Showing posts with label ಶ್ರೀರಾಮ್. Show all posts
Showing posts with label ಶ್ರೀರಾಮ್. Show all posts

Saturday, November 28, 2009

ಭಾಸ್ಕರರಾಯರು ಬರೆದದ್ದೇನು?

ನೇಪಥ್ಯ

ಭಾಸ್ಕರರಾಯರು ಹೊಸಪುಸ್ತಕದ ಹೊಸಫ್ಟವೊಂದನ್ನು ತೆರೆದರು. ಏನಾದರೂ ಬರೆಯಬೇಕು. ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನ್ನಿಸುತ್ತದೆ. ಹೊಸದಾಗಿ ಬರೆವುದೆಂದರೇನು? ತಮ್ಮ ಹಳೇ ಕಥೆಯನ್ನೇ? ಆತ್ಮ ಚರಿತ್ರೆಯನ್ನೇ? ಜೀವನದ ರಸಕ್ಷಣಗಳ ಸುಂದರ ನೆನಪಿನ ಮಾಲೆಯನ್ನೆ? ಕೇವಲ ಹಿಂದಿನ ದಿನದ ದಿನಚರಿಯನ್ನೆ? ಒಂದು ಪತ್ರವನ್ನೆ? ಬೇರೊಬ್ಬರ ಹಣೆಬರಹವನ್ನೆ? ಈ ಇಂಥ ಪ್ರಶ್ನೆಗಳೆಲ್ಲಾ ಭಾಸ್ಕರರಾಯರನು ಕಾಡಿದ್ದಿರಬಹುದು. ಈ ಎಪ್ಪತ್ತರ ಇಳಿವಯಸ್ಸಿನಲ್ಲಿ, ನಡುಗುವ ಕೈಗಳಲ್ಲಿ ಬರೆವುದಾದರೂ ಏನನ್ನು? ಬರೆದರೂ ಅದರ ಪರಿಣಾಮ ಎಷ್ಟರಮಟ್ಟಿಗೆ? ಬರೆದದ್ದರಿಂದ ಚರಿತ್ರೆಯನ್ನು ಅಳಿಸಲು ಸಾಧ್ಯವೇ? ಇಲ್ಲವೆನ್ನಿಸುತ್ತದೆ. ಹೋಗಲಿ ಮುಂದೆ ಭವಿಷ್ಯದ ದಿಕ್ಕನ್ನದರೂ ಬದಲಾಯಿಸಬಹುದೇ? ಗೊತ್ತಿಲ್ಲ. ಈ ಲೋಕದ ಬಗ್ಗೆ ಬರೆದು ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಅನ್ನಬಹುದೇ? ಆ ಕಾಲದಲ್ಲಿ ಭಾಸ್ಕರರಾಯರು ಏನನ್ನಾದರೂ ಬರೆದಿದ್ದರೆ ಬಹುಶಃ ಈಗ ಅದರ ಪರಿಣಾಮ ತಿಳಿಯಬಹುದಿತ್ತೇನೋ..... ಆದರೆ ಈಗ ಬರೆಯಲಿರುವುದರ ಪರಿಣಾಮ ಜೀವನದುದಕ್ಕೂ ತಿಳಿದೀತೋ.. ತಿಳಿಯದೇ ಉಳಿದೀತೋ. ಮೈಸೂರಿನ ಮೂಲೆಯೊಂದರಲಿ ಕುಳಿತು ಬರೆವ ತಮ್ಮ ಬರವಣಿಗೆಯನ್ನು ಓದುವವರಾದರೂ ಯಾರು? ಬಹುಶಃ ತಾವೊಬ್ಬರೇ. ಜೊತೆಗೆ...? ಹಾಗಾದರೆ ಈಗ ಬರೆಯಲೇ ಬೇಕೆ? ಈ ಪ್ರಶ್ನೆ ಎದುರಾದಾಗ, ತಮ್ಮ ಬರವಣಿಗೆಯನ್ನು ಓದುವ ಒಂದೇ ವ್ಯಕ್ತಿಯ ಮುಖ, ರಾಯರ ಮನಸ್ಸಿನಲ್ಲಿ ಹಾಯ್ದು ಹೋಯಿತು. ಹಿಂದೆ, ರಾಯರು ಹೆಚ್ಚು ಬರೆದವರಲ್ಲ, ಹಿಂದೇನಾದರೂ ರಾಯರು ಬರೆದಿದ್ದರೆ, ಅದೆಷ್ಟು ಜನರ ವಿಧಿಬರಹವಾಗಿ ಪರಿಣಮಿಸುತ್ತಿತ್ತೋ ತಿಳಿಯದು... ಈಗವರು ಬರೆಯಬೇಕಾದ್ದೇನು ಅದರ ಪರಿಣಾಮ ಏನಿರಬಹುದು ಎಂದು ಆಲೋಚಿಸದೆಯೇ ಲೇಖನಿಯನ್ನು ಕೈಗೆತ್ತಿಕೊಂಡಾಗ, ಅವರ ಕೈ ಮೀರಿದ ಶಕ್ತಿಯೊಂದು
ಸಹಜವಾಗಿ ಅವರಿಂದ ಏನನ್ನೋ ಬರೆಸುತ್ತಾ ಹೋಯಿತು.


ಎಂಟನೆಯ ಮುಖ್ಯ ರಸ್ತೆ.

ಎಂಟನೆಯ ಮುಖ್ಯರಸ್ತೆಯ ಹದಿನಾರನೇ ನಂಬರ್ ಮನೆಯ ಬಳಿ ಗೇಟಿನ ಮುಂದೆ ಬೇಸರದಿಂದ ಕಾದು ನಿಂತಿರುವ ಕುಮುದಾಳಿಗೆ ಅನತಿದೂರದಿಂದ ತಮ್ಮ ಮನೆಯೆಡೆಗೆ ಹೆಜ್ಜೆ ಹಾಕುತ್ತಿರುವ ಆಕೃತಿಯ ಬಗ್ಗೆ ಅನುಮಾನವೇ ಇರಲಿಲ್ಲ. ಕುಮುದಾ ಈ ನಿರೀಕ್ಷೆಯಲ್ಲಿಯೇ ಇದ್ದಾಳೆ. ಬೆಳಿಗ್ಗೆ ಒಂಬತ್ತು ಗಂಟೆಗೇ ಬರುತ್ತೇನೆಂದ ಗೆಳತಿ ಲಲಿತ ಬಂದಿರಲಿಲ್ಲವಾದ್ದರಿಂದಲೇ ಕುಮುದಾ ಕಾತರದಿಂದ ಗೇಟಿನ ಬಳಿ ನಿಂತದ್ದು. ಲಲ್ಲೂ ಮನೆ ಸಂಈಪಿಸುತ್ತಿದ್ದಂತೆಯೇ ಅಂತೂ ಕಡೆಗೂ ಬಂದಳಲ್ಲ ಎಂದು ನಿಟ್ಟುಸಿರಿಡುತ್ತಲೇ ಕುಮುದಾ ಒಳ ಹಜಾರ ಪ್ರವೇಶಿಸಿ ಬೆತ್ತದ ಕುರ್ಚಿಗೆ ಬೆನ್ನೂರಗಿಸುತ್ತಾಳೆ. ಸರಸರನೆ ಒಳಬಂದ ಲಲ್ಲೂ ಮಾತಿಗೆ ತೊಡಗುತ್ತಾಳೆ.

"ಸಾರೀಮ್ಮಾ, ಲೇಟಾಯ್ತು.."

"ಬಾರೇ, ಬಾ.. ನಿಂಗೋಸ್ಕರಾನೇ ಕಾದೂ ಕಾದೂ ಸುಸ್ತಾಯ್ತು. ಅಲ್ಲ... ಯಾಕೇ ಇಷ್ಟು ತಡ ಮಾಡಿದೆ?"

ಲಲ್ಲೂಳ ಮುಖ ಕೆಂಪೇರುತ್ತದೆ.

"ಅನಿರುಧ್ ಬಂದಿದ್ರು ಕಣೇ.. ಅದಕ್ಕೇ..."

"ಅರ್ಥವಾಯ್ತು ಬಿಡು."

ಕುಮುದಾ ವ್ಯಂಗ್ಯದ ದನಿಯಲ್ಲಿ ಹೇಳುತ್ತಿದ್ದಂತೆ ಲಲ್ಲೂ ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ. ನಂತರ ಅವಳು ಯಾಂತ್ರಿಕವಾಗಿ ವ್ಯಾನಿಟಿ ಬ್ಯಾಗಿನಿಂದ ಒಂದಿಷ್ಟು ಕಾರ್ಡುಗಳನ್ನು ಹೊರಗೆಳೆಯುತ್ತಾಳೆ.

"ಏ ಕುಮು, ನಿಮ್ಮ ತಂದೆಯ ಹೆಸರೇನೇ?"

"ಹಾಗಾದರೆ ನಿನ್ನ ಮದುವೆಗೆ ನನಗೇ ಇನ್ವಿಟೇಷನ್ ಇಲ್ಲಾನ್ನು.. ಇರಲಿ... ನನಗೂ ಒಂದಿನ ಮದುವೆ ಆಗದೇ ಇರುತ್ತಾ? ... ಸೇಡು ತೀರಿಸಿಕೊಳ್ಳುತ್ತೀನಿ.."

"ಛೇ... ಹಾಗಲ್ಲ ಕಣೇಮ್ಮಾ" ಲಲ್ಲೂ ಮಾತನಾಡುತ್ತಲೇ ಕುಮುದಾಳ ತಂದೆಯ ಹೆಸರಿಗೆ ಹಿರಿಯರ ಕರೆಯೋಲೆ ಬರೆದು "ನಿಮ್ಮ ತಂದೆಗೆ ಕೊಟ್ಬಿಡೇ" ಎನ್ನುತ್ತಲೇ ತನ್ನ, ಅನಿರುದ್ಧನ ಜಂಟಿ ಹೆಸರಿಸುವ ಕರೆಯೋಲೆಯ ಮೇಲೆ ಕುಮುದಾಳ ಹೆಸರು ಬರೆದು ಕೊಡುತ್ತಾಳೆ. ಇಬ್ಬರೂ ಕೆಲಹೊತ್ತು ಲೋಕಾಭಿರಾಮ ಹರಟುತ್ತಾರೆ. ನಂತರ ಲಲ್ಲೂ ಕುಮುದಾಳ ಮದುವೆಯ ಪ್ರಸ್ತಾಪ ಮಾಡುತ್ತಾಳೆ.

ಕುಮುದಾ ಹೆದರಿದಂತೆ ಲಲ್ಲೂಳ ಬಾಯಿ ಮುಚ್ಚಿ..
"ಈ ವಿಷಯ ಮಹಡಿ ಮೇಲೆ ಕೂತು ಮಾತಾಡೋಣ... ಯಾಕೇಂದ್ರೆ ನನಿನ್ನೂ ಮನೇಲಿ ಸಿದ್ದಾರ್ಥನ ವಿಷಯ ಕೇಳೇ ಇಲ್ಲ... ನೀನೆಲ್ಲಾದರೂ ರಾದ್ಧಾಂತ ಮಾಡಿಬಿಟ್ಟೀಯ ಮತ್ತೆ....."

ಇಬ್ಬರೂ ತೆರೆದ ಮಹಡಿಯ ಮೇಲೆ ಹೋಗಿ ಬಿಸಿಲು ಕಾಯಿಸಿಕೊಳ್ಳುತ್ತಾ ಮೈ ಚಾಚುತ್ತಾರೆ. ಕುಮುದಾ ತನ್ನ ಬಗ್ಗೆ ಹೇಳತೊಡಗುತ್ತಾಳೆ.

