ್ರಸಾರಸಂಖ್ಯೆ ಬಳೆದ ನಂತರ ಈ ಪದ್ಧತಿಯನ್ನು ಕೈಬಿಡಲಾಗಿತ್ತು. ಬಹಳ ಕಷ್ಟಪಟ್ಟನಂತರ ಬಹಳ ಪರಿಶ್ರಮದಿಂದ ಆ ಪುಸ್ತಕವನ್ನು ಹೊರಗೆಳೆದು ನೋಡಿದ್ದಾಯಿತು. ಅದರಲ್ಲಿದ್ದ ವಿಳಾಸಗಳಲ್ಲಿ ಗೌತಮರ ವಿಳಾಸವೂ ಇತ್ತು. ಸಿದ್ದಾರ್ಥನಿಗೆ ಅಂದು ಸಾಧಿಸಿದ್ದೇ ಸಾಕೆನ್ನಿಸಿ ಆ ವಿಳಾಸವನ್ನು ಹಿಡಿದು ಮನೆಗೆ ಹಿಂದಿರುಗಿದ. ಹಿಂದಿರುಗಿದ ನಂತರ ಮುಂದೇನು ಮಾಡಬೇಕೆಂದು ಅಲೋಚಿಸತೊಡಗಿದ.

****

ಅದೊಂದು ತಾಲ್ಲೂಕು ಕೇಂದ್ರವಾಗಬಲ್ಲಂತಹ ಸಣ್ಣ ನಗರ. ಸಂಪಾದಕರಿಂದ ವಿಳಾಸ ಪಡೆದು ಮನೆಗೆ ಬಂದಾಗ ಗೌತಮರ ಊರಿಗೆ ಹೋಗಿ ಅವರನ್ನು ನೋಡಿಬರಬೇಕೆಂದು ಸಿದ್ದಾರ್ಥ ನಿರ್ಧರಿಸಿದ್ದ. ಗೌತಮ ಇನ್ನೂ ಬದುಕಿರಬಹುದೇ? ೧೯೫೦ರಲ್ಲಿ ಬರೆದವರೆಂದರೆ ಬಹುಶಃ ಬದುಕಿರಲೂ ಬಹುದು. ಒಮ್ಮೆ ಸಿದ್ದಾರ್ಥನಿಗೆ ಸೋಜಿಗವೆನ್ನಿಸಿದ್ದೆಂದರೆ, ಈಗ ತಾನು ಕಂಡುಹಿಡಿಯಹೊರಟಿರುವುದಾದರೂ ಏನು ಎನ್ನುವ ವಿಚಾರ. ಕಥೆ ಕಳುಹಿಸಿದವನ ಶೋಧನೆ ಬಿಟ್ಟು ಕಥೆಗಾರನ ಶೋಧನೆ ಪ್ರಾರಂಭವಾಯಿತಲ್ಲಾ! ಆದರೂ ಅದೇಕೋ ಹೋಗಿಯೇ ಬರಬೇಕು ಅಂತ ಅವನಿಗನ್ನಿಸಿತು. ಅದರಿಂದ ಏನು ತಿಳಿಯುತ್ತದೋ ತಿಳಿಯಲಿ. ಎಲ್ಲಿ ಯಾವ ಕ್ಲೂ ಸಿಗಬಹುದೋ ಯಾರಿಗೆ ಗೊತ್ತು. ಹಾಗೆಂದು ನಿರ್ಧರಿಸಿದ ಸಿದ್ದಾರ್ಥ ಆರುನೂರು ಕಿಲೋಮೀಟರುಗಳಿಗಿಂತ ಹೆಚ್ಚು ದೂರವಿದ್ದ ಈ ಸಣ್ಣ ಊರಿಗೆ ಬಂದು ಸೇರಿದ್ದ. ಈ ಊರನ್ನು ಅವನು ಹಿಂದೆಂದೂ ನೋಡಿರಲಿಲ್ಲ. ಬಸ್ ಸ್ಟಾಂಡಿನಲ್ಲಿ ಬಸ್ ಇಳಿದಾಗ ಅಲ್ಲಿಯೇ ಬದಿಯಲ್ಲಿದ್ದ ಲಾಡ್ಜಿನಲ್ಲಿ ಕೋಣೆ ತೆಗೆದುಕೊಂಡ. ಸ್ನಾನ ಮಾಡಿ ಹೊರಬಂದನಂತರ ಒಮ್ಮೆ ಊರು ಸುತ್ತಿ ಬರೋಣವನ್ನಿಸಿತು. ರಸ್ತೆಗಿಳಿದಾಗ ಏಕೋ ಊರೆಲ್ಲಾ ಪರಿಚಿತವೆನ್ನಿಸಿ ನೇರ ಗೌತಮರ ಮನೆಗೆ ಹೋದರೆ ಹೇಗೆಂದು ಆಲೋಚಿಸಿದ. ಗೌತಮರ ವಿಳಾಸವನ್ನು ರೂಮಿನಲ್ಲಿಯೇ ಬಿಟ್ಟು ಬಂದಿದ್ದ. ಆದರೂ ಅದೇಕೋ ಅವನಿಗೆ ಮನೆಯ ವಿಳಾಸ ತಿಳಿದಂತೆ ಭಾಸವಾಗುತ್ತಿತ್ತು. ನೇರ ಆಟೋದವನ ಬಳಿ ಹೋಗಿ:

’ಕೃಷ್ಣಾ ಥೇಟರಿನ ಹತ್ತಿರ ಹೋಗಬೇಕು’ ಅಂದ.

’ನೀವು ಈ ಊರಿಗೆ ಬಹಳ ದಿನಗಳ ಮೇಲೆ ಬರುತ್ತಾ ಇದ್ದೀರಿ ಅನ್ನಿಸುತ್ತೆ. ಕೃಷ್ಣಾ ಥೇಟರು ಈಗ ಫರ್ಹೀನ್ ಆಗಿದೆ’

’ಸರಿ ಎಷ್ಟು?’

’ಹತ್ತು ರೂಪಾಯಿ ಕೊಡಿ’

’ನಾಲ್ಕು ಕಿಲೋಮೀಟರಿಗೆ ಹತ್ತು ರೂಪಾಯಿಯಾ?’

’ಈಗ ಮಹಾತ್ಮಾ ಗಾಂಧಿ ಮಾರ್ಗ ಒನ್ ವೇ ಆಗಿದೆ. ಆದ್ದರಿಂದ ನಾವು ಸುತ್ತು ಹಾಕಿಕೊಂಡು ಇಂದಿರಾ ಮಾರ್ಗದ ಮೂಲಕ ಹೋಗಬೇಕು. ಅದಕ್ಕೇ ಬೆಲೆ ಹೆಚ್ಚು.’

’ಎಂಟು ಕೊಡುತ್ತೇನೆ.’

’ಸರಿ ಹತ್ತಿ.’

ಸಿದ್ದಾರ್ಥನಿಗೆ ತಾನು ವರ್ತಿಸುತ್ತಿದ್ದ ರೀತಿ ಆಶ್ಚರ್ಯ ತಂದಿತ್ತು. ಈ ಊರಿಗೆ ಮೊಟ್ಟಮೊದಲಬಾರಿ ಬರುತ್ತಿದ್ದರೂ ಏಕೆ ಇಷ್ಟು ಪರಿಚಿತವೆನ್ನಿಸುತ್ತಿದೆ? ಹಾಗೇ ಆಲೋಚಿಸುತ್ತಾ ಪಕ್ಕದ ಗಲ್ಲಿಯಲ್ಲಿ ಅತ್ತಿತ್ತ ನೋಡುತ್ತಾ ಫರ್ಹೀನ್ ಥೇಟರಿನ ಬಳಿ ಬಂದಿಳಿದ. ಆಟೋದವನಿಗೆ ಹಣ ಕೊಟ್ಟು ಪಕ್ಕದ ಗಲ್ಲಿಯಲ್ಲಿ ನೇರ ನಡೆದು ಹೊರಟ. ರಸ್ತೆಯಂಚಿನಲ್ಲಿ ಎಡಕ್ಕೆ ತಿರುಗಿ ಅಲ್ಲಿದ್ದ ಡೊಂಕು ರಸ್ತೆಯ ಮೂಲಕ ನಡೆದು ಮೂರನೆಯ ಗೇಟು ತೆಗೆದ. ಅವನಿಗಿದೆಲ್ಲಾ ವಿಸ್ಮಯಕರವಾಗಿತ್ತು. ಏನಿದು? ಜೀವನದಲ್ಲಿ ಮೊದಲಬಾರಿಗೆ ಇತ್ತ ಬರುತ್ತಿದ್ದರೂ ಎಲ್ಲಾ ಪರಿಚಿತವಾಗುರುವಂತೆ ಅನ್ನಿಸುತ್ತಿದೆಯಲ್ಲಾ? ವಿಳಾಸ ಹೋಟೇಲಿನ ಕೋಣೆಯಲ್ಲೇ ಇತ್ತು. ಆದರೂ ಹೋಗಿ ಮನೆಯ ಬಾಗಿಲು ಬಡಿದ. ತೆರೆದಾಗ ಕಂಡದ್ದು ಐವತ್ತೈದರ ಸುಮಾರಿನ ಹೆಂಗಸು.

’ಗೋಮತಿಯ... ಗೋಮತೀದೇವಿಯವರಲ್ಲವಾ?’

ಅದೇಕೆ ವೃದ್ಧ ಹೆಂಗಸಿಗೆ ಏಕವಚನಪ್ರಯೋಗ ಯಾಕೆ ಮಾಡಿದನೋ ತಿಳಿಯದೆಯೇ ನಾಲಿಗೆಯನ್ನು ಕಚ್ಚಿಕೊಂಡ. ತನ್ನ ಪರಿಚಯ ಹೇಳಿಕೊಂಡು ಅದೇ ಗೌತಮರ ಮನೆಯೆಂದು ಖಾತ್ರಿ ಪಡಿಸಿಕೊಂಡ. ಇಲ್ಲಿಗೆ ಬಂದ ಉದ್ದೇಶ ಸಹ ತಿಳಿಸಿದ. ಒಳಗೆ ಹೋಗೆ ನಿಂಬೆ ಶರಬತ್ ತಂದ ಗೋಮತೀದೇವಿ ಆಸಕ್ತಿಯಿಂದ ಎಲ್ಲವನ್ನೂ ಕೇಳಿದರು. ಆಕೆಗೇನೋ ಇದು ವಿಚಿತ್ರ ಕಥೆ ಎನ್ನಿಸುತ್ತಿತ್ತು. ಸಿದ್ದಾರ್ಥನಿಗೂ ಇದು ಎಷ್ಟು ವಿಚಿತ್ರವೆನ್ನಿಸಿತ್ತೆಂದರೆ ಕೃತಕ ಕಟ್ಟುಕಥೆಯಂತೆ ಕಂಡುಬಂತು. ಗೌತಮನ ಬಗೆಗೆ ಸಿದ್ದಾರ್ಥ ವಿಚಾರಿಸಿದ.....

ಗೋಮತೀದೇವಿ ಗೌತಮರ ಚರಿತ್ರೆಯ ಪುಟಗಳನ್ನು ತಿರುವಿಹಾಕಿದರು. ಆದೆ ಗೌತಮರ ಹೆಂಡತಿಯಂತೆ. ’ಆತ್ಮಾರ್ಪಣ’ ಕಥೆ ಪ್ರಕಟವಾದ ಒಂದು ತಿಂಗಳಿಗೇ ಗೌತಮ ಸತ್ತಿದ್ದರೆಂದು ಆಕೆ ಹೇಳಿದರು. ಆಗ ಗೌತಮರಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು.

ಹೊರಗೆ ಬಹಳ ಸಂಭಾವಿತನಾಗಿ ಕಾಣುತ್ತಿದ್ದ ಗೌತಮನಿಗೆ ದುರ್ವ್ಯಸನಗಳಿದ್ದುವಂತೆ. ಅವನಿಗೆ ಇನ್ನೂಬ್ಬರ ದುಃಖದಿಂದ ಸಂತೋಷಿಸುವ ವಿಕೃತ ಭಾವವಿತ್ತು. ಗೋಮತಿಯನ್ನು ಆತ ಅನೇಕ ಬಾರಿ ದನ ಬಡಿದಂತೆ ಬಡಿಯುತ್ತಿದ್ದುದುಂಟಂತೆ. ಆದರೆ ಇವೆಲ್ಲವನ್ನೂ ಸಹಿಸಿದ ಗೋಮತೀ ದೇವಿಗೆ ಆಕೆಯೇ ಹೇಳಿದಂತೆ ಅವನ ಒಂದು ಚಾಳಿ ಮಾತ್ರ ಸಹಿಸಲಾಗಲಿಲ್ಲ. ಅನೈಸರ್ಗಿಕ ಹಾಗೂ ವಿಕೃತ ರತಿಕ್ರೀಡೆಯಲ್ಲಿ ಭಾಗವಹಿಸಲು ಆಕೆಯನ್ನು ಬಲಾತ್ಕರಿಸುತ್ತಿದ್ದದ್ದು ಮಾತ್ರೆ ಆಕೆಗೆ ಸಹ್ಯವಾಗಲೇ ಇಲ್ಲ. ಇದಲ್ಲದೇ ಎಷ್ಟೋ ಬಾರಿ ಬೇರೆ ಹುಡುಗಿಯರನ್ನೂ ಗುಪ್ತವಾಗಿ ಮನೆಗೆ ಕರೆತರುತ್ತಿದ್ದುದುಂಟು. ಇವೆಲ್ಲಾ ಆಕೆಗೆ ಸಹ್ಯವಿರಲಿಲ್ಲ. ಅತಿಕಾಮಿಯಾದ ಗೌತಮನಿಗೆ ಸಂಭೋಗಕ್ಕೆ ಸಮಯವೆಂಬುದೇ ಇರಲಿಲ್ಲ. ಹಗಲು ರಾತ್ರಿಯೆನ್ನದೇ ದಣಿವಾರಿಸಿಕೊಳ್ಳಲೂ ಬಿಡದೇ ಅವನಾಡುತ್ತಿದ್ದಾ ಆಟಗಳು ತಡೆಯಲು ಅಸಾಧ್ಯವಾದವು. ಕಡೆಗೊಂದು ದಿನ ಅವನಿಗೇ ಜೀವನದಲ್ಲಿ ವಿರಕ್ತಿ ಹುಟ್ಟಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟ.

ಯಾರೊಂದಿಗೂ ಹೇಳದ ಈ ರಹಸ್ಯವನ್ನು ಗೋಮತಿ ಯಾವ ಸಂಕೋಚವೂ ಇಲ್ಲದೇ ಸಿದ್ದಾರ್ಥನಿಗೆ ಹೇಳಿದ್ದು ಅವನಿಗೆ ಬಹಳ ಆಶ್ಚರ್ಯವುಂಟುಮಾಡಿತ್ತು. ಆಕೆಗೂ, ಮೂವತ್ತಾರು ವರ್ಷಗಳಕಾಲ ಒಡಲಿನಲ್ಲಿನ ಕೆಂಡದಂತೆ ಕಾಪಾಡಿಕೊಂಡಿದ್ದ ಈ ರಹಸ್ಯವನ್ನು ಇವನಿಗೆ ಹೇಳಿದ ಕಾರಣ ತಿಳಿಯದೇ ಜಿಜ್ಞಾಸೆಯಾಯಿತು. ಗೌತಮ ಸಂಭಾವಿತನಾಗಿ ಬದುಕಿದ್ದ. ಹಾಗೇ ಅದೇ ಗೌರವದೊಂದಿಗೇ ಸತ್ತಿದ್ದ. ಸತ್ತ ಮುವ್ವತ್ತಾರು ವರುಷಗಳ ನಂತರ ಅವನ ಹೆಸರಿಗೆ ಮಸಿ ಬಳಿಯುವ ಪ್ರಯತ್ನವೇಕೆ? ಅಥವಾ ಈಗ ಸತ್ಯ ಹೇಳಿದರೆ ಅವನಿಗಾದರೂ, ತನಗಾದರೂ ಏನೂ ವ್ಯತ್ಯಾಸವಾಗುವುದಿಲ್ಲ ಎಂಬ ಆಂತರಿಕ ಆಲೋಚನೆಯಿಂದ ಹೇಳಿದ್ದಿರಬಹುದೇ? ಈ ಮಥನದಲ್ಲಿ ತೊಡಗಿರುವಾಗಲೇ -

"ಬಂದೆ" ಎನ್ನುತ್ತಾ ಕೋಣೆಯೆಡೆಗೆ ಹೊರಟ ಸಿದ್ಧಾರ್ಥ.

"ಏನು?"

"ಶೌಚಕ್ಕೆ ಹೋಗಬೇಕು"

"ಓ ಶೌಚ ಈಗ ಅಲ್ಲಿಲ್ಲ. ಮನೆ ರಿಪೇರಿ ಮಾಡಿಸಿದಾಗ ಅದೇಕೋ ವಾಸ್ತು ಪ್ರಕಾರ ಅದು ಸಮರ್ಪಕ ಸ್ಥಳವಲ್ಲವೆಂದು ತಿಳಿದು ಅದನ್ನು ಕೋಣೆಯನ್ನಾಗಿಸಿ ಬದಲಾಯಿಸಿದೆ. ಈಗ ಶೌಚ ಆಚೆ ಬದಿಯಲ್ಲಿದೆ."

ಮೂತ್ರ ವಿಸರ್ಜಿಸಿಬಂದ ಸಿದ್ದಾರ್ಥ ಇದ್ದಕ್ಕಿದ್ದಂತೆ ಕೇಳಿದ:

"ನಿಮಗೆ ವಾಸ್ತು ಶಾಸ್ತ್ರದಲ್ಲಿ ಎಂದಿನಿಂದ ನಂಬಿಕೆ ಶುರುವಾಯಿತು? ಅಂದಹಾಗೆ ಗೌತಮ ಆತ್ಮಹತ್ಯೆ ನಿಜವೇ ಅಥವಾ ಅದು ಕೊಲೆಯಿರಬಹುದೇ?"

ಗೋಮತೀದೇವಿಗೆ ಒಂದು ಕ್ಷಣ ಭಯವಾದಂತೆನ್ನಿಸಿತು. ಮುಖ ಬಿಳುಚಿಕೊಂಡಿತು. ಒಂದು ಬಗೆಯ ಅಪರಾಧೀ ಭಾವ ಒಡಮೂಡಿತು.

"ಯಾಕೆ?"

"ಏನಿಲ್ಲಾ ಹೀಗೇ..ಕೊಲೆ ಇರಬಹುದೂಂತ ಅನ್ನಿಸಿತ್ತು."

"ಇಲ್ಲ ಇಲ್ಲ ಅದು ಖಂಡಿತವಾಗಿಯೂ ಆತ್ಮಹತ್ಯೆಯೇ"

ಸಿದ್ದಾರ್ಥನಿಗೆ ಮುಂದೇನು ಮಾತನಾಡಬೇಕೋ ತಿಳಿಯಲಿಲ್ಲ. ಗೌತಮನ ಕಥೆಗಳನ್ನು ತನ್ನ ಹೆಸರಿನಲ್ಲಿ ಕಳಿಸಿರಬಹುದಾದ ನಿಗೂಢ ವ್ಯಕ್ತಿಯ ಬಗೆಗೆ ಅವರು ಕೆಲವೇಳೆ ಚರ್ಚಿಸಿದರು. ಆದರೆ ಅದರಿಂದ ಹೇಳಿಕೊಳ್ಳುವಂತಹ ಪ್ರಯೋಜನವೇನೂ ಆಗಲಿಲ್ಲ. ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಶೋಧಿಸಲು ಬಂದಿದ್ದ ಸಿದ್ದಾರ್ಥನಿಗೆ ಇನೂ ಹೆಚ್ಚಿನ ಪ್ರಶ್ನೆಗಳೆದ್ದಿದ್ದುವು. ತನಗೂ ಗೌತಮನಿಗೂ ಏನಾದರೂ ಸಂಬಂಧವಿದೆಯೇ? ಅನೈಸರ್ಗಿಕ ಸಾವನ್ನುಂಡ ಗೌತಮನ ಭೂತದ ಕಾಟವೇ? ತನಗೆ ಈ ಊರೇಕೆ ಇಷ್ಟು ಪರಿಚಿತವೆನ್ನಿಸುತ್ತಿದೆ? ಅದು ಗೌತಮನ ಛಾಯೆಯೇ?

ಹೀಗೇ ಉದ್ಭವವಾದ ಪ್ರಶ್ನೆಗಳನ್ನೆಲ್ಲಾ ಅಲ್ಲಗಳೆಯುತ್ತಾ ಬಂದರೂ, ಅದೇಕೋ ತನ್ನ ವರ್ತಮಾನಕ್ಕೊ ಗೌತಮನ ಚರಿತ್ರೆಗೂ ನಿಕಟ ಸಂಬಂಧವಿದ್ದಂತೆ ಅವನಿಗೆ ಅನ್ನಿಸಿತ್ತು. ಹೀಗೆ ಆಲೋಚಿಸುತ್ತಲೇ ಅವನು ಊರಿಗೆ ಹೊರಟ. ಒಂದು ವೈಜ್ಞಾನಿಕ ಮನೋಭೂಮಿಕೆಯಲ್ಲಿ ಬೆಳೆದಿದ್ದ ಸಿದ್ದಾರ್ಥನಿಗೆ ಯಾವುದನ್ನೂ ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಆದರೂ ಎಷ್ಟು ವಿಚಿತ್ರ? ಕಾಕತಾಳೀಯತೆಯ ಮಿತಿಯೆಲ್ಲಿ? ಅಷ್ಟೆಲ್ಲಾ ವಿಕೃತಾಭ್ಯಾಸಗಳಿದ್ದು ಸತ್ತರೂ ಗೌತಮ ಜನರ ದೃಷ್ಟಿಯಲ್ಲಿ ಉತ್ತಮೋತ್ತಮನಾಗಿದ್ದ. ಚಿತ್ತಶುದ್ಧಿಯಿಂದ ಯಾವ ಅಪರಾಧೀ ಪ್ರಜ್ಞೆಯೂ ಇಲ್ಲದೇ ಬದುಕುತ್ತಿದ್ದ ತನಗೆ ಅಪಕೀರ್ತಿ, ಆರೋಪಣೆ. ಕಥೆಗಳನ್ನು ಕಳುಹಿಸಿದ ನಿಗೂಢ ವ್ಯಕ್ತಿಯ ಶೋಧದಲ್ಲಿ ತಿಳಿದದ್ದು ಏನೇನೋ ವಿಷಯಗಳು. ಒಂದಕ್ಕೊಂದು ಸಂಬಂಧವಿಲ್ಲವೆನ್ನಿಸಿದರೂ ಗಾಢ ಸಂಬಂಧವಿರುವ ವಿಷಯಗಳು.

ಮನೆಗೆ ಬಂದಾಕ್ಷಣ ಥೀಸೀಸ್ ತಕ್ಷಣ ಮುಗಿಸಬೇಕೆಂದು ಸಿದ್ದಾರ್ಥ ನಿರ್ಧರಿಸಿದ. ಕಥೆಗಳ ಬಗೆಗೆ ಆಲೋಚಿಸುವುದೂ ಬೇಡ ಎಂದುಕೊಂಡು ತಾನು ಈ ವರೆವಿಗೆ ಕಥೆಗಳನ್ನೆಲ್ಲಾ ಒಂದೊಂದಾಗಿ ಸುಟ್ಟುಹಾಕಿದ.. ನೆನೆಪುಗಳನ್ನೇ ಸುಡುವಂತೆ. ಮತ್ತೆಂದೂ ಕಥೆಗಳನ್ನು ಬರೆಯುವ ಸಾಹಸ ಮಾಡಬಾರದೆಂದು ದೃಢವಾಗಿ ನಿಶ್ಚಯಿಸಿ ಸುಡುತ್ತಿದ್ದ ಬೆಂಕಿಯಿಂದ ಒಂದು ಸಿಗರೇಟನ್ನು ಬೆಳಗಿಸಿಕೊಂಡ.

Thursday, June 19, 2008

ಸಾಲ ಸೋಲ



ನಾಲ್ಕನೆಯ ಬಾರಿಗೆ ರಮಣಾರೆಡ್ಡಿಯ ಮನೆಯ ಬಳಿ ಹೋಗಿ ಬಂದದ್ದಾಯಿತು. ಈ ತಿಂಗಳಿನಲ್ಲಿ ನಾಲ್ಕನೆಯ ಬಾರಿ. ಅವನು ಇರಲಿಲ್ಲ. ಹಾಗೆ ನೋಡಿದರೆ ಅವನು ಕೈಗೆ ಸಿಗುವುದೇ ಕಷ್ಟ. ಎಲ್ಲೆಲ್ಲಿ ಹುಡುಕಿದರೂ ನಾಪತ್ತೆ. ಮನೆಯಲ್ಲೇ ಇದ್ದು ತಾನು ಇಲ್ಲವೆಂದು ಹೇಳುತ್ತಾನೇನೋ ಎನ್ನುವ ಗುಮಾನಿ ಕೂಡಾ ಇತ್ತು.

ಅವನಿಗೆ ಸಾಲ ಕೊಡಲು ಪ್ರಾರಂಭಮಾಡಿ ಇದೀಗ ಮೂರು ವರ್ಷಗಳಾಗಿವೆ. ಮೊದಲ ಬಾರಿಗೆ ಮನೆಯಲ್ಲಿ ಏನೋ ತೊಂದರೆ ಎಂದು ಹೇಳಿ ನೂರರ ಗರಿಗರಿ ನೋಟು ಕೊಂಡೊಯ್ದಿದ್ದ. ಅಲ್ಲಿಂದಲೇ ಈ ಸಾಲದ ವ್ಯವಹಾರ ಪ್ರಾರಂಭವಾದದ್ದು. ಬ್ಯಾಂಕಿನಲ್ಲಿ, ಅಲ್ಲಿ-ಇಲ್ಲಿ ಹಾಕಿದರೆ ಸುಮ್ಮನೆ ಖರ್ಚುಮಾಡಿಬಿಡುವ ಆಕರ್ಷಣೆ ಇರುತ್ತದೆಂದು, ಹೀಗೆ ಕೇಳಿದವರಿಗೆಲ್ಲಾ ಕೇಳಿದಾಗಲೆಲ್ಲಾ ಸಾಲ ಕೊಡುವುದು ಒಂದು ವಿಚಿತ್ರ ದುರಭ್ಯಾಸವಾಗಿಬಿಟ್ಟಿತ್ತು. ರಮಣಾರೆಡ್ಡಿಯ ಬಳಿಯಾದರೆ ಇರುತ್ತದೆ. ಅವನ ಅವಶ್ಯಕತೆಗಳಿಗೆ ಸ್ಪಂದಿಸುವುದು ಮಾನವ ಸಹಜ ಧರ್ಮ ಎಂದೆಲ್ಲಾ ಸಮಾಧಾನ ಹೇಳಿಕೊಂಡದ್ದೂ ಆಗಿತ್ತು. ಹೀಗೆ ಪ್ರಾರಂಭವಾದ ಈ ಲಾವಾದೇವಿ ಮುಂದುವರೆದಿದೆ. ಅಂದು ಕೊಟ್ಟ ನೂರು ರೂಪಾಯಿನ ಬಗ್ಗೆ ಮರೆತುಹೋಗುವಷ್ಟು ದಿನಗಳು ಕಳೆದಿವೆ. ಆ ಮೊತ್ತವನ್ನು ಹಾಳು ಬಿದ್ದ ನಾನ್ ಪರ್‌ಫಾರ್ಮಿಂಗ್ ಅಸೆಟ್ ಎಂದು ಮನದ ಲೆಕ್ಕಪತ್ರದಿಂದ ತೆಗೆದು ಹಾಕಲು ನಡೆದಿರುವ ಪ್ರಯತ್ನಗಳು ಅನೇಕ. ಆದರೆ ಯಾವುದೂ ಸಫಲಯತ್ನವಲ್ಲ.