ಕುಮುದಾಳ ಕಥನ

ನಾನು ಸಿದ್ಧಾರ್ಥನನ್ನು ಭೇಟಿಯಾದ ರೀತಿ ನೆನಪು ಮಾಡಿಕೊಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆ ದಿನ ಅವನ ಪಿಎಚ್‍ಡಿ ಥೀಸಿಸ್‍ನ ಪಬ್ಲಿಕ್ ಡಿಫೆನ್ಸ್ ಇತ್ತು. ಅಲ್ಲಿ ತರಲೆ ಮಾಡಿ ಪ್ರಶ್ನೆಗಳನ್ನು ಕೇಳೋಣವೆಂದೇ ನಾನು ಸೆನೆಟ್ ಹಾಲಿಗೆ ಹೋದೆ. ಆದರೆ ಅವನು ಪ್ರಬಂಧ ಮಂಡಿಸಿದ ರೀತಿಗೆ ಬೆರಗಾಗಿ, ಯಾವ ಪ್ರಶ್ನೆ ಕೇಳಬೇಕೆಂದೇ ನನಗೆ ತಿಳಿಯಲಿಲ್ಲ. ಆದಿನವೇ ಅವನ ಪರಿಚಯ ಔಪಚಾರಿಕವಾಗಿ ಆಗಿ, ಮೊದಲ ಬಾರಿಗೆ ಪರಸ್ಪರ ಮಾತಾಡಿದೆವು. ಆ ನಂತರ ನನ್ನ ಸಂಶೋಧನೆಯಲ್ಲಿ ಉದ್ಭವಿಸಿದ ಅನೇಕ ತೊಡಕುಗಳನ್ನು ಅವನು ಸಹಜವೆಂಬಂತೆ ಪರಿಹರಿಸಿಬಿಟ್ಟ. ನಾನು ಅವನನ್ನು ಪೀಡಿಸಿ ಗಲಾಟೆ ಮಾಡಿದ್ದಕ್ಕೆ, ನನ್ನ ಪಿರಿಪಿರಿ ತಾಳಲಾರದೇ ಸಿಗರೇಟ್ ಸೇದುವುದನ್ನು ಬಿಟ್ಟ. ಆ ದಿನವೇ ನಮ್ಮ ಪ್ರೇಮಾಂಕುರವಾಗಿರಬಹುದೆಂದು ನನ್ನ ಊಹೆ. [ಆದರೂ ಕ್ರಮೇಣ ಘಟಿಸುವ ಪ್ರೇಮದಂತಹ ಅನುಭವಕ್ಕೆ ಒಂದು ಕಾಲಮಾನದಲ್ಲಿ ನಿಖರವಾಗಿ ಆರಂಭವನ್ನು ಹುಡುಕುವುದು ತಪ್ಪಾದೀತು] ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ನಾವುಗಳು ಇಷ್ಟೆಲ್ಲಾ ಒಡನಾಟ ಹೊಂದಿರುವಾಗ್ಯೂ ನಾವಿಬ್ಬರೂ, ಒಬ್ಬರನ್ನೂಬ್ಬರು ಪ್ರೀತಿಸುತ್ತೇವೆಂದು ಈವರೆಗೂ ಹೇಳಿಕೊಂಡಿಲ್ಲ. ಇನ್ನು ಮದುವೆಯ ಪ್ರಸ್ತಾಪ ದೂರ. ಬಹುಶಃ ಪ್ರೀತಿ ಮಾತಿಗೆ ನಿಲುಕದ ಅನುಭವವಾದ್ದರಿಂದ ಹೀಗಿರಬಹುದು. ಮನಸ್ಸೇ ಅವನದಾಗಿರುವಾಗ ಮಾತಿನಂತಹ ಕೃತಕ ಸಾಧನಗಳು ಬೇಕೇ? ಆದರೂ, ಈ ಮನಸ್ಸು ಹೃದಯಗಳೆಂಬ ಅಮೂರ್ತ ವಿಷಯಗಳೂ ಕಡೆಗೆ ಮದುವೆಯೆಂಬ ಸಾಮಾಜಿಕ ಕ್ರಿಯೆಯಲ್ಲಿ ಪರ್ಯಾವಸನವಾಗಲೇಬೇಕಾದ್ದರಿಂದ, ಎಂದಾದರೂ ಮಾತಾಡಲೇ ಬೇಕು. ಅದಕ್ಕೆ ಸಂದರ್ಭ ಒದಗೆ ಬಂದಿಲ್ಲವೇನೋ. ಬಹುಷಃ ಸಿದ್ದಾರ್ಥನ ಮನೆಯಲ್ಲೋ ನನ್ನ ಮನೆಯಲ್ಲೋ ಮದುವೆಯ ಪ್ರಸ್ತಪ ಬಂದ ದಿನ ನಾವಿಬ್ಬರೂ ಈ ಬಗ್ಗೆ ಮಾತಾಡಿಕೊಳ್ಳಬಹುದು.

ನಾನು ಇಷ್ಟಲ್ಲಾ ಹೇಳಿದರೂ ನನಗೆ ಈ ವಿಷಯದ ಬಗ್ಗೆ ಇನ್ನೂ ಖಾತ್ರಿಯಿಲ್ಲ. ಸಿದ್ದಾರ್ಥ ನನ್ನೆಡೆಗೆ ತೋರಿಸುವ ಸಂಯಮವೇ ನನ್ನ ಅನುಮಾನಕ್ಕೆ ಕಾರಣವಿರಬೇಕು. ಅವನೂ ನಾನು ಭಾವಿಸಿದ ಹಾಗೆಯೇ ಭಾವಿಸಿದ್ದಾನೆಯೇ? ಅಥವಾ ಅವನಿಗಿದು ಕಾಮದಿಂದೀಚೆಗಿನ ಶುದ್ಧ - ಪರಿಶುದ್ಧ ಸ್ನೇಹ ಮಾತ್ರವೋ? ನನಗೆ ಆಗಾಗ ಅನ್ನಿಸುವುದುಂಟು - ಈ ಜಗತ್ತಿನಲ್ಲಿ ಕಾಮದ ಸುತ್ತ ಹೆಣೆಯದ ಸಂಬಂಧಗಳು ಬರೇ ದೈಹಿಕವಾಗಿ ಮಾತ್ರ ಇರುತ್ತದೇನೋ. ಮಾನಸಿಕವಾಗಿ ಎಷ್ಟೆಲ್ಲಾ ಜನರನ್ನು ನಮ್ಮ ತೋಳ್ತಕ್ಕೆಯಲ್ಲಿ ಕಲ್ಪಿಸಿಕೊಂಡುಬಿಟ್ಟಿರುತ್ತೇವೆ! ಇದರಲ್ಲಿ ಸಿದ್ದಾರ್ಥ ಎಷ್ಟನೆಯವನು? ಕಡೆಯವನೇ?? ಇರಲಿ. ಆದರೆ ಒಂದು ಮಾತ್ರ ನನಗೆ ಸ್ಪಷ್ಟ, ನಾನು ಮದುವೆಯಾಗುವುದಕ್ಕೆ ಮೊದಲು - ಅದು ಯಾರೊಂದಿಗೇ ಇರಲಿ - ನನಗೆ ಸಿದ್ಧಾರ್ಥನೊಂದಿಗಿನ ಸಂಬಂಧ ಸ್ಪಷ್ಟವಾಗುವುದು ಅಗತ್ಯ. ಮೊನ್ನೆ ನನಗೆ ಅಪೆಂಡಿಸೈಟಿಸ್ ಆಪರೇಷನ್ ಆದಾಗ ಅವನು ಬಂದು ನನ್ನನ್ನು ನೋಡಿದ್ದೇ ಕೊನೆ. ಅಂದೇ ಅವನು ಮಂಗಳೂರಿಗೆ ಹೊರಟ. ನಂತರ ಅವನ ಪತ್ರ ಬರಬಹುದೆಂದು ಈ ವರೆಗೂ ಕಾದದ್ದಾಯಿತು. ಇನೂ ಕಾಯುತ್ತೇನೆ. ಮಾತಿಗೆ ನಿಲುಕದ ವಿಷಯವಲ್ಲವೇ? ಅದಕ್ಕೆ ಅಕ್ಷರರೂಪ ಕೊಡಲು ತಡವಾದೀತು. ಬರೆಯುತ್ತಾನೆ ಎಂಬ ನಂಬಿಕೆಯೇ ನನಗೆ ಧೈರ್ಯ. ಅವನ ಪತ್ರ ಬಂದರೆ ಎಲ್ಲವೂ ಸ್ಪಷ್ಟವಾಗಬಹುದು. ಪತ್ರ ಈ ದಿನ ಬರಬಹುದೇ? ಜೀವನದುದ್ದಕ್ಕೂ ಯಾವುದೋ ಸ್ಪಷ್ಟೀಕರಣಕ್ಕೆ ಕಾಯುತ್ತಿದ್ದೇವೆ ಎಂದೆನ್ನಿಸುವುದಿಲ್ಲವೇ? ಆ ಸ್ಪಷ್ಟೀಕರಣ ದೊರೆಯುವುದೆಂದೋ... ದೊರೆತರೂ, ನಾವು ಸ್ಪಷ್ಟೀಕರಣ ಎಂದುಕೊಂಡದ್ದು ನಿಜಕ್ಕೂ ಸ್ಪಷ್ಟವಾಗಿಯೇ ಇರುತ್ತದಾ?

ಅಂಚೆಯವನ ಪ್ರವೇಶ, ನಿರ್ಗಮನ

ಅಂಚೆಯವನು ರಸ್ತೆಯಗುಂಟ ನಡೆದು ಬಂದು, ಗೇಟ್ ತೆರೆದು, ಮನೆಯೊಳಕ್ಕೆ ಪ್ರವೇಶಿಸಿ, ಒಂದು ಪತ್ರವನ್ನು ತೂರಿ, "ಪೋಸ್ಟ್" ಎಂದು ಅರಚಿ, ಗೇಟ್ ತೆರೆದು, ಮುಂದಿನ ಮನೆಯತ್ತ ಹೊರಟುಬಿಟ್ಟ.

ವಿಶ್ವಾಸನ ತಾಯಿಯ ಸ್ವಗತ

ನಾನು ಬರೆದು ಹಾಕಿದ ಪತ್ರ ಈ ವೇಳೆಗೆ ಅವರಿಗೆ ತಲುಪಿರಬಹುದೇ? ನನಗೆ ಕರುಳ ಬೇನೆ ಅಂತ ವಿಶ್ವಾಸ ನಾಲ್ಕಿ ದಿನಗಳ ಹಿಂದೆ ಪತ್ರ ಹಾಕಿದ್ದನಂತೆ. ಪಾಪ ಅವರು ಇನ್ನೆಲ್ಲಿ ಹೆದರಿಬಿಟ್ಟಾರೋ ಅಂತ ನನಗೆ ಭಯವಾಗುತ್ತಾ ಇದೆ. ಹೆಚ್ಚಿನ ನೋವೇನೂ ಇಲ್ಲ, ಚಿಂತೆಗೆ ಕಾರಣವಿಲ್ಲ ಎಂದು ನಾನು ಬರೆಯಲುಪಕ್ರಮಿಸಿದ ಪತ್ರ ಕಡೆಗೆ ಎಲ್ಲಿ ಅಂತ್ಯವಾಯಿತು? ನಲವತ್ತೈದು ಐವತ್ತು ವರ್ಷಗಳ ಹಿಂದೆ ಅವರು ತಮ್ಮ್ ಯೌವನದ ಹುಚ್ಚಿನಲ್ಲಿ ಬರೆದಿದ್ದ ಪತ್ರಕ್ಕೆ ಇಷ್ಟು ಸುದೀರ್ಘಕಾಲದ ನಂತರ ಉತ್ತರಿಸುವ ಅವಶ್ಯಕತೆಯಾದರೂ ಏನಿತ್ತು? ಸುಮ್ಮನೆ ಕರುಳಬೇನೆಯ ಬಗ್ಗೆ ಬರೆದಿದ್ದರಾಗುತ್ತಿರಲಿಲ್ಲವೇ? ನನಗೆಲ್ಲೋ ವೃದ್ಧಾಪ್ಯದ ಭ್ರಾಂತು ಎಂದು ಕೇಳಿದವರೆಂದಾರು. ಅಗ ನಾನು ಇದೇ ವಿಶ್ವಾಸನನ್ನು ಹೊಟ್ಟೆಯಲ್ಲಿ ಹೊತ್ತು ತವರಿಗೆ ಬಂದಿದ್ದೆ. ತಾಯಿಯ ಮನೆಯಲ್ಲಿದ್ದ ಸಂಭ್ರಮದ ವಾತಾವರಣದಲ್ಲಿ ಅವರಿಗನುಭವವಾಗಿದ್ದ ಏಕಾಕಿತನದ ಅನುಭವದರಿವು ನನಗಿರಲಿಲ್ಲ. ಮತ್ತೆ ಆಗ, ಆ ಕಾಲದಲ್ಲಿ ಗಂಡನ ಪತ್ರಕೆ ಉತ್ತರಿಸುವುದೇ? ಆ ಉದ್ಧಟತನದ ಧೈರ್ಯವೂ ನನಗಿರಲಿಲ್ಲ. ಗಂಡನನ್ನು ತಲೆಯೆತ್ತಿ ನೋಡಿ ಮಾತನಾಡಿಸಲೂ ಹೆದರುತ್ತಿದ್ದ ಕಾಲವದು. ಆಗ ನಾನೇನಾದರೂ ಪತ್ರ ಬರೆದಿದ್ದರೆ ಮನೆಯಲ್ಲೆಲ್ಲರೂ ಗೇಲಿ ಮಾಡುವವರೇ. ಅಪ್ಪ ಒಂದಿಷ್ಟು ಬುದ್ಧಿಮಾತನ್ನೂ ಹೇಳುತ್ತಿದ್ದರೇನೋ. ಬಹುಶಃ ಆ ದಿನ ಅವರಿಗಾದ ಏಕಾಕಿತನದ ಅನುಭವ, ಪರಕೀಯತೆಯ ಭಾವನೆ ಇಂದು ನನ್ನದಾಗಿರಬಹುದು.