ರಮಣಾರೆಡ್ಡಿ ಒಬ್ಬ ವಿಚಿತ್ರ ಮನುಷ್ಯ. ಅವನಿಗೆ ನೂರು, ಹತ್ತು, ಒಂದು, ಎಂಟಾಣೆ ಎಂಬ ಪರಿವೆಯಿಲ್ಲ. ಈ ರೀತಿಯ ಚಿಲ್ಲರೆ ಸಾಲಗಳನ್ನು ಅವನು ಎಷ್ಟೋ ಬಾರಿ ಪಡೆದಿದ್ದಾನೆ. ಚಿಕ್ಕ ಮೊತ್ತವಾದಷ್ಟೂ ನೆನಪಿನಲ್ಲಿಟ್ಟುಕೊಳ್ಳುವುದೂ ಕಷ್ಟ, ಕೊಡಲಾಗುವುದಿಲ್ಲವೆಂದು ಹೇಳುವುದೂ ಕಷ್ಟ.

ಹನ್ನೆರಡು ತಿಂಗಳ ಹಿಂದೆ ಬಲ್ಬಿನ ಕಂಪನಿಯೊಂದರ ಜಾಹೀರಾತು ಸ್ಪರ್ಧೆಯಲ್ಲಿ ಬಂದ ಐದುಸಾವಿರ ರೂಪಾಯಿಯ ಬಹುಮಾನವನ್ನು, ನೇರವಾಗಿ, ಆ ನೋಟುಗಳನ್ನು ಎಣಿಸುವ ಮೊದಲೇ ಕೊಂಡೊಯ್ದಿದ್ದ. ಇಷ್ಟು ದೊಡ್ಡ ಮೊತ್ತದ ಸಾಲವನ್ನು ನೀಡಿದ್ದದ್ದು ಅದೇ ಮೊದಲಾಗಿತ್ತು. ಇದು ಇಷ್ಟಪಟ್ಟು ಕೊಟ್ಟ ಸಾಲವಲ್ಲ. ಆ ಹಣದ ಬಗೆ ಏನೇನೋ ಯೋಜನೆಗಳಿದ್ದುವು. ಹೀಗಾಗಿಯೇ ಈ ಹಣದೆದುರು ನೂರು ಇನ್ನೂರರ ಚಿಲ್ಲರೆ ಸಾಲಗಳು ತೃಣಸಮಾನವಾಗಿ ಕಾಣುತ್ತಿದ್ದದ್ದು.

ಆದರೆ ಆಶ್ಚರ್ಯವೆಂದರೆ ರಮಣಾರೆಡ್ಡಿಯ ಮುಖ ನೋಡಿದಾಕ್ಷಣ ಅವನ ಬಗ್ಗೆ ಕಳೆದುಕೊಂಡಿರುವ ಇಡೀ ನಂಬಿಕೆ ಜಾದೂವಿನ ರೀತಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿಬಿಡುತ್ತದೆ. ಅಷ್ಟು ಸಾಚಾತನದ ದೀನ ಮುಖವನ್ನು ಹೊತ್ತ ಮತ್ತೊಬ್ಬನನ್ನು ಕಂಡಿಲ್ಲ. ಪ್ರತಿಬಾರಿಯೂ ಸಾಲ ಪಡೆದ ಕೂಡಲೇ ಹಿಂದಿನ ಸಾಲದ ಮೊತ್ತವನ್ನೆಲ್ಲಾ ನೆನಪು ಮಾಡಿ ಖಚಿತವಾದ ಒಂದು ಸಂಖ್ಯೆಯನ್ನು ನೀಡಿ, ಮರೆತಿರಬಹುದಾದ ಲೆಕ್ಕವನ್ನೆಲ್ಲಾ ನೆನಪುಮಾಡಿ ಎಲ್ಲವನ್ನೂ ಒಂದೇ ಏಟಿಗೆ ಹಿಂದಿರುಗಿಸಿಕೊಡುತ್ತೇನೆನ್ನುವ ಹೊಸಭರವಸೆ ಹುಟ್ಟಿಸುವ ಈ ತಾಳಕ್ಕೆ ಯಾರಾದರೂ ಕುಣಿಯಲೇ ಬೇಕು.

ಹನ್ನೆರಡು ತಿಂಗಳ ಹಿಂದೆ ನಡೆದದ್ದೂ ಅದೇ..

"ನಮಸ್ತೇ ಸಾಬ್, ಹೇಗಿದ್ದೀರಿ?"

"ಓಹೋ ರಮಣಾರೆಡ್ಡಿ, ಇದೇನು ಗಾಳಿ ಈ ಕಡೆಗೆ ತಿರುಗಿದೆ?"

"ಏನಿಲ್ಲಾ ಸಾಬ್, ನಿಮಗೆ ಬಹುಮಾನ ಬಂತೂಂತ ಕೇಳಿದೆ. ಮುಬಾರಕ್ ಹೇಳಿಹೋಗೋಣಾಂತ ಬಂದೆ"

"ಥ್ಯಾಂಕ್ಸ್.. ಟೀ ಕುಡೀತೀಯಾ ರಮಣಾರೆಡ್ಡಿ? ನಾನೂ ನಿನ್ನ ಜೊತೆಗೆ ಒಂದರ್ಧ ಟೀ ಹಾಕಬಹುದು.. ಅಂದಹಾಗೆ ನಿಮ್ಮ ಸಹಕಾರ ಸಂಘ ಹೇಗಿದೆ? ಈ ಮಧ್ಯೆ ಹೊಸ ಬಿಜನೆಸ್ ಎನಾದರೂ ಪ್ರಾರಂಭ ಮಾಡಿದೆಯಾ?"

"ನಮ್ಮ ದಂಧೆಗಳು ಇದ್ದದ್ದೇ ಬಿಡಿ ಸಾಬ್. ಅದರದ್ದೇನು? ದಿನಕ್ಕೊಂದು ನಡೆಯುತ್ತಲೇ ಇರುತ್ತೆ. ಈಗ ನಿಮ್ಮ ಸಿಹಿ ಸುದ್ದಿಯೊಂದಿಗೊಂದು ಮೀಠಾ ಖಬರ್.. ಏನು ಗೊತ್ತಾ? ಇಲ್ಲೀ ತನಕ ನೀವು ಕೊಟ್ಟಿದ್ದಿರಲ್ಲಾ ಪಾಂಚ್‍ಸೌಪಂದ್ರಾ ಸಾಲ.. ಐನೂರಹದಿನೈದು ರೂಪಾಯಿ.. ಅದನ್ನು ಬೇಗನೇ ವಾಪಸ್ ಮಾಡುತ್ತೀನಿ... ಒಂದು ಒಳ್ಳೇ ಧಂಧೆ ನಾನೇ ಚಾಲೂ ಮಾಡೋಣಾಂತ..."

"ಪಾಂಚ್‍ಸೌಪಂದ್ರಾ ಯಾವುದು?"

"ಇದೇನ್ ಸಾಬ್ ಹೀಗೆ ಹೇಳ್ತೀರಿ? ನೀವು ಕೊಟ್ಟ ರಕಮಿನ ಬಗ್ಗೆ ನೀವೇ ಮರೆತುಬಿಟ್ಟರೆ ಹೇಗೆ? ಜೀವನದಲ್ಲಿ ಬರ್‌ಬಾದ್ ಆಗಿಹೋಗ್ತೀರಿ ಅಷ್ಟೇ. ನಮ್ಮ ಪರೇಶಾನಿಗಳು ನಮಗೆ ಇರುತ್ತಾವಾಗಲೀ, ಸಮಯಕ್ಕೆ ಸಹಾಯ ಮಾಡುವ ನಿಮ್ಮನ್ನು ಮರೆಯೋಕ್ಕೆ ಸಾಧ್ಯವಾ? ನೋಡಿ, ಮೊದಲು ಕೊಟ್ಟ ನೂರು ರೂಪಾಯಿ, ಆಮೇಲೆ ಒಂದು ಸರ್ತಿ ಕ್ಯಾಮರಾಗೇಂತ ಟೂಹಂಡ್ರೆಡ್ ಎ.ಎಸ್.ಎ ಸಾಕುರಾ ಫಿಲ್ಮ್ ಕೊಟ್ಟಿದ್ದರಲ್ಲಾ.. ಅದರ ನೂರ ಹದಿನೈದು ರೂಪಾಯಿ, ನಿಮ್ಮ ಫಿಲ್ಮೋತ್ಸವ್ ಟಿಕೇಟುಗಳು ತಂದಾಗ ನನ್ನಲ್ಲೇ ಉಳಿದ ಪಚಾಸ್, ಬಳ್ಳಾರಿಗೆ ಹೋಗೊಕ್ಕೆ ಮೊದಲು ಕೊಟ್ಟಿದ್ದ ಢಾಯಿಸೌ.. ಹಿಸಾಬ್ ನೋಡಿ.. ಬರಾಬರ್ ಇರ್ತದೆ.."

ಅಷ್ಟರಲ್ಲಿ ಒಳಗಿನಿಂದ ಧರ್ಮಪತ್ನಿಯ ಕರೆಬಂತು. "ಸ್ವಲ್ಪ ಒಳಕ್ಕೆ ಬಂದು ಟೀ ತೆಗೊಂಡು ಹೋಗುತ್ತೀಯಾ?" ಟೀಗೆಂದು ಒಳಹೊಕ್ಕಾಗ ಅವಳ ಅಲ್ಲೇ ತಾಕೀತು ಮಾಡಿದಳು: "ಮತ್ತೆ ಅವನಿಗೆ ಸಾಲಕೊಟ್ಟು ಶಿವಶಿವ ಅನ್ನಬೇಡ.. ಹುಷಾರು.."

"ಛೇ ಎನು ಮಾತುಗಳಾಡುತ್ತಿದ್ದೀ? ಅವನು ತೆಗೊಂಡಿರೋ ಸಾಲ ವಾಪಸ್ ಮಾಡೋ ಮಾತಾಡುತ್ತಿದ್ದಾನೆ".

ರಮಣಾರೆಡ್ಡಿ ಟೀ ಇಟ್ಟಕೂಡಲೇ ಲೋಟವನ್ನು ಕೈಗೆತ್ತಿಕೊಂಡು, ಸುರ್ ಎಂದ ಲೋಟದಿಂದ ಟೀ ಹೀರಿ ಒಮ್ಮೆ ಚಪ್ಪರಿಸಿ ಲೊಚಗುಟ್ಟಿದ: "ಭಾಬಿ ಕೈಯಾಗಿನ್ ಚಾ ಕುಡಿದು ಭಾಳ ದಿನ ಆದ್ವು ನೋಡಿ ಸಾಬ್"

"ರಮಣಾರೆಡ್ಡಿ - ಏನೋ ಹೊಸ ಧಂಧೆ ಅಂದೆ?"

"ಹೌದು ಸಾಬ್.. ಒಂದು ಹೊಸಾ ಕಾರು ತೆಗೊಳ್ಳೋಣ ಅಂತ. ಡೀಸಲ್ ಅಂಬಾಸಿಡರ್.."

"ಇದೇನು ಜೋಕಾ? ನಿನಗೆಯಾಕಯ್ಯಾ ಕಾರು ಅದೂ ಅಂಬಾಸಿಡರ್??"

"ನೀವೇನೇ ಹೇಳಿ ಸಾಬ್. ಕಾರಂತೂ ನಾನು ಬರಾಬ್ಬರ್ ಕೊಳ್ಳೊಂವ. ಆದರೆ ಒಂದು ವಿಷಯ ನೀವೇ ಹೇಳಬೇಕು. ಇಂಥದ್ರಲ್ಲೆಲ್ಲ ನನ್ನ ಧಿಮಾಕ್ ಓಡೋದಿಲ್ಲ."

"ನಿನ್ನ ದಿಮಾಕ್ ಓಡದೇ ಇರುವ ವಿಷಯಗಳೂ ಇವೆಯಾ? ಏನದು?"

"ಕಾರ್ ಮಾತ್ರ ನೋಡಿದ್ದೀನಿ ಸಾಬ್. ಮೆಟಡಾರ್ ಇಂಜಿನ್.. ಭಾಳ ಚೆನ್ನಾಗಿದೆ. ಬಿಳಿ ಬಣ್ಣದ್ದು. ಆದರೆ ಅದನ್ನು ಉಪಯೋಗಿಸೊಕ್ಕೆ ಏನು ಮಾಡಬೇಕು? ಇಲ್ಲೇ ಪ್ರೈವೇಟ್ ಕಂಪನಿಯವರು ತಿಂಗಳಿಗೆ ದೋಹಜಾರ್ ಬಾಡಿಗೇಗೆ ತೆಗೊಳ್ಳೋಕ್ಕೆ ತಯಾರು.. ಅಥವಾ ಡ್ರೈವರ್ ಇಟ್ಟು ಸ್ವಂತ - ಟೂರಿಸ್ಟ್ ಟ್ಯಾಕ್ಸಿಯ ಹಾಗೆ ಓಡಿಸೋದು. ಕಿಲೋಮೀಟರಿನ ಹಿಸಾಬ್ ಪ್ರಕಾರ. ಎರಡರ ಹಿಸಾಬೂ ನೋಡಿ ಯಾವುದು ಫಾಯಿದೆ ಅಂತ ನೀವೇ ಹೇಳಿ ಸಾಬ್.."

ಹೀಗೇ ಮಾತಿಗೆಳೆದು ’ಹಿಸಾಬ್’ ನೋಡಿಕೊಂಡ. ಇನ್ನೇನು ಅವನ ಜ್ಞಾನಾರ್ಜನೆ ಮುಗಿದು ಎದ್ದ ಎನ್ನುವಷ್ಟರಲ್ಲಿ ಅಸಲೀ ರಾಗವನ್ನು ಪ್ರಾರಂಭಿಸಿದ....

"ಸಾಬ್ ನೀವೇ ನೋಡಿದ್ದೀರಿ. ಇದು ಒಳ್ಳೇ ಧಂಧೆ ಅಂದಿದ್ದೀರಿ. ರೊಕ್ಕಕ್ಕೆ ಧೋಕಾ ಇಲ್ಲಾಂತ ಹೇಳಿದ್ದೀರಿ. ಕಾರಿಗೆ ಸ್ವಲ್ಪ ರೊಕ್ಕ ಕಮ್ಮಿ ಬಿದ್ದಿದೆ. ನೀವು ಈಗ ಸಹಾಯ ಮಾಡಿದರೆ ಮೂರು ತಿಂಗಳ ಬಾಡಿಗೆ ಪೂರಾ... ಅಂದರೆ ಛೇ ಹಜಾರ್ ರೂಪಾಯ್ ಆರು ಸಾವಿರ.. ನಿಮಗೆ ಕೊಟ್ಟುಬಿಡುತ್ತೇನೆ. ಹೇಗಿದ್ದರೂ ಸೊಸೈಟಿಯ ನೌಕರಿಯಿದೆ. ಮನೇ ಖರ್ಚಿಗೆ ತೊಂದರೆ ಇಲ್ಲಾ.. ಈ ಧಂಧೆ ಸರಿಯಾಗಿ ಕೂತುಕೊಂಡರೆ ನೌಕರಿಗೆ ಜೈ ಅಂತ ಗುಡ್‌ಬೈ ಹೇಳಿ ಆರಾಮಾಗಿರೋಣಾಂತ. ಈಗ ಮಾತ್ರ ನೀವು ಕೈಬಿಡಬಾರದು. ಮಿಕ್ಕ ರೊಕ್ಕ ಕೈಯಲ್ಲಿದೆ. ಒಂದೈದಾರು ಸಾವಿರ ಮಾತ್ರ ಕಮ್ಮಿ ಬಿದ್ದಿದೆ. ಅದು ಸಿಕ್ಕರೆ...."

"ರಮಣಾರೆಡ್ಡಿ, ಒಂದೇ ಸರ್ತಿ ಏಕವಾಗಿ ಐದಾರು ಸಾವಿರ ಕೇಳಿದರೆ ಹೇಗೆ ಮಾರಾಯಾ? ನಾನು ಎಲ್ಲಿಂದ ತರೋದು? ಮರದ ಮೇಲೆ ಹಣ ಬೆಳೆಯುತ್ತಾ, ನೀನೇ ಹೇಳು.."

"ಮರದ ಮೇಲೆ ಬೆಳೆಯೋದಿಲ್ಲಾ ಸಾಬ್, ಬಲ್ಬಿನಲ್ಲಿ ಬೆಳಗುತ್ತೆ! ಹ್ಹಿಹ್ಹಿ..ನಿಮಗೆ ನನ್ನ ಮೇಲೆ ನಂಬಿಕೆ ಇಲ್ಲವಾ ಸಾಬ್. ಮೂರು ತಿಂಗಳಲ್ಲಿ ಚುಕ್ತಾ ಮಾಡ್ತೀನಿ.. ನೀವೇ ಎಲ್ಲ ಹಿಸಾಬೂ ನೋಡಿದ್ದೀರ. ನನ್ನ ಮೇಲೆ ನಿಮಗೆ ನಂಬಿಕೆ ಹೊರಟು ಹೋಯಿತೇ? ಹೋಗಲಿ ರೊಕ್ಕ ನನಗಲ್ಲ, ಕಾರು ಮಾರುವ ಮಾಲೀಕನಿಗೆ ಕೊಡಿ. ಸರಿಯಾ? ಆಗಲಾದ್ರೂ ನಾನು ಈ ಧಂಧೆ ನಡೆಸುವ ಕೋಶಿಶ್ ಮಾಡುತ್ತಿದ್ದೀನಿ ಅನ್ನುವ ನಂಬಿಕೆ ನಿಮಗೆ ಬರಬಹುದು!"

ಹೀಗ ಮಾತಿನಲ್ಲಿ ಎಳೆದಾಡಿದ. ಹಿಂದೆ ಹೋದ ಐದುನೂರ ಹದಿನೈದು ವಾಪಸ್ಸು ಬರಬೇಕಾದರೆ ಇದೇ ಮಾರ್ಗವೆಂದು ಸೂಕ್ಷ್ಮವಾಗಿ ಸೂಚಿಸಿ ಬೆದರಿಸಿದ. ಇದೂ ಒಂದು ರೀತಿಯ ಇಮೋಷನಲ್ ಬ್ಲಾಕ್ ಮೆಯಿಲ್. ಕಡೆಗೂ ಹಾಗೆ ಹೀಗೆ ಮಾಡಿ ಕೈಯಲ್ಲಿದ್ದ ದುಡ್ಡನ್ನು ಕಸಿದು ಹೊರಟುಬಿಟ್ಟ. ಆದಿನದ ಘಟನೆಯನ್ನು ನೆನಪುಮಾಡಿಕೊಂಡಾಗಲೆಲ್ಲಾ, ರಮಣಾರೆಡ್ಡಿಯ ಬುದ್ಧಿವಂತಿಕೆಯನ್ನು ಮೆಚ್ಚದಿರುವುದು ಸಾಧ್ಯವೆ ಇಲ್ಲದಂತಾಗಿದೆ. ಇದ್ದಕ್ಕಿದ್ದಂತೆ, ಬರಬೇಕಿದ್ದ ಹಣದ ಮೊತ್ತ ಐನೂರಹದಿನೈದರಿಂದ ಐದುಸಾವಿರದೈನೂರಹದಿನೈದಕ್ಕೆ ಏರಿತ್ತು.

ಸಾಲದಲ್ಲಿ ಸಿಲುಕಿ ಒದ್ದಾಡುವುದು ಹೊಸ ವಿಷಯವಾಗಿರಲಿಲ್ಲವಾದರೂ, ಸಾಲ ಕೊಟ್ಟು ಕೋಡಂಗಿಯಾದದ್ದು ಇದೇ ಮೊದಲು. ಸಾಲ ಪಡೆದವನೇನೋ ಈರಭದ್ರನಾಗಿ ಕಾರನ್ನು [ಉಪದೇಶ ಪಡೆದ ’ಹಿಸಾಬ್’ಗೆ ವಿರುದ್ಧವಾಗಿ, ಕಂಪನಿಯವರಿಗೆ ನೀಡದೇ] ಓಡಾಡಿಸಿಕೊಂಡು ಸುಖವಾಗಿದ್ದ. ಆದರೆ ಸಾಲ ನೀಡಿದ ಶುಭಕಾರ್ಯಕ್ಕಾಗಿ ಬಸ್ಸಿನಲ್ಲಿ ಅವನ ಮನೆಗೆ ಹೋಗಿಬರುತ್ತಾ ಚಪ್ಪಲಿ ಸವೆಸಿದ್ದಾಗಿತ್ತು.

ಈ ಬಾರಿ ಅವನ ಮನೆಗೆ ಹೋದಾಗ ದೃಢವಾದ ನಿರ್ಣಯಗಳಿದ್ದವು. ಗಲಾಟೆ ಮಾಡಬೇಕು. ಕಟುಕನಾಗಬೇಕು. ಕುಟುಕಿ ಮಾತನಾಡಬೇಕು. ಗದರಿ ಗಲಾಟೆ ಮಾಡಬೇಕು. ಬಿಡಲೇ ಬಾರದು. ವಿಶೇಷವಾಗಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ದಿನದಂದು ಅವನ ಮನೆಯನ್ನು ರೈಡ್ ಮಾಡಿದರೆ ಅವನು ಸಿಗದೇ ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಟಿ.ವಿ ಜೋರಾಗಿ ನಡೆಯುತ್ತಿರುವಾಗ ಮನೆಯಲ್ಲಿಲ್ಲವೆಂದು ಹೇಳಿ ಕಳಿಸುವುದೂ ಸಾಧ್ಯವಿಲ್ಲದ ಮಾತೇ. ಹಾಗೂ ಅವನಿಲ್ಲವೆಂದರೆ ಪರವಾಗಿಲ್ಲ, ಬರುವವರೆಗೂ ಕಾಯಲು ಅಭ್ಯಂತರವಿಲ್ಲವೆಂದು ಅಲ್ಲೇ ಪಟ್ಟು ಹಿಡಿದು ಕುಳಿತುಕೊಳ್ಳಬೇಕು. ಅವನು ತರಿಸುವ ಸಿತಾರ, ಆಂಧ್ರಭೂಮಿ ನೋಡುತ್ತಾ ಚಂದಮಾಮಾದ ಬೆಂಬಿಡದ ಭೇತಾಳನಾಗಬೇಕು.

ಇಷ್ಟೆಲ್ಲಾ ತಯಾರಿ ನಡೆಸಿ, ಮಹೆದೀಪಟ್ಟಣಂನಲ್ಲಿದ್ದ ಅವನ ಮನೆಗೆ ಎರಡು ಬಸ್ ಬದಲಾಯಿಸಿ ಹೋದದ್ದಾಯಿತು. ರಮಣಾರೆಡ್ಡಿಯ ಬಳಿ ಹಣ ವಸೂಲುಮಾಡುವಾಗ ಅವನ ಮನೆಗೆ ತಿರುಗಾಡಿದ ಬಸ್ ಚಾರ್ಜನ್ನೂ ವಸೂಲು ಮಾಡಬೇಕೆಂಬ ದುಷ್ಟ ಆಲೋಚನೆ ಬಂದದ್ದೂ ಉಂಟು. ಚಪ್ಪಲಿಯ ಮೇಲೆ ಕಣ್ಣಾಡಿಸಿ, ಇದರ ಮೊಬಲಗನ್ನೂ ವಸೂಲು ಮಾಡಬೇಕು ಎಂದು ಯೋಚಿಸಿದ್ದುಂಟು. ಈ ಇಂಥ ವಿಕೃತಾಲೋಚನೆಗಳ ನಡುವೆಯೇ ರಮಣಾರೆಡ್ಡಿಯ ಮನೆಯ ಬಾಗಿಲನ್ನು ಕಾತರದಿಂದ ತಟ್ಟಿದ್ದಾಯಿತು.

ಬಾಗಿಲು ತೆರೆಯುವುದು ಸ್ವಲ್ಪ ತಡವಾಯಿತು. ಟಿ.ವಿಯ ಸದ್ದು ಕೇಳಿಸುತ್ತಿದೆಯೇ ಎಂದು ಕಾತರದಿಂದ ಆಲಿಸಿದರೂ ಏನೂ ಕೇಳಲಿಲ್ಲ. ರಮಣಾರೆಡ್ಡಿಯ ಹೆಂಡತಿ ಬಾಗಿಲು ತೆರೆದಳು. ಅವಳ ಕೈಯ್ಯಲ್ಲೊಂದು ಹಸುಗೂಸು.

"ರಮಣಾರೆಡ್ಡಿ ಇಲ್ಲವಾ?" [ಇಲ್ಲವೆನ್ನುತ್ತಾಳೆಂಬ ನಿರೀಕ್ಷೆಯಲ್ಲಿ, ಒಳಕ್ಕೆ ಹೊಕ್ಕು ಕೂತೇ ಬಿಡುವ ಪ್ಲಾನಿನ ನಿರೀಕ್ಷೆಯಲ್ಲಿ] ಪ್ರಶ್ನೆಯನ್ನು ಕೇಳಿದರೆ ಆಕೆ "ಇದ್ದಾರೆ" ಎಂದು ಉತ್ತರ ಕೊಟ್ಟುಬಿಟ್ಟಳು!.. ಆದರೆ ಮೂಲೆಯಲ್ಲಿ ಶಬ್ದಮಾಡದೇ ಕೂತಿದ್ದ ಟಿವಿಯ ಖಾಲೀ ತೆರೆ ನೋಡುತ್ತಲೇ --

"ಎಲ್ಲಿ?"

"ರೂಮಿನಲ್ಲಿದ್ದಾರೆ.. ಬನ್ನಿ"

ಆಕೆಯ ಹಿಂದೆಯೇ ಕೋಣೆಯನ್ನು ಹೊಕ್ಕಾಗ ಆದದ್ದು ಆಘಾತವೇ. ರಮಣಾರೆಡ್ಡಿ ಎಂದು ಗುರುತು ಹಿಡಿಯಲಾಗದಂತಹ ವ್ಯಕ್ತಿಯೊಬ್ಬ ಉದ್ದನೆಯ ಈಜಿಚೇರಿನ ಮೇಲೆ ಅರ್ಧಕುಳಿತು ಅರ್ಧ ಮಲಗಿದ್ದ.

"ಇದೇನು?"

"ನಾಲ್ಕು ದಿನದ ಕೆಳಗೆ ಸರ್ವಿಸಿಂಗ್‍ನಿಂದ ಕಾರು ತರುತ್ತಿದ್ದಾಗ ರಾತ್ರೆ ಮಾಸಾಬ್ ಟ್ಯಂಕ್ ಹತ್ತಿರ ಯಾರೋ ಅಡ್ಡಬಂದರತೆ. ಅವರನ್ನು ತಪ್ಪಿಸಲು ಹೋಗಿ ಗೋಡೆಗೆ ಗುದ್ದಿ ಆಕ್ಸಿಡೆಂಟಾಯಿತು. ನೀವು ಕುಳಿತುಕೊಳ್ಳಿ, ನಾನು ಟೀ ತರ್ತೀನಿ." ಬೇಡ ಅನ್ನುವಷ್ಟರಲ್ಲಿ ಅವಳು ಅಡುಗೆಮನೆಗೆ ಹೊರಟುಹೋಗಿದ್ದಳು.