ನಿನ್ನೆ ಅಂಚೆಗೆ ಹಾಕಿದ ಪತ್ರದ ಬಗ್ಗೆ ಯೋಚಿಸುವುದು ಬಿಟ್ಟು ಕಾಲಮಾನದಲ್ಲಿ ಐವತ್ತು ವರ್ಷ ಹಿಂದಕ್ಕೆ ಹೋದಾಗ ನನಗೆ ಮೈಯಲ್ಲಿ ವಿಚಿತ್ರ ಭಾವನೆಗಳು. ಜಿರಲೆಯೊಂದು ಮೈಯೊಳಗೆ ಸಂಚರಿಸಿದ ಹಾಗೆ ವಿಲಿವಿಲಿ. ಬಹುಶಃ ಮುಖವೂ ಕೆಂಪೇರಿರಬಹುದು. ಸದ್ಯ ಎದುರಿಗೆ ಕನ್ನಡಿಯಿಲ್ಲ. ಆಗ ನಾನು ಪತ್ರ ಬರೆದಿದ್ದರೆ ಅವರನ್ನು ಏನೆಂದ ಸಂಬೊಧಿಸುತ್ತಿದ್ದೆ? ಪ್ರಿಯಾ? ನನ್ನ ದೈವ? ಈ ಜಗತ್ತಿನಲ್ಲಿ ಅತ್ಯಂತ ಪ್ರೀತಿಪಾತ್ರರಾದ ಪತಿದೇವರಿಗೆ..? ಅಥವಾ ಔಪಚಾರಿಕವಾಗಿ ಅವರಿಗೆ ಬರುತ್ತಿದ್ದ ಪತ್ರಗಳಂತೆ, ಅದರ ಒಕ್ಕಣೆಯಂತೆ ಭಾಸ್ಕರರಾಯರೇ ಎಂದೇ? ನಿನ್ನೆ ನಾನು ಪತ್ರ ಬರೆದಾಗ ಆ ಸಮಸ್ಯೆ ಉದ್ಭವವಾಗಲಿಲ್ಲ ಏಕೆ? ಐವತ್ತು ವರ್ಷಗಳಲ್ಲಿ ನಾವು ಅಷ್ಟೊಂದು ಗೆಳೆಯರಾಗಿಬಿಟ್ಟೆವಾ? ಮುಟ್ಟು ನಿಂತ ಮೇಲೆ ಎಂಧ ನಾಚಿಕೆ? ನಿನ್ನೆಯಂತೂ ನೇರವಾಗಿ ಏಕವಚನಕ್ಕಿಳಿದು ಪ್ರಿಯ ಭಾಸ್ಕರ ಎಂದ ಬರೆದದ್ದು ನೋಡಿ ಅವರಿಗೆ ಕೋಪ ಬಂದಿರಬಹುದೇ? ಅಥವಾ ಮುದುಕಿಯಾಗುತ್ತಿದ್ದ ಹಾಗೆ ನಿನ್ನ ತುಂಟಾಟ ಹೆಚ್ಚಾಯಿತು ನೋಡು ಅಂತ ಗೇಲಿ ಮಾಡಬಹುದೇ? ಇಷ್ಟು ದಿನ ಅವರನ್ನು ನೇರವಾಗಿ ಕಣ್ಣೆತ್ತಿಯೂ ನೋಡದ ನಾನು ಈ ಹೊಸ ಸಖ್ಯ ತೋರುವುದರಲ್ಲಿ ಅರ್ಥವೇನು? ಬಹುಶಃ ಎಂದಿಗಿಂತ ಹೆಚ್ಚಾಗಿ ಇಂದು ನಾವಿಬ್ಬರೂ ಒಬ್ಬರಿಗೊಬ್ಬರು ಅವಶ್ಯವಾಗಿದ್ದೇವೆ ಎಂದು ನನಗನ್ನಿಸಿರಬಹುದು. ಅವರಿಗೊ ಹಾಗೇ ಅನ್ನಿಸಿರಬಹುದೇ? ಅಂದಹಾಗೆ ಕಡೆಗೂ ನಿನ್ನೆಯ ಪತ್ರದಲ್ಲಿ ಕರುಳಬೇನೆಯ ಪ್ರಸ್ತಾಪ ಮಾಡಲೇ ಇಲ್ಲವಲ್ಲಾ........

ಪತ್ರದ ಪೂರ್ಣಪಾಠ

ಈ ದಿನ ಲೇಖನಿ ಹಿಡಿದು ಮೇಜಿನ ಮುಂದೆ ಕುಳಿತಾಗ ನನ್ನೆದುರು ನಿಂತದ್ದು ನಿನ್ನದೇ ಚಿತ್ರ. ಅದನ್ನು ನೋಡುತ್ತಿದ್ದ ಹಾಗೇ ನನಗೆ ನನ್ನ ಒಂಟಿತನದ ತೀವ್ರ ಅನುಭವವಾಯಿತು. ನಾನು ಇಲ್ಲಿ... ನೀನು ಅಲ್ಲಿ. ಎಷ್ಟು ದಿನ ಈ ದೂರ? ನನಗಂತೂ ಈ ಒಂಟಿತನ ಬೇಸರ ತಂದುಬಿಟ್ಟಿದೆ. ನಾವಿಬ್ಬರೂ ಒಟ್ಟಿಗೆ ಇರುವ ದಿನಗಳು ದೂರವಿಲ್ಲವೆಂದು ನನಗನ್ನಿಸುತ್ತಿದೆ. ಶುಭಸೂಚಕವೇ?

ಏನೇ ಆಗಲೀ, ಕೆಲದಿನಗಳ ಮಟ್ಟಿಗಾದರೂ ನೀನು ಇಲ್ಲಿಗೆ ಬರಬಹುದಲ್ಲವೇ? ಈಗ ನೀನು ಇಲ್ಲಿಗೆ ಬಂದರೆ ಮುಂದೆ ನಡಯಬೇಕದ್ದನ್ನು ನಾವು ಕೂಡಿಯೇ ಆಲೋಚಿಸಬಹುದು. ಆಗ ನನಗೂ ಸ್ವಲ್ಪ ನೆಮ್ಮದಿ. ಒಂಟಿತನ ಎಂತೆಂಥ ಸಂದರ್ಭದಲ್ಲಿ ಕಾಡುತ್ತದೆಂದು ನನಗೆ ಈಗೀಗ ಅನುಭವವಾಗುತ್ತಿದೆ. ನೀನು ನನ್ನ ಬಳಿ ಇದ್ದಾಗ, ನಾವು ನಿಜಕ್ಕೂ ಮನ ಬಿಚ್ಚಿ ಮಾತನಾಡಿಯೇ ಇರಲಿಲ್ಲ ಅಲ್ಲವೇ? ಬಹುಶಃ ದೂರವಾದಾಗ ಒಬ್ಬರಿಗೊಬ್ಬರ ಅವಶ್ಯಕತೆಯ ಅರಿವಾಗಬಹುದು. ಎಂದಿಗಿಂತ ಹೆಚ್ಚಾಗಿ, ಈಗ ನನಗೆ ನಿನ್ನ ಸಾಮೀಪ್ಯದ ಅವಶ್ಯಕತೆಯಿದೆ.

ಅಂದಹಾಗೆ ನಾನು ಕರೆದೆನೆಂದು ಬರುವ ಆತುರದಲ್ಲಿ ನಿನ್ನ ಆರೋಗ್ಯವನ್ನು ಕಡೆಗಣಿಸಬೇಡ. ಏಕೆಂದರೆ ಈ ಸ್ಥಿತಿಯಲ್ಲಿ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಕಡೆಗೆ ನೀನೊಂದು ಪತ್ರ ಹಾಕಿದರೆ ನಾನೇ ಬಂದರೂ ಬಂದೇನು. ನಿನ್ನಿಂದಬರುವ ಪತ್ರವೇ ನನಗೆ ಸಾಕಷ್ಟು ಸಾಂತ್ವನ ನೀಡುತ್ತದೆ. ನಾನು ನಿನ್ನ ನೆನಪಿನಲ್ಲೇ ಇದ್ದೇನೆ.

ಕುಮುದಾಳ ಪ್ರತಿಕ್ರಿಯೆ...

ಅಂಚೆಯವನು ಹಾಕಿ ಹೋದ ಪತ್ರದ ಒಕ್ಕಣಿಕೆ ನೋಡಿಯೇ ಕುಮುದಾಳಿಗೆ ಒಂದು ರೀತಿಯ ಭೀತಿ ಉಂಟಾಯಿತು. ಲಕೋಟೆಯ ಮೇಲೆ ’ಕುಮುದಾ ಬಾಯಿ’ ಎಂದು ತನ್ನನ್ನು ಗೇಲಿ ಮಾಡಲಿಕ್ಕೆ ಸಿದ್ದಾರ್ಥ ಬರೆದಿರಬಹುದೇ? ತಾನು ಬಹಳ ’ಬಾಯಿ’ ಮಾಡುತ್ತೇನೆಂದು ಅವನು ಆಗಾಗ ಹೇಳುತ್ತಿದ್ದುದುಂಟು. ಅಥವಾ ತನ್ನ ಮನೆಯವರಿಗೆ ತಿಳಿಯದಿರಲೆಂದು ಹೀಗ ಆಟ ಆಡಿರಬಹುದು. ಸಾಲದ್ದಕ್ಕೆ ಕೈ ಬರಹವನ್ನೂ ಬೇಕೆಂದೆ ಬದಲಿಸಿ ಬರೆದಂತಿದೆ. ಕುಮುದಾ ತನ್ನಲ್ಲೇ ’ಛೀ ತುಂಟ’ ಎಂದು ನಗುತ್ತಲೇ ಬೈದು ಪತ್ರವನ್ನು ಎದೆಗವಚಿಕೊಂಡಳು. ಲಲ್ಲೊ ಅಲ್ಲಿ ಉಳಿಯಲು ಇದು ಸರಿಯಾದ ಸಮಯವಲ್ಲವೆಂದು ಭಾವಿಸಿ ಹೊರಟುಬಿಟ್ಟಳು.

ಕುಮುದಾ ನಂತರ ಏಕಾಂತದಲ್ಲಿ ಪತ್ರವನ್ನೊಡೆದಳು. ಮುಖ ಕೆಂಪೇರಿತು. ಪತ್ರದಲ್ಲಿ ಬರೆದಿರುವುದು ಯಾವುದೂ ಸ್ಪಷ್ಟವಾಗಿಲ್ಲವಾದರೂ ಎಲ್ಲವೂ ಸುಸ್ಪಷ್ಟ. ಹಾಗಾದರೆ ಈಗೆ ಸಿದ್ಧಾರ್ಥನ ಬಳಿ ಹೋಗಬೇಕೇ? ಹೇಗೆ ಹೋಗುವುದು? ಮನೆಯಲ್ಲಿ ಏನು ಹೇಳಲಿ? ಅಥವಾ ಸಿದ್ಧಾರ್ಥನಿಗೇ ಒಂದು ಪತ್ರ ಬರೆದು ಸುಮ್ಮನಾದರೆ? ಇಲ್ಲವೇ ನೇರ ಅಪ್ಪನ ಬಳಿಗೆ ಹೋಗಿ ಇದು ಹೀಗೆ, ಹೀಗೆಲ್ಲಾ ಆಗಿದೆ, ಈಗ ಸಿದ್ದಾರ್ಥ ಕರೆದಿದ್ದಾನೆ. ಹೋಗಬೇಕು. ಎಂದು ಸ್ಪಷ್ಟವಾಗಿ ಹೇಳಿಬಿಟ್ಟರೆ?

ಅಥವಾ ಏನಾದರೂ ಸುಳ್ಳು ನೆಪ ಒಡ್ಡಿ ಸಿದ್ದಾರ್ಥನಲ್ಲಿಗೆ ಹೋಗುವದೇ? ಮಂಗಳೂರೆಂದರೆ ಸಾಮಾನ್ಯವೇನು? ಒಂದು ರಾತ್ರಿಯ ಪ್ರಯಾಣ. ಇಲ್ಲೇ ಮೈಸೂರಾಗಿದ್ದರೆ ಮುಂಜಾನೆ ಹೋಗಿ ಸಂಜೆಗೆ ಹಿಂದಿರುಗಬಹುದಿತ್ತು.

ಪ್ರೀತಿಸುವುದರಲ್ಲಿನ ಅನೇಕ ರೋಮಾಂಚನಗಳಲ್ಲಿ ಇಂಥದೂ ಒಂದು ಇರಬಹುದೆಂದು ಅವಳಿಗೆ ತಿಳಿದಿರಲಿಲ್ಲ. ಈಗ ಅಪ್ಪನೆದುರು ಸತ್ಯ ಹೇಳಿದರೆ ಅದರ ಪರಿಣಾಮ ಅರಿತವರ್ಯಾರು? ಅಪ್ಪ ಬೇಡವೆಂದು ಹಠ ಮಾಡಿದರೆ ಆದಿಯಲ್ಲಿಯೇ ಕೊಡಲಿಯೇಟು. ಜೊತೆಗೆ ಅಲಿ ಹೋಗಿ ಎಲ್ಲವನ್ನೂ ಸುಸ್ಪಷ್ಟ ಮಾತನಾಡಿ ಸಾಧ್ಯವಾದರೆ ಸಿದ್ಧಾರ್ಥನನೂ ಕರೆತಂದರೆ ನಂತರ ಅಪ್ಪನೂ ಒಪ್ಪಬಹುದು. ಈಗ ’ನಾನು ಪ್ರೀತಿಸಿದ ಹುಡುಗನೊಂದಿಗೆ ಮದುವ ಇತ್ಯರ್ಥ ಮಾಡಿಕೊಂಡು ಬರಲು ಎರಡು ದಿನ ಮಂಗಳೂರಿಗೆ ಹೋಗುತ್ತೇನೆ’ ಎಂದರೆ ಯಾವ ಮರ್ಯಾದಸ್ಥ ಅಪ್ಪ ತಾನೇ ಒಪ್ಪುತ್ತಾನೆ? ಏನಾದರೊಂದು ಕಾರಣ ಹೇಳಿ ಕದ್ದು ಹೊರಡುವುದೇ ಒಳ್ಳೆಯದು. ಹೇಗೂ ಥೀಸಿಸ್‍ಗಾಗಿ ಮಾಹಿತಿ ಸಂಗ್ರಹಣೆಗೆ ಹೊರಡಬೇಕಿತ್ತು. ಮೊದಲು ಮಂಗಳೂರಿಗೇ ಹೊರಟರಾಯಿತು.

ಕುಮುದಾ ಹೀಗೆ ಆಲೋಚಿಸುತ್ತಿದ್ದಂತೆ, ತನ್ನ ಮಾರನೆಯ ದಿನದ ಪ್ರಯಾಣಕ್ಕಾಗಿ ಮಾನಸಿಕ ತ್ಯಾರಿಯನ್ನೂ ನಡೆಸತೊಡಗಿದ್ದಳು.

ಭಾಸ್ಕರರಾಯರ ಪ್ರತಿಕ್ರಿಯೆ

ಅಂಚೆಯವನು ಹಾಕಿಹೋದ ಪತ್ರದ ಒಕ್ಕಣಿಗೆ ನೋಡಿಯೇ ಭಾಸರರಾಯರಿಗೆ ಒಂದು ರೀತಿಯ ಆನಂದ ಉಂಟಾಯಿತು. ಇಷ್ಟು ಕಾಲಕ್ಕೆ ತಮ್ಮ ಹೆಂಡತಿಯಿಂದ ಅವರಿಗೊಂದು ಪತ್ರ ಬಂದಿತ್ತು. ಭಾಸ್ಕರರಾಯರಿಗೆ ತಕ್ಷಣ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಪತ್ರ ಬಂದ ಖುಷಿಯಿಂದ ಚೇತರಿಸಿಕೊಳ್ಳಲು ಅವರಿಗೆ ಕೆಲ ಕ್ಷಣಗಳೇ ಹಿಡಿದುವು. ಆಸ್ತಿಯನ್ನಲ್ಲದೇ ತಂದೆತಾಯಿಗಳನ್ನೂ ಹಂಚಿಕೊಂಡ ತಮ್ಮ ಮಕ್ಕಳಿಗೇನನ್ನಬೇಕು? ಒಂದು ದೃಷ್ಟಿಯಿಂದ ಅವರು ಮಾಡುತ್ತಿರುವುದೂ ಸರಿಯಿರಬಹುದು. ಈ ದುಬಾರಿ ಯುಗದಲ್ಲಿ, ಅದರಲ್ಲೂ, ಇಬ್ಬರೂ ಔಷಧಿ ತಿಂದೇ ಜೀವಿಸುವ ವಯಸ್ಸು ಮುಟ್ಟಿದಾಗ, ಇಬ್ಬರನ್ನೂ ಒಬ್ಬನೇ ನೋಡಿಕೊಳ್ಳುವುದೆಂದರೆ ಕಷ್ಟದ ವಿಷಯವೇ. ಆದರೂ ಈ ಬಾರಿ ಅವಕಾಶವಾದಾಗ ಮಹೇಶಚಂದ್ರನಿಗೆ ಹೇಳಿಯೇ ಬಿಡಬೇಕು -- ಇಬ್ಬರೂ ಒಂದೇ ಮನೆಯಲ್ಲೇ ಇರುತ್ತೇವೆಂದು. ಜೀವನ ಪೂರ್ತಿ ಜತೆಜತೆಯಾಗಿದ್ದವರಿಗೆ ಈ ಅಕಾಲ ವಿರಹ ಸಹನೀಯವಾಗುವುದಾದರೂ ಹೇಗೆ? ಭಾಸ್ಕರರಾಯರು ಪತ್ರವನ್ನೊಡೆದು ನೋಡಿದರು. ಪರವಾಗಿಲ್ಲವೇ ಇವಳೂ ಇಷ್ಟು ಧೈರ್ಯ ತಂದುಕೊಂಡು ಪತ್ರ ಬರೆದಿದ್ದಾಳೆ. ಅವಳ ಆರೋಗ್ಯದ ಬಗ್ಗೆ ಬರೆಯುವುದಿರಲಿ, ನನ್ನ ಆರೋಗ್ಯದ ಕಾಳಜಿ ವಹಿಸಿದ್ದಾಳೆ! ಬಾಳಿನ ಈ ಘಟ್ಟದಲ್ಲಿ ಫಾರ್ಮಲ್ ಆಗಿರಬೇಕಾದ ಅವಶ್ಯಕತೆಯೂ ಇಲ್ಲ. ಭಾಸ್ಕರರಾಯರಿಗೆ ಈಗ ನಿಜವಾಗಿಯೂ, ಇವಳು ತಮ್ಮ ಸಮಾನ ಮನೋಧರ್ಮದ ಪತ್ನಿ-ಗೆಳತಿ ಎನ್ನಿಸಿತು. ಹೊಸು ಹುಡುಗಿಯನ್ನು ಪ್ರೀತಿಸುವ ಹುರುಪು ಅವರನ್ನು ತುಂಬಿಕೊಂಡಿತು. ಅವರಿಗೆ ಕೂಡಲೇ ತಮ್ಮ ಹೆಂಡತಿಯನ್ನು ಕಂಡು ಬಿಗಿಯಾಗಿ ಅಪ್ಪಿಕೊಳ್ಳಬೇಕೆಂಬ ಬಯಕೆ ಉಂಟಾಯಿತು. ಎಪ್ಪತ್ತರ ವಯಸ್ಸಿನಲ್ಲಿ ತಮ್ಮ ಅಪ್ಪುಗೆಗೆ ಸಿಕ್ಕುವುದು ಅವಳೊಬ್ಬಳೇ ಅಲ್ಲವೇ? ಮಗನನ್ನು ಹೇಗಾದರೂ ಒಪ್ಪಿಸಿ ಬೆಂಗಳೂರಿಗೆ ಹೊರಟುಬಿಡಬೇಕೆಂದು ರಾಯರು ನಿಶ್ಚಯಿಸಿದರು.

ರಾಯರು ಹೀಗೆ ಆಲೋಚಿಸುತ್ತಿದ್ದಂತೆ, ತಮ್ಮ್ ಮಾರನೆಯ ದಿನದ ಪ್ರಯಾಣಕ್ಕಾಗಿ ಮಾನಸಿಕ ತಯಾರಿಯನ್ನೂ ನಡೆಸತೊಡಗಿದ್ದರು.

ಪತ್ರಿಕಾ ವರದಿ

ಹಾಸನ, ಏಪ್ರಿಲ್ ೦೧
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತ್ತಿದ್ದ ರಾಜ್ಯ ಸಾರಿಗೆ ಬಸ್ಸೊಂದು ಈ ದಿನ ಅಪಘಾತಕ್ಕೀಡಾಯಿತು. ಹಾಸನದಿಂದ ೨೫ ಕಿಲೋಮೀಟರ್ ದೂರದಲ್ಲಿ ಸಂಚರಿಸುತ್ತಿದ್ದಾಗ ಬಸ್ಸು ಕಣಿವೆಯೊಂದರೊಳಕ್ಕೆ ಧುಮುಕಿದ್ದರಿಂದ ಈ ಅಪಘಾತ ಸಂಭವಿಸಿದೆಯೆಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಹಲವರಿಗೆ ತೀವ್ರ ಗಾಯಕಳುಂಟಾಗಿವೆ. ಒಬ್ಬ ಮಹಿಳೆ ಮೃತಳಾಗಿದ್ದಾಳೆಂದು ವರ್ದಿಯಾಗಿದೆ. ಬಸ್ಸಿನ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. ತನಿಖೆ ನಡೆದಿದೆ.

ಹದಿನೆಂಟನೆಯ ಮುಖ್ಯರಸ್ತೆ

ಹದಿನೆಂಟನೆಯ ಮುಖ್ಯರಸ್ತೆಯ ಹದಿನಾರನೆಯ ನಂಬರ್ ಮನೆಯೊಳಕ್ಕೆ ಭಾಸ್ಕರರಾಯರು ಹೊಸ ಹುರುಪಿನಿಂದ ಪ್ರವೇಶಿಸಿದರು. ಅಲ್ಲಿ ವಾಸವಾಗಿದ್ದ ತಮ್ಮ ಹೆಂಡತಿ ಕುಮುದಾಬಾಯಿಯನ್ನು ಕೂಡಿಕೊಂಡರು. ಈಗ ಅವರಿಬ್ಬರೂ ಒಂದೇ ಮನೆಯಲ್ಲಿರುವುದೆಂದು ನಿರ್ಧರಿಸಿದ್ದಾರೆ. ಬಹುಶಃ ಆರಾರು ತಿಂತಳು ಒಬ್ಬೊಬ್ಬ ಮನಗಮನೆಯನ್ನಿ ಕಳೆಯುವುದೆಂದು ಒಪ್ಪಂದ ಮಾಡಿಕೊಂಡಿರಬಹುದು. ತಮ್ಮ ಪೆನ್ಷನ್ ನಲ್ಲಿ ಪ್ರತ್ಯೇಕ ಮನೆಯನ್ನೂ ಮಾಡಿ ಬದುಕುವ ಲೆಕ್ಕಚಾರವನ್ನೂ ಹಾಕಿರುವ ಭಾಸ್ಕರರಾಯರು, ಆ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲವೆನ್ನಿಸುತ್ತದೆ, ಜನರ ನಡುವೆ ಏಕಾಂಗಿಗಳಾಗಿ ಬದುಕುವುದಕ್ಕಿಂತ, ಏಕಾಂತದಲ್ಲಿ ಹೀಗೆ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವದೇ ವಾಸಿ ಎಂದೂ ಅವರಿಬ್ಬರೂ ಭಾವಿಸಿರಬಹುದು.

ಒಂದಿಷ್ಟು ಟಿಪ್ಪಣಿಗಳು

ಒಂದಿಷ್ಟು ಚೂರುಚೂರು ಚಿತ್ರಗಳನ್ನು ಕೊಟ್ಟು, ನನ್ನ ಬರಹವನ್ನು ಮುಗಿಸುತ್ತಿದ್ದೇನೆ. ಇದು ನಿಜಕ್ಕೂ ಇಲ್ಲಿಗೇ ಅಂತ್ಯಗೊಳ್ಳುತ್ತದೆಯೇ? ಮುಂದೆ ಬದುಕಿದ್ದವರೆಲ್ಲಾ ಸುಖವಾಗಿ ಬಾಳೀದರೇ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಬೇಕಾಗಿದೆ. ಈ ರೀತಿಯ ನಿರೂಪಣೆಯನ್ನು ಮುಗಿಸುವುದು ಸ್ವಲ್ಪ ಕಷ್ಟದ ವಿಷಯವೇ ಸರಿ. ನಿರಂತರ ನಡೆವ ಮಾನವ ವ್ಯಾಪಾರಗಳನ್ನು ಅದರ ಪರಿಪೂರ್ಣತೆಯಲ್ಲಿ ಅರ್ಥಮಾಡಿಕೊಳ್ಳಲು ಯಾರಿಗಾದರೂ ಸಾಧ್ಯವಿದೆಯೇ? ಹೀಗಿರುವಾಗ ತೀರ್ಮಾನಗಳನ್ನು ಕೊಡುವುದೂ ಒಂದು ನಿರ್ದಿಷ್ಟ ಸ್ಪಷ್ಟ ಅಂತ್ಯ ಸೂಚಿಸುವುದೂ ಕಷ್ಟದ ಕೆಲಸ. ಬದಲಿಗೆ ಗ್ರಹಿಕೆಗಳನ್ನು ಅದರ ಎಲ್ಲ ಪ್ರಶ್ನೆಗಳೊಂದಿಗೆ ನೇರವಾಗಿ ಬರೆದರೆ, ಆ ಪ್ರಶ್ನೆಗಳನ್ನು ಪುನರುಚ್ಚರಿಸಿದರೆ, ಜೀವನವನ್ನು ಅರ್ಥೈಸುವತ್ತ ಕೆಲ ದಿಕ್ಸೂಚಿಗಳು ಕಾಣಬಹುದು. ಈ ಎಲ್ಲ ಪ್ರಶ್ನೆಗಳ, ದ್ವಂದ್ವಗಳ ನಡುವೆ ಉತ್ತರ ಸಿಕ್ಕದ, ಬೃಹದಾಕಾರವಾಗಿ ನಿಂತಿರುವ ಪ್ರಶ್ನೆಯೆಂದರೆ ನಿಜಕ್ಕೂ ಆದಿನ

ಭಾಸ್ಕರರಾಯರು ಬರೆದದ್ದೇನು?