ಅತ್ತ ರಮಣಾರೆಡ್ಡಿ ಮಾತು ಪ್ರಾರಂಭಿಸಿದ

"ಕೂತ್ಕೊಳ್ಳಿ ಸಾಬ್"

ಆ ದೃಶ್ಯ ನೋಡಲು ಕಷ್ಟದ್ದೇ ಆಗಿತ್ತು. ಕತ್ತಿನಬಳಿ ಗಾಜು ತರಚಿಕೊಂಡು ಚರ್ಮ ಹರಿದಿತ್ತಂತೆ. ಅಲ್ಲಿ ಮೂವತ್ತು ಹೊಲಿಗೆ ಹಾಕಿದ್ದಾರೆಂತೆ. ನೋಡಲಂತೂ ದಾರುಣವಾಗಿತ್ತು. ಇನ್ನೂ ಹೊಲಿಗೆ ಬಿಚ್ಚಿರಲಿಲ್ಲ. ತಲೆಯಮೇಲೆ ಸಣ್ಣ ಗಾಯಗಳಾಗಿದ್ದುವೆಂದು ಅಲ್ಲೂ ಪಟ್ಟಿ ಕಟ್ಟಿದ್ದರು. ಅವನನ್ನು ನೋಡಿ ಕೋಪಮಾಡಿಕೊಳ್ಳುವಂತೆಯೂ ಇರಲಿಲ್ಲ - ಕನಿಕರಿಸುವಂತೆಯೂ ಇರಲಿಲ್ಲ.

ರಮಣಾರೆಡ್ಡಿಯ ಹೆಂಡತಿ ಬಂದು ಮಗುವನ್ನು ಅವನ ಕೈಗಿತ್ತು ಮತ್ತೆ ಅಡುಗೆಮನೆ ಪ್ರವೇಶಿಸಿದಳು. ಅವನ ಅವಸ್ಥೆ ನೋಡಲಾಗದೇ ಆ ಮಗುವನ್ನು ಅವನಿಂದ ಬಿಡಿಸಿ ಕೈಗೆತ್ತಿಕೊಂಡದ್ದಾಯಿತು. ಆ ಮಗು ಜೋರಾಗಿ ಅಳಲು ಆರಂಭಿಸಿ ಮತ್ತೆ ರಮಣಾರೆಡ್ಡಿಯ ಕಡೆಗೇ ವಾಲಿ ಅವನ ತೊಡೆಯೇರಿ ಕೂತುಕೊಂಡಿತು.

ರಮಣಾರೆಡ್ಡಿ ಕ್ಷೀಣ ಸ್ವರದಲ್ಲಿ ಹೇಳಿದ:

"ಸಾಬ್, ನಿಮ್ಮ ರೊಕ್ಕ ಬಹಳ ತಡ ಮಾಡಿಬಿಟ್ಟೆ. ಈಗ ಕಾರಿನ ಇನ್ಶೂರೆನ್ಸ್ ಬರುವುದಿದೆ. ಬಂದ ಕೂಡಲೇ ಕೊಟ್ಟುಬಿಡುತ್ತೇನೆ. ಕಾರನ್ನೂ ಮಾರಿಹಾಕುತ್ತೇನೆ. ಎಲ್ಲಿಯ ಪರೇಶಾನ್ ಧಂಧೆ ಸಾಬ್ ಇದು??"

ರಮಣಾರೆಡ್ಡಿ ಬಹಳ ಕಷ್ಟಪಟ್ಟು ಮಾತನಾಡುತ್ತಿದ್ದ. ಅವನನ್ನು, ಅವನ ಅವಸ್ಥೆಯನ್ನೂ ನೋಡುವುದು ಕಷ್ಟದ ಮಾತೇ ಆಗಿತ್ತು.

"ರಮಣಾರೆಡ್ಡಿ, ನೀನೀಗ ಆಯಾಸ ಮಾಡಿಕೋಬೇಡ. ಅದರ ಬಗ್ಗೆ ಆಮೇಲೆ ಮಾತಾಡೋಣ. ಮೊದಲು ನೀನು ಹುಷಾರಾಗು."

ಅಷ್ಟರಲ್ಲಿ ಅವನ ಹೆಂಡತಿ ಟೀ ತಂದುಕೊಟ್ಟು, ರಮಣಾರೆಡ್ಡಿಯ ತೊಡೆಯಮೇಲಿದ್ದ ಮಗುವನ್ನು ಎತ್ತಿಕೊಂಡಳು.

"ಕಾರಿಗೇನಾಗಿದೆ?"

"ಕಾರ್ ಪೂರಾ ಜಖಂ ಆಗಿದೆ ಮಸ್ತ್ರೇ.. ಅದಕ್ಕೆ ಇನ್ಶೂರೆನ್ಸ್ ಇದ್ದದ್ದರಿಂದ ಬಚಾವ್ ಆಗೀವಿ. ಇಲ್ಲಾಂದರೆ ಪೂರಾ ಡುಬಾಯಿಸಿಬಿಡುತ್ತಿದ್ದೆವು. ಇವರನ್ನು ನೋಡಿ, ಹಾಂಗ ಹೊರಳೋಕ್ಕೂ ಆಗ್ತಾ ಇಲ್ಲ. ನಾಲ್ಕು ದಿನದಿಂದ ಹೀಂಗೇ ಬಿದ್ದಾರೆ. ನುಂಗೋಕ್ಕೂ ಆಗ್ತಾ ಇಲ್ಲ.. ಮಾತಿಗೂ ತ್ರಾಸಾಗಲಿಕ್ಕೆ ಹತ್ತದ.. ನನಗೆ ಎನೂ ತೋರುತ್ತಿಲ್ಲ. ಜೊತೆಗೆ ಮಗು ಬೇರೆ..."

"ಹೊಲಿಗೆ ಯಾವಾಗ ತೆಗೀತಾರಂತಮ್ಮಾ?"

"ಇನ್ನೊಂದು ನಾಲ್ಕೈದು ದಿನ ಬಿಟ್ಟು ಬರೂಕ್ಕ ಹೇಳಾರ ಮಾಸ್ತ್ರೇ. ಅಲ್ಲೀವರ್ಗೂ ಅಸ್ಪತ್ರೇಲೇ ಇರೂದೂ ಒಳೇದೂಂತ ಹೇಳಿದ್ದರ್ರಿ. ಆದ್ರ ಈಗ ನಮಗಿರೊ ರೊಕ್ಕದ ಪರಿಸ್ಥಿತಿನಾಗ ಅದೂ ಖರ್ಚು ಯಾಕಂತ ನಾನೇ ನೋಡ್ಕೋತೀನಂತ ಹೇಳಿ ಮನೀಗ್ ಒಯ್ದು ತಂದೀನಿ. ಆ ದಿನ ಇನ್ನು ಅರ್ಧ ಘಂಟೆ ತಡ ಆಗಿದ್ರೆ ಇವ್ರು ಉಳೀತನೇ ಇರಲಿಲ್ಲಾಂತ ಹೇಳಿದ್ದರ್ರಿ." ಎನ್ನುತ್ತಾ ಆಕೆ ಬಿಕ್ಕಳಿಸಿದಳು.

ರಮಣಾರೆಡ್ಡಿ ಏನೋ ಹೇಳಬೇಕೆಂದು ಬಾಯಿ ತೆರೆದ. ಅವನು ಮಾತನಾಡುವುದು ಬೇಡವೆಂಬ ಸೂಚನೆ ಕೊಟ್ಟಿದ್ದಾಯಿತು. ಇದ್ದಕ್ಕಿದ್ದಂತೆ ಒಳಗೆ ಅಡಗಿದ್ದ ಮಾನವೀಯತೆ ಸಹಜವಾಗಿ ಜಾಗೃತವಾಯಿತು:

"ಹಣದ ಕಷ್ಟ ಅಂದೆ. ನಾಡಿದ್ದು ಆಸ್ಪತ್ರೆಗೆ ಹೋದರೆ ಬಿಲ್ ಕೊಡೋಕ್ಕೆ, ಔಷಧಿ ತರೋಕ್ಕೆ ಹಣ ಇದೆಯಾ?"

"ಇಲ್ರೀ ಮಾಸ್ತ್ರೇ..ಏನೋ ಒಂದು ದಾರಿ ಆ ತಿಮ್ಮಪ್ಪಾನೇ ತೋರಿಸ್ತನೆ. ಯಾರಾದರೂ ಕೊಡದೇ ಇರುವರೇ? ಅದರಲ್ಲೂ ಈ ಇಂಥ ಪರಿಸ್ಥಿತಿನಾಗ ಕಟುಕರೂ ಕರಗ್ತಾರ್ರೀ.."

"ಇರಲಿ, ಯಾರನ್ನಾದರೂ ಮನೆ ಕಡೆ ಕಳಿಸಮ್ಮಾ. ನನ್ನ ಹತ್ತಿರ ಐನೂರು ರೂಪಾಯಿಯಿದೆ. ಕಳಿಸಿಕೊಡುತ್ತೇನೆ."

ಮನೆಯ ಕಡೆಗೆ ಹೊರಟಾಗ ಮನಸ್ಸಿನಲ್ಲಿದ್ದದ್ದು ರಮಣಾರೆಡ್ಡಿಯ ಚಿತ್ರ. ಈ ವಿಷಯವನ್ನು ಹೆಂಡತಿಗೆ ತಿಳಿಸಿದ್ದೂ ಆಯಿತು. ಈ ಇಂಥ ಸಂದರ್ಭದಲ್ಲಿ ತಾನೂ ಹೀಗೆ ಮಾಡುತ್ತಿದ್ದೆ ಎಂದವಳು ಹೇಳಿದ್ದು ಮನಸ್ಸಿಗೆ ಮುದ ನೀಡಿತು. ರಮಣಾರೆಡ್ಡಿಗೆ ಐನೂರು ರೂಪಾಯಿ ಕಳಿಸಿದ್ದೂ ಆಯಿತು.

ಈ ಘಟನೆಯಾಗಿ ಸಾಕಷ್ಟು ದಿನಗಳಾಗಿವೆ. ರಮಣಾರೆಡ್ಡಿ ಅವನಿಗೆ ಬಂದ ಇನ್ಶೂರೆನ್ಸ್ ಹಣದಲ್ಲಿ ಹಳೆಯ ಕಾರನ್ನು ಪೂರ್ತಿ ರಿಪೇರಿ ಮಾಡಿದ. "ಕಾರಿದ್ರೆ ಆಮದನಿಯಾದರೂ ಇರುತ್ತೆ ಸಾಬ್" ಎಂದು ಹೇಳಿದ್ದಕ್ಕೆ ತಲೆದೂಗಿದ್ದಾಗಿತ್ತು. ಈಗ ರಮಣಾರೆಡ್ಡಿಯಿಂದ ಬರಬೇಕಿದ್ದ ಮೊತ್ತ ಆರುಸಾವಿರದ ಹದಿನೈದು ರೂಪಾಯಿಗಳು. ಅಂದು ಸಂಭವಿಸಿದ ಅಪಘಾತದ ಗಾಯಕ್ಕೆ ಹಾಕಿದ್ದ ಹೊಲಿಗೆಯ ಗುರುತುಗಳು ಕೂಡಾ ರಮಣಾರೆಡ್ಡಿಯ ಕತ್ತಿನಿಂದ ಮಾಯವಾಗುತ್ತಿವೆ. ಈ ಆರುಸಾವಿರದ ಹದಿನೈದು ರೂಪಾಯಿಯ ವಸೂಲಿಗಾಗಿ ಅವನ ಬಳಿಗೆ ಆಗಾಗ ಹೋಗುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಈ ತಿಂಗಳಲ್ಲಿ ಇದು ನಾಲ್ಕನೇ ಬಾರಿ.. ಹೋಗಿ ಅವನಿಲ್ಲ ಅನ್ನಿಸಿಕೊಂಡು ವಾಪಸ್ಸಾದದ್ದು.

ಮನೆಗೆ ಹಿಂದಿರುಗಿ ಮಂಚದ ಮೇಲೆ ಉರುಳಿದಾಗ ಕೆಟ್ಟ ಆಲೋಚನೆಯೊಂದು ಮೂಡುತ್ತದೆ. ಹೆಂಡತಿಯನ್ನು ಕರೆದು ಒಂದು ಪ್ರಶ್ನೆ ಹಾಗಬೇಕನ್ನಿಸುತ್ತದೆ:

"ಅಕಸ್ಮಾತ್ ರಮಣಾರೆಡ್ಡಿಗೆ ಮತ್ತೊಮ್ಮೆ ಆಕ್ಸಿಡೆಂಟಾದರೆ ಏನು ಮಾಡಬಹುದು? ಮತ್ತೆ ಅವನಿಗೆ ಸಾಲ ಕೊಡುತ್ತೇವೆಯೇ, ಅಥವಾ ಕಡಾಖಂಡಿತವಾಗಿ ಇಲ್ಲಾಂತ ಹೇಳುತ್ತೀವಾ?"

"ಅಯ್ಯೋ ನಿನ್ನ ಬೆಪ್ಪುತನವೇ.. ನನ್ನ ಅಂದಾಜಿನ ಪ್ರಕಾರ ಆಕ್ಸಿಡೆಂಟ್ ಅಲ್ಲ, ಅವನು ಹಾಗೇ ಬಂದು ಕೇಳಿದರೂ ಅವನ ಕಾಲಿಗೆರಗಿ ಸಾಲ ಕೊಡುತ್ತೀ.. ನಿನಗೆ ತಾಕತ್ತಿದ್ದರೆ ಇಲ್ಲ ಅನ್ನುವ ಪದವನ್ನು ಪ್ರಯೋಗಮಾಡು ನೋಡೋಣ"

ಅವಳ ಸವಾಲಿಗೆ ಇಲ್ಲ ಅನ್ನುವ ಧೈರ್ಯವೇ ಬರುವುದಿಲ್ಲ. ಮುಂದಿನ ಭಾನುವಾರ ಕ್ರಿಕೆಟ್ ಮ್ಯಾಚ್ ಇದೆ. ರಮಣಾರೆಡ್ಡಿಯ ಮನೆಗೆ ಹೋಗಬೇಕು. ಮಲಗಿದಾಗ ನೂರುರೂಪಾಯಿಯ ಅರವತ್ತು, ಹತ್ತು ರೂಪಾಯಿಯದೊಂದು ಹಾಗೂ ಐದು ರೂಪಾಯಿಯದೊಂದು ನೋಟು ಎಲ್ಲವೂ ಏಕಕಾಲಕ್ಕೆ ಮನದೆದುರಿಗೆ ನರ್ತನ ಮಾಡುತ್ತವೆ.

ಅಷ್ಟರಲ್ಲಿ ಮನೆಯ ಘಂಟೆಯ ಶಬ್ದವಾಗುತ್ತದೆ. ಹೆಂಡತಿ ಬಾಗಿಲುತೆಗೆದು ಕೂಗುತ್ತಾಳೆ "ಓ ರಮಣಾರೆಡ್ಡಿ ಬಾ, ಬಾ. ಸಾಹೇಬರು ನಿನ್ನ ವಿಷಯಾನೇ ಮಾತನಾಡುತ್ತಾ ಇದ್ದರು...."

೧೯೮೬

Thursday, June 12, 2008

ನಿನ್ನೆಗಳ ನೆನಪಿನಲ್ಲಿ, ನಾಳೆಗಳ ನಿರೀಕ್ಷೆಯಲ್ಲಿ


One is never a virgin twice
Malcolm Bradbury

ಈಗನ್ನಿಸುತ್ತಿದೆ. ಆ ಕವಿತೆ ಪ್ರಕಟವಾಗಬಾರದಿತ್ತು. ಅದು ದುರಾದೃಷ್ಟವಶಾತ್ ಪ್ರಕಟವಾದದ್ದರಿಂದಲೇ ಈ ಸಂಬಂಧಗಳ ಕೊಂಡಿ ಬೆಳೆದದ್ದು. ಇಲ್ಲದಿದ್ದರೆ ಇವೆಲ್ಲಾ ಘಟಿಸುತ್ತಲೇ ಇರಲಿಲ್ಲ. ಹೌದು ಕೆಲವು ತಿಂಗಳುಗಳ ಹಿಂದೆ ಅವಳ ಹೆಸರಿನಲ್ಲಿ ಒಂದು ಕವಿತೆ ಅಚ್ಚಾಗಿತ್ತು. ಅದನ್ನು ಅವಳೇನೂ ಒಳ್ಳೆಯ ಕವೆತೆಯೆಂದು ಪರಿಗಣಿಸಿರಲಿಲ್ಲ. ಯಾವಾಗಲೋ ಕಾಲೇಜಿನಲ್ಲಿದ್ದಾಗ ತಾನೂ ಕವಿತೆ ಬರೆಯಬಲ್ಲೆ ಎಂದು ತೋರಿಸಿಕೊಳ್ಳಲು ಬರೆದದ್ದು. ಕೇವಲ ಅಹಂ ಸಲುವಾಗಿ. ಆದರೆ ಅವಳ ಗಂಡ ಬಲವಂತವಾಗಿ ಅದನ್ನು ಪತ್ರಿಕೆಯೊಂದಕ್ಕೆ ಪ್ರಕಟಣೆಗಾಗಿ ಕಳಿಸಬೇಕೆಂದು ಪಟ್ಟು ಹಿಡಿದಿದ್ದರಿಂದ ಅದು ಪತ್ರಿಕೆಗೆ ಹೋಯಿತು. ಆಶ್ಚರ್ಯವೆಂಬಂತೆ ಅದು ಪ್ರಕಟವೂ ಆಯಿತು.

ಆ ಕವಿತೆಯೇ ಈ ಕಥೆಯ ಮೂಲ. ಈಗಲೇ ಹೇಳಿಬಿಡುವುದು ಒಳಿತು. ಇದೊಂದು ಪ್ರೇಮ ಕಥೆ. ಹಿಂದೆ ಬಂದ ಎಷ್ಟೋ ಪ್ರೇಮ ಕಥೆಗಳ ಪುನರಾವರ್ತನೆ. ಆದರೆ ಇದನ್ನು ಬರೆಯುತ್ತಿರುವುದು ಕವಯತ್ರಿಯಾಗಲೀ ಅಥವಾ ಸಾಹಿತಿಯಾಗಲೀ ಅಲ್ಲ. ಆಕೆ ಒಬ್ಬಳು ಪ್ರೇಮಿ. ದಿನಚರಿಯ ಪುಟಗಳಲ್ಲಿ ದಾಖಲಿಸಬೇಕಿದ್ದ ವಿವರಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತಿದ್ದಾಳೆ. ಅಷ್ಟೇ. ಇದು ಒಂದು ಉತ್ತಮ ಆತ್ಮಕಥನವಾಗಬಹುದಿತ್ತೇನೋ. ಆದರೆ ಆ ಬಗ್ಗೆಯೂ ಅವಳಿಗೆ ಭರವಸೆಯಿಲ್ಲ. ಏಕೆಂದರೆ ಈ ಕಥೆಗೆ ಒಂದು ಚೌಕಟ್ಟಿಲ್ಲ. ಈ ಕಥೆ ಜೀವನದಷ್ಟೇ ಅಸಂಗತವಾಗಿದೆ.

ಹೌದು ಕವಿತೆ ಪ್ರಕಟವಾಯಿತು. ಅದರಿಂದೇನಾಯಿತು? ಸಾಮಾನ್ಯವಾಗಿ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಆ ಕವಿತೆಯ ಜೊತೆ ತಾನು ಕಾಲೇಜಿನಲ್ಲಿದ್ದಾಗ ತೆಗೆಸಿಕೊಂಡಿದ್ದ ಚಿತ್ರ, ಮತ್ತು ಆಕೆಯ ವಿಳಾಸವೂ ಪ್ರಕಟವಾಗಿತ್ತು. ಬಹುಶಃ ಅದು ಇರದಿದ್ದರೆ ಈ ಕಥೆಯ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ. ಪತ್ರಿಕೆ ಮಾರುಕಟ್ಟೆಗೆ ಬಂದ ಎರಡು ದಿನಗಳಲ್ಲೇ ಅವಳಿಗೆ ಒಂದು ಪತ್ರ ಬಂದಿತು. ಮೊದಲ ಕವಿತೆ ಪ್ರಕಟವಾದದ್ದಕ್ಕೆ ಬಂದ ಮೊದಲ ವೈಯಕ್ತಿಕ ಪತ್ರ!

*

ಅವಳ ಕೈಯಲ್ಲಿದ್ದ ಪತ್ರವನ್ನು ಮತ್ತೊಮ್ಮೆ ನೋಡಿದಳು:

ಮಾನ್ಯ ಶ್ರೀಮತಿ ಲಾವಣ್ಯ ಅವರಿಗೆ
ವಂದನೆಗಳು.
ಮೊನ್ನೆ ನೀವು ಅಶೋಕನ ಹೆಸರಿಗ ಬರೆದ ಪತ್ರ ತಲುಪಿದೆ. ದುರಾದೃಷ್ಟವಶಾತ್ ಸ್ಕೂಟರ್ ಅಪಘಾತದಲ್ಲಿ ಹೋದ ತಿಂಗಳು ೨೦ರಂದು ಅಶೋಕ ತೀರಿಕೊಂಡ. ನಿಮ್ಮ ಪತ್ರ ನೋಡಿದರೆ ನಿಮಗೆ ಈ ವಿಷಯ ತಿಳಿದಿಲ್ಲವೆಂದು ಗೊತ್ತಾಗುತ್ತದೆ. ಅಶೋಕನ ವಿಳಾಸದ ಪುಸ್ತಕದಲ್ಲಿದ್ದ ಎಲ್ಲರಿಗೂ ಪತ್ರ ಬರೆದಿದ್ದೆವು. ನಿಮ್ಮ ವಿಳಾಸ ಅಲ್ಲಿರಲಿಲ್ಲವಾದ್ದರಿಂದ ನಿಮಗೆ ತಿಳಿಸಲಾಗಲಿಲ್ಲ ಕ್ಷಮಿಸಿ.

ಅಶೋಕನೊಟ್ಟಿಗೆ ನಿಮ್ಮ ಸಂಬಂಧ ಯಾವರೀತಿಯದ್ದು ಗೊತ್ತಿಲ್ಲ. ಅವನಿಂದ ನಿಮಗೆ ಏನಾದರೂ ಬರಬೇಕಿದ್ದರೆ [ಹಣ, ಪುಸ್ತಕಗಳು ಇತ್ಯಾದಿ] ದಯಮಾಡಿ ತಿಳಿಸಿ. ಅವನ ಪರವಾಗಿ ನಾನು ಕೊಡಲಾದರೆ ಕೊಡುತ್ತೇನೆ. ಈ ವಿದಾಯದ ದುಃಖದಲ್ಲಿ ನೀವೂ ಭಾಗಿಗಳಾಗಿದ್ದೀರಿ ಎಂಬ ಅರಿವು ನನಗಿದೆ. ಆದರೆ ಎಲ್ಲರಿಗೂ ಒಂದಲ್ಲ ಒಂದು ದಿನ ವಿದಾಯ ಹೇಳಲೇಬೇಕಾದ್ದು ಅನಿವಾರ್ಯ ಅಲ್ಲವೇ?

ಇತಿ ವಿಶ್ವಾಸಿ

ಸಂದೀಪ್ [ಅಶೋಕನ ಅಣ್ಣ]

ಈ ಅಶೋಕ ಹೇಗಿದ್ದಿರಬಹುದು? ಮಣ್ಣಲ್ಲಿ ಮಣ್ಣಾಗಿ ಅಥವಾ ಬೆಂಕಿಯಲ್ಲಿ ಬೂದಿಯಾಗಿ ಹೋಗಿರುವ ಆತನ ಮುಖವನ್ನು ಆಕೆ ನೋಡಿರಲಿಲ್ಲ. ಹೋಗಲೀ ಚಿತ್ರವನ್ನಾದರೂ ಕಂಡಿರಲಿಲ್ಲ. ಆತ ತನಗೆ ಕೊಡಬೇಕಾದ್ದೇನಾದರೂ ಇತ್ತೇ? ಅದನ್ನು ಆತನ ಅಣ್ಣನಿಗೆ ಪತ್ರ ಬರೆದು ತರಿಸಿಕೊಳ್ಳಬೇಕೇ? ಹಾಗೇನೂ ಇದ್ದಂತಿಲ್ಲ. ಬದಲಿಗೆ ತಾನೇ ಅವರಿಗೆ ಕೊಡಬೇಕಾದ್ದು ಸಾಕಷ್ಟಿರಬಹುದು. ಹೌದು ಏನು ಕೊಡಬೇಕು? ಯಾಕೆ ಕೊಡಬೇಕು? ತಮ್ಮಿಬ್ಬರ ನಡುವಣ ಸಂಬಂಧ ಎಂಥದ್ದು? ಅವಳಿಗೆ ಒಂದೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಎಲ್ಲಾ ಮಸಕು ಮಸಕು. ಆದರೂ ಅವರಿಬ್ಬರಲ್ಲಿ ಗಾಢ ಸಂಬಂಧ ಬೆಳೆದಿತ್ತು. ಅವನ ಮರಣದೊಂದಿಗೆ ಅದು ಕಡಿದುಹೋಯಿತೇ? ಅಥವಾ ಇನ್ನೂ ಇದೆಯೇ? ಅವಳಿಗೆ ಗೊತ್ತಾಗುತ್ತಿಲ್ಲ.

ಕ್ಷಮಿಸಿ, ಚೂರು ಚೂರಾದ ಚಿತ್ರಗಳನ್ನು ಅಸಂಗತವಾಗಿ ನಿಮ್ಮ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಬಹುಶಃ ಪೂರ್ಣಗೊಂಡಾಗ ಈ ಚಿತ್ರ ಇನ್ನಷ್ಟು ಸ್ಪಷ್ಟಗೊಳ್ಳಬಹುದು.

ಹಾಂ ಅವಳ ಕವಿತೆಯ ವಿಷಯ ಚರ್ಚಿಸುತ್ತಿದ್ದೆವು. ಹೌದು. ಅದಕ್ಕೆ ಅವಳಿಗೆ ಒಂದು ಪ್ರತಿಕ್ರಿಯಾತ್ಮಕ ಪತ್ರ ಬಂದಿತ್ತು. ಆ ದಿನ ಆ ಪತ್ರ ಬಂದ ಖುಷಿಯಲ್ಲಿ ಅದರಲ್ಲೇನು ಬರೆದಿದೆ ಅನ್ನುವುದನ್ನೇ ಅವಳು ಸರಿಯಾಗಿ ಗಮನಿಸಿರಲಿಲ್ಲ. ಪ್ರತಿಕ್ರಿಯೆಯೊಂದನ್ನು ಆಹ್ವಾನಿಸುವಷ್ಟರ ಅರ್ಹತೆ ಆ ಕವಿತೆಗಿದೆ ಅನ್ನುವುದೇ ಅವಳಿಗೆ ಸಮಾಧಾನ ತಂದಿತ್ತು. ಪತ್ರದ ಒಕ್ಕಣೆ, ಪದಗಳ ಬಳಕೆ, ಆ ಪತ್ರವನ್ನು ಒಬ್ಬ ಪಳಗಿದ ಕಥೆಗಾರ ಮಾತ್ರ ಬರೆಯಬಲ್ಲ ಅನ್ನಿಸುವಂತಹ ಪತ್ರವದು.