Thursday, June 12, 2008

ನಿನ್ನೆಗಳ ನೆನಪಿನಲ್ಲಿ, ನಾಳೆಗಳ ನಿರೀಕ್ಷೆಯಲ್ಲಿ


One is never a virgin twice
Malcolm Bradbury

ಈಗನ್ನಿಸುತ್ತಿದೆ. ಆ ಕವಿತೆ ಪ್ರಕಟವಾಗಬಾರದಿತ್ತು. ಅದು ದುರಾದೃಷ್ಟವಶಾತ್ ಪ್ರಕಟವಾದದ್ದರಿಂದಲೇ ಈ ಸಂಬಂಧಗಳ ಕೊಂಡಿ ಬೆಳೆದದ್ದು. ಇಲ್ಲದಿದ್ದರೆ ಇವೆಲ್ಲಾ ಘಟಿಸುತ್ತಲೇ ಇರಲಿಲ್ಲ. ಹೌದು ಕೆಲವು ತಿಂಗಳುಗಳ ಹಿಂದೆ ಅವಳ ಹೆಸರಿನಲ್ಲಿ ಒಂದು ಕವಿತೆ ಅಚ್ಚಾಗಿತ್ತು. ಅದನ್ನು ಅವಳೇನೂ ಒಳ್ಳೆಯ ಕವೆತೆಯೆಂದು ಪರಿಗಣಿಸಿರಲಿಲ್ಲ. ಯಾವಾಗಲೋ ಕಾಲೇಜಿನಲ್ಲಿದ್ದಾಗ ತಾನೂ ಕವಿತೆ ಬರೆಯಬಲ್ಲೆ ಎಂದು ತೋರಿಸಿಕೊಳ್ಳಲು ಬರೆದದ್ದು. ಕೇವಲ ಅಹಂ ಸಲುವಾಗಿ. ಆದರೆ ಅವಳ ಗಂಡ ಬಲವಂತವಾಗಿ ಅದನ್ನು ಪತ್ರಿಕೆಯೊಂದಕ್ಕೆ ಪ್ರಕಟಣೆಗಾಗಿ ಕಳಿಸಬೇಕೆಂದು ಪಟ್ಟು ಹಿಡಿದಿದ್ದರಿಂದ ಅದು ಪತ್ರಿಕೆಗೆ ಹೋಯಿತು. ಆಶ್ಚರ್ಯವೆಂಬಂತೆ ಅದು ಪ್ರಕಟವೂ ಆಯಿತು.

ಆ ಕವಿತೆಯೇ ಈ ಕಥೆಯ ಮೂಲ. ಈಗಲೇ ಹೇಳಿಬಿಡುವುದು ಒಳಿತು. ಇದೊಂದು ಪ್ರೇಮ ಕಥೆ. ಹಿಂದೆ ಬಂದ ಎಷ್ಟೋ ಪ್ರೇಮ ಕಥೆಗಳ ಪುನರಾವರ್ತನೆ. ಆದರೆ ಇದನ್ನು ಬರೆಯುತ್ತಿರುವುದು ಕವಯತ್ರಿಯಾಗಲೀ ಅಥವಾ ಸಾಹಿತಿಯಾಗಲೀ ಅಲ್ಲ. ಆಕೆ ಒಬ್ಬಳು ಪ್ರೇಮಿ. ದಿನಚರಿಯ ಪುಟಗಳಲ್ಲಿ ದಾಖಲಿಸಬೇಕಿದ್ದ ವಿವರಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತಿದ್ದಾಳೆ. ಅಷ್ಟೇ. ಇದು ಒಂದು ಉತ್ತಮ ಆತ್ಮಕಥನವಾಗಬಹುದಿತ್ತೇನೋ. ಆದರೆ ಆ ಬಗ್ಗೆಯೂ ಅವಳಿಗೆ ಭರವಸೆಯಿಲ್ಲ. ಏಕೆಂದರೆ ಈ ಕಥೆಗೆ ಒಂದು ಚೌಕಟ್ಟಿಲ್ಲ. ಈ ಕಥೆ ಜೀವನದಷ್ಟೇ ಅಸಂಗತವಾಗಿದೆ.

ಹೌದು ಕವಿತೆ ಪ್ರಕಟವಾಯಿತು. ಅದರಿಂದೇನಾಯಿತು? ಸಾಮಾನ್ಯವಾಗಿ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಆ ಕವಿತೆಯ ಜೊತೆ ತಾನು ಕಾಲೇಜಿನಲ್ಲಿದ್ದಾಗ ತೆಗೆಸಿಕೊಂಡಿದ್ದ ಚಿತ್ರ, ಮತ್ತು ಆಕೆಯ ವಿಳಾಸವೂ ಪ್ರಕಟವಾಗಿತ್ತು. ಬಹುಶಃ ಅದು ಇರದಿದ್ದರೆ ಈ ಕಥೆಯ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ. ಪತ್ರಿಕೆ ಮಾರುಕಟ್ಟೆಗೆ ಬಂದ ಎರಡು ದಿನಗಳಲ್ಲೇ ಅವಳಿಗೆ ಒಂದು ಪತ್ರ ಬಂದಿತು. ಮೊದಲ ಕವಿತೆ ಪ್ರಕಟವಾದದ್ದಕ್ಕೆ ಬಂದ ಮೊದಲ ವೈಯಕ್ತಿಕ ಪತ್ರ!

*

ಅವಳ ಕೈಯಲ್ಲಿದ್ದ ಪತ್ರವನ್ನು ಮತ್ತೊಮ್ಮೆ ನೋಡಿದಳು:

ಮಾನ್ಯ ಶ್ರೀಮತಿ ಲಾವಣ್ಯ ಅವರಿಗೆ
ವಂದನೆಗಳು.
ಮೊನ್ನೆ ನೀವು ಅಶೋಕನ ಹೆಸರಿಗ ಬರೆದ ಪತ್ರ ತಲುಪಿದೆ. ದುರಾದೃಷ್ಟವಶಾತ್ ಸ್ಕೂಟರ್ ಅಪಘಾತದಲ್ಲಿ ಹೋದ ತಿಂಗಳು ೨೦ರಂದು ಅಶೋಕ ತೀರಿಕೊಂಡ. ನಿಮ್ಮ ಪತ್ರ ನೋಡಿದರೆ ನಿಮಗೆ ಈ ವಿಷಯ ತಿಳಿದಿಲ್ಲವೆಂದು ಗೊತ್ತಾಗುತ್ತದೆ. ಅಶೋಕನ ವಿಳಾಸದ ಪುಸ್ತಕದಲ್ಲಿದ್ದ ಎಲ್ಲರಿಗೂ ಪತ್ರ ಬರೆದಿದ್ದೆವು. ನಿಮ್ಮ ವಿಳಾಸ ಅಲ್ಲಿರಲಿಲ್ಲವಾದ್ದರಿಂದ ನಿಮಗೆ ತಿಳಿಸಲಾಗಲಿಲ್ಲ ಕ್ಷಮಿಸಿ.

ಅಶೋಕನೊಟ್ಟಿಗೆ ನಿಮ್ಮ ಸಂಬಂಧ ಯಾವರೀತಿಯದ್ದು ಗೊತ್ತಿಲ್ಲ. ಅವನಿಂದ ನಿಮಗೆ ಏನಾದರೂ ಬರಬೇಕಿದ್ದರೆ [ಹಣ, ಪುಸ್ತಕಗಳು ಇತ್ಯಾದಿ] ದಯಮಾಡಿ ತಿಳಿಸಿ. ಅವನ ಪರವಾಗಿ ನಾನು ಕೊಡಲಾದರೆ ಕೊಡುತ್ತೇನೆ. ಈ ವಿದಾಯದ ದುಃಖದಲ್ಲಿ ನೀವೂ ಭಾಗಿಗಳಾಗಿದ್ದೀರಿ ಎಂಬ ಅರಿವು ನನಗಿದೆ. ಆದರೆ ಎಲ್ಲರಿಗೂ ಒಂದಲ್ಲ ಒಂದು ದಿನ ವಿದಾಯ ಹೇಳಲೇಬೇಕಾದ್ದು ಅನಿವಾರ್ಯ ಅಲ್ಲವೇ?

ಇತಿ ವಿಶ್ವಾಸಿ

ಸಂದೀಪ್ [ಅಶೋಕನ ಅಣ್ಣ]

ಈ ಅಶೋಕ ಹೇಗಿದ್ದಿರಬಹುದು? ಮಣ್ಣಲ್ಲಿ ಮಣ್ಣಾಗಿ ಅಥವಾ ಬೆಂಕಿಯಲ್ಲಿ ಬೂದಿಯಾಗಿ ಹೋಗಿರುವ ಆತನ ಮುಖವನ್ನು ಆಕೆ ನೋಡಿರಲಿಲ್ಲ. ಹೋಗಲೀ ಚಿತ್ರವನ್ನಾದರೂ ಕಂಡಿರಲಿಲ್ಲ. ಆತ ತನಗೆ ಕೊಡಬೇಕಾದ್ದೇನಾದರೂ ಇತ್ತೇ? ಅದನ್ನು ಆತನ ಅಣ್ಣನಿಗೆ ಪತ್ರ ಬರೆದು ತರಿಸಿಕೊಳ್ಳಬೇಕೇ? ಹಾಗೇನೂ ಇದ್ದಂತಿಲ್ಲ. ಬದಲಿಗೆ ತಾನೇ ಅವರಿಗೆ ಕೊಡಬೇಕಾದ್ದು ಸಾಕಷ್ಟಿರಬಹುದು. ಹೌದು ಏನು ಕೊಡಬೇಕು? ಯಾಕೆ ಕೊಡಬೇಕು? ತಮ್ಮಿಬ್ಬರ ನಡುವಣ ಸಂಬಂಧ ಎಂಥದ್ದು? ಅವಳಿಗೆ ಒಂದೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಎಲ್ಲಾ ಮಸಕು ಮಸಕು. ಆದರೂ ಅವರಿಬ್ಬರಲ್ಲಿ ಗಾಢ ಸಂಬಂಧ ಬೆಳೆದಿತ್ತು. ಅವನ ಮರಣದೊಂದಿಗೆ ಅದು ಕಡಿದುಹೋಯಿತೇ? ಅಥವಾ ಇನ್ನೂ ಇದೆಯೇ? ಅವಳಿಗೆ ಗೊತ್ತಾಗುತ್ತಿಲ್ಲ.

ಕ್ಷಮಿಸಿ, ಚೂರು ಚೂರಾದ ಚಿತ್ರಗಳನ್ನು ಅಸಂಗತವಾಗಿ ನಿಮ್ಮ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಬಹುಶಃ ಪೂರ್ಣಗೊಂಡಾಗ ಈ ಚಿತ್ರ ಇನ್ನಷ್ಟು ಸ್ಪಷ್ಟಗೊಳ್ಳಬಹುದು.

ಹಾಂ ಅವಳ ಕವಿತೆಯ ವಿಷಯ ಚರ್ಚಿಸುತ್ತಿದ್ದೆವು. ಹೌದು. ಅದಕ್ಕೆ ಅವಳಿಗೆ ಒಂದು ಪ್ರತಿಕ್ರಿಯಾತ್ಮಕ ಪತ್ರ ಬಂದಿತ್ತು. ಆ ದಿನ ಆ ಪತ್ರ ಬಂದ ಖುಷಿಯಲ್ಲಿ ಅದರಲ್ಲೇನು ಬರೆದಿದೆ ಅನ್ನುವುದನ್ನೇ ಅವಳು ಸರಿಯಾಗಿ ಗಮನಿಸಿರಲಿಲ್ಲ. ಪ್ರತಿಕ್ರಿಯೆಯೊಂದನ್ನು ಆಹ್ವಾನಿಸುವಷ್ಟರ ಅರ್ಹತೆ ಆ ಕವಿತೆಗಿದೆ ಅನ್ನುವುದೇ ಅವಳಿಗೆ ಸಮಾಧಾನ ತಂದಿತ್ತು. ಪತ್ರದ ಒಕ್ಕಣೆ, ಪದಗಳ ಬಳಕೆ, ಆ ಪತ್ರವನ್ನು ಒಬ್ಬ ಪಳಗಿದ ಕಥೆಗಾರ ಮಾತ್ರ ಬರೆಯಬಲ್ಲ ಅನ್ನಿಸುವಂತಹ ಪತ್ರವದು.

*

ಕೈಯಲ್ಲಿರುವ ಪತ್ರವನ್ನು ಪಕ್ಕದಲ್ಲಿಟ್ಟು ಅದಕ್ಕೆ ಒಂದು ಉತ್ತರವನ್ನು ಬರೆಯಬೇಕೆಂದು ಅವಳು ಯೋಚಿಸಿದಳು. ಕಾಗದ, ಪೆನ್ನು ತಂದು ಒತ್ತಿಗೆಂದು ಒಂದು ಪತ್ರಿಕೆಯನ್ನು ಕೈಗೆತ್ತಿಕೊಂಡಳು. ಅದೇಕೋ ಕಾಗದ ಬರೆಯುವುದಕ್ಕೆ ಬದಲು ಪತ್ರಿಕೆಯ ಪುಟಗಳನ್ನು ತಿರುವಿಹಾಕಬೇಕು ಅನ್ನಿಸಿತು. ಒಳಗೆ ನೋಡಿದರೆ ಅಶೋಕನ ಕಥೆ. ಎಲ್ಲೆಲ್ಲಿಂದಲೂ ಅವನು ಆವರಿಸಿಬಿಡುತ್ತಿದ್ದಾನೆ ಅನ್ನಿಸಿತು. ಪತ್ರಿಕೆಯ ದಿನಾಂಕವನ್ನು ನೋಡಿದಳು: ಅಶೋಕ ಮರಣಿಸಿದ ನಂತರ ಪ್ರಕಟವಾಗಿರುವ ಕಥೆ ಅದು. ಪಾಪ! ಇದ್ದಿದ್ದರೆ ಖುಷಿ ಪಡುತ್ತಿದ್ದ ಅನ್ನುವುದರಲ್ಲಿ ಅನುಮಾನವಿಲ್ಲ. ಕಾಗದ, ಪೆನ್ನು ಬದಿಯಲ್ಲಿಟ್ಟು ಕತೆ ಓದಲು ಪ್ರಾರಂಭಿಸಿದಳು. ಈ ಕಥೆ ತನಗೆ ಗೊತ್ತು ಎಂದು ಅವಳಿಗನ್ನಿಸಿತು. ಈಗೀಗ ಅವಳಿಗೆ ಯಾವ ಕಥೆಯನ್ನೋದಿದರೂ ಹಾಗನ್ನಿಸುತ್ತಿದೆ.. "ಮುಂಜಾನೆಯ ಚುಮುಚುಮು ಬೆಳಕು, ಆಫಿಸಿನಲ್ಲಿ ರೇಗಾಡುವ ಬಾಸ್, ಪ್ರೇಮ ಪ್ರಕರಣಗಳು, ಸಾವು, ವ್ಯವಸ್ಥೆ.." ಹೀಗೆ ಎಲ್ಲರೂ ಗೊತ್ತಿರುವುದನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾರೆನ್ನಿಸುತ್ತದೆ. ಆದ್ದರಿಂದಲೇ ಇರಬೇಕು ಅವಳು ಕಾವ್ಯಪ್ರೇಮಿಯಾಗಿರುವುದು. ಅಶೋಕನ ಕಥೆಯನ್ನು ಓದಿದಾಗಲೂ ಅಷ್ಟೇ ಗೊತ್ತಿರುವ ಕಥೆ ಹೇಳಿ ಪಲಾಯನವಾದದ ಸುಳ್ಳು ಅಂತ್ಯ ಕೊಟ್ಟಿದ್ದಾನೆ ಅನ್ನಿಸಿತು. ಜೀವನದ ಮುಳ್ಳಿನ ಹಾದಿಯ ಮೇಲೆ ನಡೆದು ಸುಖದ ಸುಪ್ಪತ್ತಿಗೆ ಸೇರುವ ಅದೇ ಹಳೆಯ ಕಥೆ. "ಬರೀ ಸುಳ್ಳು" ಎಂದು ಅವನಿಗೆ ಹೇಳಬಹುದಿತ್ತು. ಆದರೆ ಸಾಧ್ಯವಿಲ್ಲವಲ್ಲಾ.

ಇವಳ ಈ ಕಥೆ ಮಸುಕುಮಸುಕಾಗಿದೆ ಅಲ್ಲಾ? ಇದಕ್ಕೆ ಒಂದು ಸ್ವರೂಪವನ್ನು ಕೊಡಲು ಅವಳಿಗೆ ಆಗುತ್ತಿಲ್ಲ. ಆಕೆ ಒಳ್ಳೆಯ ಕಥೆಗಾರ್ತಿ ಅಲ್ಲ ಅನ್ನುವುದು ಅವಳ ಭಾವನೆ. ತನ್ನ ಮನಸ್ಸಿಗೆ ಬಂದದ್ದನ್ನು ಹಾಗೆಯೇ ಹೇಳುತ್ತಾಳೆ. ಹಾಂ.. ಅಂದಹಾಗೆ ಆದಿನ ಬಂದ ಪತ್ರದ ವಿಷಯಕ್ಕೆ ಮತ್ತೆ ಅವಳು ಬರಲೆತ್ನಿಸಿದ್ದಳು. ಒಳ್ಳೆಯ ಕತೆಗಾರ ಬರೆದಂತಹ ಪತ್ರ ಎಂದು ಹೇಳಿದ್ದಳಲ್ಲಾ.. ಹೌದು.. ಅದು ನಿಜ. ಯಾಕೆಂದರೆ ಅವನು ಆ ಪತ್ರದಲ್ಲಿ ಕವಿತೆಯ ಬಗೆಗೆ ಏನೂ ಬರೆದಿರಲಿಲ್ಲ. ಬರೇ ಅವಳ ಬಗ್ಗೆ ಬರೆದಿದ್ದ. ಅಷ್ಟೇ. ಆಕರ್ಷಕವಾದ ಅವಳ ಫೋಟೋದ ಬಗ್ಗೆ. ಅವನು ಬರೆದಿದ್ದದ್ದು ಅವಳು ಇಪ್ಪತ್ತರ ಹರೆಯದಲ್ಲಿ ತೆಗೆಸಿಕೊಂಡಿದ್ದ ಆ ಚಿತ್ರದ ಬಗ್ಗೆ. ಕಾಲಗಮನದಲ್ಲಿ ತನ್ನನ್ನು ಎಂಟು ವರ್ಷ ಹಿಂದಕ್ಕೆ ಆತ ಕರೆದೊಯ್ದಿದ್ದ. ಹಾಗೆ ನೋಡಿದರೆ ವರ್ತಮಾನದಲ್ಲಿ ಯಾವ ಮೌಲ್ಯವೂ ಇಲ್ಲದ ಆ ಪತ್ರವನ್ನು ಅವಳು ನಾಶಮಾಡಬೇಕಿತ್ತು. ಮದುವೆಯಾಗಿರುವ ಅವಳನ್ನು, ಅವಳ ಸೌಂದರ್ಯವನ್ನು ಹೊಗಳಿ ಬರೆದಿರುವ ಯುವಕನ ಪತ್ರದೊಂದಿಗೆ ತನಗೇನು ಕೆಲಸ? ಅಂದು ಅದನ್ನು ತನ್ನ ಗಂಡನಿಗೂ ಅವಳು ತೋರಿಸಿದ್ದಳು. ಅರ್ಥಾತ್ ಅವಳು ಆ ಪತ್ರದ ಮತ್ತಿನಲ್ಲಿ ಪೂರ್ತಿಯಾಗಿ ಮೈಮರೆತಿರಲಿಲ್ಲ. ಆದರೂ, ಆದರೂ... ಈ ಚರಿತ್ರೆಯ ಕಲ್ಪನಾಲೋಕಕ್ಕೆ ಎಳೆದೊಯ್ಯುವುದರಲ್ಲಿ ಅಶೋಕ ಸಫಲನಾಗಿದ್ದ. ಆದ್ದರಿಂದಲೇ ಅಶೋಕನ ಪತ್ರಕ್ಕೆ ಆಕೆ ಉತ್ತರ ಬರೆದುಹಾಕಿದ್ದಳು.

*

ಮಾನ್ಯ ಸಂದೀಪ್
ವಂದನೆಗಳು

ನಿಮ್ಮ ಪತ್ರ ತಲುಪಿದೆ. ಅಶೋಕರ ಸಾವಿನ ವಿಷಯ ತಿಳಿದು ಬಹಳ ಬೇಸರವಾಯಿತು. ಇಷ್ಟು ಸಣ್ಣ ವಯಸ್ಸಿನಲ್ಲೇ ಅವರಿಗೆ ಹೀಗಾದದ್ದು ನನಗೆ ಆಘಾತವನ್ನುಂಟುಮಾಡಿದೆ. ಅಶೋಕರ ಕಥೆಗಳು ನನಗೆ ಅತ್ಯಂತ ಪ್ರಿಯವಾಗಿದ್ದುವು. ಇತ್ತೀಚೆಗೆ ಪ್ರಕಟವಾದ ಅವರ ಕಥೆಯಂತೂ ಅದ್ಭುತ. ಇಂತಹ ಒಳ್ಳೆಯ ಕಥೆಗಾರನನ್ನು ಕಳೆದುಕೊಂಡೆವೆಲ್ಲಾ ಎಂಬ ದುಃಖ ನನ್ನನ್ನು ಆವರಿಸಿದೆ.

ಅವರಿಂದ ನನಗೆ ಬರಬೇಕಾದ್ದಾಗಲೀ, ನನ್ನಿಂದ ಅವರಿಗೆ ಹೋಗಬೇಕಾದ್ದಾಗಲೀ ಏನೂ ಇಲ್ಲ. ನಮ್ಮಿಬ್ಬರ ವ್ಯವಹಾರ ಕೇವಲ ಕತೆಗಾರ-ಅಭಿಮಾನಿ ನಡುವಿನ ವ್ಯವಹಾರವಾಗಿತ್ತು. ನಿಮ್ಮ ಸೌಜನ್ಯಕ್ಕಾಗಿ ಧನ್ಯವಾದಗಳು. ಅಶೋಕರ ನಷ್ಟ ಭರಿಸುವ ಶಕ್ತಿ ನಿಮಗೆ ದೊರೆಯಲಿ, ಹಾಗೆ ಅವರ ಆತ್ಮಕ್ಕೂ ಶಾಂತಿ ದೊರೆಯಲೆಂದು ಹಾರೈಸುತ್ತೇನೆ.

ವಿಶ್ವಾಸಿ
ಲಾವಣ್ಯ

ಸಂದೀಪನ ಪತ್ರಕ್ಕೆ ಉತ್ತರಿಸಬೇಕೆಂಬ ವಾಸ್ತವ ಕಾಡಿದಾಗ ಮೇಲಿನ ಸಾಲುಗಳನ್ನು ಯಾಂತ್ರಿಕವಾಗಿ ಗೀಚಿಹಾಕಿದ್ದಳು. ಪತ್ರ ಬರೆಯುವಾಗ ತಾನು ಸುಳ್ಳು ಹೇಳುತ್ತಿದ್ದಾಳೆಂದು ಅವಳಿಗೆ ಗೊತ್ತಿತ್ತು. ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಳೆಂಬ ಅರಿವಿತ್ತು. ಲೇಖನಿಯಿಂದ ಹೊರಹೊಮ್ಮಿದ ಕೆಲವೇ ಪದಗಳಲ್ಲಿ ಒಂದು ಗಾಢ ಸಂಬಂಧವನ್ನು ಅವಳು ಕತ್ತರಿಸಿದ್ದಳು. ಅದಕ್ಕೇ ಈ ಕಥೆ ಹೇಳುವ ಮೊದಲೇ ಅವಳು ಅಂದುಕೊಂಡಿದ್ದಳು -- ಮೂರ್ತವಾಗಿ ಅಭಿವ್ಯಕ್ತಿಸುವ ಪದಗಳಿಗಿಂತ ಅಮೂರ್ತ ಸಂಕೇತಗಳೇ ತನಗೆ ಹೆಚ್ಚು ಪ್ರಿಯ. ಏಕೆಂದರೆ ಅಲ್ಲಿ ಅಷ್ಟರ ಮಟ್ಟಿಗಾದರೂ ಪ್ರಾಮಾಣಿಕತೆ ಇರುತ್ತದೆ.

ಅವಳ ಕಥೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವೇನೋ. ಹೌದು ಅದನ್ನು ಮೂರ್ತವಾಗಿ ಅಭಿವ್ಯಕ್ತಿಸಲು ಅವಳಿಂದ ಆಗುತ್ತಿಲ್ಲ. ಹಾಗೆಯೇ ಅದು ಅಮೂರ್ತವಾಗಿ ಉಳಿದಷ್ಟೂ ಓದುಗರು ತಮ್ಮ ಮನೋಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವ ಸಾಧ್ಯತೆಯಿದೆ ಅನ್ನಿಸುತ್ತಿರುವುದರಿಂದ ಅವಳು ಇದೇ ರೀತಿಯಲ್ಲಿ ಇದಕ್ಕೊಂದು ಸ್ವರೂಪ ಕೊಡಲು ಪ್ರಯತ್ನಮಾಡಿದ್ದಳು. ಅವಳಿಗೆ ಬಂದ ಆ ಪತ್ರಕ್ಕೆ ತಾನು ಉತ್ತರಿಸಿದ್ದು ನಿಜ. ಅಶೋಕ ನೋಡಿದ್ದ ಇಪ್ಪತ್ತರ ಹರೆಯದ ಕನ್ಯೆಯ ಶೈಲಿಯಲ್ಲಿ ಉತ್ತೇಜಕವಾಗಿ ಆಕೆ ಉತ್ತರಿಸಿದ್ದಳು. ಅದಕ್ಕೆ ಅವಳ ಆತ್ಮರತಿ ಕಾರಣವೋ, ಅವನು ಬರೆದ ಪತ್ರವೇ ಕಾರಣವೋ, ಒಂದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಕಾದು ನೋಡಿದರೆ ಅರ್ಥ ತಿಳಿದೀತೆಂದು ಭಾವಿಸಿದ್ದಳು. ಆದರೂ ಹೀಗೆ ಅಮೂರ್ತವಾದ ಸಂಬಂಧಗಳು ಕಾಲಗಮನದಲ್ಲಿ ಹೊಸ ಹೊಸ ಸ್ವರೂಪ ಪಡೆಯುತ್ತಾ ಹೋಗುತ್ತವೆ. ಈ ಸಂಬಂಧವೂ ಇನ್ನಷ್ಟು ಸ್ಪಷ್ಟವಾಗಲು ಅವಳು ಕಾಯಬೇಕಿತ್ತು. ಹಾಗೆಂದೇ ಅಶೋಕನ ಉತ್ತರಕ್ಕಾಗಿ ಅವಳು ಕಾಯುತ್ತಾ ಕುಳಿತಿದ್ದಳು.