*

ಕೈಯಲ್ಲಿರುವ ಪತ್ರವನ್ನು ಪಕ್ಕದಲ್ಲಿಟ್ಟು ಅದಕ್ಕೆ ಒಂದು ಉತ್ತರವನ್ನು ಬರೆಯಬೇಕೆಂದು ಅವಳು ಯೋಚಿಸಿದಳು. ಕಾಗದ, ಪೆನ್ನು ತಂದು ಒತ್ತಿಗೆಂದು ಒಂದು ಪತ್ರಿಕೆಯನ್ನು ಕೈಗೆತ್ತಿಕೊಂಡಳು. ಅದೇಕೋ ಕಾಗದ ಬರೆಯುವುದಕ್ಕೆ ಬದಲು ಪತ್ರಿಕೆಯ ಪುಟಗಳನ್ನು ತಿರುವಿಹಾಕಬೇಕು ಅನ್ನಿಸಿತು. ಒಳಗೆ ನೋಡಿದರೆ ಅಶೋಕನ ಕಥೆ. ಎಲ್ಲೆಲ್ಲಿಂದಲೂ ಅವನು ಆವರಿಸಿಬಿಡುತ್ತಿದ್ದಾನೆ ಅನ್ನಿಸಿತು. ಪತ್ರಿಕೆಯ ದಿನಾಂಕವನ್ನು ನೋಡಿದಳು: ಅಶೋಕ ಮರಣಿಸಿದ ನಂತರ ಪ್ರಕಟವಾಗಿರುವ ಕಥೆ ಅದು. ಪಾಪ! ಇದ್ದಿದ್ದರೆ ಖುಷಿ ಪಡುತ್ತಿದ್ದ ಅನ್ನುವುದರಲ್ಲಿ ಅನುಮಾನವಿಲ್ಲ. ಕಾಗದ, ಪೆನ್ನು ಬದಿಯಲ್ಲಿಟ್ಟು ಕತೆ ಓದಲು ಪ್ರಾರಂಭಿಸಿದಳು. ಈ ಕಥೆ ತನಗೆ ಗೊತ್ತು ಎಂದು ಅವಳಿಗನ್ನಿಸಿತು. ಈಗೀಗ ಅವಳಿಗೆ ಯಾವ ಕಥೆಯನ್ನೋದಿದರೂ ಹಾಗನ್ನಿಸುತ್ತಿದೆ.. "ಮುಂಜಾನೆಯ ಚುಮುಚುಮು ಬೆಳಕು, ಆಫಿಸಿನಲ್ಲಿ ರೇಗಾಡುವ ಬಾಸ್, ಪ್ರೇಮ ಪ್ರಕರಣಗಳು, ಸಾವು, ವ್ಯವಸ್ಥೆ.." ಹೀಗೆ ಎಲ್ಲರೂ ಗೊತ್ತಿರುವುದನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾರೆನ್ನಿಸುತ್ತದೆ. ಆದ್ದರಿಂದಲೇ ಇರಬೇಕು ಅವಳು ಕಾವ್ಯಪ್ರೇಮಿಯಾಗಿರುವುದು. ಅಶೋಕನ ಕಥೆಯನ್ನು ಓದಿದಾಗಲೂ ಅಷ್ಟೇ ಗೊತ್ತಿರುವ ಕಥೆ ಹೇಳಿ ಪಲಾಯನವಾದದ ಸುಳ್ಳು ಅಂತ್ಯ ಕೊಟ್ಟಿದ್ದಾನೆ ಅನ್ನಿಸಿತು. ಜೀವನದ ಮುಳ್ಳಿನ ಹಾದಿಯ ಮೇಲೆ ನಡೆದು ಸುಖದ ಸುಪ್ಪತ್ತಿಗೆ ಸೇರುವ ಅದೇ ಹಳೆಯ ಕಥೆ. "ಬರೀ ಸುಳ್ಳು" ಎಂದು ಅವನಿಗೆ ಹೇಳಬಹುದಿತ್ತು. ಆದರೆ ಸಾಧ್ಯವಿಲ್ಲವಲ್ಲಾ.

ಇವಳ ಈ ಕಥೆ ಮಸುಕುಮಸುಕಾಗಿದೆ ಅಲ್ಲಾ? ಇದಕ್ಕೆ ಒಂದು ಸ್ವರೂಪವನ್ನು ಕೊಡಲು ಅವಳಿಗೆ ಆಗುತ್ತಿಲ್ಲ. ಆಕೆ ಒಳ್ಳೆಯ ಕಥೆಗಾರ್ತಿ ಅಲ್ಲ ಅನ್ನುವುದು ಅವಳ ಭಾವನೆ. ತನ್ನ ಮನಸ್ಸಿಗೆ ಬಂದದ್ದನ್ನು ಹಾಗೆಯೇ ಹೇಳುತ್ತಾಳೆ. ಹಾಂ.. ಅಂದಹಾಗೆ ಆದಿನ ಬಂದ ಪತ್ರದ ವಿಷಯಕ್ಕೆ ಮತ್ತೆ ಅವಳು ಬರಲೆತ್ನಿಸಿದ್ದಳು. ಒಳ್ಳೆಯ ಕತೆಗಾರ ಬರೆದಂತಹ ಪತ್ರ ಎಂದು ಹೇಳಿದ್ದಳಲ್ಲಾ.. ಹೌದು.. ಅದು ನಿಜ. ಯಾಕೆಂದರೆ ಅವನು ಆ ಪತ್ರದಲ್ಲಿ ಕವಿತೆಯ ಬಗೆಗೆ ಏನೂ ಬರೆದಿರಲಿಲ್ಲ. ಬರೇ ಅವಳ ಬಗ್ಗೆ ಬರೆದಿದ್ದ. ಅಷ್ಟೇ. ಆಕರ್ಷಕವಾದ ಅವಳ ಫೋಟೋದ ಬಗ್ಗೆ. ಅವನು ಬರೆದಿದ್ದದ್ದು ಅವಳು ಇಪ್ಪತ್ತರ ಹರೆಯದಲ್ಲಿ ತೆಗೆಸಿಕೊಂಡಿದ್ದ ಆ ಚಿತ್ರದ ಬಗ್ಗೆ. ಕಾಲಗಮನದಲ್ಲಿ ತನ್ನನ್ನು ಎಂಟು ವರ್ಷ ಹಿಂದಕ್ಕೆ ಆತ ಕರೆದೊಯ್ದಿದ್ದ. ಹಾಗೆ ನೋಡಿದರೆ ವರ್ತಮಾನದಲ್ಲಿ ಯಾವ ಮೌಲ್ಯವೂ ಇಲ್ಲದ ಆ ಪತ್ರವನ್ನು ಅವಳು ನಾಶಮಾಡಬೇಕಿತ್ತು. ಮದುವೆಯಾಗಿರುವ ಅವಳನ್ನು, ಅವಳ ಸೌಂದರ್ಯವನ್ನು ಹೊಗಳಿ ಬರೆದಿರುವ ಯುವಕನ ಪತ್ರದೊಂದಿಗೆ ತನಗೇನು ಕೆಲಸ? ಅಂದು ಅದನ್ನು ತನ್ನ ಗಂಡನಿಗೂ ಅವಳು ತೋರಿಸಿದ್ದಳು. ಅರ್ಥಾತ್ ಅವಳು ಆ ಪತ್ರದ ಮತ್ತಿನಲ್ಲಿ ಪೂರ್ತಿಯಾಗಿ ಮೈಮರೆತಿರಲಿಲ್ಲ. ಆದರೂ, ಆದರೂ... ಈ ಚರಿತ್ರೆಯ ಕಲ್ಪನಾಲೋಕಕ್ಕೆ ಎಳೆದೊಯ್ಯುವುದರಲ್ಲಿ ಅಶೋಕ ಸಫಲನಾಗಿದ್ದ. ಆದ್ದರಿಂದಲೇ ಅಶೋಕನ ಪತ್ರಕ್ಕೆ ಆಕೆ ಉತ್ತರ ಬರೆದುಹಾಕಿದ್ದಳು.

*

ಮಾನ್ಯ ಸಂದೀಪ್
ವಂದನೆಗಳು

ನಿಮ್ಮ ಪತ್ರ ತಲುಪಿದೆ. ಅಶೋಕರ ಸಾವಿನ ವಿಷಯ ತಿಳಿದು ಬಹಳ ಬೇಸರವಾಯಿತು. ಇಷ್ಟು ಸಣ್ಣ ವಯಸ್ಸಿನಲ್ಲೇ ಅವರಿಗೆ ಹೀಗಾದದ್ದು ನನಗೆ ಆಘಾತವನ್ನುಂಟುಮಾಡಿದೆ. ಅಶೋಕರ ಕಥೆಗಳು ನನಗೆ ಅತ್ಯಂತ ಪ್ರಿಯವಾಗಿದ್ದುವು. ಇತ್ತೀಚೆಗೆ ಪ್ರಕಟವಾದ ಅವರ ಕಥೆಯಂತೂ ಅದ್ಭುತ. ಇಂತಹ ಒಳ್ಳೆಯ ಕಥೆಗಾರನನ್ನು ಕಳೆದುಕೊಂಡೆವೆಲ್ಲಾ ಎಂಬ ದುಃಖ ನನ್ನನ್ನು ಆವರಿಸಿದೆ.

ಅವರಿಂದ ನನಗೆ ಬರಬೇಕಾದ್ದಾಗಲೀ, ನನ್ನಿಂದ ಅವರಿಗೆ ಹೋಗಬೇಕಾದ್ದಾಗಲೀ ಏನೂ ಇಲ್ಲ. ನಮ್ಮಿಬ್ಬರ ವ್ಯವಹಾರ ಕೇವಲ ಕತೆಗಾರ-ಅಭಿಮಾನಿ ನಡುವಿನ ವ್ಯವಹಾರವಾಗಿತ್ತು. ನಿಮ್ಮ ಸೌಜನ್ಯಕ್ಕಾಗಿ ಧನ್ಯವಾದಗಳು. ಅಶೋಕರ ನಷ್ಟ ಭರಿಸುವ ಶಕ್ತಿ ನಿಮಗೆ ದೊರೆಯಲಿ, ಹಾಗೆ ಅವರ ಆತ್ಮಕ್ಕೂ ಶಾಂತಿ ದೊರೆಯಲೆಂದು ಹಾರೈಸುತ್ತೇನೆ.

ವಿಶ್ವಾಸಿ
ಲಾವಣ್ಯ

ಸಂದೀಪನ ಪತ್ರಕ್ಕೆ ಉತ್ತರಿಸಬೇಕೆಂಬ ವಾಸ್ತವ ಕಾಡಿದಾಗ ಮೇಲಿನ ಸಾಲುಗಳನ್ನು ಯಾಂತ್ರಿಕವಾಗಿ ಗೀಚಿಹಾಕಿದ್ದಳು. ಪತ್ರ ಬರೆಯುವಾಗ ತಾನು ಸುಳ್ಳು ಹೇಳುತ್ತಿದ್ದಾಳೆಂದು ಅವಳಿಗೆ ಗೊತ್ತಿತ್ತು. ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಳೆಂಬ ಅರಿವಿತ್ತು. ಲೇಖನಿಯಿಂದ ಹೊರಹೊಮ್ಮಿದ ಕೆಲವೇ ಪದಗಳಲ್ಲಿ ಒಂದು ಗಾಢ ಸಂಬಂಧವನ್ನು ಅವಳು ಕತ್ತರಿಸಿದ್ದಳು. ಅದಕ್ಕೇ ಈ ಕಥೆ ಹೇಳುವ ಮೊದಲೇ ಅವಳು ಅಂದುಕೊಂಡಿದ್ದಳು -- ಮೂರ್ತವಾಗಿ ಅಭಿವ್ಯಕ್ತಿಸುವ ಪದಗಳಿಗಿಂತ ಅಮೂರ್ತ ಸಂಕೇತಗಳೇ ತನಗೆ ಹೆಚ್ಚು ಪ್ರಿಯ. ಏಕೆಂದರೆ ಅಲ್ಲಿ ಅಷ್ಟರ ಮಟ್ಟಿಗಾದರೂ ಪ್ರಾಮಾಣಿಕತೆ ಇರುತ್ತದೆ.

ಅವಳ ಕಥೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವೇನೋ. ಹೌದು ಅದನ್ನು ಮೂರ್ತವಾಗಿ ಅಭಿವ್ಯಕ್ತಿಸಲು ಅವಳಿಂದ ಆಗುತ್ತಿಲ್ಲ. ಹಾಗೆಯೇ ಅದು ಅಮೂರ್ತವಾಗಿ ಉಳಿದಷ್ಟೂ ಓದುಗರು ತಮ್ಮ ಮನೋಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವ ಸಾಧ್ಯತೆಯಿದೆ ಅನ್ನಿಸುತ್ತಿರುವುದರಿಂದ ಅವಳು ಇದೇ ರೀತಿಯಲ್ಲಿ ಇದಕ್ಕೊಂದು ಸ್ವರೂಪ ಕೊಡಲು ಪ್ರಯತ್ನಮಾಡಿದ್ದಳು. ಅವಳಿಗೆ ಬಂದ ಆ ಪತ್ರಕ್ಕೆ ತಾನು ಉತ್ತರಿಸಿದ್ದು ನಿಜ. ಅಶೋಕ ನೋಡಿದ್ದ ಇಪ್ಪತ್ತರ ಹರೆಯದ ಕನ್ಯೆಯ ಶೈಲಿಯಲ್ಲಿ ಉತ್ತೇಜಕವಾಗಿ ಆಕೆ ಉತ್ತರಿಸಿದ್ದಳು. ಅದಕ್ಕೆ ಅವಳ ಆತ್ಮರತಿ ಕಾರಣವೋ, ಅವನು ಬರೆದ ಪತ್ರವೇ ಕಾರಣವೋ, ಒಂದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಕಾದು ನೋಡಿದರೆ ಅರ್ಥ ತಿಳಿದೀತೆಂದು ಭಾವಿಸಿದ್ದಳು. ಆದರೂ ಹೀಗೆ ಅಮೂರ್ತವಾದ ಸಂಬಂಧಗಳು ಕಾಲಗಮನದಲ್ಲಿ ಹೊಸ ಹೊಸ ಸ್ವರೂಪ ಪಡೆಯುತ್ತಾ ಹೋಗುತ್ತವೆ. ಈ ಸಂಬಂಧವೂ ಇನ್ನಷ್ಟು ಸ್ಪಷ್ಟವಾಗಲು ಅವಳು ಕಾಯಬೇಕಿತ್ತು. ಹಾಗೆಂದೇ ಅಶೋಕನ ಉತ್ತರಕ್ಕಾಗಿ ಅವಳು ಕಾಯುತ್ತಾ ಕುಳಿತಿದ್ದಳು.

*

ಕಾಯುತ್ತಾ ಕುಳಿತಿದ್ದಳು. ಅವಳ ಗಂಡನ ಸುಳಿವು ಇನ್ನೂ ಇರಲಿಲ್ಲ. ಸಂದೀಪನಿಗೆ ಬರೆದ ಪತ್ರವನ್ನು ಅಂಚೆಗೆ ಹಾಕಿ ಬಂದದ್ದೂ ಆಗಿತ್ತು. ಸಮಯ ಮೀರಿದರೂ ತನ್ನ ಗಂಡನಿನ್ನೂ ಬಂದಿಲ್ಲ. ಏಕೆ ತಡವಾಗಿರಬಹುದು? ಕಡೆಗೂ ಅವನು ಆಫೀಸಿನಿಂದ ಬಂದಾಗ ಅವನಿಗೆ ಸಂದೀಪನ ಪತ್ರದ ವಿಷಯ ಹೇಳಿದ್ದಳು. "ಅಶೋಕ ತೀರಿಕೊಂಡನಂತೆ".. ಅದಕ್ಕೆ ಗಂಡ ನಿರ್ಲಿಪ್ತವಾಗಿ ಮುಗುಳ್ನಕ್ಕಿದ್ದ. "ಹೌದೇನು ಪಾಪ?".. ಇಂಥಾ ಸ್ಥಿತಪ್ರಜ್ಞತೆಯನ್ನು ಅವಳು ಎಂದೂ ಕಂಡಿರಲಿಲ್ಲ. ಕೇವಲ ಯಾವುದೋ ಪತ್ರಿಕೆಯ ಒಂದು ವರದಿಯನ್ನು ಓದಿದಂತೆ ಅವನು ಪ್ರತಿಕ್ರಿಯಿಸಿದ್ದ. ಏನೂ ಸಂಬಂಧವೇ ಇಲ್ಲವೆಂಬಂತೆ. ಅದೂ ನಿಜವೇ. ಅವನಿಗೂ ಅಶೋಕನಿಗೂ ಇರುವ ಸಂಬಂಧವಾದರೂ ಏನು? ಅಶೋಕನ ಸಂಬಂಧವನ್ನು ಬೆಳೆಸಿಕೊಂಡವಳು ತಾನಲ್ಲವೇ? ಆದರೂ ಈ ಮನುಷ್ಯನೇಕೆ ಮಂಜುಗಡ್ಡೆಯಾಗಿದ್ದಾನೆಂದು ಅವಳಿಗೆ ಅರ್ಥವಾಗಿರಲಿಲ್ಲ.

ಪತ್ರದ ಉತ್ತರಕ್ಕಾಗಿ ಅವಳು ಕಾಯುತ್ತಿದ್ದಾಗ ಅದು ಬಂದೇ ಬಿಟ್ಟಿತ್ತು. ಎರಡನೇ ಪತ್ರದ ಧೋರಣೆ ಸಂಪೂರ್ಣವಾಗಿ ಬದಲಾಗಿ ಅಶೋಕ ಬಹಳ ಭಾವುಕವಾಗಿ ಪತ್ರವನ್ನು ಬರೆದಿದ್ದ. ಆ ಪತ್ರವನ್ನು ಓದಿದಾಗ ತಾನು ಎಲ್ಲೋ ಪ್ರವೇಶಿಸಬಾರದ ಪ್ರಾಂತದೊಳಕ್ಕೆ ಹೊಕ್ಕುಬಿಡುತ್ತಿದ್ದಾಳೆಂಬ ಭಾವನೆ ಅವಳಿಗುಂಟಾಗಿತ್ತು. ತಾನೇನು ಮಾಡುತ್ತಿದ್ದಳೋ ಅವಳಿಗೇ ತಿಳಿದಿರಲಿಲ್ಲ. ಅಶೋಕನೊಂದಿಗೆ ತಾನು ಮಾತನಾಡಬೇಕು ಅನ್ನಿಸಿತ್ತು. ಇದು ಒಳ್ಳೆಯ ಗೃಹಿಣಿಯ ಲಕ್ಷಣವಲ್ಲ. ಮದುವೆಯಾಗಿರುವ ತಾನು ಈ ವ್ಯವಹಾರವನ್ನು ಮುಂದುವರೆಸಬಾರದು ಎನ್ನುವ ಲೌಕಿಕ ಅವಳನ್ನು ಕಾಡಿದರೂ ಅವಳ ದೇಹದಲ್ಲಿ ಇಪ್ಪತ್ತರ ಬಿಸಿರಕ್ತ ಪ್ರವಹಿಸಿದಂತಾಗಿ ಅವಳಿಗೆ ಯಾವುದರ ಪರಿವೆಯೂ ಇಲ್ಲದಾಯ್ತು. ತನ್ನ ಪತಿಗೆ ಮೋಸ ಮಾಡುತ್ತಿರಬಹುದೋ ಅನ್ನುವ ಭಾವನೆಯೂ ಅವಳನ್ನು ಕಾಡಲಿಲ್ಲ. ಅಶೋಕನೊಂದಿಗಿನ ವ್ಯವಹಾರ ಒಂದು ಅಯಸ್ಕಾಂತದತೆ ಅವಳನ್ನು ಸೆಳೆದಿತ್ತು. ಈ ಪತ್ರವ್ಯವಹಾರ ತನ್ನ ಜೀವನಕ್ಕೆ ಸಫಲತೆಯನ್ನು ಕೊಡಬಹುದು ಎಂದೆಲ್ಲಾ ಅವಳಿಗೆ ಅನ್ನಿಸಿಬಿಟ್ಟಿತು. ಯಾಕೋ ತಾನು ಅಶೋಕನನ್ನು ಗಾಢವಾಗಿ ಪ್ರೇಮಿಸಿತ್ತಿದ್ದೇನೆ ಅನ್ನುವ ಯೋಚನೆ ಅವಳನ್ನು ಕಾಡತೊಡಗಿತ್ತು.

*

"ಏನು ಯೋಚನೆ ಮಾಡುತ್ತಾ ಇದ್ದೀಯ? ಕಾಫಿ ಗೀಫಿ ಇಲ್ಲವೋ ಹೇಗೆ? ಅಶೋಕ ಸತ್ತದ್ದು ಅಷ್ಟೊಂದು ಶೋಕಕ್ಕೆ ಕಾರಣವಾಗಿದೆಯಾ?" ಎಂದು ಗಂಡ ಕೇಳಿದ. ಇಲ್ಲೂ ಅಶೋಕನನ್ನು ಎಳೆದು ತರುವ, ಕಾಫಿಗೂ ಸತ್ತ ಮನುಷ್ಯನನ್ನು ಕಾರಣವಾಗಿಸುವ ಇವನ ಮನೋಧರ್ಮದ ಬಗ್ಗೆ ಅವಳಿಗೆ ನಗು ಬಂದಿತ್ತು. ಅವಳು ಅಡುಗೆ ಮನೆಯನ್ನು ಪ್ರವೇಶಿಸಿದಾಗ ಆತನೂ ಅವಳನ್ನು ಹಿಂಬಾಲಿಸಿದ್ದ. ಪ್ರೀತಿಯ ಸಮಾಧಾನದ ಮಾತುಗಳನ್ನು ಆಡಿದ್ದ.

ಮತ್ತೆ ಅವಳಿಗೆ ಭಯ ಕಾಡಿತ್ತು. ಅವಳ ಕಥೆ ಎಲ್ಲೆಲ್ಲೋ ಹೋಗಿತ್ತು. ಹೌದು, ಅವಳು ಹೇಳಿದಂತೆ ಅವರ ಪತ್ರವ್ಯವಹಾರ ಮುಂದುವರೆದಿತ್ತು. ತಾನು ಮದುವೆಯಾಗಿರುವ ವಾಸ್ತವವನ್ನು ಅವಳು ಅಶೋಕನಿಗೆ ತಿಳಿಸಿಯೇ ಇರಲಿಲ್ಲ. ತಿಳಿಸುವ ಅವಶ್ಯಕತೆ ಅವಳಿಗೆ ಕಂಡುಬಂದಿರಲಿಲ್ಲ. ಅವನನ್ನು ಆಕೆ ರಾಯಚೂರಿಗೂ ಆಹ್ವಾನಿಸಿಬಿಟ್ಟಿದ್ದಳು. ಇದು ಎಂಥ ಭಂಡ ಧೈರ್ಯ ಎಂದು ಅವಳಿಗನ್ನಿಸದಿರಲಿಲ್ಲ. ಅಶೋಕ ಬಂದು ವಾಸ್ತವದ ಸ್ಫೋಟವಾದರೆ ಆಗಲಿ, ಇಲ್ಲದಿದ್ದರೆ ಇದು ಹೀಗೇ ಮುಂದುವರೆಯಲಿ ಅನ್ನುವುದು ಅವಳ ಯೋಚನೆಯಾಗಿತ್ತು. ಹಾಗೆಂದು ಮದುವೆಯಾಗಿಲ್ಲ ಎನ್ನುವಂತಹ ಸೂಚನೆಯನ್ನೂ ಅವಳು ಅಶೋಕನಿಗೆ ನೀಡಿರಲಿಲ್ಲ. ಅಶೋಕನಾಗಿ ಅಶೋಕನೇ ಮುಂದುವರೆಯುತ್ತಿದ್ದ. ಅವಳು ಅದನ್ನು ಪೋಷಿಸುತ್ತಾ ಬಂದಿದ್ದಳು ಅಷ್ಟೇ. ಅದಕ್ಕೆ ಕಾರಣ, ಆಂತರ್ಯದಲ್ಲಿ ಅವಳು ಅಶೋಕನನ್ನು ಪ್ರೀತಿಸುತ್ತಿದ್ದಳೇನೋ. ಆದರೆ ಅವಳಿಗೆ ನಿಜಕ್ಕೂ ಮೊದಲ ಬಾರಿಗೆ ಭಯವಾದದ್ದು ಅಶೋಕನ ಮುಂದಿನ ಪತ್ರದ ಒಕ್ಕಣೆ ನೋಡಿ. ಆ ಬಾರಿ ಅವನು ನೇರವಾಗಿ ಅವಳನ್ನು ’ಚಿನ್ನಾ’ ಎಂದು ಸಂಬೋಧಿಸಿದ್ದ.

*

’ಚಿನ್ನಾ’ ಎಂದಾಗ ಅವಳಿಗೆ ಕೋಪ ಬಂದಿತ್ತು. ’ಅದೇನು ಅಕ್ಕಸಾಲಿಗರ ಹಾಗೆ ಚಿನ್ನ, ಬಂಗಾರಾಂತ ಕರೆಯೋದು.. ನನ್ನ ಹೆಸರು ಲಾವಣ್ಯ.. ಹಾಗಂತಲೇ ಕರೆಯಬಾರದೇ?’ ಎಂದು ಅವಳು ಗಂಡನ ಮೇಲೆ ರೇಗಿದ್ದಳು. ’ಈ ದಿನ ನೀನು ಬೇರೆಯೇ ಲೋಕದಲ್ಲಿರುವಹಾಗಿದೆ? ಏನಾಗಿತ್ತಂತೆ ಅಶೋಕನಿಗೆ?’ ಎಂದು ಅವನು ಪ್ರಶ್ನಿಸಿದ್ದ. ’ಅಪಘಾತ’ ಎಂದು ಹೇಳಿದಳು ’ಅಯ್ಯೋಪಾಪ.. ಚಿಕ್ಕ ಹುಡುಗಾಂತ ಕಾಣುತ್ತೆ’ ಎಂದು ಅವನು ಲೊಚಗುಟ್ಟಿದ್ದ. ಅವಳಿಗೆ ಅದನ್ನು ಕೇಳಿ ಮೈಯೆಲ್ಲಾ ಉರಿದಿತ್ತು. ಈ ಕೃತಕ ಸಹಾನುಭೂತಿ ಯಾರಿಗೆ ಬೇಕು ಎಂದು ಅವಳಿಗೆ ಅನ್ನಿಸಿತ್ತು.

ಸಂಬಂಧಗಳು ಸ್ಪಷ್ಟವಾಗುತ್ತಿದೆ ಎಂದು ಅಂದುಕೊಂಡಾಗಲೇ ತಲೆಬುಡ ತಿಳಿಯಂದಂತಾಗುತ್ತಿತ್ತು. ಎಲ್ಲವೂ ಒಂದು ರೀತಿಯಲ್ಲಿ ಅಸಂಗತ. ಚಿನ್ನಾ ಎಂದು ಸಂಬೋಧಿಸಿದ ಪತ್ರದಲ್ಲಿ ಅಶೋಕ ನೇರವಾಗಿ ಮದುವೆಯ ಪ್ರಸ್ತಾಪ ಮಾಡಿದ್ದ. ಅಶೋಕನ ಮೊದಲ ಪತ್ರ ಬಂದಾಗಿನಿಂದಲೂ ಅವಳು ಮುಟ್ಟಾಗಿರಲಿಲ್ಲ. ಒಂದು ಮಟ್ಟದಲ್ಲಿ ಅಶೋಕನಿಗೆ ತನ್ನ ರಹಸ್ಯವನ್ನು ಸ್ಫೋಟಮಾಡುವ ಅನಿವಾರ್ಯತೆ ಅವಳಿಗೆ ಕಂಡುಬಂದಿತ್ತು. ಒಂದು ಥರದಲ್ಲಿ ತಾನು ಮಾನಸಿಕ ಹಾದರ ಮಾಡಿದ್ದೇನೆ ಎಂದೂ ಅವಳಿಗೆ ಅನ್ನಿಸಿತ್ತು. ತನ್ನ ತಾಯ್ತನದ ಅರಿವು ಅವಳ ಕತ್ತಿಗೆ ಪಾವಿತ್ರ್ಯದ ಬಂಧನವನ್ನು ಹಾಕುತ್ತಿದ್ದಂತೆ ಅವಳಿಗೆ ಭಾಸವಾಗಿತ್ತು. ಒಂದು ರೀತಿಯ ವಿಶೇಷ ಪಾಪ ಭೀತಿ ಅವಳನ್ನು ಆವರಿಸಿಬಿಟ್ಟಿತ್ತು. ಈ ಪ್ರಕರಣವನ್ನು ಇಲ್ಲಿಯೇ ಮುಗಿಸಬೇಕೆಂದು ಮೊದಲ ಬಾರಿಗೆ ಅವಳಿಗೆ ಅನ್ನಿಸಿತ್ತು. ಆದರೂ ತೀವ್ರವಾಗಿ ತನ್ನ ಮನಸ್ಸನ್ನು ಕಾಡುತ್ತಿದ್ದ ಈ ವ್ಯಕ್ತಿ ಹೀಗೆ ಅರಿವಿಲ್ಲದಂತೆಯೇ ಅವಳ ಜೀವನದಲ್ಲಿ ಪ್ರವೇಶಿಸಿ ಈ ರೀತಿಯ ಬೃಹದಾಕಾರದ ಪಾತ್ರವನ್ನು ಆಕ್ರಮಿಸಿಕೊಂಡದ್ದು ಹೇಗೆಂದು ತಿಳಿಯುವ ಕುತೂಹಲ ಅವಳನ್ನು ಬಿಟ್ಟಿರಲಿಲ್ಲ. ಗಟ್ಟಿಮನಸ್ಸು ಮಾಡಿ ಆ ಕಲ್ಪನಾಲೋಕದ ವ್ಯಕ್ತಿಗೆ ಅವಳು ಪತ್ರವನ್ನ ಬರೆದೇ ಬಿಟ್ಟಿದ್ದಳು: "ಕೆಲವು ದಿನಗಳ ನನ್ನ ಅನುಮಾನ ನಿಜವಾಗಿದೆ. ನಿನಗೊಂದು ಸಿಹಿ ಸುದ್ದಿ. ನಾನು ತಾಯಿಯಾಗಲಿದ್ದೇನೆ. ಈ ದಿನವೇ ಡಾಕ್ಟರ ಬಳಿಗೆ ಹೋಗಿದ್ದೆ.."

*

’ಡಾಕ್ಟರ ಹತ್ತಿರ ಚೆಕಪ್‌ಗೆ ಹೋಗಿದ್ದೆಯಾ?’ ಗಂಡ ಕೇಳಿದ

’ಹುಂ’

’ಆ ವಿಷಯ ಮಾತಾಡಿದೆಯಾ?’

’ಮಾತಾಡಿದೆ.’

’ಏನಂದರು?’

’ಅಡ್ಡಿಯಿಲ್ಲ, ಸರಿ ಅಂದರು.’

’ಹಾಗಾದರೆ ಯಾವಾಗಂತೆ?’

’ನಾಳೆ ಮೂರನೇ ತಾರೀಕಿಗಂತೆ.’

’ಸರಿ, ಒಳ್ಳೆಯದಾಯಿತು’

ಗಂಡ ಇನ್ನೂ ಏನೇನೋ ಕೇಳಿದ್ದ. ಅವನ ಒಂದೊಂದು ಪ್ರಶ್ನೆಯೂ ಅವಳ ಮನದ ಆಳವನ್ನು ಕೆದಕಿದಂತೆ ಆಗಿತ್ತು. ಅಶೋಕನಿಗೆ ಅವಳು ಪತ್ರ ಬರೆದದ್ದು ಕಳೆದ ತಿಂಗಳು ಹದಿನೆಂಟರಂದು. ಬೆಂಗಳೂರಿಗೆ ಅದು ಹತ್ತೊಂಬತ್ತು ಅಥವಾ ಇಪ್ಪತ್ತಕ್ಕೆ ತಲುಪಿದ್ದಿರಬಹುದು. ಅಶೋಕ ಎಂದೂ ಉತ್ತರಿಸಲು ತಡಮಾಡಿದ್ದವನಲ್ಲ. ಆದರೆ ಅವಳಿಗೆ ಆ ನಂತರ ಒಂದು ಭಾವನೆ ತೀವ್ರವಾಗಿ ಕಾಡಿತ್ತು. ಮದುವೆಯಾದ ಆರುವರ್ಷಗಳಲ್ಲಿ ಬರದಿದ್ದ ತಾಯ್ತನ ಅಶೋಕನ ಪರಿಚಯವಾದ ಕೂಡಲೇ ಉಂಟಾದದ್ದು ಹೇಗೆ? ಹೆಣ್ಣಿನ ಜೀವನದ ಸಾಫಲ್ಯತೆ ಇರುವುದೇ ತಾಯ್ತನದಲ್ಲಿ ಎನ್ನುವ ಗಟ್ಟಿ ನಂಬಿಕೆ ಅವಳಿಗಿತ್ತು.. ಅವಳಿಗೆ ಹುಟ್ಟಬಹುದಾದ ಕೂಸಿಗೆ ಅವನ ಮನೆಯ ಹೆಸರನ್ನು ನೀಡಬೇಕೆಂಬ ವಿಚಿತ್ರ ಬಯಕೆ ಅವಳಿಗೆ ಯಾಕೆ ಉಂಟಾಯಿತೋ ಅವಳಿಗೆ ತಿಳಿದಿರಲಿಲ್ಲ. ಆದರೆ ಅಶೋಕನಿಂದ ಪತ್ರವೇ ಬರಲಿಲ್ಲ. ಅವಳಿಗೆ ಆ ಸಂಬಂಧವನ್ನು ಸುಲಭವಾಗಿ ಕಡಿದು ಹಾಕಲು ಸಾಧ್ಯವೇ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಅವಳ ಗಂಡ ಸಿಡಿಲೆರಗುವಂತಹ ನಿರ್ಧಾರವನ್ನು ತನ್ನ ಕಿವಿಯಲ್ಲಿ ಹಾಕಿದ್ದ.. ಅವಳಿಗೆ ಆ ಅನುಮಾನವೂ ಬಂದಿತ್ತು. ಆದರೆ ಅವನಿಗೆ ಅಶೋಕನ ಈ ವಿಷಯ ತಿಳಿದಿತ್ತೇನು?

*

’ಅಶೋಕನ ವಿಷಯ ಹೇಗೆ ಗೊತ್ತಾಯಿತು?’ ಗಂಡ ಕೇಳಿದ್ದ

’ಅವರಣ್ಣನಂತೆ ಸಂದೀಪ್ ಅಂತ..’

’ಹೋಗಲಿ ಬಿಡು. ಅವರುಗಳ ಸಂಪರ್ಕ ಸಂಪೂರ್ಣವಾಗಿ ಕಡಿದಂತೆ ಅಲ್ಲವೇ?’

’ಹಾಗೆಂದೇ ಅನ್ನಿಸುತ್ತದೆ. ಅವರಿಗೊಂದು ಪತ್ರ ಬರೆದು ಹಾಕಿದೆ.’

’ಗರ್ಭಪಾತಕ್ಕೆ ತೊಂದರೆ ಇಲ್ಲ ತಾನೇ?’

’ಇಲ್ಲವಂತೆ. ಎರಡು ಘಂಟೆಯಲ್ಲಿ ಮುಗಿಯುತ್ತದಂತೆ. ನಂತರ ನಾನು ಮಾಮೂಲು ವ್ಯಕ್ತಿ.’

’ಒಳ್ಳೆಯದಾಯಿತು ಬಿಡು. ನೀನು ಮಾಮೂಲಾಗಿದ್ದರೇನೇ ಚೆನ್ನ.’

ಅವರುಗಳ ಸಂಭಾಷಣೆ ಹೀಗೇ ಮುಂದುವರೆದಿತ್ತು.

ಈ ಕಥೆ ನಿಮಗೆ ಇನ್ನೂ ಮಸಕಾಗಿದೆ ಎಂದು ಅವಳಿಗೆ ಗೊತ್ತಿತ್ತು. ಆದರೆ ಇದಕ್ಕಿಂತ ಹೆಚ್ಚಿನ ಸ್ವರೂಪವನ್ನು ಈ ಕಥೆಗೆ ನೀಡಲು ಅವಳಿಂದ ಸಾಧ್ಯವಾಗಿರಲಿಲ್ಲ. ವಾಸ್ತವಗಳು ಹಾಗೆಯೇ ಸ್ವಲ್ಪ ಅಸಂಗತವಾಗಿರುತ್ತವೆ. ಪ್ರೇಮ ಪ್ರೀತಿಗಳ ಇತಿಹಾಸ ಹೀಗೇ ದುರಂತದಲ್ಲಿ ಮುಕ್ತಾಯಗೊಳ್ಳುವುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅಂದಹಾಗೆ ತನ್ನ ಗಂಡನ ನಿರ್ಧಾರದ ಬಗ್ಗೆ ಅವಳು ಹೇಳಿದ್ದಳು.. ಅದು ಆಗಲೇಬೇಕೆಂದು ಅವನು ಹಠ ಹಿಡಿದಿದ್ದರಿಂದ ಅವಳೂ ಒಪ್ಪಿದ್ದಳು. ಎಷ್ಟಾದರೂ ಇಬ್ಬರೂ ಕೂಡಿ ಬಾಳಬೇಕೆಂದಿದ್ದರು, ಹಾಗೂ ಅವಳಿಗೆ ಹೆಚ್ಚಿನ ವಯಸ್ಸೇನೂ ಆಗಿರಲಿಲ್ಲ. ಕೇವಲ ಇಪ್ಪತ್ತೆಂಟು ಅಷ್ಟೇ. ಮುಂದೆ ಮಕ್ಕಳಾಗಲೂ ಬಹುದು. ಮಾರನೆಯ ದಿನ ಮೂರನೆಯ ತಾರೀಖಾಗಿತ್ತು. ಅಶೋಕ ಸತ್ತ ಹದಿಮೂರನೆಯ ದಿನ. ಅದೇ ದಿನ ಅವಳ ಗರ್ಭಪಾತದ ಮುಹೂರ್ತವೂ ಇಡಲಾಗಿತ್ತು. ಅದರೊಂದಿಗೆ ಅವಳೆಂದೂ ಕಂಡಿರದ ಅಶೋಕನ ಸಂಪೂರ್ಣ ಕೊಂಡಿಗಳೂ ಕಳಚಿಹೋಗಬಹುದು ಎಂದು ಅವಳಿಗನ್ನಿಸಿತ್ತು. ಬರಲಿರುವ ನಾಳೆಗಾಗಿ ಅವಳು ಕಾತರದಿಂದ ಕಾಯದಿದ್ದರೂ, ಬರಲಿರುವ ನಾಳೆಗಳಿಗಾಗಿ, ದೊರೆಯಬಹುದಾದ ಸಾಫಲ್ಯಕ್ಕಾಗಿ ಅವಳು ಕಾತರದಿಂದ ಕಾಯುತ್ತಿದ್ದಳು. ಅವಳು ಮೊದಲೇ ಹೇಳಿದಂತೆ.. ಕಾದರೆ ಎಲ್ಲರಿಗೂ ಇದರಲ್ಲಿ ಇನ್ನೂ ಹೆಚ್ಚಿನ ಅರ್ಥ ಗೋಚರಿಸಬಹುದಿತ್ತೇನೋ..

೧೯೮೭

Tuesday, June 10, 2008

ಅವಲೋಕನ


ಭೂತಾಕಾರವಾದ ಆ ಛಾಯೆ ಅವನನ್ನು ಕಾಡುತ್ತಿತ್ತು. ಯಾಕೋ ತಿಳಿಯಲಿಲ್ಲ. ಇತ್ತೀಚೆಗೆ ತಾನೇ ಪಂಜಾಗುಟ್ಟಾ ಠಾಣೆಗೆ ಒಂದು ಸಾವಿನ ಸುದ್ದಿ ವರದಿಯಾಯಿತು. ಕ್ರೈಂ ವಿಭಾಗದಲ್ಲಿದ್ದ ದಾನಯ್ಯ ನಾಯುಡುವಿಗೆ ಸರದಿಯಂತೆ ಆ ಕೇಸನ್ನು ಒಪ್ಪಿಸಲಾಯಿತು. ಕೇಸ್ ಬಂದಾಗಲೇ ರಂಗಾ ರೆಡ್ಡಿ ಹೇಳಿದ್ದ: "ದಾನಯ್ಯ ನಾಯ್ಡು, ಇದೊಂದು ಓಪನ್ ಅಂಡ್ ಷಟ್ ಕೇಸು. ನೇರ ಆತ್ಮಹತ್ಯೆ. ದೇಹವನ್ನು ಪೋಸ್ಟ್ ಮಾರ್ಟೆಂಗೆ ಕಳಿಸಿ ಒಂದು ವರದಿ ಗೀಚಿ ಹಾಕು, ಅಷ್ಟೇ"


ಆ ಕೇಸನ್ನು ಪರಿಶೀಲಿಸಲು ದಾನಯ್ಯ ಹೋದ. ಬೇರೆ ಪರಿಸ್ಥಿತಿಯಲ್ಲಾಗಿದ್ದರೆ ರಂಗಾ ರೆಡ್ಡಿ ಹೇಳಿದ ಹಾಗೆ ಯಾಂತ್ರಿಕವಾಗಿ ಒಂದು ವರದಿ ಬರೆದು ಹಾಕುತ್ತಿದ್ದನೇನೋ. ಆದರೆ ಮನೆಯ ಬಳಿ ಹೋಗುತ್ತಿದ್ದಂತೆ ಅವನಿಗೆ ಭಯವಾಯಿತು. ಅದು ತನ್ನ ಸ್ನೇಹಿತ ಕೋಟೇಶ್ವರ ರಾವ್‌ನ ಮನೆ. ಒಳ ಹೋಗಿ ನೋಡಿದಾಗ ಅವನ ಅನುಮಾನ ನಿಜವಾಯಿತು. ಅವನೇ... ಅವನದೇ ಶವ. ಹಲ್ಲಿಂದ ಹೊರಚಾಚಿದ ನಾಲಿಗೆಯನ್ನು ಕಡಿದುಬಿಟ್ಟಿದ್ದ. ಸ್ವಲ್ಪ ರಕ್ತ ಒಸರಿತ್ತು. ಮನೆಯಲ್ಲಿ ಉಯ್ಯಾಲೆಗೆಂದು ಮಾಡಿದ್ದ ಕೊಂಡಿಗೆ ದನ ಕಟ್ಟುವ ಹಗ್ಗ ನೇತಾಡಿಸಿ, ನೇರ ನೇಣುಹಾಕಿಕೊಂಡಿದ್ದ. ಕತ್ತಿನ ಸುತ್ತೂ ರಕ್ತ ಹೆಪ್ಪುಗಟ್ಟಿ ನೀಲಿ ಬಣ್ಣಕ್ಕೆ ತಿರುಗಿತ್ತು. ಪೋಲೀಸರಿಗೂ ಸೇರಿಸಿ, ಎಲ್ಲರಿಗೂ ಪತ್ರ ಬರೆದು, ಉಯಿಲು ತಯಾರಿಸಿ ವ್ಯವಸ್ಥಿತವಾಗಿ ಸತ್ತಿದ್ದ. ಆ ಪರಿಸ್ಥಿತಿಯನ್ನು ನೋಡಿದ ತಕ್ಷಣ ದಾನಯ್ಯ ನಾಯ್ಡುವಿಗೆ ಬಿಕ್ಕಳಿಗೆ ಬಂತು. ಅಲ್ಲಿಂದಲೇ ರಂಗಾ ರೆಡ್ಡಿಗೆ ಫೋನ್ ಮಾಡಿ ಈ ಕೇಸ್ ಅವನೇ ನೋಡಬೇಕೆಂದು ಕೇಳಿಕೊಂಡ... "ಡೋಂಟ್ ವರಿ" ಎಂದು ದಾನಯ್ಯನನ್ನು ಸಮಾಧಾನಪಡಿಸಿದ ರಂಗಾರೆಡ್ಡಿ ಯಾಂತ್ರಿಕವಾಗಿ ಮಹಜರ್ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ.

ಮತ್ತೊಂದು ಆತ್ಮಹತ್ಯೆ!

ಆತ್ಮಹತ್ಯೆ ದಾನಯ್ಯನನ್ನು ಬಹಳ ದಿನಗಳಿಂದ ಕಾಡುತ್ತಿರುವ ವಿಷಯವಾಗಿತ್ತು. ಅವನ ಸರ್ವೀಸಿನಲ್ಲಿ ಎಷ್ಟೋ ಆತ್ಮಹತ್ಯೆಯ ಪ್ರಕರಣಗಳನ್ನು ನೋಡಿದ್ದ. ಆದರೆ ಜನ ತಮ್ಮ ಜೀವವನ್ನು ಮುಗಿಸಿಕೊಳ್ಳುವ ಇಂಥ ನಿರ್ಧಾರವನ್ನು ಹೇಗೆ ಕೈಗೊಳ್ಳುತ್ತಾರೋ ಅವನಿಗಿನ್ನೂ ಅರ್ಥವಾಗಿರಲಿಲ್ಲ. ಪರೀಕ್ಷೆಯಲ್ಲಿ ನಪಾಸಾದ ಒಂದು ಕ್ಷುಲ್ಲಕ ಕಾರಣದಿಂದ ಹಿಡಿದು ಪ್ರೇಮಭಂಗ, ಸಾಂಸಾರಿಕ ತಾಪತ್ರಯಗಳ ವರೆಗೆ.. ಸಾಯುವ ನಿರ್ಧಾರದ ಹಿಂದಿರುವ ತರ್ಕವೇ ಅವನಿಗೆ ಅರ್ಥವಾಗಿರಲಿಲ್ಲ. ಆತ್ಮಹತ್ಯೆಗೂ ಎಷ್ಟು ವಿಧಾನಗಳು! ನಿದ್ರೆಗುಳಿಗೆ ನುಂಗುವುದರಿಂದ, ನೀರಿಗೆ ಹಾರುವ, ನಾಡಿ ಕತ್ತರಿಸಿಕೊಳ್ಳುವ, ಬೆಂಕಿ ಹಚ್ಚಿಕೊಳ್ಳುವ, ತುಫಾಕಿಯನ್ನು ಬಾಯಲ್ಲಿಟ್ಟು ಗುಂಡು ಹಾರಿಸಿಕೊಳ್ಳುವ ಕ್ರೂರ ವಿಧಾನಗಳವರೆಗೆ....

ಈಗ ಹೃದಯಕ್ಕೆ ಹತ್ತಿರವಾದ ಈ ಕೋಟೇಶ್ವರನ ಸಾವು. ಅವನು ಪೋಲೀಸರಿಗೆಂದು ಬರೆದಿಟ್ಟ ಪತ್ರವನ್ನು ಓದಿದ. ಸಾಯಲು ಅವನು ಕಾರಣವನ್ನೇ ಕೊಟ್ಟಿರಲಿಲ್ಲ. ಎಲ್ಲಾ ಸಾಂಸಾರಿಕ ಜವಾಬ್ದಾರಿಗಳೂ ಮುಗಿದಿರುವುದರಿಂದ ಬದುಕಿರುವುದರಲ್ಲಿ ಅರ್ಥವಿಲ್ಲವೆಂದಿದ್ದ! ಅವನು ಸುಮಾರು ಒಂದು ತಿಂಗಳ ಹಿಂದೆ ದಾನಯ್ಯನಿಗೆ ಸಿಕ್ಕಾಗ ಹತ್ತಿರಹತ್ತಿರ ಇಂಥದೇ ಮಾತುಗಳನ್ನಾಡಿದ್ದ. ಆದರೆ ಅದು ಕುಡಿದ ಮತ್ತಿನಲ್ಲಿ ಹಾಸ್ಯದ ಧ್ವನಿಯಲ್ಲಿ ಹೇಳಿದ್ದರಿಂದ ಅದನ್ನು ತಾನು ನಿಜಕ್ಕೂ ಲಘುವಾಗಿ ತೆಗೆದುಕೊಂಡಿದ್ದ. ಅಂದು ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡು ಅವನ ಸಾವಿಗೆ ಅರ್ಥವನ್ನು ಹುಡುಕಲು ದಾನಯ್ಯ ಪ್ರಯತ್ನಿಸಿದ. ಮನಸ್ಸೆಲ್ಲಾ ರಾಡಿಯಾದಂತಾಯಿತು. ಅವನು ರಂಗಾ ರೆಡ್ಡಿಯ ಕ್ಷಮೆ ಕೋರಿ ನೇರ ನೀಲಿಮಾ ಬಾರಿನ ಪ್ರತ್ಯೇಕ ಕೋಣೆಯಲ್ಲಿ ಹೋಗಿ ಕುಸಿದು ಒಂದು ಕ್ವಾರ್ಟರ್ ರಮ್ - ಕೋಲಾಕ್ಕೆ ಆರ್ಡರ್ ಕೊಟ್ಟು ರಾಜಾ ಮಸಾಲೆಯನ್ನು ಮೆಲ್ಲುತ್ತಾ ಕೂತ. ಪೂರ್ಣವಾಗಿ ಏರಿಸಿಕೊಂಡು ಈ ಪ್ರಪಂಚವನ್ನೇ ಮರೆಯಬೇಕು ಅಂತ ದಾನಯ್ಯನಿಗೆ ಅನ್ನಿಸಿತು.

ದಾನಯ್ಯ ರಮ್‌ನ ಒಂದೊಂದೇ ಗುಟುಕು ಹೀರುತ್ತಿದ್ದಂತೆ ಅವನಿಗೆ ಕೋಟೇಶ್ವರನ ನೆನಪುಗಳು ಕಾಡತೊಡಗಿದವು. ಶಾಲಾದಿನಗಳಿಂದಲೂ ಅವನು ತನಗೆ ಸ್ನೇಹಿತ. ಅದಕ್ಕೇ ಅವನನ್ನು ವಿಂಟೇಜ್ ಫ್ರೆಂಡ್ ಎಂದು ದಾನ್ಯಯ್ಯ ಕರೆಯುತ್ತಿದ್ದ. ಶಾಲೆಯ ನಂತರ ಅವನು ವಿಜ್ಞಾನದ ಬೆನ್ನೇರಿ ನಂತರ ಕೃಷಿ ವಿಶ್ವವಿದ್ಯಾನಿಲಯ ಸೇರಿದ. ದಾನಯ್ಯ ಜೂವಾಲಜಿಯಲ್ಲಿ ಅಸಹ್ಯಕರವಾದ ಜಿರಲೆ, ಕಪ್ಪೆಗಳಂತಹ ಪ್ರಾಣಿಗಳನ್ನು ಕತ್ತರಿಸಬೇಕಾದೀತೆಂಬ ಏಕೈಕ ಭಯದಿಂದ ಕಾಮರ್ಸ್ ಬೆನ್ನೇರಿ ಹೋದ. ಅವನು ಸಹಜವೆಂಬಂತೆ ಬ್ಯಾಂಕ್ ಸೇರಿದ. ದಾನಯ್ಯ ನಾನಾ ರಾಜಕೀಯಗಳನ್ನು ಮಾಡಿ ಅವನಿಗೇ ಅಸಹಜವೆನ್ನಿಸಿದ ಈ ಪೋಲೀಸ್ ಇಲಾಖೆಗೆ ಸೇರಿದ.

ಮೊನ್ನೆ, ಮೊನ್ನೆ, ಕೇವಲ ಒಂದು ತಿಂಗಳ ಹಿಂದೆ ಇದೇ ಬಾರಿನ ಇದೇ ಕೋಣೆಯಲ್ಲಿ ಇಬ್ಬರೂ ಗುಂಡು ಹಾಕಲು ಸೇರಿದ ನೆನಪಿನ ಸೆಂಟಿಮೆಂಟಾಲಿಟಿ ದಾನಯ್ಯನನ್ನು ಕಾಡಿತು. ಬಹಳ ದಿನಗಳ ನಂತರ ನಡೆದ ಭೇಟಿ ಅದು. ಕೋಟೇಶ್ವರ ಮೂರು ವರ್ಷ ನಿರ್ಮಲ್‌ನಲ್ಲಿ ಕೆಲಸ ಮಾಡಿ ಎಂಟು ತಿಂಗಳುಗಳ ಹಿಂದೆ ಹೈದರಾಬಾದಿಗೆ ವರ್ಗ ತೆಗೆದುಕೊಂಡು ಬಂದಿದ್ದ. ನಿರ್ಮಲ್‍ನ ರೈತ ಸೇವಾ ಸಹಕಾರ ಸಂಘಕ್ಕೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅವನನ್ನು ಡೆಪ್ಯೂಟ್ ಮಾಡಿದ್ದರು. ಆ ಪ್ರಾಂತದಲ್ಲಿ ಕೋಟೇಶ್ವರನ ಬಗ್ಗೆ ಬಹಳ ಒಳ್ಳೆಯ ಮಾತುಗಳು ಕೇಳಿಬರುತ್ತವೆ. ಬಹಳ ಹೆಸರು, ಗೌರವಗಳನ್ನು ಅವನು ಸಂಪಾದಿಸಿದ್ದನಂತೆ. ದಾನಯ್ಯ ಅದನ್ನೇ ಹಿಡಿದು ಅಂದು ಅವನನ್ನು ಹೊಗಳಲು ಪ್ರಾರಂಭ ಮಾಡಿದ. ಅವನ ಹೊಗಳಿಕೆ ಹೆಚ್ಚಾದಂತೆ ಕೋಟೇಶ್ವರನ ಚಡಪಡಿಕೆಯೂ ಜಾಸ್ತಿಯಾಗುತ್ತಾ ಹೋಯಿತು ಅನ್ನಿಸುತ್ತದೆ. ಅಂದು ಅವನು ಒಂದೊಂದು ಪೆಗ್ ಹಾಕುವಾಗಲೂ ಒಂದೊಂದು ನಿಗೂಢ ಕಥೆಯನ್ನು ಹೇಳುತ್ತಾ ಹೋದ. ಪೂರ್ತಿ ಅಮಲೇರುವಷ್ಟು ಹೊತ್ತಿಗೆ ಒಳಗಿದ್ದದ್ದನ್ನೆಲ್ಲಾ ವಾಂತಿ ಮಾಡಿಕೊಂಡು ಕುಸಿದಿದ್ದ.

ಕೋಟೇಶ್ವರನ ಕಾಲೇಜಿನ ದಿನಗಳು ಸಹ ಒಂದು ರೀತಿ ರಂಜನೀಯವಾಗೇ ಕಳೆದಿದ್ದವು. ಆಗೆಲ್ಲಾ ಅವನು ಆದರ್ಶದ ಮಾತುಗಳನ್ನಾಡುತ್ತಿದ್ದ. ಜಯ ಎನ್ನುವ ಹುಡುಗಿಯನ್ನು ಪ್ರೀತಿಸಿ, ಆರ್ಯಸಮಾಜದ ರೀತಿಯಲ್ಲಿ ಮದುವಯಾದ. ಏನೇ ಬಂದರೂ ಪ್ರತಿಭಟಿಸುವ ಜಾಯಮಾನ ಅವನದ್ದು. ಒಂದು ಕಡೆ ಸಂಪ್ರದಾಯಸ್ಥರ ನಡುವಿನಲ್ಲಿ ಸಂಪ್ರದಾಯಗಳನ್ನು ಧಿಕ್ಕರಿಸಿದರೆ, ವಿದ್ಯಾರ್ಥಿಗಳ ನಡುವೆ ಬ್ರಾಹ್ಮಣ್ಯದ ಉದಾತ್ತತೆಯ ಬಗ್ಗೆ ಭಾಷಣ ಕೊಚ್ಚುತ್ತಿದ್ದ. ಹೀಗೆ ಅವನೊಬ್ಬ ಸಿನಿಕನೋ, ವಿರೋಧಾಭಾಸಗಳ ಆಗರವೋ, ಏನೋ ಅಂತೂ ಬಿಡಿಸಲಾರದ ಒಗಟಾಗಿದ್ದ.