*

ಕಾಯುತ್ತಾ ಕುಳಿತಿದ್ದಳು. ಅವಳ ಗಂಡನ ಸುಳಿವು ಇನ್ನೂ ಇರಲಿಲ್ಲ. ಸಂದೀಪನಿಗೆ ಬರೆದ ಪತ್ರವನ್ನು ಅಂಚೆಗೆ ಹಾಕಿ ಬಂದದ್ದೂ ಆಗಿತ್ತು. ಸಮಯ ಮೀರಿದರೂ ತನ್ನ ಗಂಡನಿನ್ನೂ ಬಂದಿಲ್ಲ. ಏಕೆ ತಡವಾಗಿರಬಹುದು? ಕಡೆಗೂ ಅವನು ಆಫೀಸಿನಿಂದ ಬಂದಾಗ ಅವನಿಗೆ ಸಂದೀಪನ ಪತ್ರದ ವಿಷಯ ಹೇಳಿದ್ದಳು. "ಅಶೋಕ ತೀರಿಕೊಂಡನಂತೆ".. ಅದಕ್ಕೆ ಗಂಡ ನಿರ್ಲಿಪ್ತವಾಗಿ ಮುಗುಳ್ನಕ್ಕಿದ್ದ. "ಹೌದೇನು ಪಾಪ?".. ಇಂಥಾ ಸ್ಥಿತಪ್ರಜ್ಞತೆಯನ್ನು ಅವಳು ಎಂದೂ ಕಂಡಿರಲಿಲ್ಲ. ಕೇವಲ ಯಾವುದೋ ಪತ್ರಿಕೆಯ ಒಂದು ವರದಿಯನ್ನು ಓದಿದಂತೆ ಅವನು ಪ್ರತಿಕ್ರಿಯಿಸಿದ್ದ. ಏನೂ ಸಂಬಂಧವೇ ಇಲ್ಲವೆಂಬಂತೆ. ಅದೂ ನಿಜವೇ. ಅವನಿಗೂ ಅಶೋಕನಿಗೂ ಇರುವ ಸಂಬಂಧವಾದರೂ ಏನು? ಅಶೋಕನ ಸಂಬಂಧವನ್ನು ಬೆಳೆಸಿಕೊಂಡವಳು ತಾನಲ್ಲವೇ? ಆದರೂ ಈ ಮನುಷ್ಯನೇಕೆ ಮಂಜುಗಡ್ಡೆಯಾಗಿದ್ದಾನೆಂದು ಅವಳಿಗೆ ಅರ್ಥವಾಗಿರಲಿಲ್ಲ.

ಪತ್ರದ ಉತ್ತರಕ್ಕಾಗಿ ಅವಳು ಕಾಯುತ್ತಿದ್ದಾಗ ಅದು ಬಂದೇ ಬಿಟ್ಟಿತ್ತು. ಎರಡನೇ ಪತ್ರದ ಧೋರಣೆ ಸಂಪೂರ್ಣವಾಗಿ ಬದಲಾಗಿ ಅಶೋಕ ಬಹಳ ಭಾವುಕವಾಗಿ ಪತ್ರವನ್ನು ಬರೆದಿದ್ದ. ಆ ಪತ್ರವನ್ನು ಓದಿದಾಗ ತಾನು ಎಲ್ಲೋ ಪ್ರವೇಶಿಸಬಾರದ ಪ್ರಾಂತದೊಳಕ್ಕೆ ಹೊಕ್ಕುಬಿಡುತ್ತಿದ್ದಾಳೆಂಬ ಭಾವನೆ ಅವಳಿಗುಂಟಾಗಿತ್ತು. ತಾನೇನು ಮಾಡುತ್ತಿದ್ದಳೋ ಅವಳಿಗೇ ತಿಳಿದಿರಲಿಲ್ಲ. ಅಶೋಕನೊಂದಿಗೆ ತಾನು ಮಾತನಾಡಬೇಕು ಅನ್ನಿಸಿತ್ತು. ಇದು ಒಳ್ಳೆಯ ಗೃಹಿಣಿಯ ಲಕ್ಷಣವಲ್ಲ. ಮದುವೆಯಾಗಿರುವ ತಾನು ಈ ವ್ಯವಹಾರವನ್ನು ಮುಂದುವರೆಸಬಾರದು ಎನ್ನುವ ಲೌಕಿಕ ಅವಳನ್ನು ಕಾಡಿದರೂ ಅವಳ ದೇಹದಲ್ಲಿ ಇಪ್ಪತ್ತರ ಬಿಸಿರಕ್ತ ಪ್ರವಹಿಸಿದಂತಾಗಿ ಅವಳಿಗೆ ಯಾವುದರ ಪರಿವೆಯೂ ಇಲ್ಲದಾಯ್ತು. ತನ್ನ ಪತಿಗೆ ಮೋಸ ಮಾಡುತ್ತಿರಬಹುದೋ ಅನ್ನುವ ಭಾವನೆಯೂ ಅವಳನ್ನು ಕಾಡಲಿಲ್ಲ. ಅಶೋಕನೊಂದಿಗಿನ ವ್ಯವಹಾರ ಒಂದು ಅಯಸ್ಕಾಂತದತೆ ಅವಳನ್ನು ಸೆಳೆದಿತ್ತು. ಈ ಪತ್ರವ್ಯವಹಾರ ತನ್ನ ಜೀವನಕ್ಕೆ ಸಫಲತೆಯನ್ನು ಕೊಡಬಹುದು ಎಂದೆಲ್ಲಾ ಅವಳಿಗೆ ಅನ್ನಿಸಿಬಿಟ್ಟಿತು. ಯಾಕೋ ತಾನು ಅಶೋಕನನ್ನು ಗಾಢವಾಗಿ ಪ್ರೇಮಿಸಿತ್ತಿದ್ದೇನೆ ಅನ್ನುವ ಯೋಚನೆ ಅವಳನ್ನು ಕಾಡತೊಡಗಿತ್ತು.

*

"ಏನು ಯೋಚನೆ ಮಾಡುತ್ತಾ ಇದ್ದೀಯ? ಕಾಫಿ ಗೀಫಿ ಇಲ್ಲವೋ ಹೇಗೆ? ಅಶೋಕ ಸತ್ತದ್ದು ಅಷ್ಟೊಂದು ಶೋಕಕ್ಕೆ ಕಾರಣವಾಗಿದೆಯಾ?" ಎಂದು ಗಂಡ ಕೇಳಿದ. ಇಲ್ಲೂ ಅಶೋಕನನ್ನು ಎಳೆದು ತರುವ, ಕಾಫಿಗೂ ಸತ್ತ ಮನುಷ್ಯನನ್ನು ಕಾರಣವಾಗಿಸುವ ಇವನ ಮನೋಧರ್ಮದ ಬಗ್ಗೆ ಅವಳಿಗೆ ನಗು ಬಂದಿತ್ತು. ಅವಳು ಅಡುಗೆ ಮನೆಯನ್ನು ಪ್ರವೇಶಿಸಿದಾಗ ಆತನೂ ಅವಳನ್ನು ಹಿಂಬಾಲಿಸಿದ್ದ. ಪ್ರೀತಿಯ ಸಮಾಧಾನದ ಮಾತುಗಳನ್ನು ಆಡಿದ್ದ.

ಮತ್ತೆ ಅವಳಿಗೆ ಭಯ ಕಾಡಿತ್ತು. ಅವಳ ಕಥೆ ಎಲ್ಲೆಲ್ಲೋ ಹೋಗಿತ್ತು. ಹೌದು, ಅವಳು ಹೇಳಿದಂತೆ ಅವರ ಪತ್ರವ್ಯವಹಾರ ಮುಂದುವರೆದಿತ್ತು. ತಾನು ಮದುವೆಯಾಗಿರುವ ವಾಸ್ತವವನ್ನು ಅವಳು ಅಶೋಕನಿಗೆ ತಿಳಿಸಿಯೇ ಇರಲಿಲ್ಲ. ತಿಳಿಸುವ ಅವಶ್ಯಕತೆ ಅವಳಿಗೆ ಕಂಡುಬಂದಿರಲಿಲ್ಲ. ಅವನನ್ನು ಆಕೆ ರಾಯಚೂರಿಗೂ ಆಹ್ವಾನಿಸಿಬಿಟ್ಟಿದ್ದಳು. ಇದು ಎಂಥ ಭಂಡ ಧೈರ್ಯ ಎಂದು ಅವಳಿಗನ್ನಿಸದಿರಲಿಲ್ಲ. ಅಶೋಕ ಬಂದು ವಾಸ್ತವದ ಸ್ಫೋಟವಾದರೆ ಆಗಲಿ, ಇಲ್ಲದಿದ್ದರೆ ಇದು ಹೀಗೇ ಮುಂದುವರೆಯಲಿ ಅನ್ನುವುದು ಅವಳ ಯೋಚನೆಯಾಗಿತ್ತು. ಹಾಗೆಂದು ಮದುವೆಯಾಗಿಲ್ಲ ಎನ್ನುವಂತಹ ಸೂಚನೆಯನ್ನೂ ಅವಳು ಅಶೋಕನಿಗೆ ನೀಡಿರಲಿಲ್ಲ. ಅಶೋಕನಾಗಿ ಅಶೋಕನೇ ಮುಂದುವರೆಯುತ್ತಿದ್ದ. ಅವಳು ಅದನ್ನು ಪೋಷಿಸುತ್ತಾ ಬಂದಿದ್ದಳು ಅಷ್ಟೇ. ಅದಕ್ಕೆ ಕಾರಣ, ಆಂತರ್ಯದಲ್ಲಿ ಅವಳು ಅಶೋಕನನ್ನು ಪ್ರೀತಿಸುತ್ತಿದ್ದಳೇನೋ. ಆದರೆ ಅವಳಿಗೆ ನಿಜಕ್ಕೂ ಮೊದಲ ಬಾರಿಗೆ ಭಯವಾದದ್ದು ಅಶೋಕನ ಮುಂದಿನ ಪತ್ರದ ಒಕ್ಕಣೆ ನೋಡಿ. ಆ ಬಾರಿ ಅವನು ನೇರವಾಗಿ ಅವಳನ್ನು ’ಚಿನ್ನಾ’ ಎಂದು ಸಂಬೋಧಿಸಿದ್ದ.

*

’ಚಿನ್ನಾ’ ಎಂದಾಗ ಅವಳಿಗೆ ಕೋಪ ಬಂದಿತ್ತು. ’ಅದೇನು ಅಕ್ಕಸಾಲಿಗರ ಹಾಗೆ ಚಿನ್ನ, ಬಂಗಾರಾಂತ ಕರೆಯೋದು.. ನನ್ನ ಹೆಸರು ಲಾವಣ್ಯ.. ಹಾಗಂತಲೇ ಕರೆಯಬಾರದೇ?’ ಎಂದು ಅವಳು ಗಂಡನ ಮೇಲೆ ರೇಗಿದ್ದಳು. ’ಈ ದಿನ ನೀನು ಬೇರೆಯೇ ಲೋಕದಲ್ಲಿರುವಹಾಗಿದೆ? ಏನಾಗಿತ್ತಂತೆ ಅಶೋಕನಿಗೆ?’ ಎಂದು ಅವನು ಪ್ರಶ್ನಿಸಿದ್ದ. ’ಅಪಘಾತ’ ಎಂದು ಹೇಳಿದಳು ’ಅಯ್ಯೋಪಾಪ.. ಚಿಕ್ಕ ಹುಡುಗಾಂತ ಕಾಣುತ್ತೆ’ ಎಂದು ಅವನು ಲೊಚಗುಟ್ಟಿದ್ದ. ಅವಳಿಗೆ ಅದನ್ನು ಕೇಳಿ ಮೈಯೆಲ್ಲಾ ಉರಿದಿತ್ತು. ಈ ಕೃತಕ ಸಹಾನುಭೂತಿ ಯಾರಿಗೆ ಬೇಕು ಎಂದು ಅವಳಿಗೆ ಅನ್ನಿಸಿತ್ತು.