ಕಳೆದ ತಿಂಗಳು ದಾನಯ್ಯನಿಗೆ ಕೋಟೇಶ್ವರ ಸಿಕ್ಕಾಗ ಮೊದಲಿಗೆ ಇದರ ಬಗ್ಗೆಯೇ ಮಾತನ್ನು ದಾನಯ್ಯ ಸುರು ಮಾಡಿದ. ಅದಕ್ಕೆ ಕೋಟೇಶ್ವರ ನಕ್ಕುಬಿಟ್ಟು

"ಬೇಡವೋ, ಇದನ್ನೆಲ್ಲಾ ಗಂಭೀರವಾಗಿ ತೆಗೋಬೇಡ.. ಇದೆಲ್ಲ ಒಂದು ರೀತಿಯ ಸೋಗು, ಒಪ್ಪಂದ ಅಷ್ಟೇ. ಏನು ಬಂದರೂ ಪ್ರತಿಭಟಿಸೋದರಲ್ಲಿ ನನಗೆ ಖುಷಿ ಸಿಗುತ್ತೆ ಅಷ್ಟೇ. ಅದಕ್ಕೇ ಎಷ್ಟೋ ಸಾರಿ ಸ್ವಂತ ಆಲೋಚನೆಗಳೊಂದಿಗೇ ಒಪ್ಪಂದ ಮಾಡಿಕೊಂಡುಬಿಡುತ್ತೇನೆ. ಈ ಒಪ್ಪಂದಗಳೊಡನೆಯೇ ಬದುಕುತ್ತಿರುವ ನನಗೆ ನನ್ನ ನಿಜವಾದ ತತ್ವವೇನು ಅನ್ನುವುದರ ಬಗ್ಗೆ ಶೋಧನೆ ನಡೆಸಬೇಕಿದೆ. ಒಂದು ರೀತಿಯಲ್ಲಿ ಯಾವುದು ಬಂದರೆ ಅದನ್ನೇ ಪ್ರತಿಭಟಿಸುತ್ತಾ ಬದುಕುವುದು ನನ್ನ ಜೀವನದ ರೀತಿ ಆಗಿಬಿಟ್ಟಿದೆ. ನನಗನ್ನಿಸುತ್ತೆ, ನನ್ನ ಸಾವೂ ಒಂದು ಪ್ರತಿಭಟನೆಯ ಸಾವಾಗಬಹುದೂಂತ... ಎಲ್ಲರೂ ಬದುಕು, ಈ ಪ್ರಪಂಚಕ್ಕೆ ನಿನ್ನ ಅಸ್ತಿತ್ವದ ಅವಶ್ಯಕತೆ ಇದೆ ಅನ್ನುವಾಗಲೇ ಪ್ರತಿಭಟಿಸಿ ಸಾಯುತ್ತೇನೇನೋ ಅನ್ನಿಸಿಬಿಟ್ಟಿದೆ." ಅಂದಿದ್ದ.

ಕಡೆಯ ವಾಕ್ಯ ದಾನಯ್ಯನ ಮನಸ್ಸಿನಲ್ಲಿ ಮತ್ತೆ ರಿಂಗಣಿಸಿತು. ಆದಿನ ಕೋಟೇಶ್ವರ ಹೇಳಿದ ವಿಚಾರ ಕೇಳಿ ಅವನು ನಕ್ಕುಬಿಟ್ಟಿದ್ದ. ಸಾಲದ್ದಕ್ಕೆ ತನ್ನ-ಕೋಟೇಶ್ವರನ ವಿಚಾರಗಳಲ್ಲಿರುವ ಅಂತರವನ್ನು ಗುರುತಿಸಲೂ ಪ್ರಯತ್ನಿಸಿದ್ದ. "ನೋಡು ಕೋಟಿ ನೀನಾದರೆ ಒಂದು ರೀತಿ ಪ್ರತಿಭಟನೆಯನ್ನೇ ಜೀವನವಾಗಿ ಮಾಡಿಕೊಂಡಿದ್ದೀಯ. ನಾನು ನನ್ನ ಮನಸ್ಸಾಕ್ಷಿಯೊಂದಿಗೆ ಪ್ರತಿಭಟಿಸುತ್ತಲೇ ಜೀವನವನ್ನು ಒಂದು ಒಪ್ಪಂದವನ್ನಾಗಿ ಮಾಡಿಕೊಂಡಿದ್ದೇನೆ. ಯಾರು ಯರೋ ತೋರಿಸೋ ಸಣ್ಣ ಸಣ್ಣ ಕರ್ಟಿಸಿಗಳಿಗೆಲ್ಲಾ ಮಣಿಯುವ ದೌರ್ಬಲ್ಯ ಬೆಳೆಸಿಕೊಂಡಿದ್ದೇನೆ. ನಿಜಕ್ಕೆ. ನೀನು ನನ್ನ ಕೆಲಸದಲ್ಲಿ ಇರಬೇಕಿತ್ತು ನೋಡು. ಇಲ್ಲಿ ಪ್ರತಿಭಟಿಸುವವರ ಅವಶ್ಯಕತೆ ವಿಪರೀತವಾಗಿ ಇದೆ."

ಅದಕ್ಕೆ ಅವನೊಂದು ವಿಷಣ್ಣ ನಗೆ ನಕ್ಕುಬಿಟ್ಟಿದ್ದ. "ನೋಡು, ಒಪ್ಪಂದ, ಪ್ರತಿಭಟನೆ ಇತ್ಯಾದಿಯೆಲ್ಲಾ ನಾವು ನಮ್ಮಗಳ ಸೋಗು ಹೆಚ್ಚಿಸೊಕ್ಕೆ ಬಳಸಿಕೊಳ್ಳುವ ಪದಗಳು. ನಿಜಕ್ಕೂ ಯಾರೂ ಯಾವೊಂದು ಪೂರ್ವನಿರ್ಧಾರಿತ ಕನ್ವಿಕ್ಷನ್ ಮೇಲೆ ಸ್ಥಿರವಾಗಿ ನಿಲ್ಲುವುದೇ ಇಲ್ಲ. ಇದು ನಿರಂತರ ಬದಲಾಗುತ್ತಿರುವ ಪ್ರಪಂಚ, ಅದರೊಂದಿಗೆ ನಿನ್ನ ಆಲೋಚನೆಗಳೂ ನಿರಂತರ ಬದಲಾಗುತ್ತಿರುತ್ತವೆ. ನೀನು ಯಾವ ಕ್ಷಣಕ್ಕೆ ಏನು ಮಾಡುತ್ತೀಯೋ ಅದೇ ಸರಿ ಅನ್ನಿಸುತ್ತೆ."

ಮೊದಲ ಪೆಗ್ ಮುಗಿದಿತ್ತು. ಕೋಟೇಶ್ವರ ಜೀವನದ ಬಗ್ಗೆ ಪ್ರವಾದಿಯಂತೆ ಒಂದು ತೀರ್ಪನ್ನು ಕೊಟ್ಟುಬಿಟ್ಟ. ಮತ್ತೊಂದು ಪೆಗ್ ಬಗ್ಗಿಸುತ್ತಾ ದಾನಯ್ಯ ಅವನ ಕೆಲಸದ ಬಗ್ಗೆ ಮಾತನಾಡತೊಡಗಿದ.

"ಏನೋ ನಿರ್ಮಲ್ ಏರಿಯಾದಲ್ಲಿ ಬಹಳ ಒಳ್ಳೆಯ ಹೆಸರು ಮಾಡಿದ್ದೀಯ.. ರಾತ್ರಿ ಹಗಲು ಅನ್ನದೇ ದುಡೀತಿದ್ದೀಯಂತೆ. ಕೇಳಿ ಬಹಳ ಖುಷಿಯಾಯಿತಪ್ಪಾ.. ರೈತರನ್ನು ಉದ್ಧಾರ ಮಾಡುವುದಕ್ಕೆ ನಿನ್ನಂತಹವನೇ ಸರಿ ನೋಡು.."

"ಈ ರೈತರ ಸೇವೆ ಅನ್ನೋದೂ ಒಂದು ಪ್ರತಿಭಟನೆಯ ಚರಿತ್ರೆ ಹೊಂದಿದೆ ಗೊತ್ತಾ? ನನಗೂ ಬ್ಯಾಂಕಿನಲ್ಲಿದ್ದು, ಬಾವಿ ಸಾಲ, ಕುರಿ ಸಾಲ, ಕೋಳಿ ಸಾಲ ನೋಡೀ ನೋಡೀ ಬೇಜಾರಾಗಿತ್ತು. ನಾನು ಎಂ.ಡಿಯಾಗಿ ಹೋದ ಹೊಸತರಲ್ಲೇ ಒಬ್ಬ ರೈತ ಏನೋ ಸಲಹೆ ಕೇಳೋಕ್ಕೆ ಬಂದ. ಸೊಸೈಟಿಯ ಗುಮಾಸ್ತೆ ರೇಗಿ ಸರಕಾರಿ ಎ.ಎ.ಓ ನ ಕೇಳು ಹೋಗೂಂದ. ಅವನು ಹೇಳಿದ್ದಕ್ಕೆ ವಿರುದ್ಧವಾಗಿ ಅವನನ್ನು ಬೈದು ನಾನೇ ಜಮೀನು ನೋಡೊಕ್ಕೆ ಹೋದೆ. ಕಾಂಡ ಕೊರೆಯುವ ಹುಳದ ಧಾಳಿ ನಡೆದಿತ್ತು. ಸೊಸೈಟಿಯಿಂದ ಕೀಟನಾಶಕ ಕೊಂಡೊಯ್ಯಲು ಹೇಳಿದೆ. ಊರಲ್ಲಿ ಅದೇ ದೊಡ್ಡ ಸುದ್ದಿಯಾಯಿತು. ಹಿಂದಿದ್ದ ಎಂ.ಡಿ.ಗಳೆಲ್ಲಾ ರೂಂನಲ್ಲಿ ಕೂತು, ಟೆಲಿಫೋನ್ ತಿರುಗಿಸುತ್ತಾ ಗತ್ತಿನಿಂದ ಇರುತ್ತಿದ್ದರಂತೆ. ಆಮೇಲೆ ಬ್ಯಾಂಕಿನ ಆರ್.ಡಿ.ಓಗಳೆಲ್ಲಾ ’ಯಾಕೋ ಒದ್ದಾಡುತ್ತೀಯ, ನಿನ್ನ ಕೆಲಸ ನೀನು ನೋಡಿಕೋಬಾರದಾ’ ಅಂತ ಕೇಳೊಕ್ಕೆ ಪ್ರಾರಂಭ ಮಾಡಿದರು.. ಸರಿ, ಅವರ ವಿರುದ್ಧವಾಗಿ ಇದೇ ನನ್ನ ಕೆಲಸ, ಅದನ್ನೇ ನೋಡಿಕೊಳ್ಳುತ್ತಾ ಇದ್ದೇನೆಂದು, ರೈತರ ಜೊತೆ ಸ್ನೇಹ ಬೆಳೆಸುವುದಕ್ಕೆ ಪ್ರಾರಂಭ ಮಾಡಿದೆ. ಗೌರವ ಬೆಳೀತು, ಹೆಸರೂ ಬೆಳೀತು, ಈಗಲೂ ಹಾಗೇ ನಡೀತಾ ಇದೆ ಗೊತ್ತಾ?"

"ಹೋಗಲಿ ಬಿಡು ಅಂತೂ ಅತ್ಮವಂಚನೆಯಿಲ್ಲದೆ ಕೆಲಸ ಮಾಡುತ್ತಾ ಇದ್ದೀಯ. ನಮ್ಮದೂ ಇದೆ.. ದರಿದ್ರ ಇಲಾಖೆ. ದಿನ ಬೆಳಗಾದರೆ ಕೊಲೆ, ಲೂಟಿ, ಸುಲಿಗೆ, ಮಾನಭಂಗ, ಅನ್ಯಾಯ.. ನಾವುಗಳು ಕೊಡೋ ಥರ್ಡ್ ಡಿಗ್ರೀ ಎಲ್ಲಾ ನೋಡೀ ನೋಡೀ ಮನಸ್ಸು ಎಷ್ಟು ಜಡ್ಡುಗಟ್ಟಿಹೋಗಿದೇಂದ್ರೆ, ನಮ್ಮವರೇ ಅನ್ಯಾಯ ಮಾಡಿದರೂ, ನಾನೇ ಲೂಟಿ ಮಾಡಿದರೂ ಏನೂ ಅನ್ನಿಸೋದಿಲ್ಲ. ನಿಜ ಹೇಳಬೇಕೂಂತ ಅಂದರೆ ನನ್ನ ಮನಸ್ಸಾಕ್ಷಿಗೆ ವಿರುದ್ಧವಾಗಿ ಯಾರ್‍ಯಾರಿಗೋ ಸಹಾಯ ಮಾಡಿದ್ದೆಲ್ಲಾ ನನ್ನ ಬಡ್ತಿಗೆ ಕಾರಣವಾಗಿದೆ. ಇಲ್ಲದಿದ್ದರೆ ಇಷ್ಟುಹೊತ್ತಿಗೆ ಚಿಂತಲಪೂಡಿ ಪೋಲೀಸ್ ಠಾಣೆಯ ಇನ್‍ಚಾರ್ಜ್ ಆಗಿ ನೀರಿಲ್ಲದೇ ಒಣಗಿ ಸಾಯುತ್ತಿದ್ದೆ. ಇಲ್ಲೇ ನೋಡು, ನಾನು ನನ್ನ ಉದ್ಯೋಗದ ಬಡ್ತಿಗೂ, ವೈಯಕ್ತಿಕ ಅವನತಿಗೂ ಲಿಂಕ್ ಕಂಡುಕೊಂಡದ್ದು.."

ಎರಡನೇ ಪೆಗ್ ಮುಗಿಯುವಷ್ಟು ಹೊತ್ತಿಗೆ ಬಾರ್‌ನ ಮಾಲೀಕ ಕೈ ಹಿಸುಕಿಕೊಳ್ಳುತ್ತಾ ಬಂದ. "ಸರ್, ಹನ್ನೊಂದೂ ಮುಕ್ಕಾಲಾಯಿತು.. ಕ್ಲೋಸ್ ಮಾಡುತ್ತೀನಿ.." ದಾನಯ್ಯ ಗತ್ತಿನಿಂದ ಮತ್ತೊಂದು ಕ್ವಾರ್ಟರ್ ಮತ್ತೆರಡು ಆಮ್ಲೆಟ್ ಹೇಳಿ "ನೀನು ಬಾಗಿಲು ಮುಚ್ಚು, ನಾವು ಎಂದಿನಂತೆ ಮುಗಿದ ಮೇಲೆ ಹಿಂದಿನಿಂದ ಹೋಗುತ್ತೇವೆ" ಎಂದು ಪೋಲೀಸ್ ಭಾಷೆಯಲ್ಲಿ ಹೇಳಿದ. ಅವನು ಸರಿಯೆಂಬಂತೆ ತಲೆಯಾಡಿಸಿ ಹೊರಟುಹೋದ. ಕೋಟೇಶ್ವರ ತನ್ನತ್ತ ನೋಡಿ "ನಾನು ಮಾಡುವ ಜನಸೇವೆಗಿಂತ ಇದು ವಾಸಿ ಅಲ್ಲವೇನೋ ದಾನಯ್ಯ?" ಎಂದು ಕೇಳಿದ್ದ.

ಮತ್ತೊಂದು ಪೆಗ್ ಮುಗಿಯುವಷ್ಟರಲ್ಲಿ ದಾನಯ್ಯ ಅವನನ್ನು ಸಾಕಷ್ಟು ಹೊಗಳಿದ್ದೆ. ಅದಕ್ಕೆ ಕಾರಣ ಅವನ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ತಾನು ನಿಜವಾಗಿಯೂ ಕೇಳಿದ್ದ. ಅವನಿಗೆ ಅಮಲೇರುತ್ತಾ ಹೋಯಿತು. ಇದ್ದಕ್ಕಿದ್ದಂತೆ ಅವನು ತತ್ವಜ್ಞಾನಿಯ ಧಾಟಿಯಲ್ಲಿ ಮಾತನಾಡತೊಡಗಿದ.

"ನೋಡು ನೀನಿನ್ನೂ ಜಾಸ್ತಿ ಹೊಗಳಿದರೆ ನನಗೆ ತಡೆಯೋಕ್ಕೆ ಆಗೋದಿಲ್ಲ. ಜಗತ್ತಿನ ಕಣ್ಣಿಗೇ ಮಣ್ಣೆರಚಿದ್ದೀನಿ.. ನೀನೂ ಇಷ್ಟು ಮೋಸಹೋಗುತ್ತೀಯಾಂತ ತಿಳಿದುಕೊಂಡಿರಲಿಲ್ಲ. ನಾನೇನು ಮಹಾ ಸಾಚಾ ಸತ್ಯವಂತಾಂತ ಅಂದುಕೊಂಡಿದ್ದೀಯಾ? ನಿರ್ಮಲ್ ನಲ್ಲಿದ್ದಾಗ ಹೈದರಾಬಾದಿನಲ್ಲಿ ಒಂದು ಮನೆ ಕಟ್ಟಿಸಿದೆ. ಐವತ್ತು ಸಾವಿರ ವರದಕ್ಷಿಣೆ ಕೊಟ್ಟು ಮಗಳಿಗೆ ಮದುವೆ ಮಾಡಿದೆ.. ನನ್ನ ಮೇಲೆ ಈಗ ಬ್ಯಾಂಕಿನ ಎನ್‌ಕ್ವಯರಿ ನಡೀತಾ ಇದೆ.. ಈ ಮಧ್ಯೆ ಜನಸೇವೆಯ ಮಾತುಗಳು ನನಗೆ ವರ್ತಿಸುವುದು ಒಂದು ವಿರೋಧಾಭಾಸವೇ.."

ಇದ್ದಕ್ಕಿದ್ದಂತೆ ಕೋಟೇಶ್ವರ ಮಾಡಿದ ಈ ಘಟಸ್ಫೋಟ ನನಗೆ ಆಶ್ಚರ್ಯ ಉಂಟುಮಾಡಿತ್ತು. ಅವನೇನು ಹೇಳುತ್ತಿದ್ದಾನೆಂದು ನನಗೆ ಅರ್ಥವೇ ಆಗಲಿಲ್ಲ. ಈ ರೀತಿಯ ಅನಿರೀಕ್ಷಿತ ತಿರುವುಗಳು ನನಗೆ ಆಘಾತವನ್ನುಂಟುಮಾಡುತ್ತವೆ.. ನಾನು ಏನೂ ತೋಚದೇ ತೊದಲಿದೆ:

"ವರದಕ್ಷಿಣೆ?"

"ಹೌದು.. ಐವತ್ತು ಸಾವಿರ. ನನ್ನ ಮಗಳು ಹೋಗಿ ಯಾವನೋ ರೆಡ್ಡಿಯ ಕೈಲಿ ಹೊಟ್ಟೆ ಉಬ್ಬಿಸಿಕೊಂಡು ಬಂದಳು.. ಅವನು ಮಾಡಿದ ಬ್ಲಾಕ್‍ಮೈಲ್‌ಗೆ ತೆತ್ತ ಹಣ ಇದು. ಅದಕ್ಕೆ ಸಿಕ್ಕ ಪ್ರಚಾರ ಏನು ಗೊತ್ತಾ? ಕೋಟೇಶ್ವರ ತನ್ನ ಜೀವನದ ಆದರ್ಶದಂತೆ ಮಗಳಿಗೂ ಅಂತರ್ಜಾತೀಯ ವಿವಾಹ ಮಾಡಿಸಿದ!! ಹೀಗಾಗಿ ನನ್ನ ಕೀರ್ತಿಯ ಇಮ್ಮಡಿಯಾಯಿತು. ವರದಕ್ಷಿಣೆ ಕೊಟ್ಟಿದ್ದು ಯಾರಿಗೂ ಗೊತ್ತಿಲ್ಲ. ಕಥೆಯ ಹಿಂದಿನ ವ್ಯಥೆ ಇದು..."

"ಎನ್‌ಕ್ವೈರಿ?"

"ಹುಂ.. ಅದೂ ಇದೆ. ಅಧಿಕಾರ, ಹಣದ ದುರುಪಯೋಗ, ರೈತರಿಗೆ ಮೋಸ ಇತ್ಯಾದಿ.. ನಾನಿನ್ನೂ ನಿನ್ನ ಅತಿಥಿಯಾಗಿ ಜೈಲಿಗೆ ಬಂದಿಲ್ಲವಾದರೆ ಅದಕ್ಕೆ ನನ್ನ ಹಿಂದಿರುವ ಕೀರ್ತಿಯೇ ಕಾರಣ.."

ಪ್ರತಿಭಟನೆಯ ಕೆಂಡವಾಗಿದ್ದ ಕೋಟೇಶ್ವರ ಈ ರೀತಿ ತಪ್ಪೊಪ್ಪಿಗೆಯ ಸ್ಥಿತಿಗೆ ಜರ್ರನೆ ಇಳಿಯಬಹುದೆಂದು ದಾನಯ್ಯ ನಿರೀಕ್ಷಿಸಿರಲಿಲ್ಲ. ತಾನು ಅವನನ್ನು ಹೊಗಳಿದ್ದು ವಿಪರೀತವಾಯಿತೇನೋ. ಹೊಗಳಿಕೆಗೂ, ಖೈದಿಗಳ ಬಾಯಿ ಬಿಡಿಸಲು ನೀಡುವ ಥರ್ಡ್ ಡಿಗ್ರಿಗೂ ಸಾಮ್ಯ ಕಂಡದ್ದು ಅವನಿಗೆ ಇಲ್ಲಿ ಕಂಡಿತು. ದಾನಯ್ಯನಿಗೆ ಈಗೀಗ ಅನ್ನಿಸುತ್ತದೆ: ಆದಿನ ಅವನಿಗೆ ಅಷ್ಟೊಂದು ಅಮಲೇರದಿದ್ದರೆಯೇ ಚೆನ್ನಿರುತ್ತಿತ್ತೇನೋ. ಅಥವಾ ಕೋಟೇಶ್ವರನ ಮಾತುಗಳು ದಾನಯ್ಯನ ಹೊಗಳಿಕೆಗೆ ಪ್ರತಿಭಟನೆಯ ಈ ರೂಪದಲ್ಲಿ ಬರುತ್ತಿತ್ತೇ? ಅಂತೂ ಅಂದಿನ ಘಟನೆ ದಾನಯ್ಯನ್ನನ್ನು ಆಶ್ಚರ್ಯದಲ್ಲಿ ಮುಳುಗಿಸಿತ್ತು.

ನಾಲ್ಕನೇ ಪೆಗ್ ಮುಗಿಯುವಾಗ ಅವನು ತನ್ನ ನಿರ್ಮಲ್ ಸಾಹಸಗಳ ಬಗ್ಗೆ ಹೇಳಿಮುಗಿಸಿಯಾಗಿತ್ತು. ಎಲೆಕ್ಟ್ರಿಕ್ ಮೋಟಾರುಗಳ ಸಾಲ ಕೊಡುವಾಗ ಕಂಪನಿಗಳೊಂದಿಗೆ ಕಮಿಷನ್ ಮಾತನಾಡಿದ್ದಲ್ಲದೇ, ಸರಕಾರ ಸಣ್ಣ ರೈತರಿಗೆ ಕೊಡುತ್ತಿದ್ದ ಮೂರನೇ ಒಂದು ಭಾಗ ಸಬ್ಸಿಡಿಯನ್ನೂ ನೇರ ಉಪಯೋಗಿಸಿಕೊಂಡಿದ್ದನಂತೆ. ಮಗಳ ಮದುವೆಯ ಒತ್ತಡ ಬಂದಾಗ, ತುರ್ತಾಗಿ ಬೇಕಾದ ಹಣಕ್ಕೆ, ಏನೂ ಮಾಡಲು ತೋರದೇ, ಕ್ರಾಪ್ ಲೋನಿನೊಂದಿಗೇ, ಹದಿನೈದು ಜನರ ಬಳಿ ಎಲೆಕ್ಟ್ರಿಕ್ ಮೋಟಾರ್ ಸಾಲಕ್ಕೂ ಬೆರಳು ಮುದ್ರೆ ಹಾಕಿಸಿಕೊಂಡುಬಿಟ್ಟನಂತೆ. "ಮುಂದಿನ ವಾರ ಎನ್‍ಕ್ವೈರಿ ಇದೆಯೋ.. ಏನು ಮಾಡಬೇಕೋ ತಿಳೀತಾ ಇಲ್ಲ...." ಎಂದು ಅಂದು ಹೇಳಿದ್ದ.

ದಾನಯ್ಯನಿಗೆ ಕೋಟೇಶ್ವರ ಮತ್ತೂ ಮತ್ತೂ ನಿಗೂಢವಾಗುತ್ತಾ ಹೋದ. ಪೋಲೀಸ್ ಇಲಾಖೆಯಲ್ಲಿದ್ದೂ ದಾನಯ್ಯ ಹಣ ಮಾಡಿ ಸಿಕ್ಕಿ ಹಾಕಿಕೊಳ್ಳುವ ಅಪಾಯದ ಹಂತ ತಲುಪಿರಲಿಲ್ಲ. ಆದರೆ ಕೋಟೇಶ್ವರ ಈ ಅತಿರೇಕದ ಹಂತಕ್ಕೆ ಬಲುಬೇಗ ಇಳಿದು ಬಿಟ್ಟ. ಅವನು ಇನ್ನಷ್ಟು ಜಾಗರೂಕನಾಗಿರಬೇಕಿತ್ತು ಅಂತ ದಾನಯ್ಯನಿಗೆ ಅನ್ನಿಸಿತು. ಮನುಷ್ಯ ಸಾಮಾಜಿಕ ಮನ್ನಣೆಗೆ ಪಾತ್ರನಾಗುತ್ತಿದ್ದಂತೆ ಅದನ್ನು ಕೂಡಲೇ ದುರುಪಯೋಗ ಪಡಿಸಿಕೊಳ್ಳುವ ದೌರ್ಬಲ್ಯಕ್ಕೆ ಒಳಗಾಗಬಹುದೆಂದು ಅವನಿಗೆ ಗೊತ್ತಿರಲೇ ಇಲ್ಲ..

ಆದಿನ ಕುಡಿತದ ಅಮಲಿನಲ್ಲಿ ತಾನು ಏನೇನು ಹೇಳಿದ್ದನೋ ದಾನಯ್ಯನಿಗೆ ನೆನಪಿಲ್ಲ. ಎಲ್ಲ ಮುಗಿಯುವ ವೇಳೆಗೆ ಕೋಟೇಶ್ವರ ಅಲ್ಲೇ ವಾಂತಿ ಮಾಡಿಕೊಂಡ. ಕರುಳೇ ಕಿತ್ತು ಬರುವಂತೆ ಹೊಟ್ಟೆಯಲ್ಲಡಗಿಸಿದ್ದ ಸಂಪೂರ್ಣವನ್ನೂ ಕಕ್ಕಿದ. ಹಿಂದಿನ ಬಾಗಿಲಿನಿಂದ ಇಬ್ಬರೂ ಹೊರಬಂದರು. ಆಗಲೂ ಹಾಸ್ಯದ ಪ್ರವೃತ್ತಿಯನ್ನು ಬಿಡದ ಕೋಟೇಶ್ವರ "ಬಿಲ್?" ಎಂದು ಕೇಳಿದ್ದ... ದಾನಯ್ಯ "ನಮ್ಮ ಕೆಲಸದಲ್ಲಿನ ಕೆಲ ಸವಲತ್ತುಗಳಲ್ಲಿ ಇದೂ ಒಂದು" ಎನ್ನುತ್ತಾ ನಕ್ಕುಬಿಟ್ಟಿದ್ದ.

ಅದು ನೆನಪಾದಾಗ ದಾನಯ್ಯನಿಗೆ ಕೋಟೇಶ್ವರನ ಸಾವಿಗೆ ಇರಬಹುದಾದ ಕಾರಣದ ಎಳೆ ಸಿಕ್ಕಂತೆನ್ನಿಸಿತು. ತಪಾಸಣೆಯ ವರದಿ ಬಂದಿರಬೇಕು. ಕೋಟೇಶ್ವರನ ಮೇಲಿನ ಆಪಾದನೆಗಳು ಸಾಬೀತಾಗಿರಬೇಕು. ಅದಕ್ಕೆ ಹೆದರಿ ಏನಾದರೂ ಕೋಟೇಶ್ವರ ಆತ್ಮಹತ್ಯೆ ಮಾಡಿಕೊಂಡನೇ? ಇರಬಹುದು. ಕೋಟೇಶ್ವರನ ನೆನಪಾದಾಗ ಅವನಿಗೆ ದುಃಖ ಉಮ್ಮಳಿಸುತ್ತದೆ. ಗ್ಲಾಸಿನಲ್ಲಿದ್ದ ದ್ರವವನ್ನು ಒಂದೇ ಬಾರಿಗೆ ಗಂಟಲಿಗಿಳಿಸಿ ನಿಧಾನವಾಗಿ ಬಾರಿನಿಂದ ಹೊರಬಂದ. ಒಂದು ಪಾನ್ ಹಾಕಿ ನೇರವಾಗಿ ಮನೆ ಸೇರಿದ.

ಬೆಳಿಗ್ಗೆ ಎದ್ದಾಗ ಮನಸ್ಸು ಸ್ವಲ್ಪ ಚೇತರಿಸಿಕೊಂಡಿತು. ಭಾವನೆಗಳಿಗೆ ಅಣೆಕಟ್ಟು ಹಾಕಿ ಯಂತ್ರಮಾನವನಂತೆ ಕೆಲಸಮಾಡುವುದನ್ನು ಈ ಇಲಾಖೆಗೆ ಸೇರಿದಂದಿನಿಂದ ದಾನಯ್ಯ ರೂಢಿಸಿಕೊಂಡಿದ್ದ. ಠಾಣೆಗೆ ಬಂದತಕ್ಷಣ ರಂಗಾ ರೆಡ್ಡಿಯ ಕೋಣೆಗೆ ಹೋದ.

"ಕೋಟೇಶ್ವರರಾವ್ ಕೇಸು ಏನಾಯಿತು? ಆತ್ಮಹತ್ಯೆಗೆ ಮೋಟಿವ್ ತಿಳೀತಾ?"

"ಎಲ್ಲಾ ವಿಚಿತ್ರವಾಗಿದೆ.. ಆತ್ಮಹತ್ಯೆಗೆ ಕಾರಣವೇ ಸಿಗುತ್ತಿಲ್ಲ."

"ಬ್ಯಾಂಕಿನ ಎನ್‍ಕ್ವೈರಿ ನಡೀತಿತ್ತಂತಲ್ಲಾ, ಅದರ ವರದಿ ಏನಾದರೂ....."

"ಅದೇ ಆಶ್ಚರ್ಯ ನೋಡು.. ಅದರ ವರದಿ ಮೂರು ದಿನಗಳ ಹಿಂದೆ ಬಂದಿದೆ.... ಹಿ ವಾಸ್ ನಾಟ್ ಫೌಂಡ್ ಗಿಲ್ಟಿ. ಯಾರೋ ಹೊಟ್ಟೇಕಿಚ್ಚಿನಿಂದ ಈ ಕೆಲಸ ಮಾಡಿರಬಹುದೂಂತ ಬ್ಯಾಂಕಿನ ಮಿತ್ರರು ಹೇಳಿದರು. ಅವನು ಅಂಥವನು ಅಲ್ಲವೇ ಅಲ್ಲವಂತೆ. ಬ್ಯಾಂಕಿನಲ್ಲಿ ಅವನಿಗೆ ತುಂಬಾ ಒಳ್ಳೇ ಹೆಸರಿತ್ತು... ಅದಕ್ಕೇ ವಿಷಯ ತುಂಬಾ ಗಹನವಾಗಿದೆ.."

ದಾನಯ್ಯನಿಗೆ ನಿಜಕ್ಕೂ ಆಶ್ಚರ್ಯವಾಯಿತು. ಬ್ಯಾಂಕಿಗೆ ಹೋಗಿ ಖಾತರಿ ಪಡಿಸಿಕೊಂಡು ಬರೋಣವೆಂದುಕೊಂಡರೂ ರಂಗಾರೆಡ್ಡಿಯನ್ನು ನಂಬದಿರಲು ಕಾರಣವೇ ಇರಲಿಲ್ಲ. ಇದೇ ಆಲೋಚನೆಯಲ್ಲಿಯೇ ಈಗ ಒಂದು ವಾರ ಕಳೆದ.

ಹೀಗಿರುತ್ತಿರಲು ದಾನಯ್ಯನ ಸೋದರಮಾವನ ಮಗ ಬಂದ. ಪೋಚಂಪಾಡ್ ಪ್ರಾಜೆಕ್ಟ್ ನೋಡಲು ಶ್ರೀರಾಮ ಸಾಗರಕ್ಕೆ ಬರುತ್ತೀಯಾ ಎಂದು ಕೇಳಿದ. ಅವನ ಅಫಿಷಿಯಲ್ ಕೆಲಸಕ್ಕೆ ತಾನ್ಯಾಕೆ ಅನ್ನಿಸಿದರೂ, ನಿರ್ಮಲ್‌ನಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಪೋಚಂಪಾಡ್‌ಗೆ ಹೋಗುವ ತೀವ್ರತೆ ಕಾಡಿತು. ಹೊರಟ. ಅವನು ಶ್ರೀರಾಮಸಾಗರದ ಅಣೆಕಟ್ಟಿನ ಬಳಿ ಇಳಿದ. ದಾನಯ್ಯ ನಿರ್ಮಲ್ ಚಿತ್ರಕಲೆಯೆಂದೇ ಖ್ಯಾತಿಗೊಂಡ ಕೆಲ ಪೈಂಟಿಂಗ್ ತರುವ ನೆಪದಲ್ಲಿ ನಿರ್ಮಲ್‍ಗೆ ಬಂದ.

ನಿರ್ಮಲ್‌ನಲ್ಲಿ ಇಳಿಯುತ್ತಿದ್ದಂತೆ ನೇರ ಸಹಕಾರ ಸಂಘಕ್ಕೆ ಹೋದ. ಅಲ್ಲಿಯ ಎಂ.ಡಿ.ಗೆ ಕೈ ಕುಲುಕಿ ತನ್ನ ಪರಿಚಯವನ್ನು ಹೇಳಿಕೊಂಡ. ಹಾಗೂ ಕೋಟೇಶ್ವರನ ಬಗ್ಗೆ ವಿಚಾರಿಸಿದ. ಮುಖ್ಯವಾಗಿ ಕೋಟೇಶ್ವರ ಸಾಲ ಕೊಟ್ಟ ಹದಿನೈದು ರೈತರಲ್ಲಿ ಯಾರನ್ನಾದರೂ ನೋಡಬೇಕೆಂದು ಅವನ ಆಸೆಯಾಗಿತ್ತು. ಹಾಗೇ ನಡೆಯಿತು ಸಹ! ಸಹಕಾರ ಸಂಘಕ್ಕೆ ದಾಸರಿ ಸಂಗಯ್ಯನೆಂಬವನು ಬಂದಿದ್ದ. ಅವನನ್ನು ಮಾತನಾಡಿಸಿದಾಗ ನಡೆದ ಕಥೆ ತಿಳಿಯಿತು. [ಅಥವಾ ತಿಳಿಯಿತೆಂದು ದಾನಯ್ಯ ಭಾವಿಸಿದ]

ಎನ್‍ಕ್ವೈರಿಗೆ ಕೆಲದಿನಗಳ ಮೊದಲು ಈ ಹದಿನೈದು ಮಂದಿಗೂ ನೋಟಿಸ್ ಬಂದಿತ್ತಂತೆ. ಅವರುಗಳಲ್ಲೊಬ್ಬ ಹೈದರಾಬಾದಿಗೆ ಬಂದು ಕೋಟೇಶ್ವರನನ್ನು ಭೇಟಿಯಾದಾಗ, ನೋಟೀಸಿನಲ್ಲಿ ನಮೂದಾಗಿದ್ದ ಸಾಲದ ಹಣ ಹಿಂದಿರುಗಿಸಿ ಸೊಸೈಟಿಗೆ ಕಟ್ಟಿಬಿಡು ಎಂದು ಹೇಳಿದನಂತೆ. ಎನ್‍ಕ್ವೈರಿಗೆ ಎರಡು ದಿನ ಮುಂಚೆ ಹೋಗಿ ಮಿಕ್ಕವರಿಗೆಲ್ಲಾ, "ನಿಮ್ಮ ಹಣ ನಿಮಗೆ ಕೊಟ್ಟುಬಿಡುತ್ತೇನೆ... ನಾಳೆ ಎನ್‍ಕ್ವೈರಿಯಲ್ಲಿ ಕೇಳಿದರೆ, ಸಾಲ ತೆಗೆದುಕೊಂಡಿದ್ದೇವೇಂತ ಹೇಳಿಬಿಡಿ" ಎಂದು ಹೇಳಿ ತಪ್ಪಿಸಿಕೊಂಡಿದ್ದ. ಇವನ ಮೇಲೆ ಅಪರಿಮಿತ ನಂಬಿಕೆಯಿದ್ದ ಅವರುಗಳೂ ಇವನ ಮಾತಿನ ಆಧಾರವಾಗಿ ಹಾಗೇ ಮಾಡಿದರು. ಈಗಲೋ ಆಗಲೋ ದಾನಯ್ಯ ಬಂದು ತಮ್ಮ ಹಣ ಹಿಂದಿರುಗಿಸಬಹುದು ಎಂದು ನಂಬಿದ್ದ ಸಂಗಯ್ಯ, ಕೋಟೇಶ್ವರ ತೀರಿಕೊಂಡದ್ದು ಕೇಳಿ ರೋಧಿಸಿದ.

ದಾನಯ್ಯ ಸಹಕಾರ ಸಂಘದಿಂದ ಹೊರಬಿದ್ದ. ಅಲ್ಲಿನ ಪೈಂಟರುಗಳ ಸೊಸೈಟಿಗೆ ಹೋಗಿ ಅವರ ಷೋರೂಮಿನಲ್ಲಿ ಒಂದು ಪೈಟಿಂಗ್ ಕೊಂಡುಕೊಂಡ. ಹಾಗೂ ಮಾರನೆಯ ದಿನ ಹೈದರಾಬಾದಿಗೆ ಹಿಂದಿರುಗಿದ. ಹೈದರಾಬಾದಿಗೆ ಬಂದಾಗ ರಂಗಾರೆಡ್ಡಿಗೆ ನಡೆದ ವಿಷಯ ಹೇಳಿ.. "ಅವನು ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ತರ್ಕ ಇನ್ನೂ ಸಿಗುತ್ತಿಲ್ಲ" ಎಂದ

ರಂಗರೆಡ್ಡಿ "ಅವನು ಸತ್ತದ್ದಕ್ಕೆ ಕಾರಣ ನಾನು ಹೇಳುತ್ತೇನೆ. ಅವನ ಆತ್ಮಸಾಕ್ಷಿ ಜಾಗೃತವಾಗಿತ್ತು" ಎಂದ. ದಾನಯ್ಯನಿಗೇನೋ ಕೋಟೇಶ್ವರ ಈ ಪ್ರಪಂಚದಲ್ಲಿ ಬದುಕುವ ರೀತಿಯ ಅನಿವಾರ್ಯತೆಯನ್ನು ಪ್ರಶ್ನಿಸಿ ಹೊರಟುಹೋದ ಅನ್ನಿಸಿತ್ತು. ಚಕ್ಕನೆ ವೆಂಕಟಾಚಲನನ್ನು ಕೇಳಿದ

"ಹಾಗಾದರೆ ನಾವು ಸಾಯದಿರುವುದಕ್ಕೆ ನಮ್ಮ ಆತ್ಮಸಾಕ್ಷಿ ಸತ್ತಿರುವುದೇ ಕಾರಣವಾ?"

"ಇರಬಹುದು. ಈ ದಿನ ಸಂಜೆ ನೀಲಿಮಾ ಬಾರಿನ ಸ್ಪೆಷಲ್ ರೂಮಿನಲ್ಲಿ ಮೂರು ಪೆಗ್ ಸ್ಕಾಚ್ ಹಾಕಿದ ಮೇಲೆ ಇಂಥ ಗಹನ ಪ್ರಶ್ನೆಗಳಿಗೆ ಉತ್ತರವನ್ನು ನಾವು ಜೊತೆಯಾಗಿ ಕಂಡುಕೊಳ್ಳಬಹುದು" ಎಂದ ರಂಗಾರಡ್ಡಿ.

ದಾನಯ್ಯನಿಗೇಕೋ ತಾನು ತನ್ನೊಳಗಿನ ತನ್ನನ್ನೇ ಕೊಂದಿದ್ದೇನೆ ಅನ್ನಿಸಿ ಆ ಬಗ್ಗೆ ಯೋಚಿಸುತ್ತಲೇ ಒಂದು ಸಿಗರೇಟು ಬೆಳಗಿಸಿದ.

Tuesday, June 3, 2008

ಎಲ್ಲವೂ ತುಂಬಿ ತುಂಬಿ

ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು ಮನೆಯಲ್ಲೆಂದೂ ಸ್ಥಿರವಾಗಿ ಕುಳಿತವರಲ್ಲ. ಹಾಗೆ ಕುಳಿತುಕೊಳ್ಳುವ ವ್ಯಕ್ತಿತ್ವ ಅವರದ್ದಲ್ಲವೇ ಅಲ್ಲ. ಸರ್ವೀಸಿನಲ್ಲಿದ್ದಾಗಲೆ ಎಂದೂ ಸ್ಥಿರವಾಗಿ ಮೇಜಿನ ಮುಂದೆ ಕುಳಿತವರಲ್ಲ. ಎಲ್ಲಾದರೂ ಸುತ್ತಾಡುತ್ತಲೇ ಓಡಾಡುತ್ತಲೇ ಇರಬೇಕು. ಸರ್ವೇ ವಿಭಾಗವಾಗಿದ್ದರೆ ಚೆನ್ನಿರುತ್ತಿತ್ತು ಎನ್ನುತ್ತಿದ್ದ ಜೋಯಿಸರಿಗೆ ಸಿಕ್ಕಿದ್ದು ಬೇರೊಂದೇ ಕೆಲಸ. ಈಗ ಕೆಲ ವರ್ಷಗಳ ಹಿಂದೆ, ಆ ಕೆಲಸದಿಂದಲೂ ನಿವೃತ್ತರಾಗಿದ್ದರು.

ಮೂರು ವರ್ಷಗಳ ಹಿಂದೆ, ಹೀಗೇ, ಏನೂ ತೋರದ ಒಂದು ದಿನ ಛದ್ಮವೇಷದ ಮಹಾರಾಜರಾಗಿ ಅಲೆಯುತ್ತಾ ಅವೆನ್ಯೂ ರಸ್ತೆಯ ಒಂದು ಗಲ್ಲಿಯ ಮೂಲಕ ಹಾದು ಬಳೇಪೇಟೆಯ ಚೌಕಕ್ಕೆ ಬಂದು ನಿಂತುಬಿಟ್ಟರು, ಜೋಯಿಸರು. ತಾವು ಸಣ್ಣವರಿದ್ದಾಗ ಈ ರಸ್ತೆಗಳೆಲ್ಲಾ ಎಷ್ಟು ವಿಶಾಲವಾಗಿದ್ದವು. ಈಗೇಕೆ ಹೀಗೆ ಇಕ್ಕಟ್ಟಾಗಿಬಿಟ್ಟಿವೆ ಎನ್ನಿಸಿತು. ಅಕ್ಕಿಪೇಟೆಯ ಶಾಲೆಗೆ ಹೋಗುತ್ತಿದ್ದ ಮಾರ್ಗ ನೆನಪು ಮಾಡಿಕೊಂಡರು. ವಿಜಯಲಕ್ಷ್ಮೀ ಚಿತ್ರಮಂದಿರದ ಎಕ್ಸೆಲ್ಷಿಯರ್ ಆಗಿದ್ದಾಗ ನೋಡಿದ “ಫ್ಲಾಷ್ ಗೋರ್ಡನ್” ನೆನಪಾಯಿತು. ಜೋಯಿಸರು ಈ ನೆನಪುಗಳಲ್ಲಿ ತಮ್ಮನ್ನು ಮರೆತು ರಸ್ತೆಯಂಚಿನಲ್ಲಿ ನಿಂತೇ ಇದ್ದರು. ಇದ್ದಕ್ಕಿದ್ದಂತೆ ಒಬ್ಬ ಯುವಕ ಬಂದು ಜೋಯಿಸರಿಗೆ ಸಲಾಂ ಮಾಡಿದ.

ಜನವೆಂದರೆ ಸಾಕು ಸಹಜ ಕುತೂಹಲದಿಂದ ಮಾತನಾಡುವ ಜೋಯಿಸರು ಆ ಯುವಕನೊಂದಿಗೆ ಮಾತಿಗಿಳಿದೇಬಿಟ್ಟರು.

“ಸರ್ ಒಳ್ಳೇ ಮಾಲಿದೆ.... ಸ್ಟೂಡೆಂಟು....ಯಂಗ್ ಸರ್.....ಬೇಕಾ ?”

ಬಳೆಪೇಟೆಯ ಖ್ಯಾತಿ ಅರಿಯದವರ್‍ಯಾರು? ಆದರೂ ಜೋಯಿಸರು ಅರಿತೂ ಅರಿಯದೆ ನಿಂತರು. “ಮಾಲ್” ಎಂದರೇನು ಎಂಬ ಪ್ರಶ್ನೆಯೊಂದಿಗೆ ಪ್ರಾರಂಭವಾಗಿ, ಅವನಲ್ಲಿ ಎಷ್ಟು ಹುಡುಗಿಯರು ಇದ್ದಾರೆ. ದಿನಕ್ಕೆ ಒಬ್ಬೊಬ್ಬ ಏಜೆಂಟ ಎಷ್ಟು ಗಿರಾಕಿಗಳನ್ನು ಹಿಡಿಯುತ್ತಾನೆ-ಬೆಂಗಳೂರಿನವರೆಷ್ಟು ಹೊರಗಿನವರೆಷ್ಟು. ಅತಿ ಕಡಿಮೆ ವಯಸ್ಸಿನವರೆಂದರೆ ಎಷ್ಟು ವರ್ಷ ವಯಸ್ಸಿನ ಗಿರಾಕಿ, ಅತಿ ಮುದುಕನಿಗೆಷ್ಟು ವಯಸ್ಸು, ಒಂದು ಹುಡುಗಿ ಒಂದು ದಿನಕ್ಕೆ ಎಷ್ಟು ಜನರ ಜೊತೆ ಮಲಗುತ್ತಾಳೆ. ಒಬ್ಬನೊಂದಿಗೆ ಮಲಗಲು ರೇಟೆಷ್ಟು ರೇಟಿನ ಅವಧಿಯೆಷ್ಟು-ಅದಕ್ಕೆ ಸಿಗುವ ಕಮಿಷನೆಷ್ಟು - ಅದರಲ್ಲಿ ಜೀವನ ಸಾಗುವುದೇ, ಎಷ್ಟರವರೆಗೆ ಚೌಕಾಸಿ ಮಾಡಬಹುದು.... ಹೀಗೆ ಪ್ರಶ್ನೆಯ ನಂತರ ಪ್ರಶ್ನೆ ಕೇಳುತ್ತಾ ಹೋಗಿ ಮುದುಕರಿಗೇನಾದರೂ ಡಿಸ್ಕೌಂಟ್ ಇದೆಯೇ ಎಂದೂ ಕೇಳಿದರು.“ ಮುದುಕರಿಗೆ ಡಬಲ್ ರೇಟು” ಎಂದು ಉತ್ತರಿಸಿದ ತಲೆಹಿಡುಕ ರಸ್ತೆಯಂಚಿನಲ್ಲಿ ಇಲ್ಲವಾದ. ಮುಂದೆಂದೇ ಜೋಯಿಸರು ಬಳೆಪೇಟೆಯತ್ತ ಸುಳಿದರೂ, ಯಾವೊಬ್ಬ ತಲೆಹಿಡುಕನೂ ಅವರತ್ತ ತಲೆಯೆತ್ತಿ ನೋಡುವುದಿಲ್ಲ ಎಂದು ಖಾತ್ರಿಪಡಿಸಿಕೊಂಡ ನಂತರವೇ ಜೋಯಿಸರು ಅಲ್ಲಿಂದ ಹೊರಗಾದರು.

ಅಂದಿನ ಕೋಟಾದ “ಏನೂ ತೋಚದಿರುವಿಕೆಯ ಮದ್ದು” ಸಿಕ್ಕಿತೆಂದೇ ಬಗೆದು ಹೇಗಾದರೂ ಮಾಡಿ ದೊಡ್ಡ ಬಸ್‌ಸ್ಟ್ಯಾಂಡಿನವರೆಗೆ ನಡೆದುಬಿಟ್ಟರೆ, ಅಲ್ಲಿಂದ ಮುಂದೆ ತಾವು ಕ್ಯೂ ನಿಂತು ಪಡೆದು, ಎಲ್ಲರಿಗೂ ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿದ್ದ ವಯೋವೃದ್ಧರ ಪಾಸ್ ತೋರಿಸಿ ಎಂಟಾಣೆಯ ಟಿಕೆಟ್ ಪಡೆದು ಮನೆ ತಪುಪಬಹುದೆಂದು ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಸಂದಿಯೊಂದರಲ್ಲಿ ರಾಶಿಹಾಕಿದ್ದ ಪುಸ್ತಕಗಳು ಜೋಯಿಸರನ್ನು ಆಕರ್ಷಿಸಿದವು.

ಶಿವಾಜೋಯಿಸರು ನುಗ್ಗಿ ಒಂದೊಂದೇ ಪುಸ್ತಕ ಪರೀಕ್ಷಿಸಿ ನೋಡತೊಡಗಿದರು. ಹಸ್ತ ಸಾಮುದ್ರಿಕೆ, ಬಾನಸವಾಡಿಯ.... ಎಂಬ ಅಕ್ಷರಗಳಷ್ಟೇ ಕಂಡ ಹರಿದ ಮುಖಪುಟ ಹೊತ್ತ ಪುಸ್ತಕ. ರೈನರ್ ಮಾರಿಯಾ ರಿಲ್ಕೆ ಎಂಬುವನ ಕಾದಂಬರಿ-ಅದರಮೇಲೆ ಒosಣ boಡಿiಟಿg booಞ ಎಂಬ ಓದುಗನ ವಿಮರ್ಶಾ ಟಿಪ್ಪಣಿ. ದಿನಕ್ಕೆ ಕೇವಲ ಐದು ಡಾಲರ್‍ನಲ್ಲಿ ಯೂರೋಪ್ ಅಮೆರಿಕಾ ಸುತ್ತಿನೋಡುವ ರಹಸ್ಯವನ್ನೊಳಗೊಂಡ ಪ್ರವಾಸೀ ಗೈಡು. ಜೇಮ್ಸ್ ಹಿಲ್ಟನ್‌ನ “ಲಾಸ್ಟ್ ಹೊರೈಸನ್” ಬ್ರೆಕ್ಟ್‌ನ “ಗೆಲಿಲಿಯೋ ಗೆಲಿಲಿ” ಪುಸ್ತಕದ ಅನೇಕ ಪ್ರತಿಗಳು (ಬಹುಶಃ ಇವು ಪಾಠ್ಯ ಪುಸ್ತಕಗಳಾಗಿದ್ದಿರಬಹುದೆಂದು ಜೋಯಿಸರು ಊಹಿಸಿದರು)-ಒಂದು ರಾಶಿ ಡೆಬೋನೇರ್ ಎಂಬ ಪತ್ರಿಕೆಯ ಸಂಚಿಕೆಗಳು. ಶಿವಾಜೋಯಿಸರಿಗೆ ಬಗ್ಗಿ ಪುಸ್ತಕ ನೋಡುವುದು ತ್ರಾಸಾದಂತೆ, ಅವರು ಕುಕ್ಕರಗಾಲಲ್ಲಿ ಕುಳಿತೇಬಿಟ್ಟರು. ಕೂತು ಡೆಬೋನೇರ್ ತಿರುವಿದರು. ಅಂಗಡಿಯವನು ಬಂದು ಗೂಢವಾಗಿ “ಐದು ರೂಪಾಯಿ ಸರ್ ಬೇಕಿದ್ರೆ ಇನ್ನೂ ಇಂಟರೆಸ್ಟಿಂಗ್ ಪುಸ್ತಕಗಳಿವೆ” ಎಂದು ಕಿವಿಯಲ್ಲಿ ಉಸುರಿದ. ಪತ್ರಿಕೆಯ ಪುಟ ತಿರುವಿದಂತೆ, ಇಂಟರೆಸ್ಟಿಂಗ್ ಏನೆಂದು ಜೋಯಿಸರಿಗೆ ಅರ್ಥವಾಯಿತು. ಅವರ ದೃಷ್ಟಿ ಆ ರಾಶಿಯಿಂದ ಎದ್ದು ಮುಂದಿನ ರಾಶಿಯ ಮೇಲೆ ಸ್ಥಾಯಿಯಾಯಿತು. ಒಂದು ಪತ್ರಿಕೆಯಲ್ಲಿ ಆಸಕ್ತಿಗಳ, ವಿಕೃತವೆಂಬಂತೆ ಕಂಡ ವಿಳಾಸಗಳ ಸಂಕ್ಷಿಪ್ತ ಜಾಹಿರಾತುಗಳೇ ತುಂಬಿದ್ದವು. ಜನ ಹೊಟ್ಟೆ ಹೊರೆಯಲು ಏನೆಲ್ಲ ದಂಧೆ ನಡೆಸುವರು ಎಂದು ಜೋಯಿಸರು ಆಸಕ್ತಿಯಿಂದ ನೋಡಿದರು-ಈ ಪುಸ್ತಕಗಳ ಕರ್ತೃಗಳು ಬದುಕಿನ ಬಗ್ಗೆ ಯಾವ ಪರಿಕಲ್ಪನೆ ಇಟ್ಟು ಬರೆದಿರಬಹುದು-ಇಲ್ಲಿ ಫುಟ್‌ಪಾತಿನಮೇಲೆ ಅವೇ ಪುಸ್ತಕಗಳು ವಾಸವಗಳೊಂದಿಗೆ ಜಟಾಪಟಿ ನಡೆಸಿವೆ. ರಿಲ್ಕೆಯ ಕಾದಂಬರಿ ಪಕ್ಕದ ರಾಶಿಯಲ್ಲಿ ಕುವೆಂಪು ಅವರ ಜನಪ್ರಿಯ ವಾಲ್ಮೀಕಿ ರಾಮಾಯಣ, ಅದರ ಮೇಲೆ ಗೊಪಾಲಕೃಷ್ಣ ಅಡಿಗರ ಬತ್ತಲಾರದ ಗಂಗೆ, ಮಹಾಕವಿಗಳಿಗೂ ಕಡೆಗೆ ಫುಟ್‌ಪಾತ್ ತಪ್ಪಿದ್ದಲ್ಲ ಎಂದು ತಮ್ಮಲ್ಲೇ ನಕ್ಕು ಶಿವಾಜೋಯಿಸರು ಎದ್ದು ನಿಂತರು. ಮತ್ತೆ ಬೀದಿಗಿಳಿಯುವಷ್ಟರಲ್ಲಿ ಅಂಗಡಿಯ ಮೂಲೆಯಲ್ಲಿ ಐವತ್ತು ಪೈಸೆಗೊಂದರಂತೆ ಮಾರಟಕ್ಕಿದ್ದ ಪುಸ್ತಕ ರಾಶಿ ಕಣ್ಣಿಗೆ ಬಿತ್ತು.