ಸಂಬಂಧಗಳು ಸ್ಪಷ್ಟವಾಗುತ್ತಿದೆ ಎಂದು ಅಂದುಕೊಂಡಾಗಲೇ ತಲೆಬುಡ ತಿಳಿಯಂದಂತಾಗುತ್ತಿತ್ತು. ಎಲ್ಲವೂ ಒಂದು ರೀತಿಯಲ್ಲಿ ಅಸಂಗತ. ಚಿನ್ನಾ ಎಂದು ಸಂಬೋಧಿಸಿದ ಪತ್ರದಲ್ಲಿ ಅಶೋಕ ನೇರವಾಗಿ ಮದುವೆಯ ಪ್ರಸ್ತಾಪ ಮಾಡಿದ್ದ. ಅಶೋಕನ ಮೊದಲ ಪತ್ರ ಬಂದಾಗಿನಿಂದಲೂ ಅವಳು ಮುಟ್ಟಾಗಿರಲಿಲ್ಲ. ಒಂದು ಮಟ್ಟದಲ್ಲಿ ಅಶೋಕನಿಗೆ ತನ್ನ ರಹಸ್ಯವನ್ನು ಸ್ಫೋಟಮಾಡುವ ಅನಿವಾರ್ಯತೆ ಅವಳಿಗೆ ಕಂಡುಬಂದಿತ್ತು. ಒಂದು ಥರದಲ್ಲಿ ತಾನು ಮಾನಸಿಕ ಹಾದರ ಮಾಡಿದ್ದೇನೆ ಎಂದೂ ಅವಳಿಗೆ ಅನ್ನಿಸಿತ್ತು. ತನ್ನ ತಾಯ್ತನದ ಅರಿವು ಅವಳ ಕತ್ತಿಗೆ ಪಾವಿತ್ರ್ಯದ ಬಂಧನವನ್ನು ಹಾಕುತ್ತಿದ್ದಂತೆ ಅವಳಿಗೆ ಭಾಸವಾಗಿತ್ತು. ಒಂದು ರೀತಿಯ ವಿಶೇಷ ಪಾಪ ಭೀತಿ ಅವಳನ್ನು ಆವರಿಸಿಬಿಟ್ಟಿತ್ತು. ಈ ಪ್ರಕರಣವನ್ನು ಇಲ್ಲಿಯೇ ಮುಗಿಸಬೇಕೆಂದು ಮೊದಲ ಬಾರಿಗೆ ಅವಳಿಗೆ ಅನ್ನಿಸಿತ್ತು. ಆದರೂ ತೀವ್ರವಾಗಿ ತನ್ನ ಮನಸ್ಸನ್ನು ಕಾಡುತ್ತಿದ್ದ ಈ ವ್ಯಕ್ತಿ ಹೀಗೆ ಅರಿವಿಲ್ಲದಂತೆಯೇ ಅವಳ ಜೀವನದಲ್ಲಿ ಪ್ರವೇಶಿಸಿ ಈ ರೀತಿಯ ಬೃಹದಾಕಾರದ ಪಾತ್ರವನ್ನು ಆಕ್ರಮಿಸಿಕೊಂಡದ್ದು ಹೇಗೆಂದು ತಿಳಿಯುವ ಕುತೂಹಲ ಅವಳನ್ನು ಬಿಟ್ಟಿರಲಿಲ್ಲ. ಗಟ್ಟಿಮನಸ್ಸು ಮಾಡಿ ಆ ಕಲ್ಪನಾಲೋಕದ ವ್ಯಕ್ತಿಗೆ ಅವಳು ಪತ್ರವನ್ನ ಬರೆದೇ ಬಿಟ್ಟಿದ್ದಳು: "ಕೆಲವು ದಿನಗಳ ನನ್ನ ಅನುಮಾನ ನಿಜವಾಗಿದೆ. ನಿನಗೊಂದು ಸಿಹಿ ಸುದ್ದಿ. ನಾನು ತಾಯಿಯಾಗಲಿದ್ದೇನೆ. ಈ ದಿನವೇ ಡಾಕ್ಟರ ಬಳಿಗೆ ಹೋಗಿದ್ದೆ.."

*

’ಡಾಕ್ಟರ ಹತ್ತಿರ ಚೆಕಪ್‌ಗೆ ಹೋಗಿದ್ದೆಯಾ?’ ಗಂಡ ಕೇಳಿದ

’ಹುಂ’

’ಆ ವಿಷಯ ಮಾತಾಡಿದೆಯಾ?’

’ಮಾತಾಡಿದೆ.’

’ಏನಂದರು?’

’ಅಡ್ಡಿಯಿಲ್ಲ, ಸರಿ ಅಂದರು.’

’ಹಾಗಾದರೆ ಯಾವಾಗಂತೆ?’

’ನಾಳೆ ಮೂರನೇ ತಾರೀಕಿಗಂತೆ.’

’ಸರಿ, ಒಳ್ಳೆಯದಾಯಿತು’

ಗಂಡ ಇನ್ನೂ ಏನೇನೋ ಕೇಳಿದ್ದ. ಅವನ ಒಂದೊಂದು ಪ್ರಶ್ನೆಯೂ ಅವಳ ಮನದ ಆಳವನ್ನು ಕೆದಕಿದಂತೆ ಆಗಿತ್ತು. ಅಶೋಕನಿಗೆ ಅವಳು ಪತ್ರ ಬರೆದದ್ದು ಕಳೆದ ತಿಂಗಳು ಹದಿನೆಂಟರಂದು. ಬೆಂಗಳೂರಿಗೆ ಅದು ಹತ್ತೊಂಬತ್ತು ಅಥವಾ ಇಪ್ಪತ್ತಕ್ಕೆ ತಲುಪಿದ್ದಿರಬಹುದು. ಅಶೋಕ ಎಂದೂ ಉತ್ತರಿಸಲು ತಡಮಾಡಿದ್ದವನಲ್ಲ. ಆದರೆ ಅವಳಿಗೆ ಆ ನಂತರ ಒಂದು ಭಾವನೆ ತೀವ್ರವಾಗಿ ಕಾಡಿತ್ತು. ಮದುವೆಯಾದ ಆರುವರ್ಷಗಳಲ್ಲಿ ಬರದಿದ್ದ ತಾಯ್ತನ ಅಶೋಕನ ಪರಿಚಯವಾದ ಕೂಡಲೇ ಉಂಟಾದದ್ದು ಹೇಗೆ? ಹೆಣ್ಣಿನ ಜೀವನದ ಸಾಫಲ್ಯತೆ ಇರುವುದೇ ತಾಯ್ತನದಲ್ಲಿ ಎನ್ನುವ ಗಟ್ಟಿ ನಂಬಿಕೆ ಅವಳಿಗಿತ್ತು.. ಅವಳಿಗೆ ಹುಟ್ಟಬಹುದಾದ ಕೂಸಿಗೆ ಅವನ ಮನೆಯ ಹೆಸರನ್ನು ನೀಡಬೇಕೆಂಬ ವಿಚಿತ್ರ ಬಯಕೆ ಅವಳಿಗೆ ಯಾಕೆ ಉಂಟಾಯಿತೋ ಅವಳಿಗೆ ತಿಳಿದಿರಲಿಲ್ಲ. ಆದರೆ ಅಶೋಕನಿಂದ ಪತ್ರವೇ ಬರಲಿಲ್ಲ. ಅವಳಿಗೆ ಆ ಸಂಬಂಧವನ್ನು ಸುಲಭವಾಗಿ ಕಡಿದು ಹಾಕಲು ಸಾಧ್ಯವೇ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಅವಳ ಗಂಡ ಸಿಡಿಲೆರಗುವಂತಹ ನಿರ್ಧಾರವನ್ನು ತನ್ನ ಕಿವಿಯಲ್ಲಿ ಹಾಕಿದ್ದ.. ಅವಳಿಗೆ ಆ ಅನುಮಾನವೂ ಬಂದಿತ್ತು. ಆದರೆ ಅವನಿಗೆ ಅಶೋಕನ ಈ ವಿಷಯ ತಿಳಿದಿತ್ತೇನು?

*

’ಅಶೋಕನ ವಿಷಯ ಹೇಗೆ ಗೊತ್ತಾಯಿತು?’ ಗಂಡ ಕೇಳಿದ್ದ

’ಅವರಣ್ಣನಂತೆ ಸಂದೀಪ್ ಅಂತ..’

’ಹೋಗಲಿ ಬಿಡು. ಅವರುಗಳ ಸಂಪರ್ಕ ಸಂಪೂರ್ಣವಾಗಿ ಕಡಿದಂತೆ ಅಲ್ಲವೇ?’

’ಹಾಗೆಂದೇ ಅನ್ನಿಸುತ್ತದೆ. ಅವರಿಗೊಂದು ಪತ್ರ ಬರೆದು ಹಾಕಿದೆ.’

’ಗರ್ಭಪಾತಕ್ಕೆ ತೊಂದರೆ ಇಲ್ಲ ತಾನೇ?’

’ಇಲ್ಲವಂತೆ. ಎರಡು ಘಂಟೆಯಲ್ಲಿ ಮುಗಿಯುತ್ತದಂತೆ. ನಂತರ ನಾನು ಮಾಮೂಲು ವ್ಯಕ್ತಿ.’

’ಒಳ್ಳೆಯದಾಯಿತು ಬಿಡು. ನೀನು ಮಾಮೂಲಾಗಿದ್ದರೇನೇ ಚೆನ್ನ.’

ಅವರುಗಳ ಸಂಭಾಷಣೆ ಹೀಗೇ ಮುಂದುವರೆದಿತ್ತು.

ಈ ಕಥೆ ನಿಮಗೆ ಇನ್ನೂ ಮಸಕಾಗಿದೆ ಎಂದು ಅವಳಿಗೆ ಗೊತ್ತಿತ್ತು. ಆದರೆ ಇದಕ್ಕಿಂತ ಹೆಚ್ಚಿನ ಸ್ವರೂಪವನ್ನು ಈ ಕಥೆಗೆ ನೀಡಲು ಅವಳಿಂದ ಸಾಧ್ಯವಾಗಿರಲಿಲ್ಲ. ವಾಸ್ತವಗಳು ಹಾಗೆಯೇ ಸ್ವಲ್ಪ ಅಸಂಗತವಾಗಿರುತ್ತವೆ. ಪ್ರೇಮ ಪ್ರೀತಿಗಳ ಇತಿಹಾಸ ಹೀಗೇ ದುರಂತದಲ್ಲಿ ಮುಕ್ತಾಯಗೊಳ್ಳುವುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅಂದಹಾಗೆ ತನ್ನ ಗಂಡನ ನಿರ್ಧಾರದ ಬಗ್ಗೆ ಅವಳು ಹೇಳಿದ್ದಳು.. ಅದು ಆಗಲೇಬೇಕೆಂದು ಅವನು ಹಠ ಹಿಡಿದಿದ್ದರಿಂದ ಅವಳೂ ಒಪ್ಪಿದ್ದಳು. ಎಷ್ಟಾದರೂ ಇಬ್ಬರೂ ಕೂಡಿ ಬಾಳಬೇಕೆಂದಿದ್ದರು, ಹಾಗೂ ಅವಳಿಗೆ ಹೆಚ್ಚಿನ ವಯಸ್ಸೇನೂ ಆಗಿರಲಿಲ್ಲ. ಕೇವಲ ಇಪ್ಪತ್ತೆಂಟು ಅಷ್ಟೇ. ಮುಂದೆ ಮಕ್ಕಳಾಗಲೂ ಬಹುದು. ಮಾರನೆಯ ದಿನ ಮೂರನೆಯ ತಾರೀಖಾಗಿತ್ತು. ಅಶೋಕ ಸತ್ತ ಹದಿಮೂರನೆಯ ದಿನ. ಅದೇ ದಿನ ಅವಳ ಗರ್ಭಪಾತದ ಮುಹೂರ್ತವೂ ಇಡಲಾಗಿತ್ತು. ಅದರೊಂದಿಗೆ ಅವಳೆಂದೂ ಕಂಡಿರದ ಅಶೋಕನ ಸಂಪೂರ್ಣ ಕೊಂಡಿಗಳೂ ಕಳಚಿಹೋಗಬಹುದು ಎಂದು ಅವಳಿಗನ್ನಿಸಿತ್ತು. ಬರಲಿರುವ ನಾಳೆಗಾಗಿ ಅವಳು ಕಾತರದಿಂದ ಕಾಯದಿದ್ದರೂ, ಬರಲಿರುವ ನಾಳೆಗಳಿಗಾಗಿ, ದೊರೆಯಬಹುದಾದ ಸಾಫಲ್ಯಕ್ಕಾಗಿ ಅವಳು ಕಾತರದಿಂದ ಕಾಯುತ್ತಿದ್ದಳು. ಅವಳು ಮೊದಲೇ ಹೇಳಿದಂತೆ.. ಕಾದರೆ ಎಲ್ಲರಿಗೂ ಇದರಲ್ಲಿ ಇನ್ನೂ ಹೆಚ್ಚಿನ ಅರ್ಥ ಗೋಚರಿಸಬಹುದಿತ್ತೇನೋ..

೧೯೮೭