ಇಷ್ಟು ಕಡಿಮೆ ಬೆಲೆಗೂ ಪುಸ್ತಕ ಮಾರಾಟ ಮಾಡುತ್ತಾರಾ ? ಎಂದುಕೊಳ್ಳುತ್ತಲೇ ಜೋಯಿಸರು ಮತ್ತೆ ಬಗ್ಗಿದರು. ವೃಶ್ಚಿಕ ರಾಶಿಯ ೧೯೭೭ರ ಭವಿಷ್ಯ-ಲಿಂಡಾ ಗುಡ್‌ಮನ್ ಬರೆದಿರೋದು. ಎಲ್ಲ ಮನೆಗಳೂ ತುಂಬಿದ್ದ ಕ್ರಾಸ್‌ವರ್ಡ್ ಪಜಲ್‌ನ ಪುಸ್ತಕ-ಇದಿಷ್ಟೇ ಎಂದು ಎದ್ದು ನಿಲ್ಲುವಷ್ಟರಲ್ಲಿ ಕಂಡ ನ್ಯೂಮರಾಲಜಿಗೆ ಸಂಬಂಧಿಸಿದ ಪುಸ್ತಕ. ಜೋಯಿಸರು ಎಂದಿನ ಕುತೂಹಲದಿಂದ ಅದನ್ನು ಕೈಗೆತ್ತಿಕೊಂಡು ಸುತ್ತಿ-ಬಳಸಿ ನೋಡಿ, ಅಂಗಡಿಯವನನ್ನು ಕೇಳಿದರು_

“ಇದರ ರೇಟು ಎಷ್ಟಪ್ಪಾ ?”

“ಎಂಟಾಣೆ ಸರ್”

“ಮುದುಕನಿಗೆ ಡಿಸ್ಕೌಂಟ್ ಇಲ್ಲವೆ ?”

“ಏನ್ಸರ್ ಅರ್ಧಕಪ್ ಕಾಫಿ ಕೂಡಾ ಸಿಗೋದಿಲ್ಲಾ ಎಂಟಾಣೆಗೆ. ಬೇಕಿದ್ರೆ ಆ ಭವಿಷ್ಯದ ಪುಸ್ತಕ ಫ್ರೀ ತೆಗೊಳ್ಳಿ..... ಆದರೆ ರೇಟ್ ಮಾತ್ರ ಎಂಟಾಣೆಗಿಂತ ಕಮ್ಮಿ ಇಲ್ಲ.”

ಜೋಯಿಸರು ತಮ್ಮ ಜುಬ್ಬಾದ ಎರಡು ಮೂರು ಜೇಬುಗಳನ್ನು ತಡಕಾಡಿ, ಕಡೆಗೆ ಹತ್ತು ರೂಪಾಯಿಯ ನೋಟನ್ನು ಹೊರಗೆಳೆದರು. ಅಂಗಡಿಯವ ಸಿಟ್ಟಾದ. ಆದರೆ ಪಾಪದ ಜೋಯಿಸರ ಜೇಬಿನಲ್ಲಿದ್ದ ಚಿಲ್ಲರೇ ನಾಣ್ಯಗಳೆರಡೇ ಎರಡು-ನಾಕಾಣೆ ಒಂದು-ಒಂದು ಇಪ್ಪತ್ತು ಪೈಸೆಯದು. ಕಡೆಗೂ ಸೋತವ ಅಂಗಡಿಯವನೇ.

“ಹೋಗಲಿ ಬಿಡಿ ಸರ್.... ಹತ್ತು ಪರ್ಸೆಂಟ್ ಓಲ್ಡೇಜ್ ಡಿಸ್ಕೌಂಟು” ಎಂದ, ನಲವತ್ತೈದು ಪೈಸೆ ಸ್ವೀಕರಿಸುತ್ತಾ.

“ಯಾರಿಗಪ್ಪಾ ಓಲ್ಡೇಜ್ ? ನಂಗಾ ? ಪುಸ್ತಕಕ್ಕಾ ?” ಎನ್ನುತ್ತಲೇ ಜೋಯಿಸರು ಅಲ್ಲಿಂದ ಹೆಜ್ಜೆ ಹೊರಗಿಟ್ಟರು. ಅಂದೇಕೋ ಮತ್ತೆ ಬಸ್ ಹತ್ತುವ ಮನಸ್ಸಾಗದೇ ನಡೆವ ಛದ್ಮವೇಷಿ ಮಹಾರಾಜರಾಗಿಯೇ ಮನೆ ಸೇರಿದರು ಶಿವಾಜೋಯಿಸರು-ಎಂಟಾಣೆ ಪಾಸಿನ, ಆ ಎಂಟಾಣೆಯನ್ನೂ ಉಳಿಸಿ !

ಮನೆಗೆ ಬಂದಕೂಡಲೇ ಊಟವನ್ನೂ ಮಾಡದೆ, ಹನಿನೀರನ್ನೂ ಸೇವಸದೆ ಸಣ್ಣ ಮಕ್ಕಳ ಉತ್ಸಾಹದಲ್ಲಿ ಜೋಯಿಸರು ನ್ಯೂಮರಾಲಜಿಯ ಪಂಚಾಂಗ ತೆರೆದು ಕೂತರು. ಶಂಕರನಾರಾಯಣನ ಕ್ಯಾಲ್ಕುಲೇಟರ್ ಹುಡುಕಿ ತೆಗೆದು ಒಂದೆರಡು ಸಣ್ಣ ಲೆಕ್ಕ ಮಾಡಿದರು. ಏಕೋ ಹೊಂದಲಿಲ್ಲ_ಹಳೆಯ ಮಗ್ಗಿಯ ನೆನಪುಗಳಿಗೆ ಶರಣಾಗಿ, ಜನ್ಮದಿನ, ತಿಂಗಳು, ವರ್ಷ, ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆ ಎಲ್ಲವನ್ನೂ ಕೂಡಿಟ್ಟು ಗುಣಾಕಾರ ಭಾಗಾಕಾರ ಮಾಡಿದರು. ಪರವಾಗಿಲ್ಲ-ಈ ವಿದ್ಯೆ ಕರಗತವಾಗುವುದು ಕಷ್ಟವೇನಲ್ಲ ಎನ್ನಿಸಿತು. ಇದೇ ಸಂಖ್ಯಾಶಾಸ್ತ್ರವನ್ನು ಶಂಕರನಾರಾಯಣನ ವಿಷಯದಲ್ಲಿ ಪ್ರಯೋಗ ಮಾಡಿದರು_ಛೇ ಅವನ ಹೆಸರನ್ನು ಓಂಖಂIಓ ಎಂದು ಬರೆದಿದ್ದರೆ ಓಂಖಂಙಂಓ ಗಿಂತ ಹೆಚ್ಚು ಒಳ್ಳೆಯದಾಗುತ್ತಿತ್ತು ಎಂದು ಹೊಳೆಯಿತು. ಅವನ ಹೆಸರಿನ ಜತೆ, ಸ್ಕೂಟರಿನ ರಿಜಿಸ್ಟೇಶನ್ ನಂಬರ್ ಹೊಂದಾಣಿಕೆ ಆಗುತ್ತಿಲ್ಲ. ಕಳೆದ ತಿಂಗಳು ಆಕ್ಸಿಡೆಂಟಾದ್ದಕ್ಕೆ ಇದೇ ಕಾರಣವಿದ್ದೀತು. ಬಂದ ಕೂಡಲೇ ಸ್ಕೂಟರ್ ಬದಲಾಯಿಸಲು ಹೇಳಬೇಕು. ಮನೆಯ ಫೋನ್ ನಂಬರ್ ಮೇಲೆ ಈ ವಿದ್ಯೆ ಪ್ರಯೋಗವಾದೀತು. ಸದ್ಯ....ಅದು ಲಕ್ಕೀ ನಂಬರ್. ಅದಕ್ಕೇ ಈವರೆಗೆ ಒಂದೇ ಒಂದು ಬಾರಿಯೂ ಹುಚ್ಚಾಪಟ್ಟೆ ಬಿಲ್ ಬಂದಿಲ್ಲ. ಮೊನ್ನೆ ಆ ಭಾಸ್ಕರರಾಯರ ಮನೆಯಲ್ಲಿ ಆರು ಸಾವಿರ ರೂಪಾಯಿ ಟೆಲಿಫೋನ್ ಬಿಲ್ ಬಂದಂತೆ. ಅವನ ಜನ್ಮದಿನದ ಜೊತೆ ಟೆಲಿಫೋನ್ ನಂಬರ್ ಮಿಲಾಯಿಸಿ ನೋಡಿದರೆ ತಿಳಿಯುತ್ತದೆ.

ಸುಲಭದಲ್ಲಿ ಬಿಡದ ಈ ನ್ಯೂಮರಾಲಜಿಯ ಜಾಡ್ಯ ಶಿವಾಜೋಯಿಸರನ್ನು ಗಟ್ಟಿಯಾಗಿಯೇ ಅಂಟಿಕೊಂಡಿತು. ಅವರು ಎಲ್ಲದರಮೇಲೂ ಪ್ರಯೋಗ ನಡೆಸಿದರು. ಎಲ್ಲವೂ ಒಂದೊಂದು ಬಾರಿಯ ಪರೀಕ್ಷೆಗೊಳಗಾದ ನಂತರ, ಆ ವಸ್ತುವಿಗೆ ನ್ಯೂಮರಾಲಜಿಗೆ ಅಂಟಿದ ನಂಟು ಬಿಡುತ್ತಿತ್ತು. ಆದರೆ ಜೋಯಿಸರು ಮಾತ್ರ ಪ್ರಯೋಗ-ಪ್ರಯೋಗ, ಪ್ರಯೋಗವೆಂದು ಮುಂದುವರಿದೇವರಿದರು. ಕಡೆಗೂ ಅವರ ನಿರಂತರ ಪ್ರಯೋಗಕ್ಕೆ ಒಂದು ವಸ್ತು ಸಿಕ್ಕಿಯೇ ಸಿಕ್ಕಿತು. ಗಾಳಿ ಸವಾರಿ ಹೋಗಿ, ಚಾಮರಾಜಪೇಟೆಯ ಮಲಬಾರ್ ಲಾಜ್ ಪಕ್ಕದಂಗಡಿಯಲ್ಲಿ ಕೊಂಡ ಲಾಟರೀ ಟಿಕೇಟು. ಅವರಂದು ಕೊಂಡುಕೊಂಡದ್ದು ಒಂದೇ ಒಂದು ಕರ್ನಾಟಕ ರಾಜ್ಯ ಲಾಟರಿ. ಅದೃಷ್ಟ ಲಕ್ಷ್ಮೀ ಮುಂದಿನ ವಾರವೇ ಅವರನ್ನು ಒಲಿದಳು. ಶಿವಾಜೋಯಿಸರಿಗೆ ಹತ್ತು ರೂಪಾಯಿ ಬಹುಮಾನ ಬಂದಿತು.

ಅಲ್ಲಿಂದ ಮುಂದೆ ಶಿವಾಜೋಯಿಸರ ವೃತ್ತಿಯೂ, ನಿವೃತ್ತಿಯೂ ನ್ಯೂಮರಾಲಜಿಯೇ ಆಯಿತು. ಈ ನ್ಯೂಮರಾಲಜಿಯ ವಿದ್ಯೆಯನ್ನು ಲಾಟರಿ ದಂಧೆಗೆ ಅಳವಡಿಸುವುದನ್ನೇ ಅವರು ಜೀವನದ ಪರಮೋದ್ದೇಶ ಮಾಡಿಕೊಂಡಹಾಗಾಯಿತು. ಒಮ್ಮೆ ಅವರು ಜನ್ಮ ದಿನ ಅಳವಡಿಸಿ ಲಾಟರಿ ಪ್ರಯೋಗ ನಡೆಸುವರು, ಒಮ್ಮೆ ಹೆಸರಿನ ಸಂಖ್ಯೆ, ಒಮ್ಮೆ ಲಾಟರಿಯ ಹೆಸರು, ಅದಲ್ಲದೇ ತಂದ ಲಾಟರೀ ಟಿಕೇಟಿನ ಮನೆಯವರೆಲ್ಲರ ಜನ್ಮಕುಂಡಲಿಯನ್ನೂ ಮಿಲಾಯಿಸಿ ನೋಡುವುದು ಗುಪ್ತವಾಗಿ, ಟಿಕೀಟಿನ ಮೂಲೆಯಲ್ಲಿ, ಅವರ ಲೆಕ್ಕಾಚಾರದ ಪ್ರಕಾರ ಬರಬೇಕಾದ ಹಣದ ಮೊತ್ತ ಬರೆದಿಡುವುದು. ಮಗನ ಹೆಸರಿಗೆ ಹೊಂದುವ ಟಿಕೆಟ್ಟಾದರೆ, ಏಕೆ ಏನೆಂದು ಹೇಳದೇ, ಅವನಿಂದ ಎರಡೋ, ಐದೋ ರೂಪಾಯಿಗಳನ್ನು ಇಸಿದುಕೊಳ್ಳುವುದು_ಹೀಗೇ ನಿರಂತರವಾಗಿ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು.

ಪ್ರತೀದಿನ ಸಂಜೆಯವೇಳೆಗೆ ಜೋಯಿಸರು, ಶಿಸ್ತಾಗಿ ಡ್ರೆಸ್ ಮಾಡಿಕೊಡು ಬೀದಿಗಿಳಿವ ಉತ್ಸಾಹಿಗಳಾಗುತ್ತಿದ್ದರು. ಗಾಳಿ ಸೇವಿಸಲೂ, ಲಾಟರಿ ಕೊಳ್ಳಲೂ, ಚಾಮರಾಜಪೇಟೆ ಅವರಿಗೆ ಒಗ್ಗಿದ ಏರಿಯಾ. ಆದರ ಪಿನ್ ಕೋಡ್ ೫೬೦೦೧೮ ಅವರಿಗೆ ಲಕ್ಕೀ ನಂಬರಾದ ಎರಡಕ್ಕೆ ಕೂಡುತ್ತದೆ. ಆದರೆ ಮಲಬಾರ್ ಲಾಜಿನ ಪಕ್ಕದಂಗಡಿ ಲಕ್ಕೀ ಅಲ್ಲ_ಅದು ಮೂರನೇ ಬೀದಿಯಲ್ಲಿದೆ. ಅವರಿಗೆ ಎರಡನೇ ಬೀದಿಯ ಲಾಟರಿಯಂಗಡಿಯೇ ಬೇಕು. ಅಲ್ಲಿಯೇ ಟಿಕೆಟ್ ಹುಡುಕಿ ಹೊರಡುವರು. ಮನೆಯಲ್ಲೇ, ತಾವು ಅಂಗಡಿಯವನಿಗೆ ಕೊಡಲಿರುವ ನೋಟಿನ ಸಂಖ್ಯೆ ಲೆಕ್ಕ ಹಾಕಿಟ್ಟು, ಇಲ್ಲಿ ಅದಕ್ಕೆ ತಕ್ಕ ಟಿಕೇಟಿಗಾಗಿ ಗುಣಾಕಾರ, ಭಾಗಾಕಾರ ಮಾಡುವರು. ಆಗಾಗ ಗಡಿಯಾರ ನೋಡಿ ಸಮಯವನ್ನೂ ಲೆಕ್ಕ ಹಾಕುವರು. ಎಷ್ಟೋ ಬಾರಿ ಅಲ್ಲಿರುವ ಟಿಕೆಟ್ಟಿಗೂ ಲೆಕ್ಕಾಚಾರಕ್ಕೂ ಹೊಂದಾಣಿಕೆ ಆಗದೇ ಖಾಲಿ ಕೈಯಲ್ಲಿ ವಾಪಸ್ಸಾದುದಿದೆ. ಸುಮಾರು ಅರ್ಧ ಗಂಟೆಯ ಕಾಲ ಟಿಕೆಟ್ಟುಗಳ ಕಟ್ಟಿನ ಮೇಲೆ ಎರಗಿ ನಿಂತು ಟಿಕೆಟ್ ಕೊಂಡರೆ, ಕೊಂಡ ಟಿಕೆಟ್ಟನ್ನು ಹತ್ತು ನಿಮಿಷ ಸವರಿ ಸವರಿ ನೋಡುವರು. ಎಷ್ಟೋ ಬಾರಿ, ಆ ಹಂತದಲ್ಲೂ ಸಮಾಧಾನವಾಗದೇ ಟಿಕೆಟ್ ವಾಪಸ್ ಮಾಡಿದ್ದಿದೆ. ಅಂಗಡಿಯವನಿಗೆ ಮೊದಮೊದಲು ಕಿರಿಕಿರಿ ಎನ್ನಿಸಿದರೂ, ಕ್ರಮೇಣ ಜೋಯಿಸರ ರೀತಿ ಅಭ್ಯಾಸವಾಗಿಬಿಟ್ಟಿತು. ಬರಬರುತ್ತಾ ಜೋಯಿಸರು, ಚಾಮರಾಜಪೇಟೆಯಿಡೀ, ಲಾಟರಿ ಜೋಯಿಸರೆಂದೇ ಪ್ರಖ್ಯಾತರಾದರು.

ಶಿವಾಜೋಯಿಸರು ಲಾಟರಿ ಫಲಿತಾಂಶ ನೋಡುವುದಕ್ಕು ಒಂದು ಪದ್ಧತಿ ಏರ್ಪಾಟು ಮಾಡಿಕೊಂಡರು. ಮನೆಯ ಪೇಪರಿನಲ್ಲಿ ಅವರೆಂದೂ ಫಲಿತಾಂಶ ನೋಡುವವರಲ್ಲ. ಅದಕ್ಕೆ ಬೇರೆ ಬೀದಿಯ ಬೇರೊಂದೇ ಅಂಗಡಿಯನ್ನು ಖಾಯಂ ಮಾಡಿಕೊ
ಡಿದ್ದರು. ಜೋಯಿಸರ ಪದ್ಧತಿ, ಲೆಕ್ಕಾಚಾರ ಈ ಮೂರು ವರ್ಷಗಳ ಕಾಲಾಂತರದಲ್ಲಿ ಅನೇಕೆ ಮಾರ್ಪಾಟುಗಳನ್ನೂ ಪಡೆದು, ಕಾಂಪ್ಲಿಕೇಟ್ ಆಗುತ್ತಾ ಹೋದರೂ, ಅವರಿಗೆ ಮತ್ತೆ ಬಹುಮಾನ ಬಂದೇ ಇರಲಿಲ್ಲ.

ಮೂರು ವರ್ಷಗಳ ಸತತ ಪ್ರಯತ್ನದ ನಂತರವು ಫಲಬರದಿದ್ದುದು ನೋಡಿ, ರೋಸಿ ಹೋಗಿ ಅದನ್ನು ಬಿಟ್ಟೇ ಬಿಡುವುದೆಂದು ನಿರ್ಧರಿಸಿ, ಮತ್ತೆ ಬೇರೇನೂ ಮಾಡಲು ತೋರದೆ ಜೋಯಿಸರು ಬೀದಿಗಾದರು. ಅಂದು ಸಂಜೆ ಕೆ. ಆರ್. ರಸ್ತೆ, ಎನ್. ಆರ್. ರಸ್ತೆ, ಜೆ. ಸಿ. ರಸ್ತೆ, ಕಾರ್ಪೋರೇಷನ್, ಕಸ್ತೂರ್ಬಾ ರಸ್ತೆಯ ಮೇಲಾಗಿ ಎಂ. ಜಿ. ರಸ್ತೆ ತಲುಪಿದರು. ಎಂ. ಜಿ. ರಸ್ತೆಯ ಗುಂಟ ನಡೆದು ಬ್ರಿಗೇಡ್ ರಸ್ತೆಗೆ ತಿರುಗಿದರು. ತಿರುಗಿದಾಕ್ಷಣವೇ ಒಂದು ಲಾಟರಿಯಂಗಡಿ ಕಂಡಿತು. ಜೋಯಿಸರಿಗೆ ಹಳೆಯ ಹವ್ಯಾಸ ಬಿಟ್ಟುಕೊಡಲಾಗಲಿಲ್ಲ. ಅವರು ಅಲ್ಲೇ ನಿಂತರು. ಬೇಗನೇ ಒಂದಿಷ್ಟು ಲೆಕ್ಕ ಹಾಕಿದರು. ಇಷ್ಟು ದಿನವೂ ಏಜೆನ್ಸಿಯ ಸಂಖ್ಯೆಯನ್ನು ಪರಿಗಣಿಸಿಯೇ ಇರಲಿಲ್ಲ ಎಂದವರಿಗೆ, ಇದ್ದಕ್ಕಿದ್ದಂತೆ ಜ್ಞಾನೋದಯವಾಯಿತು. ಮತ್ತೆ ಮನಸ್ಸಿನಲ್ಲೇ ಭಾಗಾಕಾರ ಗುಣಾಕಾರ ಮಾಡಿ, ಮೇಲಿನಿಂದ ಮೂರನೆಯ ಟಿಕೆಟ್ ಎಳೆದುಕೊಂಡು ಹಣಕೊಟ್ಟರು. ಟಿಕೆಟ್ಟನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ, ಮಡಿಸಿ ಜೇಬಿಗಿಳಿಸಿಯೂ ಬಿಟ್ಟರು.

ಈ ಬಾರಿ ಬಹುಮಾನ ಬರುವುದರಲ್ಲಿ ಜೋಯಿಸರಿಗೆ ಯಾವುದೇ ಅನುಮಾನ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಬೋಧಿವೃಕ್ಷದಡಿ ಜ್ಞಾನೋದಯವಾದಂತಹ, ಬದುಕಿನೆಲ್ಲ ರಹಸ್ಯಗಳನ್ನೂ ಭೇದಿಸಿದಂತಹ ಒಂದು ಪ್ರಬುದ್ಧ ಬುದ್ಧ ಭಾವನೆ ಜೋಯಿಸರನ್ನು ಆವರಿಸಿತು.

ಮಹಾ ಉಲ್ಲಾಸದಿಂದ ಸೀಟಿ ಬಜಾಯಿಸುತ್ತ ಇನ್ನಷ್ಟು ದೂರ ನಡೆದರು. ಬಾಸ್ಕೋದಿಂದ ಬರುತ್ತಿದ್ದ ವಿದೇಶೀ ಸಂಗೀತ ಲಯಬದ್ಧವಾಗಿ ಇವರ ಹೊಟ್ಟೆಯ ಮೇಲೆ ಬಡಿಯಿತು. ಜೋಯಿಸರು ಒಂದು ಕ್ಷಣ ಅಲ್ಲಿ ನಿಂತರು_ಹಿಂದೆ ಷೋಕೇಸಿನಲ್ಲಿ ಕುಣಿಯುವ ಹುಡುಗಿಯರ ಚಿತ್ರ ಹಾಕಿರುತ್ತಿದ್ದರು. ಈಗ ಅದು ಇಲ್ಲ ಎಂಬುದನ್ನು ಗಮನಿಸಿ, ಈ ಕ್ಯಾಬರೆ ಎಂಬುದು ಹೇಗಿರುತ್ತದೆಯೋ ಎಂದು ಒಂದು ಕ್ಷಣ ಯೋಚಿಸದಿರು.

“ಮುದುಕನಿಗೆ ಹೇಗೋ ಚಪಲ ಬಿಟ್ಟಿಲ್ಲ.....ಕೈಲಾಗಲ್ಲ, ಒಳಗೆ ಹೋಗಲು ಧೈರ್ಯಾನೂ ಇಲ್ಲ” ಹುಡುಗನೊಬ್ಬ ಹಿಂದಿನಿಂದ ಗೇಲಿ ಮಾಡಿದ.

ಶಿವಾಜೋಯಿಸರು ಮನಸ್ಸಿನಲ್ಲೇ ನಕ್ಕರು. ಹುಡುಗನನ್ನು ಕ್ಷಮಿಸಿದರು. ತಿರುಗಿ ಎಂ. ಜಿ. ರಸ್ತೆಯತ್ತ ಹೆಜ್ಜೆ ಹಾಕಿದರು. ಟ್ರಾಫಿಕ್ ಸಿಗ್ನಲ್ ಸಿಕ್ಕಾಗ ಎಂ. ಜಿ. ರಸ್ತೆಯನ್ನೂ ದಾಟಿ, ಆಚೆ ಬದಿಯ ಎತ್ತರದ ಫುಟ್‌ಪಾತಿನ ಮೇಲೆ ಮನೆಯತ್ತ ಹೆಜ್ಜೆ ಹಾಕಿದರು. ಸ್ವಲ್ಪ ಸುಸ್ತಾದಂತೆನಿಸಿತು. ಛಳಿಗೆ ನಡುಗಿದರು. ಈ ವಯಸ್ಸಿಗೆ ಈ ದಿನ ನಡೆದುದು ಸ್ವಲ್ಪ ಜಾಸ್ತಿಯೇ ಆಯಿತು. ಸುತ್ತಮುತ್ತ ನೋಡಿ ಕಲ್ಲುಬೆಂಚಿನ ಮೇಲೆ ಕುಸಿದು ಕುಳಿತರು. ಜುಬ್ಬಾದ ಜೇಬಿನಿಂದ ಲಾಟರಿ ಟಿಕೆಟ್ ತೆಗೆದು ಮತ್ತೊಮ್ಮೆ ಲೆಕ್ಕಾಚಾರ ಮಾಡಿದರು. ಹೊಸದಾಗಿ ಕಟ್ಟಿದ ಬಾರ್ಟ ಟವರನ್ನು ಎವೆಯಿಕ್ಕದೇ ಎರಡು ನಿಮಿಷ ನೋಡಿದರು. ಅಂದಿನ ಲಾಟರೀ ವ್ಯಾಪಾರದ ಬಗ್ಗೆ ಅವರಿಗೆ ಜೀವನದ ನಿಗೂಢ ರಹಸ್ಯವನ್ನು ಬಹಳ ಸರಳವಾಗಿ ಭೇದಿಸಿದಷ್ಟು ಸಂತೃಪ್ತಿಯಾಗಿ ಟಿಕೆಟ್ಟನ್ನು ಕೆಳಗಿಟ್ಟರು.

ವೇಗದಿಂದ ಸರಳ ರೇಖೆಯಂತೆ ಹೋಗುತ್ತಿದ್ದ ಸಾಲುವಾಹನಗಳನ್ನೇ ನೋಡುತ್ತಾ ಜೋಯಿಸರು ಕುಳಿತಿದ್ದರು.

ಕುಳಿತಲ್ಲೇ ನಿದ್ದೆ ಹೋದಂತಿದ್ದ ಅವರ ಕಣ್ಣಲ್ಲಿ, ಜೋರಾಗಿ ಓಡುತ್ತಿದ್ದ ವಾಹನಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು.